/newsfirstlive-kannada/media/post_attachments/wp-content/uploads/2025/06/KLB-HUSBAND-AND-WIFE.jpg)
ಕಲಬುರಗಿ: ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು ದೊಡ್ಡ ಆತಂಕವನ್ನು ಸೃಷ್ಟಿಸುತ್ತಿವೆ. ಸಣ್ಣ-ಪುಟ್ಟ ವಿಚಾರಗಳಿಗೆ ತಲೆಗಳೇ ಉರುಳುತ್ತಿದ್ದು, ಕಾನೂನು ವ್ಯವಸ್ಥೆಗೂ ದೊಡ್ಡ ಚಾಲೆಂಜ್ ಆಗಿದೆ. ಕಲಬುರಗಿಯಲ್ಲಿ ಓರ್ವ ಆರೋಪಿಗೆ ಪೊಲೀಸರು ಕೊಳ ತೊಡಿಸಿದ್ದಾರೆ. ಪ್ರಕರಣದ ಹಿಂದೆ ಬಿದ್ದಿದ್ದ ಪೊಲೀಸರಿಗೆ ಅಚ್ಚರಿ ವಿಚಾರಗಳು ಗೊತ್ತಾಗಿವೆ..
ಅಂದು ನಡೆದಿದ್ದು ಏನು..?
ಕಲಬುರಗಿ ನಗರದ ಶಹಾಬಜಾರ ಬಡಾವಣೆಯಲ್ಲಿ ಜೂನ್ 10 ರಂದು ಬರ್ಬರ ಹತ್ಯೆ ನಡೆದಿತ್ತು. ಆಳಂದ ತಾಲೂಕಿನ ಕಲ್ಲಹಂಗರಗಾ ಗ್ರಾಮದ ವೆಂಕಟೇಶ್ ಎಂಬಾತ ತನ್ನ ಪತ್ನಿ ರೂಪಾಳನ್ನು ನಡುರಸ್ತೆಯಲ್ಲಿ ಮುಗಿಸಿದ್ದ. ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರಿಗೆ ರೋಚಕ ಸತ್ಯಗಳು ಗೊತ್ತಾಗಿವೆ..
ಗೊತ್ತಾಗಿದ್ದು ಏನು..?
ವೆಂಕಟೇಶ ಹಾಗೂ ರೂಪಾ ಕಳೆದ 8 ವರ್ಷಗಳ ಹಿಂದೆ ಮದುವೆ ಆಗಿದ್ದರು. ಸುಂದರ ಸಂಸಾರಕ್ಕೆ ಮೂವರು ಮಕ್ಕಳು ಸಾಕ್ಷಿಯಾಗಿವೆ. ಆದರೆ ಇತ್ತೀಚಿಗೆ ರೂಪಾ ಪರ ಪುರುಷನ ಮೋಹದ ಬಲೆಗೆ ಬಿದ್ದಿದ್ದಳು. ಅದೂ ಬೇರೆ ಯಾರೂ ಆಗಿರಲಿಲ್ಲ. ಪಕ್ಕದ ಮನೆಯ ಅವಿವಾಹಿತ ಯುವಕ ರಾಘವೇಂದ್ರ ಜಮಾದಾರ ಎಂಬಾತನ ಜೊತೆ..
ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ.. KRS ಡ್ಯಾಮ್ ತುಂಬಲು ಇನ್ನೂ ಎಷ್ಟು ಅಡಿ ನೀರು ಬೇಕು..?
ಈ ವಿಚಾರ ಗಂಡನಿಗೆ ಗೊತ್ತಾಗಿದೆ. ಮನೆಯಲ್ಲಿ ಗಂಡ-ಹೆಂಡತಿ ಮಧ್ಯೆ ಜಗಳ ಜೋರಾಗಿದೆ. ನಂತರ ಗಂಡನಿಂದ ಬೇಸತ್ತ ಪತ್ನಿ, ಪತಿಯನ್ನು ತೊರೆದು ಕಲಬುರಗಿಯಲ್ಲಿ ಬೇರೆ ಮನೆ ಮಾಡಿಕೊಂಡಿದ್ದಳು. ಯುವಕ ಆಗಾಗ ಇಲ್ಲಿಗೂ ಬಂದು ಹೋಗುತ್ತಿದ್ದ.
ಹೆಂಡತಿ ತನ್ನನ್ನು ತೊರೆದಿದ್ದರಿಂದ ಕುದಿಯುತ್ತಿದ್ದ ಗಂಡ ವೆಂಕಟೇಶ್, ರೂಪಾಳನ್ನು ಮುಗಿಸಲು ನಿಶ್ಚಯಿಸಿದ್ದ. ಆಕೆ ಮಾಡಿರುವ ಬಾಡಿಗೆ ಮನೆ ಎಲ್ಲಿದೆ? ಕೆಲಸ ಮಾಡುವ ಹೋಟೆಲ್ ಎಲ್ಲಿದೆ? ದಿನಾಲು ಎಷ್ಟು ಗಂಟೆಗೆ ಕೆಲಸಕ್ಕೆ ಹೋಗ್ತಾಳೆ? ಯಾವ ರಸ್ತೆ ಮೂಲಕ ಹೋಗ್ತಾಳೆ? ಅನ್ನೋದನ್ನು ತಿಳಿದುಕೊಂಡಿದ್ದ.
ಅದರಂತೆ ಜೂನ್ 10 ರಂದು ಬೆಳಗ್ಗೆ ಶಹಾಬಜಾರ ಲಂಗೋಟಿ ಪೀರ ದರ್ಗಾ ಬಳಿ ಹೆಂಡತಿ ಬರೋದನ್ನೇ ಕಾದು ಕುಳಿತಿದ್ದ. ಆಕೆ ಬರುತ್ತಿದ್ದಂತೆಯೇ ಹರಿತವಾದ ಚಾಕುವಿನಿಂದ ಆಕೆಯ ಮೇಲೆ ಅಟ್ಯಾಕ್ ಮಾಡಿದ್ದಾನೆ. ಮನಬಂದಂತೆ ಚಾಕು ಇರಿದು ಬರ್ಬರವಾಗಿ ಗಾಯಗೊಳಿಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೂಪಾ ಕೊನೆಗೂ ಬದುಕುಳಿಯಲಿಲ್ಲ.
ಇದನ್ನೂ ಓದಿ: ಫೋನ್ ಖರೀದಿಗೆ ಸಾವಿರ, ಸಾವಿರ ಖರ್ಚು ಮಾಡ್ತೀರಿ.. ಆದರೆ ಕೊನೆಯಲ್ಲಿ ಈ ತಪ್ಪು ಮಾಡದಿರಿ..
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಾಗ ಸಿಸಿಟಿವಿಯ ದೃಶ್ಯವೊಂದು ಸಿಕ್ಕಿತ್ತು. ಅದರಲ್ಲಿ ಆರೋಪಿ ಬೈಕ್ ಮೇಲೆ ಹೋಗೋದು ಪತ್ತೆಯಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಆತನ ಬಂಧನಕ್ಕೆ ಬಲೆ ಬೀಸುತ್ತಾರೆ. ಇದು ಗೊತ್ತಾಗುತ್ತಿದ್ದಂತೆಯೇ ಆರೋಪಿ ವೆಂಕಟೇಶ ನಿದ್ರೆ ಮಾತ್ರೆ ಸೇವಿಸಿ ಆಸ್ಪತ್ರೆ ಸೇರುತ್ತಾನೆ. ಈ ವಿಚಾರ ತಿಳಿದ ಚೌಕ್ ಠಾಣೆ ಪೊಲೀಸರು, ಆತ ಚೇತರಿಸಿಕೊಂಡ ಬಳಿಕ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಅನಾಥರಾದ ಮಕ್ಕಳು..
ಮೂವರು ಮುದ್ದಾದ ಮಕ್ಕಳು, ಪತಿ ಇದ್ದರೂ ಯುವಕನ ಮೋಹದ ಪಾಶಕ್ಕೆ ಬಿದ್ದು ತನ್ನ ಸಂಸಾರವನ್ನೇ ರೂಪಾ ಹಾಳು ಮಾಡಿಕೊಂಡಿದ್ದಾಳೆ. ತಾಯಿ ನಡು ರಸ್ತೆಯಲ್ಲಿ ಉಸಿರು ನಿಲ್ಲಿಸಿದ್ರೆ, ಅದೇ ಕೇಸಲ್ಲಿ ತಂದೆ ಜೈಲು ಸೇರಿದ್ದಾನೆ. ಹೆತ್ತವರ ಸ್ವಯಂಕೃತ ತಪ್ಪಿಗೆ ಮಕ್ಕಳು ಅನಾಥರಾಗಿವೆ.
ಇದನ್ನೂ ಓದಿ: ವರ್ಷಕ್ಕೆ 30 ದಿನ ಮಾತ್ರ ದರುಶನ ಭಾಗ್ಯ.. ದರ್ಶನ್ ಭೇಟಿ ಕೊಟ್ಟ ಶಿವ ದೇಗುಲದ ಮಹಿಮೆ ಏನು?
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ