/newsfirstlive-kannada/media/post_attachments/wp-content/uploads/2024/08/BENGALURU-1.jpg)
ಕಳೆದ 25 ದಿನಗಳಿಂದ ರಾಜ್ಯದಲ್ಲಿ ಉಷ್ಣಾಂಶ ಹೆಚ್ಚಾಗಿತ್ತು. ಫೆಬ್ರವರಿ ತಿಂಗಳಲ್ಲೇ ರವಿರಾಯ ಒಬ್ಬೊಬ್ಬರಿಗೂ ಬೆವರಿಳಿಸೋದಕ್ಕೆ ಶುರು ಮಾಡಿದ್ದ. ಇದೀಗ ಮಾರ್ಚ್ ತಿಂಗಳಲ್ಲಿ ಉಷ್ಣಾಂಶ ವಿಪರೀತ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ಸೇರಿ ಭಾರತದ ಮಹಾ ನಗರಗಳಲ್ಲಿ ಭಾರೀ ಉಷ್ಣಾಂಶ ಏರಿಕೆ ಆಗಲಿದೆ ಎಂಬ ಎಚ್ಚರಿಕೆಯ ಕರೆಗಂಟೆ ಮೊಳಗಿದೆ.
ಬೆಂಗಳೂರು ಜನಕ್ಕೂ ತಟ್ಟಲಿದೆ ಬಿಸಿಲಾಘಾತ
ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ 9 ನಗರಗಳು ಮುಂದಿನ ದಿನದಲ್ಲಿ ಭಾರೀ ಉಷ್ಣಾಂಶ ಎದುರಿಸಲಿವೆ ಎನ್ನುವ ಆಘಾತಕಾರಿ ಅಂಶ ಅಧ್ಯಯನದಿಂದ ಬಹಿರಂಗವಾಗಿದೆ. ಹಲವೆಡೆ ಉಷ್ಣ ಅಲೆ ಆರಂಭವಾಗಿದೆ. ಈ ಸಂದರ್ಭದಲ್ಲಿ ಉಷ್ಣಾಘಾತಕ್ಕೆ ಸಂಬಂಧಿಸಿದ ಸಾವುಗಳ ಸಂಖ್ಯೆ ಬೆಂಗಳೂರು ಸೇರಿದಂತೆ ಭಾರತದ ನಗರಗಳಲ್ಲಿ ಹೆಚ್ಚಾಗಬಹುದು ಎಂದು ಲಂಡನ್ನ ಕಿಂಗ್ಸ್ ಕಾಲೇಜ್, ಹಾರ್ವರ್ಡ್ ವಿಶ್ವವಿದ್ಯಾಲಯ, ಪ್ರಿನ್ಸ್ಟನ್ ವಿಶ್ವವಿದ್ಯಾಲಯ ಮತ್ತು ಬರ್ಕ್ಲಿಯಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ನಡೆಸಿದ ಅಧ್ಯಯನ ವರದಿ ತಿಳಿಸಿದೆ.
9 ನಗರಕ್ಕೆ ಬಿಸಿ!
- ಬೆಂಗಳೂರು
- ಹೊಸದಿಲ್ಲಿ
- ಫರೀದಾಬಾದ್
- ಗ್ವಾಲಿಯರ್
- ಕೋಟ
- ಲುಧಿಯಾನ
- ಮೀರತ್
- ಸೂರತ್
- ಮುಂಬೈ
ವರದಿಯಲ್ಲೇನಿದೆ!?
ಉಷ್ಣ ಅಲೆಗಳನ್ನ ತಡೆಯುವ ನಿಟ್ಟಿನಲ್ಲಿ ದೀರ್ಘಾವಧಿಯ ಪರಿಹಾರ ಕ್ರಮಗಳನ್ನ ತಕ್ಷಣದಿಂದಲೇ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇಲ್ಲವಾದಲ್ಲಿ ಗಂಭೀರ ಪರಿಣಾಮ ಎದುರಿಸಬೇಕಾಗಬಹುದು ಎಂದು ವರದಿ ತಿಳಿಸಿದೆ. ಹವಾಮಾನ ಮಾದರಿಗಳ ಆಧಾರದಲ್ಲಿ ನಡೆಸಿದ ಅಧ್ಯಯನ ವರದಿಯಲ್ಲಿ 2011ರ ಜನಗಣತಿ ಪ್ರಕಾರ 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನ ಹೆಸರನ್ನ ಉಲ್ಲೇಖಿಸಲಾಗಿದೆ. 12.4 ದಶಲಕ್ಷ ಜನಸಂಖ್ಯೆ ಹೊಂದಿರುವ ಮುಂಬೈ ಉಷ್ಣ ಅಲೆಗಳ ಹೆಚ್ಚು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ತಾಪಮಾನ ಮತ್ತು ಹೆಚ್ಚಿನ ತೇವಾಂಶದ ಕಾರಣ ನಗರದಲ್ಲಿ ಬಿಸಿಲಿನ ಆಘಾತ ಹೆಚ್ಚಾಗಲಿದೆ. ಸಂಭಾವ್ಯ ದುರಂತಗಳನ್ನ ತಡೆಯುವುದಕ್ಕಾಗಿ ಈಗಲೇ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಅಧ್ಯಯನ ವರದಿಯು ಸಲಹೆ ನೀಡಿದೆ.
ಇದನ್ನೂ ಓದಿ: ರಾಣಾ ದಗ್ಗುಬಾಟಿ, ವಿಜಯ ದೇವರಕೊಂಡ.. ಟಾಲಿವುಡ್ನ 25 ನಟಿ, ನಟಿಯರಿಗೆ ಶಾಕ್; ಕೇಸ್ ದಾಖಲು!
ಬೆಂಗಳೂರಲ್ಲಿ ನಿನ್ನೆ ಗರಿಷ್ಠ ತಾಪಮಾನ 34.7 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 23.1 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಏರ್ಪೋರ್ಟ್ನಲ್ಲಿ ತಾಪಮಾನ 35.5 ಡಿಗ್ರಿ.. ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ 33.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಇನ್ನೂ ಇವತ್ತು ತಾಪಮಾನ ಸ್ವಲ್ಪ ಕಡಿಮೆಯಾಗಲಿದ್ದು, ಗರಿಷ್ಠ 33.5 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ 20.8 ಡಿಗ್ರಿ ಸೆಲ್ಸಿಯಸ್ ಇರಲಿದೆ. ಒಟ್ಟಾರೆ, ಸುಡೋ ಬಿಸಿಲಿಗೆ ಅನಾರೋಗ್ಯ ಸಮಸ್ಯೆ ಕಾಡುವ ಆತಂಕ ವಿದ್ದು, ಸ್ವಲ್ಪ ಎಚ್ಚರಿಕೆಯಿಂದಿರಿ ಅನ್ನೋದು ತಜ್ಞರ ಸಲಹೆ.
ಇದನ್ನೂ ಓದಿ: ಜನರಿಗೆ ಕರೆಂಟ್ ಶಾಕ್! ಬಡವರೆಲ್ಲ ಹೆಂಗೆ ಬದುಕಬೇಕು..? ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ