/newsfirstlive-kannada/media/post_attachments/wp-content/uploads/2025/02/RASHMIKA_MANDANNA-1.jpg)
ರಶ್ಮಿಕಾ ಮಂದಣ್ಣ ಕಥೆ ಕೂಡ ಹೀಗೆ ಆದಂತಿದೆ. ಹುಟ್ಟಿದ ನೆಲವೂ. ಅವಕಾಶ ಕೊಟ್ಟ ಚಿತ್ರರಂಗ ಎರಡನ್ನೂ ಮರೆತ ಛಾವಾ ಮೂವಿಯ ಬೆಡಗಿ ನೆಟ್ಟಿಗರ ಬಾಯಿಗೆ ಚೂಯಿಂಗ್ ಗಮ್ ಆಗಿಬಿಟ್ಟಿದ್ದಾರೆ.
ರಶ್ಮಿಕಾ ಮಂದಣ್ಣ.. ಹಲವರ ಪಾಲಿಗೆ ನ್ಯಾಷನಲ್ ಕ್ರಶ್ ಆದ್ರೆ ಕನ್ನಡಿಗರಿಗೆ ಈಕೆ ಹಾಗಲಕಾಯಿ ಜ್ಯೂಸ್. ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಕಿರಿಕ್ ಬೆಡಗಿ ಬದಲಾದ ಪರಿ. ಸದ್ಯ, ಸಕ್ಸಸ್ ಅಂಬಾರಿಯಲ್ಲಿ ಸವಾರಿ ಮಾಡುತ್ತಿರುವ ರಶ್ಮಿಕಾ ಮಂದಣ್ಣಗೆ ಹತ್ತಿದ ಏಣಿ ಕಣ್ಣಿಗೆ ಕಾಣುತ್ತಿಲ್ಲ. ಕರ್ನಾಟಕದಲ್ಲಿ ಹುಟ್ಟಿ, ಕನ್ನಡದ ಸಿನಿಮಾದಲ್ಲಿ ಚಾನ್ಸ್ ಪಡೆದು ಇವತ್ತು ತಾನು ಕನ್ನಡದವಳು ಅನ್ನೋದನ್ನೇ ಮರೆತ್ತಿದ್ದಾರೆ ಪುಷ್ಪನ ಪೀsssಲಿಂಗ್ಸ್ ಪಾರ್ಟ್ನರ್.
ನಾನು ಹೈದರಾಬಾದ್ನಿಂದ ಬಂದವಳು ಎಂದ ಮಂದಣ್ಣ
ಕನ್ನಡದ ನೆಲದಲ್ಲಿ ಹುಟ್ಟಿ, ಕಾವೇರಿ ನೀರು ಕುಡಿದು, ಕನ್ನಡ ಚಿತ್ರೋದ್ಯಮದಿಂದಲೇ ಅನ್ನ ಕಂಡುಕೊಂಡ ರಶ್ಮಿಕಾ ಈಗ ಪ್ರಮಾದದ ಪ್ರವಾಹದಲ್ಲಿ ಸಿಲುಕಿದ್ದಾರೆ. ಇದನ್ನ ಉಂಡ ಮನೆಗೆ ದ್ರೋಹ ಅನ್ನಬೇಕೋ, ಅಹಂಕಾರ ಅನ್ನಬೇಕೋ ಗೊತ್ತಿಲ್ಲ. ಯಾಕಂದ್ರೆ ನಾನು ಹೈದರಾಬಾದ್ನವಳು ಎಂದು ಬಹಿರಂಗವಾಗಿ ಬಡಬಡಿಸಿದ್ದಾರೆ.
ರಶ್ಮಿಕಾ ಮಂದಣ್ಣ ನಟನೆಯ ಛಾವಾ ಸಿನಿಮಾ ಪ್ರಮೋಷನ್ ವೇಳೆ ತಾವು ಹೈದರಾಬಾದ್ನಿಂದ ಬಂದವಳು ಅಂತಾ ಹೇಳ್ಕೊಂಡಿದ್ದಾರೆ. ಇದು ಸಹಜವಾಗಿ ಕನ್ನಡಿಗರ ಹಳಸಿದ್ದ ಸಿಟ್ಟಿನ ಚಿತ್ರಾನ್ನವನ್ನ ಮತ್ತೆ ಒಗ್ಗರಣೆಗಿಟ್ಟು ಚಟಪಟ ಎನ್ನುವಂತೆ ಮಾಡಿದೆ. ರಶ್ಮಿಕಾ ಹುಟ್ಟಿದ ಕೊಡಗು ಹೈದರಾಬಾದ್ನಲ್ಲಿ ಎಲ್ ಬರುತ್ತಪ್ಪಾ ಅಂತಾ ಪ್ರಶ್ನಿಸುವಷ್ಟು ಆಕ್ರೋಶ.
ಇದನ್ನೂ ಓದಿ: ಮಹಾ ಕುಂಭಮೇಳದಲ್ಲಿ ಐತಿಹಾಸಿಕ ದಾಖಲೆ.. ಇಲ್ಲಿವರೆಗೆ ಎಷ್ಟು ಕೋಟಿ ಭಕ್ತರು ಪುಣ್ಯ ಸ್ನಾನ ಮಾಡಿದ್ದಾರೆ..?
ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಅವಕಾಶ
ಸುಮ್ನೆ ಒಂದು ಸಲ ಫ್ಲ್ಯಾಶ್ಬ್ಯಾಕ್ ನೋಡಿದ್ರೆ, ಬೆಳಗೆದ್ದು ರಶ್ಮಿಕಾ ಮುಖವನ್ನ ಜನರು ನೋಡುವಂತೆ ಮಾಡಿದ್ದೆ ರಕ್ಷಿತ್ ಶೆಟ್ಟಿ ಜೊತೆಗಿನ ಕಿರಿಕ್ ಪಾರ್ಟಿ ಸಿನಿಮಾ. ಇದಾದ ಬಳಿಕ ಪುನೀತ್ ರಾಜ್ ಕುಮಾರ್, ಗಣೇಶ್ರಂತ ಸ್ಟಾರ್ ನಟರ ಸಿನಿಮಾದಲ್ಲಿ ಅವಕಾಶ ಕೊಡಲಾಗಿತ್ತು. ಆಮೇಲೆ ಪಕ್ಕದ ರಾಜ್ಯಕ್ಕೆ ಹಾರಿಹೋದ ರಶ್ಮಿಕಾ ಮುತ್ತಿನ ಮತ್ತಲ್ಲಿ ನ್ಯಾಷನಲ್ ಕ್ರಶ್ ಅನ್ನೋ ಗತ್ತು ತಲೆಗೇರಿಸಿಕೊಂಡಂತಿದೆ. ಸಾವಿರಾರು ಕೋಟಿ ಕಲೆಕ್ಷನ್ ಹುಟ್ಟಿ ಬೆಳೆದೂರಿನ ಕನೆಕ್ಷನ್ ಕಟ್ ಮಾಡಿದಂತಿದೆ.
ರಶ್ಮಿಕಾ ಮಂದಣ್ಣ ಆಡಿದ ಹೈದರಾಬಾದ್ ಮಾತಿಗೆ ಸಾಕಷ್ಟು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರಂತೂ ಕನ್ನಡದ ನೆಲದ ಮೇಲೆ ನೀವು ಕಾಲು ಇಡಬೇಡಿ ಅಂತ ಕಟು ನುಡಿಗಳಲ್ಲೇ ಕಾಮೆಂಟ್ ಮಾಡ್ತಿದ್ದಾರೆ. ಹುಟ್ಟಿದ ನೆಲ, ಅವಕಾಶ ಕೊಟ್ಟ ಚಿತ್ರರಂಗ ಎರಡನ್ನೂ ಮರೆತ ಛಾವಾ ಹುಡುಗಿ ನೆಟ್ಟಿಗರ ಬಾಯಿಗೆ ಚೂಯಿಂಗ್ ಗಮ್ ಆಗಿರೋದಂತೂ ನಿಜ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ