/newsfirstlive-kannada/media/post_attachments/wp-content/uploads/2025/04/DHONI.jpg)
ಐಪಿಎಲ್ ಸೀಸನ್ 18 ಮುಗಿದು ತಿಂಗಳು ಕಳೆದಿಲ್ಲ. ಅದಾಗಲೇ ಮುಂದಿನ ಐಪಿಎಲ್ನ ಬಿಗ್ ಅಪ್ಡೇಟ್ ಹೊರಬಿದ್ದಿದೆ. ತೆರೆಮರೆಯಲ್ಲೇ ಮುಂದಿನ ಐಪಿಎಲ್ಗೆ ಬಲಿಷ್ಠ ತಂಡ ಕಟ್ಟೋ ಸಿದ್ಧತೆಗಳು ಆರಂಭವಾಗಿವೆ. ಸೀಸನ್ 18ರ ಐಪಿಎಲ್ನಲ್ಲಿ ಹೀನಾಯ ಪ್ರದರ್ಶನ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ಈ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದೆ.
ಐಪಿಎಲ್ ಸೀಸನ್ 18ರಲ್ಲಿ ಯಾರೂ ನಿರೀಕ್ಷೆಯೂ ಮಾಡಿರಲಿಲ್ಲ. ಅಂತಾ ಕಳಪೆ ಪ್ರದರ್ಶನವನ್ನ ಚೆನ್ನೈ ಸೂಪರ್ ಕಿಂಗ್ಸ್ ನೀಡ್ತು. ಸಾಲು ಸಾಲು ಪಂದ್ಯಗಳನ್ನ ಸೋತ ಚೆನ್ನೈ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಿಯಾಗಿ ಟೂರ್ನಿಗೆ ಗುಡ್ ಬೈ ಹೇಳ್ತು. ಇದ್ರ ಬೆನ್ನಲ್ಲೇ ಮುಂದಿನ ಸೀಸನ್ಗೆ ಸಿದ್ಧತೆ ಆರಂಭಿಸಿದೆ. ಬಲಿಷ್ಠ ತಂಡ ಕಟ್ಟೋಕೆ ಮೆಗಾ ಪ್ಲಾನ್ ರೂಪಿಸಿದೆ.
ತಂಡವನ್ನ ಬಲಿಷ್ಠಗೊಳಿಸಲು CSK ಮೆಗಾ ಪ್ಲಾನ್.!
ಐಪಿಎಲ್ ಅಂತ್ಯದ ಬೆನ್ನಲ್ಲೇ ಟ್ರೇಡ್ ವಿಂಡೋ ಓಪನ್ ಆಗಿದೆ. ಇದ್ರ ಮೂಲಕ ಒಂದು ಫ್ರಾಂಚೈಸಿಯಿಂದ ಇನ್ನೊಂದು ಫ್ರಾಂಚೈಸಿಗೆ ಆಟಗಾರರ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಟ್ರೇಡ್ ವಿಂಡೋ ಅವಕಾಶವನ್ನ ಎನ್ಕ್ಯಾಶ್ ಮಾಡಿಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ ಮುಂದಾಗಿದೆ. ಈ ಸೀಸನ್ನಲ್ಲಿ ನಿರೀಕ್ಷಿತ ಪರ್ಫಾಮೆನ್ಸ್ ನೀಡದ ಆಟಗಾರರನ್ನ ರಿಲೀಸ್ ಮಾಡಲು ಚೆನ್ನೈ ನಿರ್ಧರಿಸಿದೆ. ಇಷ್ಟೇ ಅಲ್ಲ.. ತಂಡಕ್ಕೆ ಹೊಸ ವಿಕೆಟ್ ಕೀಪರ್ ಬ್ಯಾಟರ್ನ ಕರೆ ತರೋಕೂ ಪ್ಲಾನ್ ರೂಪಿಸಿಕೊಂಡಿದೆ.
ಅಶ್ವಿನ್ ಆಪ್ತನಿಂದ ಹೊರಬಿತ್ತು ಬಿಗ್ ಅಪ್ಡೇಟ್.!
ವಿಕೆಟ್ ಕೀಪರ್ ಹುಡುಕಾಟದಲ್ಲಿರೋ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟ್ರೇಟ್ ವಿಂಡೋ ಅಡಿ ಆಟಗಾರರ ಬದಲಾವಣೆ ಈಗಾಗಲೇ ಬೇರೋಂದು ಫ್ರಾಂಚೈಸಿ ಜೊತೆ ಮಾತುಕತೆ ನಡೆಸ್ತಿದೆ ಅನ್ನೋದು ಲೇಟೆಸ್ಟ್ ಅಪ್ಡೇಟ್. ಒಬ್ಬ ವಿಕೆಟ್ ಕೀಪರ್ಗಾಗಿ ತಂಡದಲ್ಲಿರೋ ಆಫ್ಸ್ಪಿನ್ನರ್ ಮತ್ತು ಲೆಫ್ಟ್ ಹ್ಯಾಂಡ್ ಮಿಡಲ್ ಆರ್ಡರ್ ಬ್ಯಾಟ್ಸ್ಮನ್, ಇಬ್ಬರನ್ನ ನೀಡಲು ಫ್ರಾಂಚೈಸಿ ಮುಂದಾಗಿದ್ಯಂತೆ. ಈ ಬಗ್ಗೆ ಫ್ರಾಂಚೈಸಿಯೊಂದರಲ್ಲಿ ಚರ್ಚೆ ನಡೀತಿವೆ ಅಂತಾ ಅಶ್ವಿನ್ ಆಪ್ತ, ಸೌತ್ ಆಫ್ರಿಕಾ ತಂಡದ ಮಾಜಿ ಅನಾಲಿಸ್ಟ್ ಪ್ರಸನ್ನ ಅಘೋರಮ್ ಟ್ವೀಟ್ ಮಾಡಿದ್ದಾರೆ. ಅಶ್ವಿನ್ ಆಪ್ತ ಆಗಿರೋದ್ರಿಂದ ಈ ಸುದ್ದಿ ಚೆನ್ನೈ ಫ್ರಾಂಚೈಸಿಗೆ ಸಂಬಂಧಿಸಿದ್ದು ಅನ್ನೋ ಚರ್ಚೆ ಸದ್ಯ ಕ್ರಿಕೆಟ್ ವಲಯದಲ್ಲಿದೆ.
CSKಯಿಂದ ಅಶ್ವಿನ್, ಶಿವಂ ದುಬೆ ವರ್ಗಾವಣೆ.?
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರೋ ಆಫ್ ಸ್ಪಿನ್ನರ್ ಅಂದ್ರೆ ಅದು ಆರ್.ಅಶ್ವಿನ್, ಲೆಫ್ಟ್ ಆರ್ಮ್ ಮಿಡಲ್ ಆರ್ಡರ್ ಬ್ಯಾಟರ್ ಅಂದ್ರೆ ಅದು ಶಿವಂ ದುಬೆ. ಈ ಸೀಸನ್ನಲ್ಲಿ ನಿರೀಕ್ಷೆಗೆ ತಕ್ಕ ಪರ್ಫಾಮೆನ್ಸ್ ನೀಡುವಲ್ಲಿ ಇಬ್ಬರೂ ಎಡವಿದ್ರು. ಅಶ್ವಿನ್ 9 ಪಂದ್ಯವನ್ನಾಡಿ ಕೇವಲ 7 ವಿಕೆಟ್ ಉರುಳಿಸಿದ್ರು. ಶಿವಂ ದುಬೆ 32.45ರ ಸರಾಸರಿಯಲ್ಲಿ ರನ್ಗಳಿಸಿದ್ರಷ್ಟೇ. ವೈಫಲ್ಯ ಕಂಡಿರೋ ಇವರಿಬ್ಬರನ್ನೇ ಚೆನ್ನೈ ಫ್ರಾಂಚೈಸಿ ರಿಲೀಸ್ ಮಾಡಲು ಮುಂದಾಗಿದೆ ಅನ್ನೋ ಚರ್ಚೆಗಳು ಆರಂಭವಾಗಿವೆ. ಸಿಎಸ್ಕೆ ತಂಡದಲ್ಲಿರೋ ಮತ್ತೊಬ್ಬ ಮಿಡಲ್ ಆರ್ಡರ್ನ ಲೆಫ್ಟ್ ಆರ್ಮ್ ಬ್ಯಾಟ್ಸ್ಮನ್ ಅಂದ್ರೆ ಅದು ರವೀಂದ್ರ ಜಡೇಜಾ.! ಹೀಗಾಗಿ ಈ ಜಡೇಜಾ ಹೆಸರು ಕೂಡ ಈ ವಿಚಾರದಲ್ಲಿ ಚರ್ಚೆಯಲ್ಲಿದೆ.
ಇದು MS ಧೋನಿ ನಿವೃತ್ತಿಯ ಮುನ್ಸೂಚನೆಯಾ.?
ಶತಾಯಗತಾಯ ವಿಕೆಟ್ ಕೀಪರ್ನ ತಂಡಕ್ಕೆ ತರಲೇಬೇಕೆಂದು ಸಿಎಸ್ಕೆ ಪಣತೊಟ್ಟಂತಿದೆ. ಒಬ್ಬ ವಿಕೆಟ್ ಕೀಪರ್ಗಾಗಿ ಇಬ್ಬರು ಆಟಗಾರರನ್ನ ಟ್ರೇಡ್ ಮಾಡೋಕೆ ಚೆನ್ನೈ ತಂಡ ಸಿದ್ಧವಾಗಿದೆ. ಅದೂ ಪ್ರಮುಖ ಆಟಗಾರರನ್ನ ಈ ಬಿಗ್ ಡಿಶಿಷನ್ಗೆ ಕೇವಲ ಕಳಪೆ ಆಟ ಮಾತ್ರ ಕಾರಣಾನಾ.? ಅಲ್ಲ.. ಇದಕ್ಕೆ ಮತ್ತೊಂದು ಕಾರಣವಿದೆ ಅಂತಿದ್ದಾರೆ ಕ್ರಿಕೆಟ್ ಎಕ್ಸ್ಪರ್ಟ್ಸ್. ಸದ್ಯ ವಿಕೆಟ್ ಕೀಪಿಂಗ್ ಜವಾಬ್ದಾರಿ ನಿಭಾಯಿಸ್ತಿರೋ ಧೋನಿ ವಿದಾಯದ ಸುಳಿವು ಫ್ರಾಂಚೈಸಿಗೆ ಸಿಕ್ಕಂತಿದೆ ಅನ್ನೋದು ಹಲವರ ಅಭಿಪ್ರಾಯವಾಗಿದೆ. ಧೋನಿ ಮುಂದಿನ ಸೀಸನ್ಗೂ ಮುನ್ನ ಗುಡ್ ಬೈ ಹೇಳಿದ್ರೆ, ಸ್ಥಾನ ತುಂಬಬಲ್ಲ ಸಮರ್ಥ ವಿಕೆಟ್ ಕೀಪರ್ ಬ್ಯಾಟರ್ ತಂಡದಲ್ಲಿಲ್ಲ. ಹೀಗಾಗಿಯೇ ಚೆನ್ನೈ ಫ್ರಾಂಚೈಸಿ ವಿಕೆಟ್ ಕೀಪರ್ ಹಿಂದೆ ಬಿದ್ದಿರೋದು.
ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್ಫ್ರೆಂಡ್.. ಬಿಗ್ಬಾಸ್ ವಿನ್ನರ್ ಕೂಡ ಈ ಹಿಂದೆ ಹೃದಯಾಘಾತದಿಂದ ನಿಧನ!
ಚೆನ್ನೈ ಸೂಪರ್ ಕಿಂಗ್ಸ್ ಸೇರ್ತಾರಾ ಸಂಜು ಸ್ಯಾಮ್ಸನ್.?
ಕಳೆದ ಸೀಸನ್ನ ವೇಳೆ ಫ್ರಾಂಚೈಸಿ, ಮ್ಯಾನೇಜ್ಮೆಂಟ್ ಹಾಗೂ ಸಂಜು ನಡುವೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದ್ರಿಂದ ಸಂಜು ಸ್ಯಾಮ್ಸನ್ ಬೇಸರಗೊಂಡಿದ್ರು. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬಿಗ್ಫಿಶ್ ಸಂಜುಗೆ ಗಾಳ ಹಾಕಿದೆ. ಸಂಜು ತಂಡಕ್ಕೆ ಆಗಮಿಸಿದ್ರೆ, ವಿಕೆಟ್ ಕೀಪರ್ ಸಿಕ್ಕಂತಾಗುತ್ತೆ. ಬ್ಯಾಟಿಂಗ್ ಸ್ಟ್ರೆಂಥ್ ಕೂಡ ಹೆಚ್ಚಾಗುತ್ತೆ. ಈ ಎಲ್ಲಾ ಲೆಕ್ಕಾಚರವನ್ನ ಹಾಕಿರೋ ಫ್ರಾಂಚೈಸಿ ಈಗಾಗಲೇ ಸಂಜು ಜೊತೆಗೆ ಒಂದು ರೌಂಡ್ ಮಾತುಕತೆ ನಡೆಸಿದೆ ಅನ್ನೋದು ಲೇಟೆಸ್ಟ್ ಅಪ್ಡೇಟ್.
ಐಪಿಎಲ್ ಅಂತ್ಯದ ಬೆನ್ನಲ್ಲೇ ಸಂಜು ಸ್ಯಾಮ್ಸನ್ ರಾಜಸ್ಥಾನ್ ತಂಡಕ್ಕೆ ಗುಡ್ ಬೈ ಹೇಳ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದಾದ ಬಳಿಕ ಸಿಎಸ್ಕೆ ಸಂಜು ಸ್ಯಾಮ್ಸನ್ ಸಂಪರ್ಕಿಸಿದ ಸುದ್ದಿಯೂ ಹೊರಬಿದ್ದಿತ್ತು. ಇದೀಗ ಅಶ್ವಿನ್ ಆಪ್ತ ಮಾಡಿರೋ ಆಟಗಾರರ ಟ್ರೇಡ್ ಬಗೆಗಿನ ಟ್ವೀಟ್ ಈ ಹಿಂದಿನ ಸುದ್ದಿಗಳಿಗೆ ಮತ್ತೆ ಜೀವ ನೀಡಿದೆ. ಐಪಿಎಲ್ ಮಿನಿ ಆಕ್ಷನ್ ಡಿಸೆಂಬರ್ನಲ್ಲಿ ನಡೆಯಲಿದೆ. ಅಷ್ಟರೊಳಗೆ ಏನೆಲ್ಲಾ ಆಗುತ್ತೆ ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ