ನಾಳೆ ಬಾಂಗ್ಲಾದೇಶದ ಪ್ರಧಾನಿಯಾಗಿ ತಾರೀಖ್ ರೆಹಮಾನ್ ಪ್ರಮಾಣವಚನ : ಕಾರ್ಯಕ್ರಮಕ್ಕೆ ಮೋದಿ ಗೈರು, ಓಂಬಿರ್ಲಾ ಹಾಜರು

ನಾಳೆ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರೀಖ್ ರೆಹಮಾನ್ ಪ್ರಮಾಣವಚನ ಸ್ವೀಕರಿಸುವರು. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೆ ಆಹ್ವಾನ ನೀಡಲಾಗಿದೆ. ಆದರೇ, ಮೋದಿ ಹಾಜರಾಗುತ್ತಿಲ್ಲ. ಜೈಶಂಕರ್, ಓಂಬಿರ್ಲಾ ಕಾರ್ಯಕ್ರಮಕ್ಕೆ ಹಾಜರಾಗುವ ಸಾಧ್ಯತೆ ಇದೆ.

author-image
Chandramohan
TARIQUE REHAMAN NEW PM OF BANGLA
Advertisment


ದಂಗೆ, ಹಿಂಸಾಚಾರ, ರಾಜಕೀಯ ಅಸ್ಥಿರತೆ, ಅಶಾಂತಿಯ ಬಾಂಗ್ಲಾಕ್ಕೆ ಕವಿದಿದ್ದ ಗ್ರಹಣಕ್ಕೆ ಮೋಕ್ಷ ಸಿಗುವ ಕಾಲ ಸನ್ನಿಹಿತ ಆಗ್ತಿದೆ.. ಬಾಂಗ್ಲಾ ಚುನಾವಣೆಯಲ್ಲಿ ಬಹುಮತ ಪಡೆದ ಬಿಎನ್​ಪಿ ಸಾರಥಿ ತಾರೀಖ್​​​​ ರೆಹಮಾನ್ ಪ್ರಧಾನಿಯಾಗಿ ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್​ ಆಗಿದೆ.. ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿಗೂ ಆಹ್ವಾನ ನೀಡಿದೆ..
ಬಂಗಾಳಿಗಳ ನಾಡಲ್ಲಿ ನವೋದಯ ಆಗಿದೆ.. ಆಂತರಿಕ ದಂಗೆ, ಅಸ್ಥಿರತೆ, ಅಶಾಂತಿಯ ನೆರಳಲ್ಲಿ ನಲುಗಿದ್ದ ಬಾಂಗ್ಲಾದಲ್ಲಿ ಹೊಸ ರಾಜಕೀಯ ಅಲೆ ಶುರುವಾಗಿದೆ.. ಸಾರ್ವತ್ರಿಕ ಚುನಾವಣೆಯಲ್ಲಿ ಭಾರತ ವಿರೋಧಿ ಮೂಲಭೂತವಾದಿಗಳಿಗೆ ಸೋಲಾಗಿದ್ದು, ತಾರೀಖ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ್ ನ್ಯಾಷನಲ್ ಪಾರ್ಟಿ ಗೆದ್ದು ಬೀಗಿದೆ.. ಕಾರ್ಮೋಡ ಸರಿದು ನಯಾ ಬಾಂಗ್ಲಾದಲ್ಲಿ ಸೂರ್ಯೋದಯದ ಮುನ್ಸೂಚನೆ ಸಿಕ್ಕಿದೆ..

ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರೀಖ್ ರೆಹಮಾನ್ ಆಯ್ಕೆ
ನಾಡಿದ್ದು ಪ್ರಮಾಣವಚನ.. ಪ್ರಧಾನಿ ಮೋದಿಗೂ ಆಹ್ವಾನ
ಬಾಂಗ್ಲಾದೇಶದ ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್- ಮಾಜಿ ಪ್ರಧಾನಿ ಖಲೀದಾ ಜಿಯಾ ಪುತ್ರ ತಾರೀಖ್ ರೆಹಮಾನ್ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲು ಕೌಂಟ್​ಡೌನ್ ಶುರುವಾಗಿದೆ.. ಫೆಬ್ರವರಿ 17ರಂದು ಪ್ರಮಾಣವಚನಕ್ಕೆ ಮುಹೂರ್ತ ಫಿಕ್ಸ್ ಆಗಿದೆ..2007ರಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತು ದೇಶ ತೊರೆದಿದ್ದ ತಾರೀಖ್​ ಸ್ವದೇಶಕ್ಕೆ ಮರಳಿದ ಎರಡೇ ತಿಂಗಳಲ್ಲಿ ದೇಶದ ಅತ್ಯುನ್ನತ ಸ್ಥಾನಕ್ಕೆ ಏರಲಿದ್ದಾರೆ.. ಬಾಂಗ್ಲಾದೇಶದ ಸಂಸತ್ ಭವನದ ಸೌಥ್  ಪ್ಲಾಜಾದಲ್ಲಿ  ಪ್ರಮಾಣ ವಚನ ಸಮಾರಂಭ ನಡೆಯಲಿದೆ..
ಪ್ರಮಾಣವಚನ ಸಮಾರಂಭದಲ್ಲಿ ಭಾಗಿಯಾಗ್ತಾರಾ ನಮೋ?
ತಾರೀಖ್​​​ ರೆಹಮಾನ್​​ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಚೀನಾ, ಸೌದಿ ಅರೇಬಿಯಾ, ಪಾಕಿಸ್ತಾನ, ಟರ್ಕಿ, ಶ್ರೀಲಂಕಾ, ನೇಪಾಳ ಸೇರಿದಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳನ್ನು ಆಹ್ವಾನಿಸಲಾಗಿದ್ದು ಆಹ್ವಾನಿತ ದೇಶಗಳಲ್ಲಿ ಭಾರತ ಪ್ರಮುಖವಾಗಿ ಕಾಣಿಸಿಕೊಂಡಿದೆ. ಪ್ರಧಾನಿ ಮೋದಿಗೂ ಆಹ್ವಾನ ಬಂದಿದೆ, ಆದ್ರೆ ಪೂರ್ವನಿಯೋಜಿತ ಕಾರ್ಯಕ್ರಮಗಳು ನಿಗದಿಯಾಗಿದ್ದು, ಹಾಗೂ ಅದೇ ದಿನ ಫ್ರಾನ್ಸ್‌ ಪ್ರಧಾನಿ ಇಮ್ಯಾನ್ಯುವಲ್‌ ಮಾಕ್ರೋನ್‌ ಭಾರತ ಪ್ರವಾಸದಲ್ಲಿರಲಿದ್ದು ಮುಂಬೈನಲ್ಲಿ ಕಾರ್ಯಕ್ರಮ ನಿಗದಿಯಾಗಿದೆ.. ಹೀಗಾಗಿ ತಾರೀಖ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ತೆರಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.. ಭಾರತದ ಪರವಾಗಿ ವಿದೇಶಾಂಗ ಸಚಿವ ಡಾ. ಎಸ್‌ ಜೈಶಂಕರ್‌ ಹಾಗೂ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್‌, ಲೋಕಸಭಾ ಸ್ಪೀಕರ್ ಓಂ ಬಿರ್ಲಾ  ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಭಾರತ, ಬಾಂಗ್ಲಾ ರಾಜತಾಂತ್ರಿಕ ಬಿಕ್ಕಟ್ಟು ನಿವಾರಣೆ?
ಬಾಂಗ್ಲಾದಲ್ಲಿ ಶೇಕ್​ ಹಸೀನಾ ಸರ್ಕಾರದ ಪತನದ ಬಳಿಕ ಭಾರತ-ಬಾಂಗ್ಲಾ ನಡುವಿನ ರಾಜತಂತ್ರಿಕ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದೆ.. ಮೊಹಮ್ಮದ್​​ ಯೂನುಸ್​​ ನೇತೃತ್ವದ ಮಧ್ಯಂತರ ಸರ್ಕಾರ ಕೂಡ  ಭಾರತ ವಿರೋಧಿ ನಿಲುವುಗಳನ್ನೆ ಹೊಂದಿತ್ತು.. ಇದಕ್ಕೆ ಪೂರಕವಾಗುವಂತೆ ಬಾಂಗ್ಲಾದಲ್ಲಿ ನಡೆದಿದ್ದ ಸ್ಟೂಡೆಂಟ್​​ ಲೀಡರ್​​​​​ ಒಸ್ಮಾನ್​​​​​​​ ಹದೀ ಹತ್ಯೆಯನ್ನೂ ಕೂಡ ಬಾಂಗ್ಲಾ ಭಾರತದ ತಲೆಗೆ ಕಟ್ಟಿತ್ತು..
ಇನ್ನು ಭಾರತದ ವಿಚಾರದಲ್ಲಿ ತಾರೀಖ್​​​​ ರೆಹಮಾನ್​​​ ಮಿತ್ರತ್ವದ ನಿಲುವು ಹೊಂದಿಲ್ಲದಿದ್ರೂ ಖಾಲಿದಾ ಜಿಯಾ ಅನಾರೋಗ್ಯದ ವೇಳೆ ಭಾರತ ಚಿಕಿತ್ಸೆಗೆ ಸಹಾಯ ಹಸ್ತ ಚಾಚಿತ್ತು.. ಆದ್ರೆ ಭಾರತದ ಪ್ರಸ್ತಾಪ ನಿರಾಕರಿಸಿದ್ದ ರೆಹಮಾನ್ ಸಹಾಯಹಸ್ತಕ್ಕೆ ಕೃತಜ್ಞತೆ ಸಲ್ಲಿಸಿದ್ದರು.. ಸದ್ಯ ಚುನಾವಣೆ ಫಲಿತಾಂಶದ ನಂತರ ಪ್ರಧಾನಿ ಮೋದಿ ನೂತನ ಪ್ರಧಾನಿಗೆ ಶುಭಾಶಯ ಕೋರಿದ್ದರು..  ಹದಗೆಟ್ಟ ಭಾರತ-ಬಾಂಗ್ಲಾ ರಾಜತಾಂತ್ರಿಕ ಸಂಬಂಧದ ನಡುವೆಯೇ ಇದೀಗ  ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭಾರತದ ಪ್ರಧಾನಿಗೆ ಅಧಿಕೃತ ಆಹ್ವಾನ ನೀಡಲಾಗಿದ್ದು  ಸಂಬಂಧ ಸುಧಾರಣೆಯ ಹೆಜ್ಜೆ ಅಂತಾನೇ ವಿಶ್ಲೇಷಿಸಲಾಗ್ತಿದೆ..
ಫೆಬ್ರವರಿ 17 ಬಾಂಗ್ಲಾದೇಶಕ್ಕೆ ಐತಿಹಾಸಿಕ ದಿನ ಅಂತ ಬಿಎನ್​ಪಿ ಪಕ್ಷ ಬಣ್ಣಿಸಿದೆ.. ಫೆಬ್ರವರಿ 17ರ ಕಾರ್ಯಕ್ರಮ ದೇಶೀಯ ರಾಜಕೀಯ ಕಾರ್ಯಕ್ರಮಕ್ಕಿಂತ ಭಿನ್ನವಾಗಿರಲಿದೆ ಎನ್ನಲಾಗಿದೆ.. ದಕ್ಷಿಣ ಏಷ್ಯಾದಲ್ಲಿ ಬಾಂಗ್ಲಾದ ಹೊಸ ನಾಯಕತ್ವ ಹೇಗೆ ಹೊರಹೊಮ್ಮಲಿದೆ ಎಂಬ ಕುಹೂತಲ ಹೆಚ್ಚಿಸಿದೆ. ಭಾರತ ಕೂಡ ಇದನ್ನ ಎಚ್ಚರಿಕೆಯಿಂದ ಗಮನಿಸ್ತಾ ಇದೆ..  ಒಟ್ಟಾರೆ, 17 ವರ್ಷಗಳ ನಂತರ ದೇಶಕ್ಕೆ ಮರಳಿದ ತಾರೀಖ್ ರೆಹಮಾನ್ ಬಾಂಗ್ಲಾದೇಶದ ಪ್ರಧಾನಿ ಪಟ್ಟಕ್ಕೇರಲಿದ್ದಾರೆ..ಇನ್ಮುಂದಾದ್ರೂ ಬಾಂಗ್ಲಾದಲ್ಲಿ ಶಾಂತಿ ನೆಲೆಸುತ್ತಾ, ಭಾರತದ ಜೊತೆ ಬಾಂಧವ್ಯ ಸುಧಾರಿಸುತ್ತಾ ಅಂತ ಕಾದು ನೋಡಬೇಕಿದೆ..

ನ್ಯೂಸ್​​​ಫಸ್ಟ್​​ ಬ್ಯೂರೋ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Bangla Tarikque rehaman takes oath as PM
Advertisment