/newsfirstlive-kannada/media/media_files/2025/10/20/children-eye-injured-2025-10-20-10-57-27.jpg)
ಪಟಾಕಿ ಹಚ್ಚುವ ವೇಳೆ ಮಕ್ಕಳ ಕಣ್ಣಿಗೆ ಗಾಯ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದೀಪಾವಳಿ ಹಬ್ಬದ ವೇಳೆ ಮಕ್ಕಳ ಬಗ್ಗೆ ಎಷ್ಟೇ ಜಾಗ್ರತೆ ವಹಿಸಿದರೂ, ಕಡಿಮೆಯೇ. ಮಕ್ಕಳು ಪಟಾಕಿ ಹಚ್ಚುವಾಗ ಸಾಕಷ್ಟು ಮುಂಜಾಗ್ರತೆ ವಹಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರೂ, ಕೆಲವೊಂದು ಅನಾಹುತಗಳು ಹಾಗೆಯೇ ಬಿಡುತ್ತಿವೆ. ಬೆಂಗಳೂರಿನಲ್ಲಿ ನಿನ್ನೆ ದೀಪಾವಳಿ ಹಬ್ಬದ ವೇಳೆ ಹಚ್ಚಿದ ಪಟಾಕಿಯಿಂದ ವಿವಿಧೆಡೆ ಐದು ಮಕ್ಕಳ ಕಣ್ಣಿಗೆ ಗಾಯವಾಗಿದೆ. ವಿವಿಧ ಆಸ್ಪತ್ರೆಗಳಿಗೆ ಮಕ್ಕಳನ್ನು ಕರೆದೊಯ್ದು ಪೋಷಕರು ಈಗ ಗಾಯಗೊಂಡ ಕಣ್ಣಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಇಬ್ಬರು ಮಕ್ಕಳಿಗೆ ಚಿಕಿತ್ಸೆ
ಬೆಂಗಳೂರಿನಲ್ಲಿ ನಿನ್ನೆ ಬೆಳಗ್ಗೆ 9 ಗಂಟೆಯಿಂದ ಇಂದು ಬೆಳಗ್ಗೆ 9 ಗಂಟೆಯ ತನಕ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. 12&14 ವರ್ಷದ ಇಬ್ಬರು ಮಕ್ಕಳ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬರು ತಾವೇ ಹಚ್ಚಿದ ಪಟಾಕಿಯಿಂದ ಗಾಯಗೊಂಡಿದ್ದರೇ, ಇನ್ನೊಬ್ಬ ಬೇರೊಬ್ಬರು ಹಚ್ಚಿದ ಪಟಾಕಿಯಿಂದ ಗಾಯಗೊಂಡಿದ್ದಾರೆ ಎಂದು ಮಿಂಟೋ ಆಸ್ಪತ್ರೆಯ ಪ್ರಭಾರ ನಿರ್ದೇಶಕ ಡಾ.ಶಶಿಧರ್ ಹೇಳಿದ್ದಾರೆ. ಪಟಾಕಿಯಿಂದ ಇಬ್ಬರು ಮಕ್ಕಳ ಕಣ್ಣಿಗೆ ಗಾಯವಾಗಿದೆ. ನಿನ್ನೆ ರಾತ್ರಿ 11 ಗಂಟೆಗೆ ಒಬ್ಬರು, ಮಧ್ಯರಾತ್ರಿ 1 ಗಂಟೆಗೆ ಇನ್ನೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಒಬ್ಬರು ಕಲಾಸಿಪಾಳ್ಯದವರು, ಇನ್ನೊಬ್ಬರು ಕೆಂಪೇಗೌಡ ನಗರದವರು. ಪಟಾಕಿ ಪಿಸ್ತೂಲ್ ಕಿಡಿ ಕಣ್ಣಿಗೆ ತಾಕಿ ಒಬ್ಬರಿಗೆ ಗಾಯವಾಗಿದೆ. ಬೇರೊಬ್ಬರು ರಾಕೆಟ್ ಹೊಡೆದಿದ್ರಿಂದ ಇನ್ನೊಂದು ಬಾಲಕಿಗೆ ಗಾಯವಾಗಿದೆ. ಕಣ್ಣಿನ ರೆಪ್ಪೆಗೆ ಗಾಯವಾಗಿದೆ. ಅದೃಷ್ಟವಶಾತ್ ಇಬ್ಬರು ಮಕ್ಕಳಿಗೂ ದೃಷ್ಟಿಗೆ ತೊಂದರೆ ಆಗಿಲ್ಲ . ಇಬ್ಬರು ಕೂಡ ರಾತ್ರಿ ಚಿಕಿತ್ಸೆ ಪಡೆದು ಬೆಳಗ್ಗೆ ಆಸ್ಪತ್ರೆಯಿಂದ ಡಿಸಚಾರ್ಜ್ ಆಗಿದ್ದಾರೆ.
ನಾರಾಯಣ ನೇತ್ರಾಲಯದಲ್ಲಿ ಮೂವರು ಮಕ್ಕಳಿಗೆ ಚಿಕಿತ್ಸೆ
ಇನ್ನೂ ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಪಟಾಕಿಯಿಂದ ಗಾಯಗೊಂಡ ಮೂವರು ಮಕ್ಕಳು ದಾಖಲಾಗಿದ್ದಾರೆ. ಮೊದಲ ದಿನವೇ ಪಟಾಕಿಯಿಂದ ಮೂವರು ಮಕ್ಕಳಿಗೆ ಗಾಯವಾಗಿದೆ. ನಾರಾಯಣ ನೇತ್ರಾಲಯದಲ್ಲಿ ಗಾಯಾಳು ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
3 ವರ್ಷದ ಒಂದು ಮಗು, 14 ವರ್ಷದೊಳಗಿನ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ. ಪಟಾಕಿ ಸಿಡಿಸೋದನ್ನು ನೋಡುವಾಗ 3 ವರ್ಷದ ಮಗುವಿನ ಕಣ್ಣಿಗೆ ಹಾನಿಯಾಗಿದೆ. ಉಳಿದಿಬ್ಬರು ಪಟಾಕಿ ಸಿಡಿಸುವ ವೇಳೆ ಗಾಯಗೊಂಡ ಮಾಹಿತಿಯನ್ನು ವೈದ್ಯರಿಗೆ ನೀಡಿದ್ದಾರೆ.