/newsfirstlive-kannada/media/post_attachments/wp-content/uploads/2025/01/MAHAKUMBHA.jpg)
ಉತ್ತರಪ್ರದೇಶದ ಪ್ರಯಾಗರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳ ಈಗ ಜಗತ್ತಿನ ಗಮನ ಸೆಳೆಯುತ್ತಿದೆ. ಕೋಟ್ಯಾಂತರ ಜನರು ಒಂದೇ ಕಡೆ ಸೇರಿಕೊಂಡು ಸರಳವಾಗಿ ಯಾವುದೇ ಅನಾಹುತಗಳಿಗೆ ಜಾಗವಿಲ್ಲದಂತೆ ಆಧ್ಯಾತ್ಮಿಕ ಯಾತ್ರೆಯೊಂದನ್ನು ಕೈಗೊಳ್ಳುತ್ತಿದ್ದಾರೆ ಎಂದು ಅಚ್ಚರಿಪಟ್ಟಿದ್ದಾರೆ. ಅದರ ನಡುವೆಯೇ ಮಹಾ ಅವಘಡವೊಂದು ಸಂಭವಿಸಿ ಹೋಗಿದೆ. ಮೌನಿ ಅಮಾವಾಸ್ಯೆಯ ದಿನ 10 ಕೋಟಿಗೂ ಅಧಿಕ ಜನರು ಸೇರಿದ ಕಾರಣ ಕಾಲ್ತುಳಿತ ಸಂಭವಿಸಿ ಸುಮಾರು 17 ಜನ ಭಕ್ತಾದಿಗಳು ಅಸುನೀಗಿದ್ದಾರೆ. ಇದಕ್ಕೆ ವಿರೋಧಗಳು ಸಮರ್ಥನೆಗಳು ಕಾಣಸಿಗುತ್ತಿವೆ. ಹಾಗಂತ ಇದೇ ಮೊದಲ ಬಾರಿ ಕುಂಭಮೇಳದಲ್ಲಿ ಇಂತಹ ದುರ್ಘಟನೆಗಳು ನಡೆದಿಲ್ಲ. 1954 ರಿಂದಲೂ ಇಂತಹ ದುರಂತಗಳಿಗೆ ಕುಂಭಮೇಳ ಸಾಕ್ಷಿಯಾಗುತ್ತಲೇ ಬಂದಿದೆ. ಅದರ ಬಗ್ಗೆ ಒಂದು ವರದಿ ಇಲ್ಲಿದೆ.
1954: 1954ರಲ್ಲಿ ಭಾರತದ ಸ್ವಾತಂತ್ರ್ಯಗೊಂಡ ಬಳಿಕ ಮೊದಲ ಬಾರಿ ಕುಂಭಮೇಳ ಆಯೋಜಿಸಲಾಗಿತ್ತು. ಅದೊಂದು ದೊಡ್ಡ ಲ್ಯಾಂಡ್ಮಾರ್ಕ್ ಆಗಿ ಗುರುತಿಸಿಕೊಂಡಿತ್ತು. ಆದರೂ ಸ್ವಾತಂತ್ರ್ಯಾನಂತರ ನಡೆದ ಮೊದಲ ಕುಂಭಮೇಳದಲ್ಲಿಯೂ ಕೂಡ ದೊಡ್ಡ ದುರಂತವೊಂದು ನಡೆದು ಹೋಗಿತ್ತು. ಫೆಬ್ರವರಿ 3,1954 ರಂದು ಅಂದಿನ ಅಲಹಾಬಾದ್ನ ತ್ರಿವೇಣಿ ಸಂಗಮದಲ್ಲಿ ಭಕ್ತಾದಿದಗಳ ಸಂಖ್ಯೆ ಹೆಚ್ಚಾಗಿ ನೂಕುನುಗ್ಗಲಾಗಿ ಕಾಲ್ತುಳಿತ ಸಂಭವಿಸಿತ್ತು. ಅದು ಕೂಡ ಮೌನಿ ಅಮಾವಾಸ್ಯೆಯಂದೆ ನಡೆದು ಹೋಗಿತ್ತು. ಪವಿತ್ರ ಸ್ನಾನಕ್ಕೆ ನದಿಗಳಿದ ಜನರಲ್ಲಿ ನಡೆದ ಕಾಲ್ತುಳಿದಿಂದಾಗಿ 800 ಜನರು ಅಸು ನೀಗಿದರು ಕೆಲವರು ಕಾಲ್ತುಳಿತಕ್ಕೆ ಬಲಿಯಾದರೆ ಇನ್ನೂ ಕೆಲವರು ನದಿಯ ಹರಿವಿನಲ್ಲಿ ಕೊಚ್ಚಿ ಹೋದರು.
1986: 1986ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿಯೂ ಕೂಡ ದೊಡ್ಡದೊಂದು ದುರಂತ ಸಂಭವಿಸಿತ್ತು. ಸುಮಾರು 200 ಜನರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದಕ್ಕೆ ಕಾರಣವಾಗಿದ್ದ ಅಂದಿನ ಉತ್ತರಪ್ರದೇಶದ ಮುಖ್ಯಮಂತ್ರಿ ವೀರ ಬಹದ್ದೂರ್ ಸಿಂಗ್. ವೀರ್ ಬಹದ್ದೂರ್ ಸಿಂಗ್ ಹರಿದ್ವಾರಕ್ಕೆ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಂಸದರೊಂದಿಗೆ ಹರಿದ್ವಾರಕ್ಕೆ ಪವಿತ್ರಸ್ನಾನಕ್ಕೆಂದು ಭೇಟಿ ನೀಡಿದ್ದರು. ಈ ವೇಳೆ ಭದ್ರತೆಯ ಕಾರಣದಿಂದಾಗಿ ಪೊಲೀಸರು ಭಕ್ತಾದಿಗಳನ್ನು ಮತ್ತೊಂದು ಬದಿಯ ನದಿಯ ದಂಡೆಯಲ್ಲಿ ಸ್ನಾನಕ್ಕೆ ಹೋಗುವಂತೆ ಸೂಚಿಸಿದರು. ಈ ವೇಳೆ ನಡೆದ ನೂಕುನುಗ್ಗುಲಲ್ಲಿ ಸುಮಾರು 200 ಜನರು ಪ್ರಾಣ ಕಳೆದುಕೊಂಡಿದ್ದರು.
ಇದನ್ನೂ ಓದಿ: ಪ್ರಯಾಗರಾಜ್ ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ; ಬೆಳಗಾವಿಯ ನಾಲ್ವರಿಗೆ ಗಾಯಗಳು
2003: ಮಹಾರಾಷ್ಟ್ರದ ನಾಶಿಕ್ನಲ್ಲಿ ನಡೆದ ಕುಂಭಮೇಳದಲ್ಲಿಯೂ ಕೂಡ ಒಂದು ದುರಂತ ಸಂಭವಿಸಿತ್ತು. ಗೋದಾವರಿ ತಟದಲ್ಲಿ ಮಿಂದೇಳಲು ಬಂದ ಲಕ್ಷಾಂತರ ಭಕ್ತಾದಿಗಳ ನಡುವೆ ನೂಕುನುಗ್ಗಲು ಸಂಭವಿಸಿ ದೊಡ್ಡ ಕಾಲ್ತುಳಿತವುಂಟಾಗಿತ್ತು. ಈ ದುರಂತದಲ್ಲಿ ಹೆಣ್ಣು ಮಕ್ಕಳು ಹಾಗೂ ಪುಟ್ಟ ಮಕ್ಕಳು ಸೇರಿ ಒಟ್ಟು 39 ಜನರು ಅಸುನೀಗಿದ್ದರು. ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಇದನ್ನೂ ಓದಿ:ಮೌನಿ ಅಮವಾಸ್ಯೆಗೆ ಯಾಕೆ ಇಷ್ಟೊಂದು ಮಹತ್ವ? ಈ ದಿನ ಸಿಗುವ ಫಲಾಫಲಗಳು ಏನೇನು?
2013: 12 ವರ್ಷಗಳ ಹಿಂದೆ ನಡೆದ ಮಹಾಕುಂಭಮೇಳದಲ್ಲಿ ಪ್ರಯಾಗರಾಜ್ ರೈಲ್ವೆ ಸ್ಟೇಷನ್ನಲ್ಲಿ ಪಾದಚಾರಿ ಸೇತುವೆ ಕುಸಿದ ಪರಿಣಾಮ ಸುಮಾರು 42 ಜನರು ಉಸಿರು ಚೆಲ್ಲಿದ್ದರು. 45 ಜನರು ಗಂಭೀರವಾಗಿ ಗಾಯಗೊಂಡಿದ್ದರು. ಇದಾದ ಬಳಿಕ, ಅಂದ್ರೆ 12 ವರ್ಷಗಳ ಬಳಿಕ ಈಗ ಪ್ರಯಾಗರಾಜ್ನಲ್ಲಿ ಮಹಾಕುಂಭಮೇಳ ಆಯೋಜನೆ ಮಾಡಲಾಗಿದೆ. ಜನವರಿ 13 ರಂದು ಆರಂಭಗೊಂಡ ಮಹಾಕುಂಭಮೇಳ ಫೆಬ್ರವರಿ 26ಕ್ಕೆ ಮುಗಿಯಲಿದೆ. ಈ ಬಾರಿಯೂ ಕೂಡ ಪ್ರಯಾಗರಾಜ್ನಲ್ಲಿ ಕಾಲ್ತುಳಿತ ಸಂಭವಿಸಿ 17 ಜನರು ದುರ್ಮರಣಕ್ಕೆ ಈಡಾಗಿದ್ದು ದುರಂತದ ಸಂಗತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ