VIDEO: ನಮ್ಮ ಕನ್ನಡಿಗರೇ ಕೊಡಿಸಿದಂತ ಪ್ರಶಸ್ತಿ.. ಪದ್ಮಭೂಷಣ ಅನಂತ್ ನಾಗ್‌ ಹೇಳಿದ್ದೇನು?

author-image
admin
Updated On
VIDEO: ನಮ್ಮ ಕನ್ನಡಿಗರೇ ಕೊಡಿಸಿದಂತ ಪ್ರಶಸ್ತಿ.. ಪದ್ಮಭೂಷಣ ಅನಂತ್ ನಾಗ್‌ ಹೇಳಿದ್ದೇನು?
Advertisment
  • ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ಖುಷಿಗಿಂತ ತೃಪ್ತಿಯಾಗಿದೆ
  • ಕಳೆದ 3 ವರ್ಷಗಳಿಂದ ಪ್ರತಿ ವರ್ಷವೂ ಅಭಿಮಾನಿಗಳು ಕೇಳುತ್ತಿದ್ದರು
  • ನಮ್ಮ ಕನ್ನಡಿಗರು ಸ್ವಾಭಿಮಾನಿಗಳು ಯಾರನ್ನು ಏನು ಕೇಳುವುದಿಲ್ಲ

ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಅನಂತ್ ನಾಗ್ ಅವರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಕೇಂದ್ರ ಸರ್ಕಾರ ನಿನ್ನೆಯಷ್ಟೇ ಪದ್ಮ ಪ್ರಶಸ್ತಿಗೆ ಆಯ್ಕೆಯಾದ ಸಾಧಕರ ಪಟ್ಟಿ ಪ್ರಕಟ ಮಾಡಿದ್ದು, ಅದರಲ್ಲಿ 9 ಕನ್ನಡಿಗರಿಗೆ ಈ ಬಾರಿ ಗೌರವಿಸಲು ತೀರ್ಮಾನಿಸಲಾಗಿದೆ.

ಪದ್ಮಭೂಷಣ ಪ್ರಶಸ್ತಿ ಸಿಕ್ಕ ಬಗ್ಗೆ ಹಿರಿಯ ನಟ ಅನಂತ್ ನಾಗ್ ಅವರು ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ. ಪದ್ಮಭೂಷಣ ಪ್ರಶಸ್ತಿ ಸಿಕ್ಕಿರುವುದು ಖುಷಿಗಿಂತ ತೃಪ್ತಿಯಾಗಿದೆ. ಕಳೆದ 3 ವರ್ಷಗಳಿಂದ ಪ್ರತಿ ವರ್ಷವೂ ಆಪ್ತರು, ಅಭಿಮಾನಿಗಳು ನಿಮಗೆ ಪದ್ಮ ಪ್ರಶಸ್ತಿ ಯಾವಾಗ ಅಂತ ಕೇಳುತ್ತಿದ್ರು. ಅದು ಈ ವರ್ಷ ಫಲಿಸಿತು. ಇದು ಒಂದು ರೀತಿ ನಮ್ಮ ಕನ್ನಡಿಗರೇ ನಮಗೆ ಕೊಡಿಸಿದಂತ ಪ್ರಶಸ್ತಿ. ಆದ್ದರಿಂದ ಈ ಪದ್ಮಭೂಷಣವನ್ನ ನಮ್ಮ ಕನ್ನಡಿಗರಿಗೆ, ಕರ್ನಾಟಕಕ್ಕೆ, ಕನ್ನಡ ಚಿತ್ರರಂಗಕ್ಕೆ ಮತ್ತು ತಾಯಿ ಭುವನೇಶ್ವರಿಗೆ ಅರ್ಪಿಸುತ್ತೇನೆ ಎಂದು ಅನಂತ್ ನಾಗ್ ತಿಳಿಸಿದ್ದಾರೆ.

publive-image

ಕಳೆದ 3 ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಪದ್ಮ ಪ್ರಶಸ್ತಿಗಳ ಆಯ್ಕೆಗೆ ಹೊಸ ವ್ಯವಸ್ಥೆಯನ್ನ ತಂದರು. ಪದ್ಮ ಪ್ರಶಸ್ತಿ ಕೊಡುವುದರಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ತಮ್ಮೆಲ್ಲರ ಮನಸ್ಸಿನಲ್ಲಿ ಯಾರಿಗೆಲ್ಲಾ ಪದ್ಮ ಪ್ರಶಸ್ತಿ ಕೊಡಬೇಕು ಅಂತ ಇದ್ರೆ ಅಂತಹವರ ಹೆಸರನ್ನ ಈ ನಂಬರಿಗೆ ತಿಳಿಸಿ ಅಂತ ನಂಬರ್ ಕೊಟ್ಟಿದ್ರು. ಸಾಮಾನ್ಯವಾಗಿ ನಮ್ಮ ಕನ್ನಡಿಗರು ಸ್ವಾಭಿಮಾನಿಗಳು ಯಾರನ್ನು ಏನು ಕೇಳುವುದಿಲ್ಲ. ಆದ್ರೆ ಅಸಂಖ್ಯಾತ ಕನ್ನಡಿಗರು ಪದ್ಮ ಪ್ರಶಸ್ತಿಯನ್ನ ಅನಂತ್ ನಾಗ್ ಅವರಿಗೆ ಕೊಡಬೇಕು ಅಂತ ಒತ್ತಾಯ ಮಾಡುತ್ತಿದ್ರು.

ಇದನ್ನೂ ಓದಿ: ಹಿರಿಯ ನಟ ಅನಂತ್​ನಾಗ್​ಗೆ ಪದ್ಮಭೂಷಣ; ಕರ್ನಾಟಕದ 9 ಸಾಧಕರಿಗೆ ಅತ್ಯುನ್ನತ ಗೌರವ 

ಇದೇ ವೇಳೆ ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿರುವ ಅನಂತ್ ನಾಗ್, ಜನರಿಗೆ ಎಲ್ಲೂ ಬೇಸರವಾಗದ ರೀತಿಯಲ್ಲಿ ಚಿತ್ರಗಳನ್ನ ಕೊಡಲು ನಾನು ಇಷ್ಟಪಟ್ಟೆ. ಅದು ಜನರಿಗೆ ಇಷ್ಟ ಆಯ್ತು. ನಮ್ಮ ಹಿರಿಯರು ನಮಗೆ ಹಾಕಿಕೊಟ್ಟ ದಾರಿ ಅದು. ಇತ್ತೀಚೆಗೆ ಅದು ಬದಲಾಗುತ್ತಿದೆ. ಒಳ್ಳೆಯ ಪಾತ್ರ ಮತ್ತು ಕಥೆಯನ್ನ ಹಾರಿಸಿಕೊಂಡು ಬಂದಿದ್ದೇನೆ. ಅದು ನಮ್ಮ ಕನ್ನಡಿಗರಿಗೆ ಇಷ್ಟ ಆಗಿ, ಇವತ್ತು ಈ ಪ್ರಶಸ್ತಿ ಲಭಿಸಲು ಸಾಧ್ಯವಾಗಿದೆ.

ಕೊರೊನಾ ಬಂದ ನಂತರ ಥಿಯೇಟರ್‌ಗೆ ಬರುವಂತವರ ಸಂಖ್ಯೆ ಕಡಿಮೆಯಾಗಿದೆ. ನಮ್ಮ ಕಾಲದಲ್ಲಿ ಥಿಯೇಟರ್‌ನಲ್ಲಿ ಶೇಕಡಾ 50ರಷ್ಟು ಜನ ಮಹಿಳೆಯರೇ ಇರುತ್ತಿದ್ದರು. ಹೆಚ್ಚು, ಹೆಚ್ಚು ಜನ ಸಿನಿಮಾ ನೋಡಲು ಬರುತ್ತಿದ್ರು. ಆದ್ರೆ ಈಗ ಅವರ ಸಂಖ್ಯೆ ಅಷ್ಟಿರೋದಿಲ್ಲ.

ಹೀಗಾಗಿ ಜನರಿಗೆ ಏನು ಕೊಡಬೇಕು ಅನ್ನೋದನ್ನ ಅರಿತು ಮನೋರಂಜನೆ ನೀಡಬೇಕು. ಆ ರೀತಿ ಇತ್ತೀಚಿನ ದಿನ ಸಿನಿಮಾಗಳಲ್ಲಿ ಇಲ್ಲ. ಆಗ ಜನ ಅದನ್ನು ಸ್ವೀಕಾರ ಮಾಡುವುದಿಲ್ಲ. ಜನ ಥಿಯೇಟರ್‌ಗೆ ಬರೋದು ಕಡಿಮೆಯಾಗಿದೆ. ಅದರ ಸವಾಲು ಸಿನಿಮಾ ಮಾಡುವವರಿಗೆ ಹೆಚ್ಚಾಗುತ್ತೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಬೇಕು ಎಂದು ಅನಂತ್ ನಾಗ್ ಅವರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment