/newsfirstlive-kannada/media/post_attachments/wp-content/uploads/2025/05/SCHOOL_JOB.jpg)
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ, ನಾಳೆ ಫಲ ಕೊಟ್ಟೇ ಕೊಡುತ್ತವೆ. ಹೀಗಿರುವಾಗ ನಾವು ಫಲದ ಕಡೆ ಗಮನ ಹರಿಸದೇ ಬಿತ್ತನೆಯ ಕಡೆ ಗಮನ ಹರಿಸಬೇಕಾಗಿದೆ. ಈ ಸಂದರ್ಭದಲ್ಲಿ ಯಾಕೆ ಈ ನುಡಿಯನ್ನು ಹೇಳುತ್ತಿದ್ದೇವೆ ಎಂದರೆ ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ರಜೆ ಮುಗಿದು ಶಾಲೆ ಆರಂಭವಾಗುತ್ತಿವೆ. ಪ್ರತಿಯೊಬ್ಬ ಪೋಷಕ ತಮ್ಮ ಮಕ್ಕಳಿಗೆ ಒಳ್ಳೆಯ ಗುಣಮಟ್ಟದ ಶಿಕ್ಷಣ ಒದಗಿಸುವುದು ಅವರವರ ಕರ್ತವ್ಯ ಆಗಿದೆ.
ಜಗತ್ತಿನ ಎಲ್ಲಾ ನಾಗರೀಕತೆಗಳು, ಎಲ್ಲಾ ಜನಾಂಗಗಳು ಶಿಕ್ಷಣದ ಮಹತ್ವವನ್ನು ಸಾರುತ್ತಿವೆ. ಪ್ರತಿಯೊಬ್ಬ ವ್ಯಕ್ತಿಯು ತನ್ನ ಶಿಕ್ಷಣದ ಶೇ.30 ರಷ್ಟುನ್ನು ಶಾಲೆಯಿಂದ ಮತ್ತು ಶಿಕ್ಷಕರಿಂದ ಶೇ.35 ರಷ್ಟು ಸ್ವಪ್ರಯತ್ನದಿಂದಲೂ ಶೇ.15 ರಷ್ಟು ತಾನು ಜೀವಿಸುವ ಪರಿಸರ ಮತ್ತು ಸ್ನೇಹಿತರ ಪ್ರಭಾವದಿಂದಲೂ ಇನ್ನುಳಿದ 20 ರಷ್ಟು ತನ್ನ ಜೀವನಾನುಭವದಿಂದ ಗುಣಮಟ್ಟದ ಶಿಕ್ಷಣವನ್ನು ಪಡೆಯುತ್ತಾನೆ ಎಂದು ಸಂಶೋಧನೆಗಳು ಹೇಳುತ್ತವೆ. ಹಾಗಾಗಿಯೇ ಒಬ್ಬ ಮನುಷ್ಯ ಸಾಯುವವರೆಗೂ ಪ್ರತಿ ಕ್ಷಣವೂ ಕಲಿಯುತ್ತಿರುತ್ತಾನೆ. ವಿಶ್ವವಿದ್ಯಾಲಯಗಳು ನೀಡುವ ಪದವಿಗಳಷ್ಟರಿಂದಲೇ ಶಿಕ್ಷಣ ದೊರೆಯಲ್ಲ. ಹೀಗಿರುವ ಬಾಲ್ಯದಲ್ಲಿ ಎಂಥಹ ಶಿಕ್ಷಕರ ಕೈನಡಿ ನಮ್ಮ ಮಗು ವ್ಯಾಸಂಗ ಮಾಡಬೇಕು. ನಮ್ಮ ಮಕ್ಕಳು ಓದುವ ಶಾಲೆಯ ವಾತಾವರಣ ಮತ್ತು ಶಾಲಾ ಶಿಕ್ಷಕರು ಹೇಗಿರಬೇಕು ಎಂಬುದಕ್ಕೆ ಕೆಲವು ಟಿಪ್ಸ್ ಇಲ್ಲಿವೆ.
1. ಶಾಲೆಯಲ್ಲಿ ಉತ್ತಮವಾದ ಪಾಠ ಬೋಧನೆ: ಈ ಅಂಶ ಶಿಕ್ಷಕರ ಅರ್ಹತೆ ಆಗಿದ್ದರೂ ಸಹ ಶಿಕ್ಷಕ ಮಾಡುವ ಪಾಠ ಮಕ್ಕಳಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು. ಮಗುವಿನಲ್ಲಿ ಕಲಿಕೆಯ ಕುತೂಹಲ ಮತ್ತಷ್ಟು ಹೆಚ್ಚಿಸಬೇಕು. ಪಾಠ ಆದಷ್ಟು ಪ್ರಯೋಗಿಕವಾಗಿರಬೇಕು. ಆ ಪಾಠ ದಿನನಿತ್ಯದ ಬದುಕಿಗೆ ಪ್ರಯೋಜನ ಬರುವಂತೆ ಇರಬೇಕು.
2.ಶಿಕ್ಷಕ ಜ್ಞಾನಕ್ಕೆ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕು: ಬೋಧನೆ ಮಾಡುವ ಶಿಕ್ಷಕ ತನ್ನ ಬೋಧಿಸುವ ಮಠ್ಯದ ಜೊತೆಗೆ ಸಮಕಾಲೀನ ವಿದ್ಯಮಾನಗಳ ಬಗ್ಗೆ ತರಗತಿಯಲ್ಲಿ ಹೇಳುತ್ತಿದ್ದಾಗ ಜವಾಬ್ದಾರಿಯುತ ನಾಗರೀಕರಾಗಲು ಸಹಾಯವಾಗುತ್ತದೆ. ಶಿಕ್ಷಕರು ಸಹ ಹೊಸ ಹೊಸ ವಿಷಯದ ಬಗ್ಗೆ ತಿಳಿಯುತ್ತಿದ್ದಾಗ ಮಾತ್ರವೇ ಮಕ್ಕಳಿಗೂ ಹೇಳಲು ಮನಸ್ಸು ಮಾಡಲು ಸಾಧ್ಯ.
3.ತರಗತಿಯಲ್ಲಿ ವಿನೂತನವಾದ ಮತ್ತು ವೈವಿಧ್ಯಮಯವಾದ ಕಲಿಕಾ ವಿಧಾನಗಳನ್ನು ಅಳವಡಿಸಿಕೊಂಡು ಶಿಕ್ಷಕರು ಬೋಧನೆ ಮಾಡಬೇಕಾಗುತ್ತದೆ (ಕೇವಲ ಸ್ಮಾರ್ಟ್ ಬೋರ್ಡ್ನಿಂದ ಬೋಧನೆ ವೈವಿಧ್ಯಮಯವಾಗಿರುವಂತಹದ್ದಲ್ಲ) ಬದಲಿಗೆ ಶಿಕ್ಷಕರ ಕಥೆಯ ಮೂಲಕ ಬೋಧನೆ, ಹಾಡುಗಾರಿಕೆಯ ಮೂಲಕ ಬೋಧನೆ, ಚಿತ್ರ ಬಿಡಿಸುವ ಮೂಲಕ ಬೋಧನೆ, ಏಕಪಾತ್ರ ಅಭಿಯನಯದ ಮೂಲಕ ಬೋಧನೆ ಹೀಗೆ ನಾನಾ ರೀತಿಯ ಬೋಧನೆಯು ಮಕ್ಕಳಿಗೆ ತೀರಾ ಆಪ್ತ ಆಗುತ್ತದೆ. ಶಿಕ್ಷಕರು ಕೂಡ ಮಕ್ಕಳ ಹತ್ತಿರದಲ್ಲಿ ಉಳಿಯಲು ಸಾಧ್ಯವಾಗುತ್ತದೆ.
4. ಶಿಕ್ಷಕನಾದವನು ಬಹಳ ಮುಖ್ಯವಾಗಿ ವಿದ್ಯಾರ್ಥಿಗಳ ಹೃದಯ ಮನಸ್ಸನ್ನು ಗೆಲ್ಲಬೇಕು. ಅವರನ್ನು ಯಾವ ಕಾರಣಕ್ಕೂ ನಿರುತ್ಸಾಹಗೊಳಿಸಬಾರದು ಮತ್ತು ನಿರ್ಲಕ್ಷಿಸಲೂ ಬಾರದು. ಸಕಾರಾತ್ಮಕವಾಗಿ ಯೋಗ್ಯ ರೀತಿ ತಿದ್ದಿ ತೀಡಿ ವಿದ್ಯಾರ್ಥಿಗಳನ್ನು ತಾಯಿಯಂತೆ ಸೆಳೆದುಕೊಂಡಾಗ ಮಾತ್ರವೇ ಮಗು ಕೇಳುವುದು ಹಾಗೂ ನಾವು ಹೇಳುವುದನ್ನು ಮಾಡುತ್ತದೆ.
5.ಮಕ್ಕಳ ಆರೋಗ್ಯ ಮತ್ತು ನಡವಳಿಕೆಯ ಬಗ್ಗೆ ಸದಾ ಸಿಸಿಟಿವಿಯಂತೆ ಶಿಕ್ಷಕರು ಕಣ್ಗಾವಲಿರಬೇಕು. ಸಣ್ಣ ತೊಂದರೆ ಆದರೂ ಆ ಕೂಡಲೇ ಸರಿ ಪಡಿಸಬೇಕು. ಸ್ವಂತ ಮಗುವಿನಂತೆ ನೋಡಿಕೊಂಡಾಗಲೇ ಪೋಷಕರಿಗೂ ವಿಶ್ವಾಸ ಬರುವುದು.
ಇದನ್ನೂ ಓದಿ:ನಮ್ಮ ಮೆಟ್ರೋದಿಂದ ಗುಡ್ನ್ಯೂಸ್.. 50 ವರ್ಷದ ಒಳಗಿನವರಿಗೆ 100ಕ್ಕೂ ಹೆಚ್ಚು ಉದ್ಯೋಗಗಳು
6.ವಿದ್ಯಾರ್ಥಿಗಳ ಮುಂದೆ ಪ್ರಾಮಾಣಿಕತೆಯಿಂದ ನಿಷ್ಪಕ್ಷಪಾತವಾಗಿ ಶಿಕ್ಷಕ ನಡೆದುಕೊಳ್ಳಬೇಕು. ನ್ಯಾಯಾಲಯದಂತೆ ಶಾಲೆ ಇರಬೇಕು. ಹೀಗಿದ್ದಾಗ ಮಕ್ಕಳಲ್ಲಿ ಒಳ್ಳೆಯ ಚಾರಿತ್ರ್ಯ ಬೆಳೆಯಲು ಸಹಕಾರಿ ಆಗಲಿದೆ.
ನಿಮ್ಮ ಮಗು ಎಂಥಹ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು ಎನ್ನುವುದನ್ನು ನೀವೇ ಯೋಚನೆ ಮಾಡಬೇಕು. ಇಲ್ಲಿ ನೀವು ಎಂಥಹ ಶಿಕ್ಷಣ ನೀಡುತ್ತಿದ್ದೀರಾ, ಎಂಥಹ ಸಮಾಜವನ್ನು ಬಯಸುತ್ತಿದ್ದೀರಾ ಎಂಬುದು ನಾವು, ನಿಮಗೆ ಮನವರಿಕೆ ಮಾಡುತ್ತಿದ್ದೇವೆ. ಇದು ನ್ಯೂಸ್ ಫಸ್ಟ್ ಕಳಕಳಿ ಆಗಿರುವುದರಿಂದ ಇದೊಂದು ಸಣ್ಣ ಪ್ರಯತ್ನವಾಗಿದೆ.
ಲೇಖಕರು: ರಮೇಶ್ ಕೆ.ಸಿ, ಪತ್ರಕರ್ತರು
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ