/newsfirstlive-kannada/media/post_attachments/wp-content/uploads/2025/03/CBL_Robbery.jpg)
ಅವರೆಲ್ಲಾ ಸಿಲಿನಿಕಾನ್ ಸಿಟಿಯಲ್ಲಿ ದರೋಡೆ ಸೇರಿದಂತೆ ಕ್ರಿಮಿನಲ್ ಚಟುವಟಿಕೆಗಳಲ್ಲಿರೋ ನಟೋರಿಯಸ್ ಗ್ಯಾಂಗ್. ಆ ನಟೋರಿಯಸ್ ಗ್ಯಾಂಗ್ ದೇಹವಾದ್ರೆ, ಮೆದುಳೇ ಪೊಲೀಸಪ್ಪ. ಪೊಲೀಸಪ್ಪನ ಮಾಸ್ಟರ್ ಪ್ಲಾನ್ನಿಂದ ಮನೆ ಮೇಲೆ ದಾಳಿ ನಡೆಸಿ ದರೋಡೆ ಮಾಡಿ ಎಸ್ಕೇಪ್ ಆಗಿದ್ದರು. ಆದ್ರೆ ಪೊಲೀಸರು ಸಿನೀಮೀಯ ರೀತಿಯಲ್ಲಿ ದರೋಡೆಕೋರರನ್ನು ಹಿಡಿದು ಜೈಲಿಗಟ್ಟಿದ್ದಾರೆ.
ಫೆಬ್ರವರಿ 20, ರಾತ್ರಿ 8.30ರ ಸಮಯ. ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಬಸವೇಶ್ವರ ನಗರದ ಶ್ರೀನಿವಾಸ್ ಎಂಬುವವರ ಮನೆಗೆ ನುಗ್ಗಿದ 9 ಜನ ದರೋಡೆಕೋರರು ಚಾಕುವಿನಿಂದ ಹೆದರಿಸಿ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಹಣ ದೋಚಿ ಪರಾರಿಯಾಗಿದ್ದರು. ಘಟನೆ ಸಂಬಂದ ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಖಾಡಕ್ಕಿಳಿದ ಪೊಲೀಸರು ಸಿಸಿ ಕ್ಯಾಮೆರಾದಲ್ಲಿ ಆಧರಿಸಿ ಕೊಲೆ ಸುಲಿಗೆ ಸೇರಿದಂತೆ ಮನೆಗಳಲ್ಲಿ ದರೋಡೆ ಮಾಡುತ್ತಿದ್ದ ನಟೋರಿಯಸ್ ಗ್ಯಾಂಗ್ನ್ನ ಲಾಕ್ ಮಾಡಿದ್ದಾರೆ. ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ.
ದರೋಡೆಗೆ ಪೊಲೀಸಪ್ಪನೇ ಮಾಸ್ಟರ್ ಪ್ಲಾನ್
ಅಂದಾಗೆ ಗೌರಿಬಿದನೂರಿನ ಬಸವೇಶ್ವರ ನಗರದ ಮನೆ ಮಾಲೀಕ ಆಸ್ತಿ ಮಾರಾಟ ಮಾಡಿದ್ದರಿಂದ 2 ಕೋಟಿಗೂ ಹೆಚ್ಚು ಹಣ ಬಂದಿದೆ. ತುಂಬಾ ಚಿನ್ನಾಭರಣಗಳಿವೆ ಅನ್ನೋ ಸುದ್ದಿ ಹಬ್ಬಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಗೌರಿಬಿದನೂರಿನ ಕೆರೆಕಲ್ಲಹಳ್ಳಿಯ ಬಾಬಾಜಾನ್ ಎಂಬಾತ ದರೋಡೆಗೆ ಸಂಚು ರೂಪಿಸಿದ್ದ. ಇದಕ್ಕೆ ಬೆಂಗಳೂರಿನ ಹೆಣ್ಣೂರಿನ ಸಂಚಾರಿ ಠಾಣೆಯ ಪೊಲೀಸ್ ಕಾನ್ಸ್ಟೆಬಲ್ ಮಹ್ಮದ್ ಇಲಿಯಾಸ್ ಮಾಸ್ಟರ್ ಪ್ಲಾನ್ ಮಾಡಿದ್ದನು. ಇವನ ಐಡಿಯಾದಿಂದಲೇ ಬೆಂಗಳೂರಿನಿಂದ ಗ್ಯಾಂಗ್ ಕರೆಸಿ ದರೋಡೆ ಮಾಡಿಸಿದ್ದಾರೆ. ಮೊದಲು ಫೆಬ್ರವರಿ 17 ರಂದು ದರೋಡೆಗೆ ವಿಫಲ ಯತ್ನ ಮಾಡಿದ್ದರಂತೆ. ನಂತರ ಫೆಬ್ರವರಿ 20 ರಂದು ಶ್ರೀನಿವಾಸ್ ಮನೆಯಲ್ಲಿ ಇಲ್ಲದಾಗ ಮನೆಗೆ ನುಗ್ಗಿ ಸಂಬಂಧಿಕರಿಗೆ ಹೆದರಿಸಿ ಬೆಲೆಬಾಳುವ ದಾಖಲೆಗಳು, 14 ಹರಳುಗಳು, 2 ಹವಳ ಸೇರಿದಂತೆ ಹಲವು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಇದನ್ನೂ ಓದಿ:ರಾಹುಕಾಲಕ್ಕೂ ಮೊದಲೇ ಸಿದ್ದರಾಮಯ್ಯ ಬಜೆಟ್.. ಎಷ್ಟು ಲಕ್ಷ ಕೋಟಿ ಆಯವ್ಯಯ ಮಂಡಿಸ್ತಾರೆ ಸಿಎಂ?
ಅರೆಸ್ಟ್ ಆಗಿರುವ ಆರೋಪಿಗಳು
ಸದ್ಯ ಘಟನೆ ಸಂಬಂಧ ಬೆಂಗಳೂರಿನ ಚಾಂದ್ ಪಾಷ, ಸಾಬಿರ್ ಅಲಿಯಾಸ್ ಶಬ್ಬೀರ್, ಫೈರೋಜ್ ಖಾನ್ ಅಲಿಯಾಸ್ ಟಿಪ್ಪು, ಬಷೀರ್ ಅಹ್ಮದ್ ಅಲಿಯಾಸ್ ಶೇರು, ಮಹ್ಮದ್ ಇಲಿಯಾಸ್, ತನ್ವೀರ್ ಅಲಿಯಾಸ್ ಮೆಂಟಲ್ ತನು, ಇರ್ಪಾನ್ ಪಾಷ, ಬಾಬಾಜಾನ್ ಅಲಿಯಾಸ್ ಬಾಬು ಹಾಗೂ ಅಮೀನ್ ಸಾಬ್ನನ್ನ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.
ರಾಬರಿ ಪ್ರಕರಣದಲ್ಲಿ ನಟೊರಿಯಸ್ ಗ್ಯಾಂಗ್ನ್ನ ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಆದ್ರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪೊಲೀಸ್ ಸಿಬ್ಬಂದಿಯೇ ಕಳ್ಳತನಕ್ಕೆ ಸಾಥ್ ನೀಡಿದ್ದು ದುರಂತ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ