/newsfirstlive-kannada/media/post_attachments/wp-content/uploads/2025/05/Indian-Air-Force-DGMO-4.jpg)
ನವದೆಹಲಿ: ಭಾರತ, ಪಾಕ್ ಸಂಘರ್ಷದಲ್ಲಿ ಆಪರೇಷನ್ ಸಿಂಧೂರಕ್ಕೆ ಅತಿ ದೊಡ್ಡ ಯಶಸ್ಸು ಸಿಕ್ಕಿದೆ. ಭಾರತದ DGMO ಅಧಿಕಾರಿಗಳು ಸುದ್ದಿಗೋಷ್ಠಿ ನಡೆಸಿ, ಸೇನಾ ಕಾರ್ಯಾಚರಣೆಯ ರೋಚಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡೈರೆಕ್ಟರ್ ಜನರಲ್ ಆಫ್ ಏರ್ ಆಪರೇಷನ್ ಅವಧೇಶ್ ಕುಮಾರ್ ಭಾರ್ತಿ ಅವರು ಮಾತನಾಡಿ, ಆಕಾಶ್ ಸ್ವದೇಶಿ ಏರ್ ಡಿಫೆನ್ಸ್ ಸಿಸ್ಟಮ್ ಆಗಿದೆ. ಕಳೆದ ದಶಕದಲ್ಲಿ ಅಭೂತಪೂರ್ವವಾಗಿ ಬಜೆಟ್ನಲ್ಲಿ ಬೆಂಬಲ ನೀಡಿದ್ದರಿಂದ ಈ ಸಾಧನೆ ಸಾಧ್ಯವಾಗಿದೆ.
ಚೀನಾದ PL-15 ಮಿಸೈಲ್ ತನ್ನ ಟಾರ್ಗೆಟ್ ಮಿಸ್ ಆಗಿ ಬಿದ್ದಿದೆ. ಲಾಂಗ್ ರೇಂಜ್ ರಾಕೆಟ್ ಕೂಡ ಭಾರತದಲ್ಲಿ ಬಿದ್ದಿದೆ. ಭಾರತದ ಏರ್ ಡಿಫೆನ್ಸ್ ಸಿಸ್ಟಮ್ಗಳು ಪಾಕಿಸ್ತಾನ, ಚೀನಾ ಮಿಸೈಲ್ಗಳನ್ನು ಹೊಡೆದುರುಳಿಸಿದೆ. ಭಾರತವು ಬಹು ಪದರದ ಏರ್ ಡಿಫೆನ್ಸ್ ಸಿಸ್ಟಮ್ ಹೊಂದಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಉಗ್ರರಿಗೆ ಪಹಲ್ಗಾಮ್ ಸ್ಯಾಟ್ಲೈಟ್ ಫೋಟೋ ಮಾರಾಟ? ಭಾರತ, ಪಾಕ್ ಮಧ್ಯೆ ಅಮೆರಿಕಾ ಡಬಲ್ ಗೇಮ್?
ಪಾಕಿಸ್ತಾನದ ರಹೀಮ್ ಯಾರ್ ಖಾನ್ ಏರ್ ಬೇಸ್ ರನ್ ವೇನಲ್ಲಿ ನಮ್ಮ ದಾಳಿಯಿಂದ ಭಾರೀ ಗುಂಡಿ ಬಿದ್ದಿದೆ. ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ವೈರಿಗಳ ಡ್ರೋಣ್, ಮಿಸೈಲ್ಗಳನ್ನ ಹೊಡೆದುರುಳಿಸಿ ನಮ್ಮ ಕಡೆ ಕನಿಷ್ಠ ಹಾನಿಯಾಗುವಂತೆ ಮಾಡಿವೆ ಎಂದು ಅವಧೇಶ್ ಕುಮಾರ್ ಭಾರ್ತಿ ಹೇಳಿದ್ದಾರೆ.
ಡಿಜಿಎಂಓ ರಾಜೀವ್ ಘಾಯ್ ಅವರು ಮಾತನಾಡಿ, ನಾವು ಏರ್ಪೋರ್ಸ್ ಜೊತೆ ಸೇರಿ ದಾಳಿ ನಡೆಸಿದ್ದೇವೆ. ಪಾಕಿಸ್ತಾನ ಏರ್ ಪೋರ್ಸ್ ನಮ್ಮ ಮೇಲೆ ಮೇ 9, 10ರಂದು ದಾಳಿ ನಡೆಸಿದಾಗ ನಮ್ಮ ಏರ್ ಡಿಫೆನ್ಸ್ ಸಿಸ್ಟಮ್ ಮುಂದೆ ಸಂಪೂರ್ಣ ವಿಫಲವಾಗಿದೆ.
ನಮ್ಮ ರಾಡಾರ್, ವಿಂಟೇಜ್ ಏರ್ ಡಿಫೆನ್ಸ್ ಸಿಸ್ಟಮ್, ಮಾರ್ಡನ್ ಏರ್ ಡಿಫೆನ್ಸ್ ಸಿಸ್ಟಮ್ ಮುಂದೆ ಪಾಕಿಸ್ತಾನಕ್ಕೆ ಯಾವುದೇ ಅವಕಾಶ ಸಿಗಲಿಲ್ಲ. ಪಾಕ್ಗೆ ನಮ್ಮ ಮೇಲೆ ದಾಳಿ ಮಾಡಲು ಯಾವುದೇ ಅವಕಾಶ ಸಿಗಲಿಲ್ಲ.
ಬಿಎಸ್ಎಫ್ ಕೂಡ ನಮ್ಮ ಅಭಿಯಾನದಲ್ಲಿ ಯಶಸ್ವಿಯಾಗಿ ಭಾಗಿಯಾಗಿದ್ದಾರೆ. ಪಾಕಿಸ್ತಾನದ ಎಲ್ಲಾ ದುಷ್ಕೃತ್ಯಗಳನ್ನು ವಿಫಲಗೊಳಿಸಿದ್ದೇವೆ. ಆಪರೇಷನ್ ಸಿಂಧೂರನಲ್ಲಿ ಮೂರು ಸೇನೆಗಳ ನಡುವೆ ಉತ್ತಮ ಸಮನ್ವಯತೆ ಇತ್ತು. ನಮ್ಮ ಸರ್ಕಾರ ಉತ್ತಮವಾಗಿ ಬೆಂಬಲಿಸಿದೆ. 140 ಕೋಟಿ ಜನರು ಬೆಂಬಲಿಸಿ, ಸ್ಫೂರ್ತಿ ತುಂಬಿದ್ದಾರೆ ಎಂದು ಡಿಜಿಎಂಓ ರಾಜೀವ್ ಘಾಯ್ ತಿಳಿಸಿದ್ದಾರೆ.
ವೈರಿರಾಷ್ಟ್ರಗಳ ಯಾವುದೇ ಯುದ್ಧ ವಿಮಾನ ಭಾರತದ ಬಳಿ ಸುಳಿದಿಲ್ಲ. ಭಾರತದ ಜಲ ಪ್ರದೇಶದ ಮೇಲೆ ತೀವ್ರ ನಿಗಾ ಇರಿಸಿದ್ದೇವೆ. ಭಾರತೀಯ ನೌಕೆಗಳಲ್ಲಿ ಮಿಗ್-29 ಸಿದ್ಧವಾಗಿವೆ ಎಂದು ಡಿಜಿ ನೇವಿ ಎ.ಎನ್ ಪ್ರಮೋದ್ ತಿಳಿಸಿದರು.
ಹೊಸ ಮಾದರಿ ಯುದ್ಧಕ್ಕೂ ನಾವು ರೆಡಿ!
ಡಿಜಿಎಂಓ ಎ.ಕೆ.ಭಾರ್ತಿ ಅವರು ಮಾತನಾಡಿ, ನಾವು ಸೇನಾಪಡೆ ಮುಂದಿನ ಅಪರೇಷನ್ಗೆ ರೆಡಿಯಾಗಿದ್ದೇವೆ. ಎರಡು ಕಡೆ ಎಷ್ಟು ಫೈಟರ್ ಜೆಟ್ಗಳನ್ನು ಬಳಸಲಾಗಿದೆ ಎಂಬುದನ್ನು ಈಗ ಹೇಳಲ್ಲ. ಇನ್ನೂ ಮುಂದೆ ಯುದ್ಧಗಳು ಹಿಂದಿನಂತೆ ನಡೆಯಲ್ಲ. ನಮ್ಮ ಅಣ್ವಸ್ತ್ರಗಳು ಯುದ್ಧದ ಭಾಗ. ಹೊಸ ಮಾದರಿಯ ಯುದ್ಧಕ್ಕೂ ನಾವು ರೆಡಿಯಾಗಿದ್ದೇವೆ. ಆಪರೇಷನ್ ಸಿಂಧೂರ್ ಆರಂಭಿಸುವ ಮುನ್ನವೇ ಏರ್ ಡಿಫೆನ್ಸ್ಗೆ ನಾವು ಸಿದ್ದವಾಗಿದ್ದೆವು.
ಪಾಕಿಸ್ತಾನದ ನ್ಯೂಕ್ಲಿಯರ್ ಅಸ್ತ್ರಗಳು ಇರುವ ಕಿರಣಾ ಹಿಲ್ ಮೇಲೆ ನಾವು ದಾಳಿ ಮಾಡಿಲ್ಲ. ಕಿರಣಾ ಹಿಲ್ನಲ್ಲಿ ಏನಿದೆ ಎಂಬುದೇ ನಮಗೆ ಗೊತ್ತಿಲ್ಲ. ಪಾಕ್, ಟರ್ಕಿ ಡ್ರೋಣ್ಗಳನ್ನು ನಾವು ಹೊಡೆದುರುಳಿಸಿದ್ದೇವೆ ಎಂದು ಎ.ಕೆ.ಭಾರ್ತಿ ಅವರು ಸ್ಪಷ್ಟಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ