/newsfirstlive-kannada/media/post_attachments/wp-content/uploads/2025/04/KL_RAHUL_1-1.jpg)
IPL ಸಮರದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತೊಂದು ಭರ್ಜರಿ ಗೆಲುವು ಸಾಧಿಸಿದೆ. 15 ವರ್ಷಗಳ ನಂತರ ಚೆನ್ನೈ ಸೂಪರ್ ಕಿಂಗ್ಸ್ ಪಡೆಯನ್ನ ಅವ್ರದ್ದೇ ನೆಲದಲ್ಲಿ ಮಣಿಸಿತು. ಆದ್ರೆ, ಇದೇ ತವರಿನಲ್ಲಿ ಮತ್ತೆ ಮುಖಭಂಗ ಅನುಭವಿಸಿದ ಚೆನ್ನೈ, ಹೀನಾಯ ದಾಖಲೆಯನ್ನು ಬರೆಯಿತು. ಹಾಗಾದ್ರೆ, ನಿನ್ನೆಯ ಮ್ಯಾಚ್ ಹೇಗಿತ್ತು..? ಡೆಲ್ಲಿ ಗೆಲುವಿನಲ್ಲಿ ಮಿಂಚಿದ್ಯಾರು..?
ಸೀಸನ್-18ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ನಾಗಲೋಟ.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸೋಲಿನ ಸರಪಳಿ ಮುಂದುವರಿದಿದೆ. ಚೆಪಾಕ್ನಲ್ಲಿ ಅದ್ಭುತ ಆಟವಾಡಿದ ಡೆಲ್ಲಿ ಬಾಯ್ಸ್, ಹ್ಯಾಟ್ರಿಕ್ ಗೆಲುವಿನೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಟಾಪರ್ ಆಗಿ ಮೆರೆದಾಡಿದೆ. ಸತತ 3ನೇ ಸೋಲುಂಡ ಚೆನ್ನೈ, 8ನೇ ಸ್ಥಾನಕ್ಕೆ ಕುಸಿದಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ 2ನೇ ಸ್ಥಾನದಲ್ಲಿದೆ.
ಚೆನ್ನೈನ ಚೆಪಾಕ್ ಅಂಗಳದಲ್ಲಿ ಟಾಸ್ ಡೆಲ್ಲಿ ಕ್ಯಾಪಿಟಲ್ಸ್, ಮೊದಲು ಬ್ಯಾಟಿಂಗ್ ಮಾಡೋ ನಿರ್ಧಾರ ಕೈಗೊಂಡ್ರು. ಇದರಂತೆ ಮೊದಲು ಇನ್ನಿಂಗ್ಸ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್ಗೆ ಮೊದಲ ಓವರ್ನಲ್ಲೇ ಆಘಾತ ಎದುರಾಯ್ತು. ಜೇಕ್ ಫ್ರೇಸರ್ ಮೆಕ್ಗುರ್ಕ್ ಡಕೌಟ್ ಆದರು.
ಸಂಕಷ್ಟದಲ್ಲಿದ್ದ ಡೆಲ್ಲಿಗೆ ರಾಹುಲ್-ಪೋರೆಲ್ ಆಸರೆ
ಕೆ.ಎಲ್.ರಾಹುಲ್ ಕಮಾಲ್.. ಅರ್ಧಶತಕ ಸಂಭ್ರಮ
ಶೂನ್ಯಕ್ಕೆ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಡೆಲ್ಲಿಗೆ ರಾಹುಲ್, ಅಭಿಷೇಕ್ ಪೋರೆಲ್ ಆಸರೆಯಾದರು. ಅರ್ಧಶತಕ ಜೊತೆಯಾಟವಾಡಿದ ಈ ಜೋಡಿ, ಬಿಗ್ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿತ್ತು. ಆದ್ರೆ, ಸ್ಫೋಟಕ 33 ರನ್ ಸಿಡಿಸಿದ್ದ ಫೋರೆಲ್, ಔಟಾದ್ರು.
ನಂತರ ಬಂದ ನಾಯಕ ಅಕ್ಷರ್ ಪಟೇಲ್, 21 ರನ್ಗಳ ಕಾಣಿಕೆ ನೀಡಿದರು. ಆದ್ರೆ, ಕ್ಲಾಸಿಕ್ ಇನ್ನಿಂಗ್ಸ್ ಕಟ್ಟಿದ ಕೆ.ಎಲ್.ರಾಹುಲ್, 33 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು.
4ನೇ ವಿಕೆಟ್ಗೆ ಒಂದಾದ ಕೆ.ಎಲ್.ರಾಹುಲ್, ಸಮೀರ್ ರಿಜ್ವಿ ಅರ್ಧಶತಕ ಜೊತೆಯಾಟವಾಡಿದರು. ಆದ್ರೆ, ಸಮೀರ್ ರಿಜ್ವಿ ಆಟ 20 ರನ್ಗಳಿಗೆ ಅಂತ್ಯಗೊಳಿಸಿದರು. ಸ್ಟೇಡಿಯಂನ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ಕೆ.ಎಲ್.ರಾಹುಲ್, 51 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್ ಒಳಗೊಂಡ 77 ರನ್ ಗಳಿಸಿ ಪೆವಿಲಿಯನ್ ಸೇರಿದ್ರು.
12 ಎಸೆತಗಳಲ್ಲಿ 24 ರನ್ ಸಿಡಿಸಿದ ಟ್ರಿಸ್ಟನ್ ಸ್ಟಬ್, ತಂಡದ ಮೊತ್ತವನ್ನು ಹೆಚ್ಚಿಸಿದ್ರೆ. ಅಶುತೋಶ್ ರನೌಟ್ ಆಗಿ ಪೆವಿಲಿಯನ್ ಸೇರಿದರು. ಪರಿಣಾಮ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಕಲೆಹಾಕಿತು.
ಚೆನ್ನೈಗೆ ಅಘಾತ.. ಪವರ್ ಪ್ಲೇನಲ್ಲೇ ತ್ರಿಬಲ್ ಶಾಕ್..!
184 ರನ್ ಗುರಿ ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್ ಬೌಲರ್ಗಳ ಶಿಸ್ತುಬದ್ಧ ದಾಳಿಗೆ ತತ್ತರಿಸಿತು. ಟಾಪ್ ಆರ್ಡರ್ ಬ್ಯಾಟರ್ಗಳಾದ ರಚಿನ್ ರವೀಂದ್ರ, ರುತುರಾಜ್ ಗಾಯಕ್ವಾಡ್, ಡಿವೋನ್ ಕಾನ್ವೆ ಒಬ್ಬರ ಹಿಂದೊಬ್ಬರಂತೆ ಪೆವಿಲಿಯನ್ ಸೇರಿದರು. 41 ರನ್ಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
ಜೀವದಾನ ಸಿಕ್ಕರು ‘ವಿಜಯ’ ನೀಡಲಿಲ್ಲ ವಿಜಯ್..!
ವಿಜಯ್ ಶಂಕರ್, ಧೋನಿ ಟುಕ್ ಟುಕ್ ಇನ್ನಿಂಗ್ಸ್..!
41 ರನ್ಗೆ 3 ವಿಕೆಟ್ ಕಳೆದುಕೊಂಡಿದ್ದ ಚೆನ್ನೈಗೆ ಶಿವಂ ದುಬೆ, ವಿಜಯ್ ಶಂಕರ್ ಆಸರೆಯಾಗುವ ಮುನ್ಸೂಚನೆ ನೀಡಿದರು. ಆದ್ರೆ, ದುಬೆ ಆಟ 18 ರನ್ಗೆ ಅಂತ್ಯವಾಯ್ತು. ಈ ಬಳಿಕ ಬಂದ ಜಡೇಜಾ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದರು.
74 ರನ್ಗೆ 5 ಪ್ರಮುಖ ವಿಕೆಟ್ ಕಳೆದುಕೊಂಡ ಚೆನ್ನೈ ಬಹುಪಾಲು ಸೋಲು ಕಂಡಿತ್ತು. ಆದ್ರೆ, ಈ ವೇಳೆ ಒಂದಾದ ವಿಜಯ್ ಶಂಕರ್, ಧೋನಿ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಕೈಹಾಕಲಿಲ್ಲ. ಜೀವದಾನದ ಲಾಭವನ್ನು ಸದ್ಬಳಕೆ ಮಾಡಿಕೊಳ್ಳದ ವಿಜಯ್ ಶಂಕರ್, 43 ಎಸೆತಗಳಲ್ಲಿ ಅರ್ಧಶತಕ ಪೂರ್ಣಗೊಳಿಸಿದರು.
ಧೋನಿ 11ನೇ ಓವರ್ನಲ್ಲೇ ಬ್ಯಾಟಿಂಗ್ಗೆ ಇಳಿದರು. ಸ್ಲೋ ಇನ್ನಿಂಗ್ಸ್ ಕಟ್ಟುತ್ತಲೇ ಸಾಗಿದರು. ಕೊನೆಯಲ್ಲಿ ಧೋನಿ, ತಲಾ ಒಂದು ಬೌಂಡರಿ, ಸಿಕ್ಸರ್ ಸಿಡಿಸಿದರು. ಅಷ್ಟೋತ್ತಿಗಾಲೇ ಪಂದ್ಯ ಕೈಜಾರಿತ್ತು. ಧೋನಿ ಅಜೇಯ 30 ರನ್ ಗಳಿಸಿದ್ರೆ. ವಿಜಯ್ ಶಂಕರ್, 69 ರನ್ ಗಳಿಸಿಯು ಗೆಲುವಿನ ದಡ ಸೇರಲಿಲ್ಲ.
ಅಂತಿಮವಾಗಿ ಸಿಎಸ್ಕೆ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ ಟೂರ್ನಿಯಲ್ಲಿ ಚೆನ್ನೈ ಹ್ಯಾಟ್ರಿಕ್ ಸೋಲಿನ ಮುಖಭಂಗ ಅನುಭವಿಸಿದ್ರೆ. ಡೆಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿತು. ಅಷ್ಟೇ ಅಲ್ಲ ಚೆಪಾಕ್ನಲ್ಲಿ 15 ವರ್ಷಗಳ ನಂತರ ಗೆಲುವಿನ ಸಿಹಿ ಕಂಡಿತು.
ಇದನ್ನೂ ಓದಿ: ಚೆನ್ನೈನಲ್ಲಿ ಇಂದು MS ಧೋನಿ ನಿವೃತ್ತರಾಗುತ್ತಾರಾ? ಸ್ಟೇಡಿಯಂಗೆ ಮಗನ ಆಟ ನೋಡಲು ಬಂದ ತಂದೆ, ತಾಯಿ!
ಧೋನಿ ಪೋಷಕರೇ ಸೆಂಟರ್ ಆಫ್ ಅಟ್ರಾಕ್ಷನ್..!
ಡೆಲ್ಲಿ ಹಾಗೂ ಚೆನ್ನೈ ಪಂದ್ಯದ ಸೆಂಟರ್ ಆಫ್ ಅಟ್ರಾಕ್ಷನ್.. ಮಾಹಿ ಪೋಷಕರು.. ಧೋನಿ ಕ್ರಿಕೆಟ್ ಕರಿಯರ್ನಲ್ಲಿ ಯಾವುದೇ ಪಂದ್ಯಕ್ಕೆ ಹಾಜರಾಗದ ಪೋಷಕರು. ನಿನ್ನೆಯ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಮಗನ ಆಟ ಕಣ್ತುಂಬಿಕೊಳ್ಳಲು ತಂದೆ ಪಾನ್ ಸಿಂಗ್, ತಾಯಿ ದೇವಕಿ ದೇವಿ ಉತ್ಸುಕರಾಗಿದ್ದರು. ಆದ್ರೆ, ಅಪ್ಪ, ಅಮ್ಮನ ಮನದಾಸೆಯನ್ನು ಧೋನಿ ಈಡೇರಿಸಲಿಲ್ಲ. ಇದು ಫ್ಯಾನ್ಸ್ ನಿರಾಸೆಗೂ ಕಾರಣವಾಯ್ತು. ಅಷ್ಟೇ ಅಲ್ಲ. ಧೋನಿ ನಿವೃತ್ತಿಯ ಊಹಾಪೋಹಕ್ಕೆ ನಾಂದಿಯಾಡಿತ್ತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ