ಕರ್ನಾಟಕದಲ್ಲಿ ಆರಿದ್ರ ಮಳೆಯ ಆರ್ಭಟ.. ಹಲವು ಜಿಲ್ಲೆಗಳಲ್ಲಿ ಭಾರೀ ಅನಾಹುತ.. ಏನೆಲ್ಲ ಆಗಿದೆ..?

author-image
Ganesh
Updated On
ಕರ್ನಾಟಕದಲ್ಲಿ ಆರಿದ್ರ ಮಳೆಯ ಆರ್ಭಟ.. ಹಲವು ಜಿಲ್ಲೆಗಳಲ್ಲಿ ಭಾರೀ ಅನಾಹುತ.. ಏನೆಲ್ಲ ಆಗಿದೆ..?
Advertisment
  • ಮಡಿಕೇರಿಯಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
  • ಚಿಕ್ಕಮಗಳೂರಲ್ಲಿ ಮಳೆಯ ಆರ್ಭಟ ಹೇಗಿದೆ ಗೊತ್ತಾ..?
  • ತುಂಬಿ ಹರಿಯುತ್ತಿರುವ ಮಲಪ್ರಭೆ.. ಅಪಾಯದ ಸೂಚನೆ

ಕರ್ನಾಟಕದಲ್ಲಿ ಮತ್ತೆ ಮುಂಗಾರು ಮಳೆಯ ಆರ್ಭಟ ಜೋರಾಗಿದೆ. ಅದರಲ್ಲೂ ಪಶ್ಚಿಮಘಟ್ಟದಲ್ಲಿ ಮಳೆ ಭಾರೀ ಪ್ರಮಾಣದಲ್ಲಿ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ, ಚಿಕ್ಕಮಗಳೂರು, ಕಾರವಾರ, ಉಡುಪಿ, ಮಂಗಳೂರು, ಕೊಡಗು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದೆ.

ಬೆಳಗಾವಿಯಲ್ಲಿ ಏನೆಲ್ಲ ಆಗಿದೆ..?

ನಗರದ ಪೋಸ್ಟ್ ಆಫೀಸ್ ಬಳಿ ಮೃಹತ್ ಮರವೊಂದು ನೆಲಕಚ್ಚಿದೆ. ಮರ ಬಿದ್ದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವಂತೆ ಆಯಿತು. ಇನ್ನು, ಅನಾಹುತದಲ್ಲಿ ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ. ಮಹಾನಗರ ಪಾಲಿಕೆ ಅಧಿಕಾರಿಗಳ ಮರ ತೆರವು ಮಾಡಿದ್ದಾರೆ.

ಇದನ್ನೂ ಓದಿ: ಶುಭಾಂಶು ಶುಕ್ಲಾ ಇವತ್ತು ಬಾಹ್ಯಾಕಾಶಕ್ಕೆ ಪ್ರಯಾಣ.. ಕೊನೆಗೂ ಆಕಾಶಕ್ಕೆ ಜಿಗಿಯಲು ಸಿದ್ಧವಾದ Axiom Mission-4

publive-image

ಖಾನಾಪುರ ತಾಲೂಕಿನ ಚಿಕ್ಕಹಟ್ಟಿಹೊಳಿ ಗ್ರಾಮದ ಬ್ರಿಡ್ಜ್ ಮೇಲೆ ಮಲಪ್ರಭೆ ನದಿ ನೀರು ಹರಿಯುತ್ತಿದೆ. ನಿರಂತರ ಮಳೆಗೆ ಮಲಪ್ರಭಾ ನದಿ ಮೈದುಂಬಿದೆ. ಖಾನಾಪುರ ಪಟ್ಟಣದ ಹೊರವಲಯದ ರೈಲ್ವೆ ‌ಮೇಲ್ಸೆತುವೆಯ ರಸ್ತೆ ಕುಸಿತಗೊಂಡಿದೆ. ಭಾರೀ ಪ್ರಮಾಣದಲ್ಲಿ ರಸ್ತೆ ಕುಸಿದಿದ್ದರಿಂದ ಸಂಚಾರದಲ್ಲಿ ಅಸ್ತವ್ಯಸ್ತಗೊಂಡಿದೆ. ಖಾನಾಪುರ-ಅಸೋಗಾ ಸಂಪರ್ಕಿಸುವ ಮೇಲ್ಸೆತುವೆ ಇದಾಗಿದೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

ಕೊಡಗು ಜಿಲ್ಲೆಯಲ್ಲಿ ಆರಿದ್ರಾ ಮಳೆಯ ಅಬ್ಬರ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಡಿಕೇರಿ, ಕುಶಾಲನಗರ ಮತ್ತು ಸೋಮವಾರಪೇಟೆ, ವಿರಾಜಪೇಟೆ ಮತ್ತು ಪೊನ್ನಂಪೇಟೆ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

publive-image

ಕುಸಿದ ಮನೆ

ಹಾಸನದಲ್ಲೂ ಮಳೆಯ ಅಬ್ಬರ ಮುಂದುವರಿದಿದೆ. ಮಧ್ಯರಾತ್ರಿ ಸುರಿದ ಭಾರೀ ಮಳೆ ಗಾಳಿಗೆ ಮನೆಯ ಗೋಡೆಯೊಂದು ಕುಸಿದಿದೆ. ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬಡಗಿ ಕೊಪ್ಪಲು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಪ್ರಶಾಂತ್ ಅನ್ನೋರಿಗೆ ಮನೆ ಸೇರಿತ್ತು. ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ಹಾನಿಯಾಗಿಲ್ಲ.

ಚಿಕ್ಕಮಗಳೂರು

ಕಳಸ ತಾಲೂಕಿನ ಹೆಮ್ಮಕ್ಕಿ ಗ್ರಾಮದ ರಸ್ತೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆ ಮೇಲೆ ಮಣ್ಣು ಕುಸಿಯುವ ಪ್ರಮಾಣ ಹೆಚ್ಚಾಗಿದ್ದು, ಇದರಿಂದ ಪ್ರಯಾಣಿಕರ ಓಡಾಟಕ್ಕೆ ತೊಂದರೆಯಾಗಿದೆ. ಬಾಳೆಹೊನ್ನೂರು, ಕಳಸ, ಕೊಟ್ಟಿಗೆಹಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

publive-image

ಇನ್ನು ಶೃಂಗೇರಿ ನೆಮ್ಮಾರ್ ಬಳಿ ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಶೃಂಗೇರಿ-ಕಾರ್ಕಳ ರೋಡ್ ಬಂದ್ ಮಾಡಲಾಗಿದೆ. ಇದೀಗ ಮತ್ತೆ ರಸ್ತೆ ಕುಸಿದಿದ್ದರಿಂದ ಸಂಚಾರ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಸದ್ಯ ರಸ್ತೆಯಲ್ಲಿ ಉಂಟಾಗಿರುವ ಟ್ರಾಫಿಕ್ ಜಾಮ್ ಕ್ಲಿಯರ್ ಮಾಡಲಾಗುತ್ತಿದೆ.

ಪ್ರಯಾಣಿಕರೇ ಎಚ್ಚರ.. ಎಚ್ಚರ..

ಚಾರ್ಮಾಡಿ ರಸ್ತೆ ಅಪಾಯದ ಸೂಚನೆ ನೀಡುತ್ತಿದೆ. ಕಾರಣ ಇಷ್ಟೇ, ಭಾರೀ ಮಳೆ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಓಡಾಡೋದೇ ಕಷ್ಟವಾಗಿದೆ. ದಟ್ಟ ಮಂಜು ಆವರಿಸುತ್ತಿದ್ದು, ಘಾಟ್​ನಲ್ಲಿ ರಸ್ತೆ ಕನಿಷ್ಠ ಐದು ಅಡಿ ದೂರ ಕೂಡ ಕಾಣುತ್ತಿಲ್ಲ. ಹೆಡ್​ಲೈಟ್ ಹಾಕಿದ್ದರೂ 5 ಅಡಿ ದೂರ ಕಾಣದಂತಹ ಮಂಜು ಆವರಿಸಿದೆ.

publive-image

ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲೂ ನಿರಂತರ ಮಳೆಯಾಗುತ್ತಿದೆ. ಹೀಗಾಗಿ ಹೊಸನಗರ ತಾಲೂಕಿನಲ್ಲಿ ರಜೆ ಘೋಷಣೆ ಮಾಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಶಾಲಾ, ಕಾಲೇಜು ಹಾಗೂ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಕನ್ನಡದ ಕಡಬ, ಸುಳ್ಯ ತಾಲೂಕಿನಾದ್ಯಂತ ಭಾರೀ ಮಳೆ ಸುರಿಯುತ್ತಿದೆ. ಉದನೆ-ಕಲ್ಲುಗುಡ್ಡೆ ಸಮೀಪದ ರಸ್ತೆಗೆ ಬೃಹತ್ ಮರ ಬಿದ್ದಿದೆ. ಇದರಿಂದ ರಸ್ತೆ ಬ್ಲಾಕ್ ಆಗಿದೆ. ಹಲವೆಡೆ ಚರಂಡಿಗಳು ತುಂಬಿದ್ದರಿಂದ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಇನ್ನು, ನೆಲ್ಯಾಡಿ ಮಣ್ಣಗುಂಡಿ ಎಂಬಲ್ಲಿ ಗುಡ್ಡ ಕುಸಿಯುವ ಭೀತಿ ಎದುರಾಗಿದೆ.

publive-image

ಅರಬೈಲು ಘಾಟ್​ನಲ್ಲಿ ದುರ್ಘಟನೆ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಅರಬೈಲು ಘಟ್ಟದಲ್ಲಿ ಖಾಸಗಿ ಬಸ್ ಪಲ್ಟಿಯಾಗಿದೆ. ಅದೃಷ್ಟವಶಾತ್ ಪ್ರಯಾಣಿಕರು ಅಪಯಾದಿಂದ ಪಾರಾಗಿದ್ದಾರೆ. ಬಸ್ ಬೆಂಗಳೂರಿನಿಂದ ಗೋವಾ ತೆರಳುತ್ತಿತ್ತು. ಬಸ್ಸಿನಲ್ಲಿ ಒಟ್ಟು 25 ಪ್ರಯಾಣಿಕರು ಇದ್ದರು.

ಇದನ್ನೂ ಓದಿ: ಈ ಸರ್ಕಾರಿ ಶಾಲೆಯಲ್ಲಿ ದಾಖಲೆ.. ಎಸ್ಸಿ, ಎಸ್​ಟಿಗೆ ಸೇರಿದ 12 ವಿದ್ಯಾರ್ಥಿನಿಯರು NEET ಪರೀಕ್ಷೆ ಪಾಸ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment