/newsfirstlive-kannada/media/post_attachments/wp-content/uploads/2025/01/ENG-Vs-IND.jpg)
ಇಂಗ್ಲೆಂಡ್ ಹಾಗೂ ಟೀಮ್ ಇಂಡಿಯಾದ ನಡುವಿನ 5 ಪಂದ್ಯಗಳ ಟಿ20 ಸರಣಿ ಕೊನೆಯ ಹಂತಕ್ಕೆ ಬಂದು ತಲುಪಿದೆ. 3-1 ರಿಂದ ಈಗಾಗಲೇ ಸರಣಿ ಕೈ ವಶ ಮಾಡಿಕೊಂಡಿರುವ ಸೂರ್ಯಕುಮಾರ್ ನೇತೃತ್ವದ ತಂಡದಲ್ಲಿ, ಕೆಲ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇದೆ.
ಪುಣೆಯಲ್ಲಿ ನಡೆದ 4ನೇ ಪಂದ್ಯದಲ್ಲಿ ಯಂಗ್ ಪ್ಲೇಯರ್ಸ್ ಆದ ಶಿವಂ ದುಬೆ, ಹರ್ಷಿತ್ ರಾಣಾ, ಆರ್ಶ್ದೀಪ್ ಸಿಂಗ್ ಹಾಗೂ ರಿಂಕು ಸಿಂಗ್ಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಇದರಿಂದ ಹಿರಿಯ ಪೇಸ್ ಬೌಲರ್ ಮೊಹಮ್ಮದ್ ಶಮಿ, ವಾಷಿಂಗ್ಟನ್ ಸುಂದರ್, ಧೃವ್ ಜುರೇಲ್ ಅವರನ್ನು ಬೆಂಚ್ಗೆ ಸೀಮಿತ ಮಾಡಲಾಗಿತ್ತು. ಆದರೆ ಭಾರತ ತಂಡ ಈಗ ಸರಣಿಯನ್ನು ಗೆದ್ದುಕೊಂಡಿದ್ದರಿಂದ ಬೆಂಚ್ಗೆ ಸೀಮಿತವಾದವರಿಗೆ ಕೊನೆ ಪಂದ್ಯದಲ್ಲಿ ಅವಕಾಶ ಕೊಡುವ ಸಾಧ್ಯತೆ ಇದೆ.
ಈ ಸರಣಿಯಲ್ಲಿ ರಮಣದೀಪ್ ಸಿಂಗ್ ಆಯ್ಕೆ ಆಗಿದ್ದರೂ ಒಂದೂ ಪಂದ್ಯವನ್ನು ಆಡಲಿಲ್ಲ. ಹೀಗಾಗಿ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಅಥವಾ ಬೇರೆ ಆಟಗಾರರಿಗೆ ವಿಶ್ರಾಂತಿ ಕೊಟ್ಟು ರಮಣದೀಪ್ ಸಿಂಗ್ಗೆ ಅವಕಾಶ ಕೊಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಮುಂದೆ ಚಾಂಪಿಯನ್ಸ್ ಟ್ರೋಫಿ ಇರುವ ಕಾರಣ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ಅವಶ್ಯಕತೆ ಇದೆ ಎನ್ನಲಾಗುತ್ತಿದೆ.
ಇದನ್ನೂ ಓದಿ:ವಿಮಾನಗಳ ಟಿಕೆಟ್ ಸೋಲ್ಡ್ ಔಟ್.. KKRTC ಇಂದ ಕುಂಭಮೇಳಕ್ಕೆ ವಿಶೇಷ ಬಸ್ ವ್ಯವಸ್ಥೆ
ಇನ್ನು ಭಾರತದ ಪೇಸ್ ಬೌಲರ್ ಆದರೂ ಈ ಸರಣಿಯಲ್ಲಿ ಕೇವಲ ಒಂದೇ ಒಂದು ಪಂದ್ಯವಾಡಿ 3 ಓವರ್ ಬೌಲಿಂಗ್ ಮಾಡಿರುವ ಮೊಹಮ್ಮದ್ ಶಮಿಗೆ ಅವಕಾಶ ಪಕ್ಕಾ ಎನ್ನಲಾಗುತ್ತಿದೆ. ಇವರ ಬದಲಿಗೆ ಯುವ ಪೇಸರ್ ಆರ್ಶ್ದೀಪ್ ಸಿಂಗ್ಗೆ ವಿಶ್ರಾಂತಿ ಕೊಡಲಾಗುತ್ತದೆ. ಹೀಗಾಗಿ ಕೊನೆ ಪಂದ್ಯದ ಅಖಾಡದಲ್ಲಿ ಮೊಹಮ್ಮದ್ ಶಮಿ ಘರ್ಜನೆ ಮಾಡುವ ಸಾಧ್ಯತೆ ಇದೆ.
ಇನ್ನು ಇಂದಿನ ಪಂದ್ಯ ಸಂಜೆ 7 ಗಂಟೆಗೆ ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿದೆ. 33,000 ಸಾವಿರ ಅಭಿಮಾನಿಗಳು ಕುಳಿತು ಸ್ಟೇಡಿಯಂನಲ್ಲಿ ಪಂದ್ಯ ವೀಕ್ಷಣೆ ಮಾಡಬಹುದು. ಕೊನೆ ಪಂದ್ಯದಲ್ಲಾದರೂ ಗೆದ್ದು ಮಾನ ಕಾಪಾಡಿಕೊಳ್ಳುವ ಭರವಸೆಯಲ್ಲಿ ಆಂಗ್ಲರು ಕಣಕ್ಕೆ ಇಳಿಯುತ್ತಿದ್ದಾರೆ. ಆದರೆ ವಿಜಯ ಲಕ್ಷ್ಮಿ ಯಾರ ಪಾಲಾಗಲಿದ್ದಾರೆ ಎನ್ನುವುದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ