/newsfirstlive-kannada/media/media_files/2026/03/04/hormuz-strait-bandh-effect-2026-03-04-13-52-40.jpg)
ಹೊರ್ಮುಜ್ ಜಲಸಂಧಿ ಮುಚ್ಚಿರುವ ಇರಾನ್ ನಿಂದ ಭಾರತಕ್ಕೆ ಸಂಕಷ್ಟ
ತೈಲ ಬಿಕ್ಕಟ್ಟು ಆಗದಂತೆ ಪರ್ಯಾಯ ಮಾರ್ಗಗಳ ಬಗ್ಗೆ ಭಾರತದ ಚರ್ಚೆ
ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವ ಹಿನ್ನಲೆಯಲ್ಲಿ ಭಾರತದಲ್ಲಿ ಕಚ್ಚಾತೈಲದ ಪೂರೈಕೆ ಮತ್ತು ಸಂಗ್ರಹದಲ್ಲಿ ಕೊರತೆ ಆಗದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ತೈಲ ಕಂಪನಿಗಳ ಜೊತೆಗೆ ಕಳೆದ 72 ಗಂಟೆಗಳಲ್ಲಿ ನಿರಂತರವಾಗಿ ಸಭೆಗಳನ್ನು ಕೇಂದ್ರದ ಪೆಟ್ರೋಲಿಯಂ ಖಾತೆ ಸಚಿವ ಹರದೀಪ್ ಸಿಂಗ್ ಪುರಿ ನಡೆಸಿದ್ದಾರೆ. ಗಲ್ಪ್ ರಾಷ್ಟ್ರಗಳಿಂದ ಕಚ್ಚಾತೈಲದ ಅಮದಿಗಾಗಿ ಹೊರ್ಮುಜ್ ಜಲಸಂಧಿಯನ್ನು ಹೊರತುಪಡಿಸಿ ಪರ್ಯಾಯ ಮಾರ್ಗಗಳ ಬಗ್ಗೆ ಗಂಭೀರ ಚರ್ಚೆ ನಡೆಸಲಾಗುತ್ತಿದೆ. ಹೊರ್ಮುಜ್ ಜಲಸಂಧಿಗೆ ಪರ್ಯಾಯವಾಗಿ ದಕ್ಷಿಣ ಆಫ್ರಿಕಾದ ಕೇಫ್ ಆಫ್ ಗುಡ್ ಹೋಪ್ ಬಳಿಯ ಜಾಗದಿಂದಲೂ ಕಚ್ಚಾತೈಲದ ಸಾಗಾಟ ಸಾಧ್ಯ ಇದೆ. ಆದರೇ, ಈ ಹೊಸ ಮಾರ್ಗದ ಮೂಲಕ ತೈಲ ಸಾಗಾಟಕ್ಕೆ ಹೆಚ್ಚಿನ ಇನ್ಸೂರೆನ್ಸ್ ಹಣ ಪಾವತಿಸಬೇಕಾಗುತ್ತೆ. ಜೊತೆಗೆ ಸಾಗಣೆ ವೆಚ್ಚ ಹೆಚ್ಚಾಗುತ್ತೆ. ಸಾಗಣೆ ಸಮಯ ಕೂಡ ಹೆಚ್ಚಾಗುತ್ತೆ.
ಮತ್ತೊಂದೆಡೆ ಭಾರತ ಸ್ನೇಹಿ ರಾಷ್ಟ್ರ ರಷ್ಯಾದಿಂದಲೇ ಕಚ್ಚಾ ತೈಲ ಖರೀದಿ ಬಗ್ಗೆಯೂ ಚರ್ಚೆಯಾಗುತ್ತಿದೆ. ಸದ್ಯ ರಷ್ಯಾದಿಂದ ಕಚ್ಚಾತೈಲ ಖರೀದಿ ಪ್ರಮಾಣ ಕಡಿಮೆ ಆಗಿದೆ.
ಭಾರತದಲ್ಲಿ ಸದ್ಯ 50 ದಿನಗಳಿಗಾಗುವಷ್ಟು ಕಚ್ಚಾತೈಲದ ಸಂಗ್ರಹ ಇದೆ. ಭಾರತದ ತೈಲ ಸಂಸ್ಕರಣಾಗಾರ ಹಾಗೂ ಸ್ಟ್ರಾಟಜಿಕ್ ತೈಲ ಸಂಗ್ರಹಾಗಾರಗಳಾದ ವಿಶಾಖಪಟ್ಟಣ, ಮಂಗಳೂರು ಹಾಗೂ ಉಡುಪಿಯ ಪಾದೂರು ಬಳಿ ತೈಲ ಸಂಗ್ರಹ ಇದೆ.
ಇನ್ನೂ ಭಾರತದಲ್ಲಿ ಮುಂದಿನ 25-30 ದಿನಗಳಿಗಾಗುವಷ್ಟು ಎಲ್ಪಿಜಿ ಸಂಗ್ರಹ ಕೂಡ ಇದೆ. ಹೀಗಾಗಿ ಈಗಾಗಲೇ ಕಚ್ಚಾತೈಲ ಹಾಗೂ ಎಲ್ಪಿಜಿ ಅಮದಿನ ಪರ್ಯಾಯ ಮಾರ್ಗಗಳ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚರ್ಚೆ ಹಾಗೂ ಪರಿಶೀಲನೆಯನ್ನು ನಡೆಸುತ್ತಿದೆ.
ಹೊರ್ಮುಜ್ ಜಲಸಂಧಿಯ ಮೂಲಕವೇ ಭಾರತವು ತನ್ನ ಕಚ್ಚಾತೈಲ ಅಮದಿನ ಶೇ.40 ರಷ್ಟು ಅನ್ನು ಅಮದು ಮಾಡಿಕೊಳ್ಳುತ್ತಿದೆ. ಇನ್ನೂ ನ್ಯಾಚುರಲ್ ಲಿಕ್ವಿಡ್ ಗ್ಯಾಸ್ (ಎಲ್ಎನ್ಜಿ) ನ ಶೇ.50 ರಷ್ಟು ಅನ್ನು ಇದೇ ಮಾರ್ಗದ ಮೂಲಕ ಸಾಗಣೆ ಮಾಡಿ, ಅಮದು ಮಾಡಿಕೊಳ್ಳುತ್ತಿದೆ. ಸದ್ಯ ಹೊರ್ಮುಜ್ ಜಲಸಂಧಿಯ ಬಳಿ ಭಾರತೀಯ ಧ್ವಜ ಹೊಂದಿರುವ 27 ಹಡಗುಗಳು ಸಿಲುಕಿಕೊಂಡಿವೆ. ಜೊತೆಗೆ ವಿಶ್ವದ ಬೇರೆ ಬೇರೆ ದೇಶಗಳ 700 ತೈಲ ಹಡಗುಗಳು ಸಿಲುಕಿಕೊಂಡಿವೆ. ಹೊರ್ಮುಜ್ ಜಲಸಂಧಿಯ ಮೂಲಕ ತೈಲ ಹಡಗು ಸಾಗಾಟಕ್ಕೆ ಇರಾನ್ ಅವಕಾಶ ಕೊಡುತ್ತಿಲ್ಲ. ಹೊರ್ಮುಜ್ ಜಲಸಂಧಿಯ ಮೂಲಕ ತೈಲ ಸಾಗಾಟ ಮಾಡಿದರೇ, ತೈಲ ಹಡಗು, ಟ್ಯಾಂಕರ್ ಗೆ ಬೆಂಕಿ ಹಚ್ಚಲಾಗುತ್ತೆ ಎಂದು ಇರಾನ್ ಎಚ್ಚರಿಸಿದೆ. ಭಾರತದ 10 ಸಾವಿರ ಕೋಟಿ ರೂಪಾಯಿ ಮೌಲ್ಯದ ತೈಲ ಹಡಗುಗಳು ಈಗ ಹೊರ್ಮುಜ್ ಜಲಸಂಧಿಯ ಬಳಿ ನಿಂತಿದ್ದು ಭಾರತಕ್ಕೆ ತೈಲ ಪೂರೈಕೆಯಾಗುತ್ತಿಲ್ಲ.
ಇರಾನ್ ಬಳಿ ಇರುವ ಹೊರ್ಮುಜ್ ಜಲಸಂಧಿಯು 50 ಕಿಲೋಮೀಟರ್ ಅಗಲವಾಗಿದ್ದು, ಈ ಪ್ರದೇಶದ ಮೂಲಕ ತೈಲ ಹಡಗುಗಳು ಸಾಗಬೇಕಾಗಿದೆ. ಭಾರತ,ಚೀನಾ, ಜಪಾನ್, ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳಿಗೆ ಈ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತಾವೆ. ಪ್ರತಿ ನಿತ್ಯ 20 ಮಿಲಿಯನ್ ಬ್ಯಾರೆಲ್ ಕಚ್ಚಾತೈಲ ಈ ಕಾರಿಡಾರ್ ಮೂಲಕ ಸಾಗಣೆಯಾಗುತ್ತೆ. ತೈಲದ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಲಿಕ್ವಿಫಿಡ್ ನ್ಯಾಚ್ಯುರಲ್ ಗ್ಯಾಸ್ ಕೂಡ ಈ ಮಾರ್ಗದ ಮೂಲಕ ಸಾಗಾಟವಾಗುತ್ತೆ.
ಜಾಗತಿಕ ತೈಲ ವ್ಯಾಪಾರದ ಶೇ.25 ರಷ್ಟು ಕಚ್ಚಾತೈಲ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗಣೆಯಾಗುತ್ತೆ. ಜೊತೆಗೆ ಜಾಗತಿಕ ಎಲ್ಎನ್ಜಿ ವ್ಯಾಪಾರದಲ್ಲಿ ಶೇ.20 ರಷ್ಟು ಗ್ಯಾಸ್ ಕೂಡ ಇದೇ ಮಾರ್ಗದ ಮೂಲಕ ಸಾಗಣೆಯಾಗುತ್ತೆ. ಜಗತ್ತಿನಲ್ಲಿ ತೈಲ ಸಾಗಾಟದಲ್ಲಿ ಹೊರ್ಮುಜ್ ಜಲಸಂಧಿ ಸ್ಟ್ರಾಟಜಿಕ್ ಆಗಿ ಬಹಳ ಮುಖ್ಯವಾದ ಮಾರ್ಗವಾಗಿದೆ. ಈ ಮಾರ್ಗದಲ್ಲಿ ತೈಲ ಸಾಗಾಟದಲ್ಲಿ ಏನೇ ತೊಂದರೆ, ಅಡ್ಡಿಗಳು ಎದುರಾದರೂ, ಅದು ತೈಲ ಬೆಲೆಯ ಹೆಚ್ಚಳಕ್ಕೆ ಕಾರಣವಾಗುತ್ತೆ. ತೈಲ ಪೂರೈಕೆಯ ಸರಪಳಿ ಮೇಲೆ ಪರಿಣಾಮ ಬೀರುತ್ತೆ. ಜಾಗತಿಕ ಆರ್ಥಿಕ ಸ್ಥಿತಿ ಹಾಗೂ ಆರ್ಥಿಕ ಮಾರುಕಟ್ಟೆಯಲ್ಲೂ ಅಲ್ಲೋಲ ಕಲ್ಲೋಲವಾಗಲು ಕಾರಣವಾಗಿಬಿಡುತ್ತೆ. ಈಗ ದೊಡ್ಡ ತೈಲ ಪೂರೈಕೆಯ ರಿಸ್ಕ್ ಎದುರಾಗಿದೆ.
ಭಾರತಕ್ಕೆ ತೈಲ ಬಿಕ್ಕಟ್ಟು ಎದುರಾಗುತ್ತಾ?
ಹೊರ್ಮುಜ್ ಜಲಸಂಧಿಯಲ್ಲಿ ಉಂಟಾಗಿರುವ ತೈಲ ಸಾಗಾಟದ ನಿರ್ಬಂಧವು ಭಾರತದ ಮೇಲೆ ಖಂಡಿತವಾಗಿಯೂ ಪರಿಣಾಮವನ್ನು ಬೀರುತ್ತೆ. ಭಾರತವು ತೈಲ ಅಗತ್ಯತೆಯ ಶೇ.85 ರಷ್ಟು ಅನ್ನು ಅಮದು ಮಾಡಿಕೊಳ್ಳುತ್ತಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ತೈಲವು ಗಲ್ಪ್ ರಾಷ್ಟ್ರಗಳಿಂದ ಹೊರ್ಮುಜ್ ಜಲಸಂಧಿಯ ಮೂಲಕವೇ ಭಾರತಕ್ಕೆ ಸಾಗಾಟವಾಗುತ್ತಿದೆ.
ಅಂದಾಜಿನ ಪ್ರಕಾರ, ಭಾರತದ ತೈಲ ಬೇಡಿಕೆಯ ಶೇ.40 ರಿಂದ ಶೇ.50 ರಷ್ಟು ಕಚ್ಚಾತೈಲ ಹಾಗೂ ಎಲ್ಎನ್ಜಿ ಹೊರ್ಮುಜ್ ಜಲಸಂಧಿಯ ಮೂಲಕವೇ ಸಾಗಾಟವಾಗುತ್ತೆ. ಭಾರತವು ಹೊರ್ಮುಜ್ ಜಲಸಂಧಿಯ ಮೇಲೆ ಭಾರಿ ಅವಲಂಬಿತವಾಗಿರುವುದು ಇದರಿಂದ ಸ್ಪಷ್ಟವಾಗುತ್ತೆ. ಭಾರತದ ತೈಲ ಸಾಗಣೆಯ ಬಿಕ್ಕಟ್ಟು ಅಲ್ಪ ಕಾಲದ ಬದಲು ದೀರ್ಘಕಾಲದವರೆಗೂ ಮುಂದುವರಿದರೇ, ಅಂದರೇ, 50 ರಿಂದ 60 ದಿನದವರೆಗೂ ಮುಂದುವರಿದರೇ, ಭಾರತದಲ್ಲಿ ಕಚ್ಚಾತೈಲ, ಪೆಟ್ರೋಲ್, ಡೀಸೆಲ್ ಕೊರತೆ ಎದುರಾಗಬಹುದು.
ಭಾರತವು ಪರ್ಯಾಯ ಮಾರ್ಗಗಳ ಮೂಲಕ ಕಚ್ಚಾತೈಲ ಅಮದು ಮಾಡಿಕೊಳ್ಳಲು ಮುಂದಾದರೇ, ಹೆಚ್ಚಿನ ಬೆಲೆ ಕೊಡಬೇಕಾಗುತ್ತೆ. ಜೊತೆಗೆ ಸಾಗಾಟದ ಮಾರ್ಗ ಉದ್ದವಾಗುತ್ತೆ. ಸಾಗಣೆ ವೆಚ್ಚ ಹಾಗೂ ಇನ್ಸೂರೆನ್ಸ್ ವೆಚ್ಚ ಕೂಡ ಹೆಚ್ಚಾಗುತ್ತಾವೆ.
ಭಾರತದಲ್ಲಿ ತೈಲ ಬೆಲೆಯನ್ನು ಪೆಟ್ರೋಲಿಯಂ ಕಂಪನಿಗಳೇ ನಿರ್ಧರಿಸುತ್ತಾವೆ. ಆದರೇ, ಹೆಚ್ಚಾದ ತೈಲದ ಬೆಲೆಯನ್ನು ಸದ್ಯಕ್ಕೆ ಗ್ರಾಹಕರಿಗೆ ವರ್ಗಾಯಿಸಿಲ್ಲ. ಈ ಹಿಂದೆ ಕಚ್ಚಾತೈಲದ ಬೆಲೆ ಕಡಿಮೆಯಾದಾಗ ಭಾರತದ ತೈಲ ಕಂಪನಿಗಳು ಬೆಲೆ ಕಡಿಮೆ ಮಾಡಿಲ್ಲ. ಈ ಮೂಲಕ ಭಾರತದ ತೈಲ ಕಂಪನಿಗಳು ಇದುವರೆಗೂ ಭರ್ಜರಿಯಾಗಿ ಲಾಭವನ್ನೇ ಮಾಡಿಕೊಂಡಿವೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಕಂಪನಿಗಳು ಈಗ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ.
ಗ್ಯಾಸ್, ಎಲ್ಎನ್ಜಿ ಅಮದು ಮಾಡಿಕೊಳ್ಳುವ ಗೇಲ್, ಪೆಟ್ರೋನೆಟ್ ಎಲ್ಎನ್ಜಿ ಲಿಮಿಟೆಡ್ ಕಂಪನಿಗಳು ಕೂಡ ಗ್ಯಾಸ್ ಅಮದಿಗೆ ಹೆಚ್ಚಿನ ವೆಚ್ಚ ಮಾಡಬೇಕಾಗುತ್ತೆ.
ಆರ್ಗನೇಜೇಷನ್ ಆಫ್ ಪೆಟ್ರೋಲಿಯಂ ಎಕ್ಸ್ ಪೋರ್ಟ್ ಕಂಟ್ರಿಗಳು ತೈಲದ ಉತ್ಪಾದನೆ ಹೆಚ್ಚಿಸಲು ಒಪ್ಪಿಕೊಂಡಿವೆ. ಆದರೇ, ಈ ಭಾರಿ ಉತ್ಪಾದನೆಯ ಬದಲು ಸಾಗಾಟದಲ್ಲಿ ದೊಡ್ಡ ರಿಸ್ಕ್, ತೊಂದರೆ ಎದುರಾಗಿದೆ.
/filters:format(webp)/newsfirstlive-kannada/media/media_files/2026/03/04/hormuz-strait-bandh-effect-1-2026-03-04-14-03-33.jpg)
ಅಮೆರಿಕಾ ನೌಕಾಪಡೆಯಿಂದ ತೈಲ ಹಡಗು ಎಸ್ಕಾರ್ಟ್ ಗೆ ಟ್ರಂಪ್ ಪ್ಲ್ಯಾನ್
ಇನ್ನೂ ಹೊರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿರುವುದರಿಂದ ಒಂದು ವೇಳೆ ಅಗತ್ಯ ಬಿದ್ದರೇ, ಅಮೆರಿಕಾದ ನೌಕಾಪಡೆಯಿಂದ ಹೊರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳಿಗೆ ಎಸ್ಕಾರ್ಟ್ ಮಾಡಲಾಗುತ್ತೆ ಎಂದು ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಹೀಗೆ ಹೊರ್ಮುಜ್ ಜಲಸಂಧಿಯಲ್ಲಿ ಇರಾನ್ನಿಂದ ತೈಲ ಹಡಗುಗಳಿಗೆ ಬೆಂಕಿ ಹಚ್ಚುವ ಬೆದರಿಕೆಯ ಮಧ್ಯೆ ಅಮೆರಿಕಾ ನೌಕಾಪಡೆ ಹಡಗುಗಳಿಗೆ ರಕ್ಷಣೆ ನೀಡಿದರೇ, ಭಾರತಕ್ಕೂ ಅನುಕೂಲ.
ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us