/newsfirstlive-kannada/media/post_attachments/wp-content/uploads/2025/02/MISSING-WIFE.jpg)
ಉತ್ತರಪ್ರದೇಶದ ಉನ್ನಾವೋ ಜಿಲ್ಲೆಯ 55 ವರ್ಷದ ವ್ಯಕ್ತಿ ಕಳೆದು ಹೋದ ತನ್ನ ಪತ್ನಿಗಾಗಿ ಸುಮಾರು 22 ದಿನಗಳ ಕಾಲ ಹುಡುಕಾಟ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ಅಂದ್ರೆ ಜನವರಿ 13ರಂದು ರಾಕೇಶ್ ಕುಮಾರ್ ಅವರ ಪತ್ನಿ ಶಾಂತಿದೇವಿ ಆಕಸ್ಮಿಕವಾಗಿ ಕಾಣೆಯಾಗಿದ್ದರು. ಇದರಿಂದ ಆತಂಕಗೊಂಡ ರಾಕೇಶ್ ಕುಮಾರ್ ಬಿಡುವಿಲ್ಲದಂತೆ ತಮ್ಮ ಪತ್ನಿಯ ಹುಡುಕಾಟಕ್ಕೆ ನಿಂತಿದ್ದರು. ಕಾನ್ಪುರ್,ಲಖನೌ, ಕನ್ನಾಜು ಎಲ್ಲಾ ಕಡೆ ಹುಡುಕಾಟ ನಡೆಸಿದರು ಕೂಡ ಅವರ ಪತ್ನಿಯ ಸುಳಿವೆ ಕಾಣಲಿಲ್ಲ. ಭರವಸೆಯನ್ನೇ ಕಳೆದುಕೊಂಡಿದ್ದ ರಾಕೇಶ್ ಹೃದಯ ಚೂರಾದ ಸ್ಥಿತಿಯಲ್ಲಿ ಕುಳಿತಿದ್ದರು.
ಇದರಿಂದ ದಿನ ಕಳೆದಂತೆ ರಾಕೇಶ್ ಆರೋಗ್ಯದಲ್ಲಿ ಏರುಪೇರಾಗಲು ಶುರುವಾಗಿತು. ವಿಪರೀತ ಸ್ಟ್ರೇಸ್ನಿಂದಾಗಿ ಅವರಲ್ಲಿ ದೃಷ್ಟಿದೋಷ ಕಾಣಲು ಶುರುವಾಯ್ತು. ಕೊನೆಗೆ ಅವರ ಸ್ನೇಹಿತ ರಾಜೋಲ್ ಶುಕ್ಲಅ ಎಂಬುವವರು ಉನ್ನಾವೋ ಜಿಲ್ಲಾಸ್ಪತ್ರೆಗೆ ಅವರನ್ನುಕರೆದುಕೊಂಡು ಹೋಗುತ್ತಾರೆ. ಕಣ್ಣಿನಲ್ಲಿ ಪೊರೆ ಬಂದಿರುವಾಗಿ ಹೇಳಿದ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿ ಶಸ್ತ್ರ ಚಿಕಿತ್ಸೆಯ ದಿನವನ್ನು ನಿಗದಿ ಮಾಡುತ್ತಾರೆ.
ವೈದ್ಯರು ಹೇಳಿದ್ದ ಎಲ್ಲಾ ಸಲಹೆಗಳನ್ನು ಸರಿಯಾಗಿ ಪಾಲಿಸಿದ ಕುಮಾರ್. ಕೊನೆಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ವಾರ್ಡ್ಗೆ ಶಿಫ್ಟ್ ಆಗುತ್ತಾರೆ. ಇದೇ ಸಮಯದಲ್ಲಿ ಅವರ ಪಕ್ಕದಲ್ಲಿಯೇ ಇರುವ ಮಹಿಳೆಯೊಬ್ಬಳ ಕೂಗು ಅವರಿಗೆ ಕೇಳುತ್ತದೆ. ನೀರು ಕೊಡಿ ನೀರು ಕೊಡಿ ಎಂದು ಆ ಮಹಿಳೆ ಬೇಡುತ್ತಿರುತ್ತಾಳೆ. ಯಾವಾಗ ಇವರ ಕಣ್ಣಿಗೆ ಕಟ್ಟಿದ್ದ ಬ್ಯಾಂಡೇಜ್ ತೆಗೆಯುತ್ತಾರೋ ಆಗ ಆ ಮಹಿಳೆಯತ್ತ ನೋಡಿದ ಕುಮಾರ್ ಅಕ್ಷರಶಃ ಬೆಚ್ಚಿ ಬೀಳುತ್ತಾರೆ. ಹಾಗೆ ಕೂಗುತ್ತಿದ್ದ ಮಹಿಳೆ 22 ದಿನದ ಹಿಂದೆ ಕಳೆದು ಹೋಗಿದ್ದ ಅವರ ಪತ್ನಿಯೇ ಆಗಿರುತ್ತಾಳೆ.
ಸಂಪೂರ್ಣ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದ ಶಾಂತಿ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ದೆಹಲಿಯಲ್ಲಿ ಆಘಾತ.. ಶಾಂತವಾಗಿರಿ ಆತಂಕ ಬೇಡ ಎಂದ ಪ್ರಧಾನಿ ಮೋದಿ
ಪತ್ನಿ ಮರಳಿ ಸಿಕ್ಕಳು ಅನ್ನುವ ಖುಷಿಗಿಂತ ರಾಕೇಶ್ ಕುಮಾರ್ಗೆ ಎದೆಯೊಡೆದು ಹೋಗವುಂತಹ ಘಟನೆಯೊಂದು ನಡೆಯುತ್ತದೆ. ಏಕೆಂದರೆ ಅಲ್ಲಿನ ವೈದ್ಯರು ಹೇಳುವ ಪ್ರಕಾರ ಶಾಂತಿದೇವಿಯವರ ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಅವರು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡಿರುತ್ತಾತೆ. ಅವರು ಅಲ್ಲಿ ಬಂದು ದಾಖಲಾದಾಗ ಅರೆ ಪ್ರಜ್ಞಾವಸ್ಥೆಯಲ್ಲಿದ್ದರು ಎಂದು ವೈದ್ಯರು ಹೇಳುತ್ತಾರೆ. ಶಾಂತಿದೇವಿಯವರು ತಮ್ಮ ಪತಿಯನ್ನು ಕೂಡ ಗುರುತಿಸಲಾಗದಷ್ಟು ನೆನಪಿನ ಶಕ್ತಿಯನ್ನು ಕಳೆದುಕೊಂಡಿರುತ್ತಾರೆ.
ಇದನ್ನೂ ಓದಿ: ಭಾರತೀಯ ಸೇನೆಗೆ ಅವಮಾನಿಸಿದ್ರಾ ಬಾಲಿವುಡ್ ನಟಿ..? ಕಪೂರ್ ವಿರುದ್ಧ ತನಿಖೆಗೆ ಆದೇಶಿಸಿದ ನ್ಯಾಯಾಲಯ
ಈ ಒಂದು ದೊಡ್ಡ ಆಘಾತದಿಂದ ಕುಸಿದು ಬಿದ್ದ ರಾಕೇಶ್ ಕುಮಾರ್ ತಮ್ಮ ಪತ್ನಿಯನ್ನು ಮನೆಗೆ ಕರೆದುಕೊಂಡು ಹೋಗಿ ಅವರು ವಾಸಿಯಾಬೇಕಾದ ಎಲ್ಲಾ ವೈದ್ಯಕೀಯ ಚಿಕಿತ್ಸೆಯನ್ನು ಕೊಡಿಸಲು ಆರಂಭಿಸುತ್ತಾರೆ. ಅವರ ಪ್ರೀತಿ, ಕಾಳಜಿ ದೇವರ ಕೃಪೆಯಿಂದ ಶಾಂತಿದೇವಿಯವರ ಆರೋಗ್ಯದಲ್ಲಿ ದಿನೇ ದಿನೇ ಸುಧಾರಣೆಗಳು ಕಂಡು ಬರುತ್ತದೆ.
ವೆಲ್ಡಿಂಗ್ ಮಾಡಿಕೊಂಡು ಉಪಜೀವನ ಮಾಡಿಕೊಂಡಿದ್ದ ರಾಕೇಶ್ ಕುಮಾರ್ಗೆ ವೈದ್ಯಕೀಯ ಖರ್ಚು ನೀಗಿಸಿವುದೇ ದೊಡ್ಡ ಸವಾಲಾಗಿರುತ್ತದೆ ಕೊನೆಗೆ ಅವರು ಸರ್ಕಾರಿ ಸವಲತ್ತಗಳನ್ನು ಉಪಯೋಗಿಸಿಕೊಂಡು ಪತ್ನಿಯ ಚಿಕಿತ್ಸೆಯನ್ನು ಮುಂದುವರಿಸುತ್ತಾರೆ. ಉನ್ನಾವೋ ಆಸ್ಪತ್ರೆಯ ವೈದ್ಯರಾದ ಡಾ ಪ್ರತಾಪ್ ಶಾಂತಿದೇವಿಯವರ ನೆನಪಿನ ಶಕ್ತಿ ದಿನೇ ದಿನೇ ಉತ್ತಮವಾಗುತ್ತಿದೆ. ಸದ್ಯದಲ್ಲಿಯೇ ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ