/newsfirstlive-kannada/media/post_attachments/wp-content/uploads/2025/07/sarojini.jpg)
ಖ್ಯಾತ ಬಹುಭಾಷಾ ನಟಿ, ಹಿರಿಯ ಕಲಾವಿದೆ ಸರೋಜಾದೇವಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ನಟಿ ಸರೋಜಾದೇವಿ ಅವರ ಕಣ್ಣುಗಳನ್ನು ದಾನ ಮಾಡಲಾಗಿದೆ. ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದಾರೆ. ಕತ್ತಲೆಯಲ್ಲಿ ಜೀವನ ನಡೆಸುತ್ತಿರೋ ಅಂಧರಿಗೆ ನೇತ್ರದಾನ ಮಾಡುವುದು ಪುಣ್ಯದ ಕೆಲಸ. ನೇತ್ರದಾನ ಮಾಡುವಂತೆ ವರನಟ ಡಾ.ರಾಜ್ಕುಮಾರ್ ಕೂಡ ಕರೆ ಕೊಟ್ಟಿದ್ದರು. ತಮ್ಮ ಕಣ್ಣುಗಳನ್ನು ಡಾ.ರಾಜ್ಕುಮಾರ್ ದಾನ ಮಾಡಿದ್ದರು. ಡಾ.ರಾಜ್ಕುಮಾರ್ ಹಾದಿಯನ್ನು ಅನುಸರಿಸಿ ಅನೇಕರು ನೇತ್ರದಾನ ಮಾಡಿದ್ದಾರೆ. ಇದೀಗ ಹಿರಿಯ ನಟಿ ಸರೋಜಾದೇವಿ ಅವರ ಕಣ್ಣುಗಳನ್ನೂ ದಾನ ಮಾಡಲಾಗಿದೆ.
ಇದನ್ನೂ ಓದಿ: ಸರೋಜಾ ದೇವಿ ಅಂತ್ಯಕ್ರಿಯೆ ಬಗ್ಗೆ ಮಹತ್ವದ ಹೇಳಿಕೆ ಕೊಟ್ಟ ಪುತ್ರ ಗೌತಮ್
ನಟಿ ಸರೋಜಾದೇವಿ ಅವರು ಇಂದು ಬೆಳಗ್ಗೆ 8.00 ಗಂಟೆಗೆ ನಿಧನರಾಗಿದ್ದಾರೆ. ಕನ್ನಡ ಸೇರಿದಂತೆ ಬೇರೆ ಭಾಷೆಯ ಸಿನಿಮಾಗಳಲ್ಲಿಯೂ ನಾಯಕಿಯಾಗಿ ಮೆರೆದಿದ್ದ ಸರೋಜಾದೇವಿ ಅವರು ವಯೋಸಹಜ ಕಾಯಿಲೆಯಿಂದ 87 ವರ್ಷಕ್ಕೆ ವಿಧಿವಶರಾಗಿದ್ದಾರೆ. ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದರು. 1938ರ ಜನವರಿ 7 ರಂದು ಬೆಂಗಳೂರಿನಲ್ಲಿ ಜನಿಸಿದ ಬಿ ಸರೋಜಾದೇವಿ ಅಂದಿನ ಕಾಲದಲ್ಲೇ ಮೊದಲ ಲೇಡಿ ಸೂಪರ್ಸ್ಟಾರ್ ಆಗಿದ್ದವರು. 1962ರಲ್ಲಿ ಪ್ರಸಾರವಾದ ‘ಕಿತ್ತೂರ ರಾಣಿ ಚೆನ್ನಮ್ಮ’ ಸಿನಿಮಾದಲ್ಲಿ ಬಿ ಸರೋಜಾದೇವಿ ಅವರು ನಟಿಸಿದ್ದರು.
ಇನ್ನೂ, ನಟಿ ಸರೋಜಾ ದೇವಿ ಅವರು ಈಗ ಕಣ್ಣುಗಳು ದಾನ ಮಾಡುವ ಮೂಲಕ ಡಾ. ರಾಜ್ ಕುಮಾರ್ ಅವರ ಹಾದಿಯನ್ನೇ ಹಿಡಿದಿದ್ದಾರೆ. ಈಗಾಗಲೇ ನಟಿಯ ಕಣ್ಣುಗಳನ್ನ ನಾರಾಯಣ ನೇತ್ರಾಲಾಯದ ವೈದ್ಯರು ತೆಗೆದುಕೊಂಡು ಹೋಗಿದ್ದಾರೆ. ನಾಳೆ ನಟಿ ಸರೋಜಾದೇವಿ ಅವರ ಅಂತ್ಯ ಸಂಸ್ಕಾರವನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಣ್ವ ಡ್ಯಾಮಿನ ಪಕ್ಕದಲ್ಲೇ ಇರೋ ದಶಾವರದಲ್ಲಿ ಕುಟುಂಬಸ್ಥರು ಮಾಡಲಿದ್ದಾರೆ. ಒಕ್ಕಲಿಗ ಸಂಪ್ರದಾಯದಂತೆ ವಿಧಿ ವಿಧಾನಗಳು ನೆರವೇರಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ