/newsfirstlive-kannada/media/post_attachments/wp-content/uploads/2025/05/Bangalore-heavy-Rain-6.jpg)
ಬೆಂಗಳೂರು ನಗರದ ಹಲವೆಡೆ ಇಂದು ವರುಣಾರ್ಭಟ ಜೋರಾಗಿದೆ. ಬಿರುಗಾಳಿ, ಆಲಿಕಲ್ಲು ಸಹಿತ ಮಳೆಗೆ ರಸ್ತೆಗಳೆಲ್ಲಾ ಕಾಲುವೆಯಂತಾಗಿದೆ. ನಗರದ ವಿವಿಧೆಡೆ ಮರಗಳ ಕೊಂಬೆ ಉರುಳಿ ಬಿದ್ದು ಹಲವು ಅವಾಂತರಗಳು ಸೃಷ್ಟಿಯಾಗಿದೆ.
ನಗರದ ಬಾಣಸವಾಡಿ, ಕಲ್ಯಾಣನಗರದಲ್ಲಿ ಬಿರುಗಾಳಿ ಜೊತೆಗೆ ಆಲಿಕಲ್ಲು ಮಳೆ ಜೋರಾಗಿ ಸುರಿದಿದೆ. ಬಿರುಗಾಳಿಯ ರಭಸಕ್ಕೆ ಮನೆಯ ಟೆರಸ್ ಮೇಲಿನ ಗಾರ್ಡನ್ ಚೆಲ್ಲಾಪಿಲ್ಲಿಯಾಗಿದೆ.
ಮಾನತ್ಯಾ ಟೆಕ್ ಪಾರ್ಕ್ನಲ್ಲಿ ಜೋರು ಮಳೆಯಾಗಿದ್ದು, ರಸ್ತೆಯಲ್ಲಿ ನೀರು ನಿಂತ ಪರಿಣಾಮ ಕಿಲೋ ಮೀಟರ್ವರೆಗೆ ಟ್ರಾಫಿಕ್ ಜಾಮ್ ಆಗಿದೆ. ಮಾನ್ಯತಾ ಟೆಕ್ ಪಾರ್ಕ್ ಒಳಭಾಗದ ರಸ್ತೆಯಂತೂ ಸಂಪೂರ್ಣ ಜಲಾವೃತವಾಗಿದೆ.
ನಾಗವಾರ ಹೆಬ್ಬಾಳ ಮುಖ್ಯರಸ್ತೆಯಲ್ಲಿ ಮಳೆ ಅಬ್ಬರ ಜೋರಾಗಿತ್ತು. ಬಿಎಂಟಿಸಿ ಬಸ್ನ ಒಳಭಾಗಕ್ಕೆ ಮಳೆ ನೀರು ನುಗ್ಗಿದೆ. ಜಲಾವೃತವಾಗಿದ್ದ ರಸ್ತೆಯಲ್ಲೇ ಪ್ರಯಾಣಿಕರು ಕುಳಿತಿದ್ದರು.
ಹೆಚ್ಬಿಆರ್ ಲೇಔಟ್ನಲ್ಲಿ ಬೃಹತ್ ಮರಗಳು ಧರೆಗುರುಳಿವೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿದೆ. ಯಲಚೇನಹಳ್ಳಿ ಬಳಿ ಮೂರು ಮರಗಳು ಬಿದ್ದ ಪರಿಣಾಮ ನಾಲ್ಕು ಕಾರುಗಳು ಜಖಂಗೊಂಡಿವೆ.
ಮಲ್ಲೇಶ್ವರದ ಪಿಯುಸಿ ಬೋರ್ಡ್, ಕಾವೇರಿ ಜಂಕ್ಷನ್ ಬಳಿ ಗಾಳಿ ಮಳೆಗೆ ಮರ ಏಕಾಏಕಿ ಬಿದ್ದಿದ್ದು ಸದ್ಯ ಯಾವುದೇ ಹಾನಿ ಸಂಭವಿಸಿಲ್ಲ.
ಇದನ್ನೂ ಓದಿ: ನಕ್ಕು ನಲಿಸಿದ್ದ ರಾಕೇಶ್ ಪೂಜಾರಿ ನೆನಪು; ರಾಕಿ ಕಂಡ ಕನಸಿಗೆ ಪಣ ತೊಟ್ಟ ಸ್ನೇಹಿತರು; ಏನಂದ್ರು?
ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲೂ ಮರದ ಕೊಂಬೆ ಮುರಿದು ಬಿದ್ದಿದೆ. ಮರದ ಕೊಂಬೆ ಮುರಿದು ಬೀಳುವಾಗ ಯಾವುದೇ ವಾಹನ ಸಂಚಾರ ಇರಲಿಲ್ಲ. ಹಾಗಾಗಿ ಅನಾಹುತ ತಪ್ಪಿದೆ.
ಕುಮಾರಸ್ವಾಮಿ ಲೇಔಟ್ ಬಳಿ ಆಟೋದ ಮುಂದಿನ ಚಕ್ರ ಗುಂಡಿಗೆ ಬಿದ್ದು ಆಟೋ ಚಾಲಕ ಹೈರಾಣಾದ ದೃಶ್ಯ ಕಂಡು ಬಂದಿದೆ. ನಿರಂತರ ಮಳೆಗೆ ರಸ್ತೆ ತುಂಬೆಲ್ಲಾ ನೀರು ಕಂಡು ಬಂದಿದ್ದು, ವಾಹನ ಸವಾರರು ಪರದಾಡಿದ್ದಾರೆ. ಮುಳುಗಿದ್ದ ರಸ್ತೆಯಲ್ಲಿ ಗುಂಡಿ ಕಾಣದೆ ಆಟೋ ಚಾಲಕರು ಪರದಾಟ ನಡೆಸಿದ್ದಾರೆ.
ಇನ್ನು, ಪ್ರತಿ ವರ್ಷ ಮಳೆಗೆ ಜಲಾವೃತ ಆಗುವ ಸಾಯಿ ಲೇಔಟ್ನ ಜನರಿಗೆ ಮತ್ತೆ ಜಲಸಂಕಷ್ಟ ಎಂದುರಾಗಿದೆ. ಸಣ್ಣ ಮಳೆಗೂ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಹೈರಾಣಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ