/newsfirstlive-kannada/media/post_attachments/wp-content/uploads/2025/07/Jacqueline_Fernandez_1.jpg)
ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧದ ಇಡಿ (ಜಾರಿ ನಿರ್ದೇಶನಾಲಯ) ಕೇಸ್ ರದ್ದತಿಗೆ ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಸುಖೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ ಆಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡ ಆರೋಪಿ. ಈ ಕೇಸ್ನಲ್ಲಿ ಸುಖೇಶ್ ಚಂದ್ರಶೇಖರ್ ತನ್ನನ್ನು ಸಿಲುಕಿಸಿದ್ದಾರೆ ಎಂದು ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೈಕೋರ್ಟ್ನಲ್ಲಿ ವಾದಿಸಿದ್ದರು. ತಾನು ಯಾವುದೇ ಆಕ್ರಮ ಹಣ ವರ್ಗಾವಣೆ ಮಾಡಿಲ್ಲ. ಅಪರಾಧದ ಹಣವೂ ನನ್ನ ಬಳಿ ಇಲ್ಲ ಎಂದು ಹೈಕೋರ್ಟ್ನಲ್ಲಿ ಜಾಕ್ವೆಲಿನ್ ವಾದಮಂಡನೆ ಮಾಡಿದ್ದರು.
ಆದರೇ, ಈಗಾಗಲೇ ವಿಚಾರಣಾ ಕೋರ್ಟ್, ಕೇಸ್ನ ಕಾಗ್ನಿಜೆನ್ಸ್ ಪಡೆದಿದೆ ಎಂದು ಇ.ಡಿ. ಹೈಕೋರ್ಟ್ನಲ್ಲಿ ವಾದಿಸಿತ್ತು. ಈ ಕೇಸ್ನಲ್ಲಿ ಈಗಾಗಲೇ ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಲಾಗಿದೆ. ಪೂರಕ ಚಾರ್ಜ್ಶೀಟ್ ಕೂಡ ಕೆಳ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. ಈ ಹಂತದಲ್ಲಿ ಕೇಸ್ ರದ್ದತಿಯನ್ನು ಕೋರಿ ಜಾಕ್ವೆಲಿನ್ ಫರ್ನಾಂಡೀಸ್ ಸಲ್ಲಿಸಿರುವ ಈ ಅರ್ಜಿಯೇ ವಿಚಾರಣೆಗೆ ಯೋಗ್ಯವಲ್ಲ ಎಂದು ಇಡಿ ವಾದಿಸಿತ್ತು.
ದೂರುದಾರೆ ಅದಿತಿ ಸಿಂಗ್ ಎಲ್ಲೂ ಜಾಕ್ವೆಲಿನ್ ಫರ್ನಾಂಡೀಸ್ ಹೆಸರು ಉಲ್ಲೇಖಿಸಿಲ್ಲ. ಆಕ್ರಮ ಹಣ ವರ್ಗಾವಣೆಗೆ ಸುಖೇಶ್ಗೆ ಪ್ರಚೋದನೆ, ನೆರವು ನೀಡಿಲ್ಲ ಎಂದು ಜಾಕ್ವೆಲಿನ್ ವಾದಮಂಡನೆ ಮಾಡಿದ್ದರು. ಆದರೇ, ಜಾಕ್ವೆಲಿನ್ ಫರ್ನಾಂಡೀಸ್ ವಾದಮಂಡನೆ ತಿರಸ್ಕರಿಸಿ ದೆಹಲಿ ಹೈಕೋರ್ಟ್ ಆದೇಶ ನೀಡಿದೆ. ತನ್ನ ವಿರುದ್ಧದ ಇ.ಡಿ. ಕೇಸ್ ರದ್ದು ಕೋರಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದಾಗಿ ದೆಹಲಿ ಹೈಕೋರ್ಟ್ನಲ್ಲಿ ಕಾನೂನು ಹೋರಾಟದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ಗೆ ಹಿನ್ನಡೆಯಾಗಿದೆ.
ಬಲೆಗೆ ಬೀಳಿಸಿದ್ದ ಸುಖೇಶ್ ಚಂದ್ರಶೇಖರ್
ದೆಹಲಿಯ ತಿಹಾರ್ ಜೈಲಿನಲ್ಲಿದ್ದ ಸುಖೇಶ್ ಚಂದ್ರಶೇಖರ್, ಜೈಲಿನಿಂದಲೇ ಪೋನ್ನಲ್ಲಿ ರಾನ್ ಬ್ಯಾಕ್ಸಿ ಕಂಪನಿಯ ಮುಖ್ಯಸ್ಥರಾದ ಶಿವೇಂದರ್ ಸಿಂಗ್, ಮಾಲವಿಂದರ್ ಸಿಂಗ್ರನ್ನು ಜೈಲಿನಿಂದ ಬಿಡುಗಡೆ ಮಾಡಿಸುವುದಾಗಿ ಶಿವೇಂದರ್ ಸಿಂಗ್ ಪತ್ನಿ ಅದಿತಿ ಜೊತೆ ಮಾತನಾಡಿದ್ದರು. ತನ್ನನ್ನು ಒಮ್ಮೆ ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದರು. ಇನ್ನೊಮ್ಮೆ ಕೇಂದ್ರದ ಕಾನೂನು ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡು ಪೋನ್ನಲ್ಲಿ ಆದಿತಿ ಜೊತೆ ಮಾತನಾಡಿ, ಹಣ ಕೊಟ್ಟರೇ, ಶಿವೇಂದರ್ ಸಿಂಗ್, ಮಾಲವಿಂದರ್ ಸಿಂಗ್ರನ್ನು ಜಾಮೀನು ಮೇಲೆ ಬಿಡುಗಡೆ ಮಾಡಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಇದನ್ನೂ ಓದಿ:ಸೋದರ ಮಾವನ ಜೊತೆ ಚಕ್ಕಂದ.. ಮದುವೆಯಾದ 45 ದಿನಕ್ಕೆ ಗಂಡನನ್ನ ಮುಗಿಸಿಯೇ ಬಿಟ್ಟ ಹೆಂಡತಿ!
ಹಂತ ಹಂತವಾಗಿ 200 ಕೋಟಿ ರೂಪಾಯಿ ನೀಡಿದ್ದರು
ಈ ಭರವಸೆ ನಂಬಿ, ಸುಖೇಶ್ ಚಂದ್ರಶೇಖರ್ ಹೇಳಿದ ಜಾಗದಲ್ಲಿ, ಹೇಳಿದ ವ್ಯಕ್ತಿಗಳಿಗೆ ಆದಿತಿ ಹಂತ ಹಂತವಾಗಿ 200 ಕೋಟಿ ರೂಪಾಯಿ ನಗದು, ಚಿನ್ನಾಭರಣ ನೀಡಿದ್ದರು. ಬಳಿಕ ಆದಿತಿಗೆ ತಾನು ಮೋಸ ಹೋಗಿರುವುದು ಗೊತ್ತಾಯಿತು. ಆಗ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ತನಿಖೆ ನಡೆಸಿದ ದೆಹಲಿ ಪೊಲೀಸರು ಆದಿತಿಗೆ ಪೋನ್ ಮಾಡಿದ್ದು ಕೇಂದ್ರದ ಗೃಹ ಇಲಾಖೆಯ ಅಧಿಕಾರಿಯೂ ಅಲ್ಲ, ಕಾನೂನು ಇಲಾಖೆಯ ಅಧಿಕಾರಿಯೂ ಅಲ್ಲ. ಅದು ತಿಹಾರ್ ಜೈಲಿನಲ್ಲಿದ್ದ ಸುಖೇಶ್ ಚಂದ್ರಶೇಖರ್ ಎಂದು ತಿಳಿದು ದಂಗಾಗಿದ್ದರು.
ಬಳಿಕ ಕೇಸ್ ಅನ್ನು ಇಡಿಗೆ ಹೆಚ್ಚಿನ ತನಿಖೆಗೆ ವರ್ಗಾಯಿಸಿದ್ದರು. ಆದಿತಿಯಿಂದ ಪಡೆದ ಹಣವನ್ನು ಸುಖೇಶ್ ಚಂದ್ರಶೇಖರ್, ಜಾಕ್ವೆಲಿನ್ ಫರ್ನಾಂಡೀಸ್ಗೂ ನೀಡಿದ್ದ. ಹೀಗಾಗಿ ಜಾಕ್ವೆಲಿನ್ ಫರ್ನಾಂಡೀಸ್ರನ್ನು ಇಡಿ ಅಧಿಕಾರಿಗಳು ಆಕ್ರಮ ಹಣ ವರ್ಗಾವಣೆ ಕೇಸ್ನಲ್ಲಿ ಆರೋಪಿಯನ್ನಾಗಿ ಮಾಡಿ ವಿಚಾರಣೆ ಮಾಡಿದ್ದರು. ಈಗಾಗಲೇ ದೆಹಲಿಯ ಕೆಳ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಬೇಲ್ ಮೇಲೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಹೊರಗೆ ಇದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ