/newsfirstlive-kannada/media/post_attachments/wp-content/uploads/2025/03/ishan_kishan-1.jpg)
ಹೈದ್ರಾಬಾದ್ ಅಂಗಳದಲ್ಲಿ ಹೀನಾಮಾನವಾಗಿ ಬೌಲರ್ಗಳನ್ನ ರುಬ್ಬಿದ ಇಶಾನ್ ಕಿಶನ್ ಚೊಚ್ಚಲ ಐಪಿಎಲ್ ಸೆಂಚುರಿ ಸಿಡಿಸಿದರು. ಆ ಸ್ಫೋಟಕ ಸೆಂಚುರಿ ಮಾಮೂಲಿ ಶತಕ ಆಗಿರಲಿಲ್ಲ. ಆನ್ಫೀಲ್ಡ್ನಲ್ಲಿ ಮಾಡಿದ ಸೆಲೆಬ್ರೇಷನ್, ಸೆಂಚುರಿಯ ಸಂಭ್ರಮಾಚರಣೆ ಮಾತ್ರವೇ ಆಗಿರಲಿಲ್ಲ. ಹಲವು ಪ್ರಶ್ನೆಗಳಿಗೆ ಕಿಶನ್ ರನ್ಭೂಮಿಯಲ್ಲಿ ಕೊಟ್ಟ ದಿಟ್ಟ ಉತ್ತರ ಅದು. ಕೆಲ ನಿಮಿಷದ ಆ ಅಗ್ರೇಸ್ಸೀವ್ ಶತಕದ ಸಂಭ್ರಮದ ಹಿಂದೆ ಒಂದು ವರ್ಷದ ನೋವಿನ ಕಥೆಯಿತ್ತು. ಮನದೊಳಗಿದ್ದ ಆಕ್ರೋಷದ ಜ್ವಾಲೆ ಸಂಭ್ರಮದ ರೂಪದಲ್ಲಿ ಹೊರಬಂತು.
2024.. ಇಶಾನ್ ಕಿಶನ್ ಪಾಲಿನ ಕಹಿ ವರ್ಷ. ವರ್ಷದ ಹಿಂದೆ 2023ರಲ್ಲಿ ಟೀಮ್ ಇಂಡಿಯಾ ಖಾಯಂ ಸದಸ್ಯನಾಗಿದ್ದ ಕಿಶನ್, ಟೀಮ್ ಇಂಡಿಯಾದಿಂದಲೇ ದೂರವಾಗಿದ್ದರು. ಒಂದು ವರ್ಷಗಳ ಕಾಲ ಅನುಭವಿಸಿದ್ದು ಅವಮಾನ, ಯಾತನೆ, ನಿಂದನೆ, ಮಾನಸಿಕ ಹಿಂಸೆ ಇಷ್ಟೆಲ್ಲಾ ನೋವನ್ನ ಮೆಟ್ಟಿ ನಿಂತ ಅದೇ ಇಶಾನ್ ಕಿಶನ್ ಸೀಸನ್-18ರ ಐಪಿಎಲ್ನ ಮೊದಲ ಪಂದ್ಯದಲ್ಲೇ ಹೊಸ ಅಧ್ಯಾಯ ಬರೆದಿದ್ದಾರೆ.
ಐಪಿಎಲ್ನಲ್ಲಿ ಇಶಾನ್ ಕಿಶನ್ ಸ್ಫೋಟಕ ಶತಕ..!
ಐಪಿಎಲ್ ಸೀಸನ್-18ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ಸೇರಿದ ಜಾರ್ಖಂಡ್ ಬಾಯ್ ಇಶಾನ್ ಕಿಶನ್, ಐಪಿಎಲ್ನ ನಯಾ ಸೀಸನ್ನಲ್ಲಿ ನಯಾ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಹೈದ್ರಾಬಾದ್ನ ರಣ ಬಿಸಿಲ ನಡುವೆ ಬ್ಯಾಟ್ ಹಿಡಿದು ಘರ್ಜಿಸಿದ ಇಶಾನ್ ಕಿಶನ್ ಬೌಲರ್ಗಳಿಗೆ ನರಕ ದರ್ಶನ ಮಾಡಿಸಿದರು. ರಾಜಸ್ಥಾನ್ ರಾಯಲ್ಸ್ ಬೌಲಿಂಗ್ ಅಟ್ಯಾಕ್ನ ಚಿಂದಿ ಉಡಾಯಿಸಿದ ಕಿಶನ್, ಜಸ್ಟ್ 45 ಎಸೆತಗಳಲ್ಲಿ ಅಜೇಯ ಶತಕ ಸಿಡಿಸಿ ಸಂಭ್ರಮಿಸಿದರು.
ಶತಕ ಸಿಡಿಸಿದ ಬೆನ್ನಲ್ಲೇ ಇಶಾನ್ ಕಿಶನ್ ಮೈದಾನದಲ್ಲಿ ಅಗ್ರೆಸ್ಸಿವ್ ಸೆಲಬ್ರೇಷನ್ ಮಾಡಿದರು. ಈ ಸಂಭ್ರಮದ ಹಿಂದೆ ಸಂತಸ ಮಾತ್ರವೇ ಇರಲಿಲ್ಲ. ಆ ಅಗ್ರೆಸ್ಸಿವ್ ಸೆಲೆಬ್ರೇಷನ್ ಬಿಸಿಸಿಐ ಬಾಸ್ಗಳ ಕೊಟ್ಟ ಖಡಕ್ ತೀರುಗೇಟು ಕೂಡ ಹೌದು. ಇನ್ನಿಂಗ್ಸ್ನಲ್ಲಿ ಸಿಡಿಸಿದ ಒಂದೊಂದು ಸಿಕ್ಸರ್, ಒಂದೊಂದು ಬೌಂಡರಿ ಟೀಕಾಕಾರರಿಗೆ ಬ್ಯಾಟ್ನಿಂದಲೇ ಉತ್ತರವಾಗಿತ್ತು. ಒಂದು ವರ್ಷದ ಮನದ ನೋವು, ವೇದನೆ, ಅಪಮಾನ ಹೈದ್ರಾಬಾದ್ ಅಂಗಳದಲ್ಲಿ ಆಕ್ರೋಶದ ಜ್ವಾಲೆಯಾಗಿ ಹೊತ್ತಿ ಉರಿಯಿತು.
ಕಿಶನ್ ಕಗ್ಗತ್ತಲ ಹಾದಿ..!
- ಕಾರಣ ಇಲ್ಲದೆ ಏಕದಿನ ತಂಡದಿಂದ ಇಶಾನ್ ಕಿಶನ್ ಡ್ರಾಪ್
- ಅಜೇಯ ಅರ್ಧಶತಕ, ಆಫ್ರಿಕಾ ಟೆಸ್ಟ್ ಸರಣಿಯಿಂದ ವಿಥ್ ಡ್ರಾ
- ರೆಸ್ಟ್ ಪಡೆದ ಇಶಾನ್ ಕಿಶನ್ ಟೆಸ್ಟ್ ತಂಡದಿಂದಲೇ ಹೊರಕ್ಕೆ..!
- 3 T20ಯಿಂದ 2 ಅರ್ಧಶತಕ ಸಿಡಿಸಿದ್ರೂ ತಂಡದಿಂದ ಡ್ರಾಪ್
- ಬಿಸಿಸಿಐ ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಇಶಾನ್ಗೆ ಕೊಕ್
- 2024ರ IPLನಲ್ಲಿ ವೈಫಲ್ಯ.. ಮುಂಬೈನಿಂದ ಕಿಕ್ ಔಟ್..!
ದೇಶಿ ಕ್ರಿಕೆಟ್ ಆಡಲಿಲ್ಲ ಎಂಬ ಕಾರಣಕ್ಕೆ ಟೀಮ್ ಇಂಡಿಯಾದಿಂದ ಕಿಶನ್ಗೆ ಗೇಟ್ಪಾಸ್ ನೀಡಲಾಗಿತ್ತು. ಸೆಂಟ್ರಲ್ ಕಾಂಟ್ರಾಕ್ಟ್ನಿಂದ ಬಿಸಿಸಿಐ ಕೊಕ್ ನೀಡ್ತು. ಬಳಿಕ ಕಮ್ಬ್ಯಾಕ್ ಮಾಡಲು ದೇಶಿ ಕ್ರಿಕೆಟ್ಗೆ ಇಶಾನ್ ಕಿಶನ್ ಮರಳಿದರು. ಆದ್ರೆ, ಕೆಲ ಪಂದ್ಯಗಳಲ್ಲಷ್ಟೇ ಎಡಗೈ ಆಟಗಾರನ ಅಬ್ಬರ ನಡೆದಿದ್ದು.
ಇದನ್ನೂ ಓದಿ: ‘ಹೆಡ್- ಅಭಿಷೇಕ್ ಬ್ಯಾಟಿಂಗ್ನಿಂದ ಧೈರ್ಯ ಬರುತ್ತೆ’.. ಸೆಂಚುರಿ ಬಳಿಕ ಇಶನ್ ಕಿಶನ್ ಹೇಳಿದ್ದು ಏನು?
ಸ್ಫೋಟಕ ಶತಕದ ಹಿಂದಿದೆ ಕಠಿಣ ಪರಿಶ್ರಮ.!
ಸಾಲು ಸಾಲು ಹಿನ್ನಡೆಗಳು ಎದುರಾದ್ರು ಕಿಶನ್ ಧೃತಿಗೆಡಲಿಲ್ಲ. ಕಮ್ಬ್ಯಾಕ್ ಕನಸು ಕಟ್ಟಿಕೊಂಡು ಹಾರ್ಡ್ವರ್ಕ್ ಮಾಡಿದರು. ಪ್ರತಿ ದಿನ 2 ಸೆಷನ್ಗಳಲ್ಲಿ ಅಭ್ಯಾಸ ನಡೆಸ್ತಿದ್ದರು. ಮಾರ್ನಿಂಗ್ ಸೆಷನ್ನಲ್ಲಿ 3 ಗಂಟೆಗಳ ಕಾಲ ಸ್ಕಿಲ್ ಮೇಲೆ ವರ್ಕೌಟ್ ಮಾಡ್ತಿದ್ದ ಇಶಾನ್ ಕಿಶನ್, ಸಂಜೆಯ ಸೆಷನ್ನಲ್ಲಿ 2 ಗಂಟೆಗಳ ಕಾಲ ಅಗ್ರೆಸ್ಸಿವ್ ಆಟದ ಅಭ್ಯಾಸ ನಡೆಸ್ತಿದ್ರು. ಇದ್ರ ನಡುವೆ ಬಾಡಿ ಫಿಟ್ನೆಸ್ಗಾಗಿ ಜಿಮ್ನಲ್ಲೂ ಬೆವರಿಳಿಸ್ತಾ ಇದ್ರು. ತನ್ನ ಆಟದ ವಿಡಿಯೋಗಳನ್ನ ಪದೇ ಪದೇ ನೋಡಿ ವೀಕ್ನೆಸ್ ಮೇಲೆ ವರ್ಕೌಟ್ ಮಾಡಿದ್ರು. ಆ ಕಠಿಣ ಪರಿಶ್ರಮ ಐಪಿಎಲ್ನ ಮೊದಲ ಪಂದ್ಯದಲ್ಲೇ ಫಲ ಕೊಟ್ಟಿದೆ.
ಟೀಮ್ ಇಂಡಿಯಾ ಕಮ್ಬ್ಯಾಕ್ ಮೇಲೆ ಕಿಶನ್ ಕಣ್ಣು.!
2024ರ ಟಿ20 ವಿಶ್ವಕಪ್ ಗೆದ್ದ ತಂಡದಲ್ಲಿ ಇರಲಿಲ್ಲ ಎಂಬ ಕೊರಗು ಇಶಾನ್ ಕಿಶನ್ನ ಕಾಡ್ತಿದೆ. ಮುಂಬರೋ 2026 ವಿಶ್ವಕಪ್ ತಂಡದಲ್ಲಾದ್ರೂ ಸ್ಥಾನ ಗಿಟ್ಟಿಸಿಕೊಳ್ಳಬೇಕು ಅನ್ನೋದು ಕಿಶನ್ ಕನಸಾಗಿದೆ. ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡೋ ಪಣ ತೊಟ್ಟಿರೋ ಜಾರ್ಖಂಡ್ ಬಾಯ್, ಐಪಿಎಲ್ ಮೊದಲ ಪಂದ್ಯದಲ್ಲೇ ಅಬ್ಬರಿಸಿ ಸೆಲೆಕ್ಟರ್ಸ್ಗೆ ಸಂದೇಶ ರವಾನಿಸಿದ್ದಾರೆ. ಆದ್ರೆ, ಕಿಶನ್ ಕನಸು ನನಸಾಗಲು ಒಂದು ಇನ್ನಿಂಗ್ಸ್ನ ಅಬ್ಬರ ಮಾತ್ರ ಸಾಕಾಗಲ್ಲ. ಟೂರ್ನಿಯ ಮುಂದಿನ ಪಂದ್ಯಗಳಲ್ಲೂ ಇಶಾನ್, ಅದ್ಭುತ ಆಟ ಮುಂದುವರೆಸಬೇಕಿದೆ. ಹಾಗಾದ್ರೆ, ಮಾತ್ರ ಇಂಡಿಯನ್ ಟೀಮ್ ಡೋರ್ ತೆರೆಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ