/newsfirstlive-kannada/media/post_attachments/wp-content/uploads/2025/04/bank-janardhan2.jpg)
ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ (76) ಅವರು ನಿಧನರಾಗಿದ್ದಾರೆ. ಮಧ್ಯರಾತ್ರಿ 2.30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ಅವರು ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಗ್ಗೆ 10 ಗಂಟೆಗೆ ನಟ ಬ್ಯಾಂಕ್ ಜನಾರ್ಧನ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈ ಬಗ್ಗೆ ನ್ಯೂಸ್ ಫಸ್ಟ್ಗೆ ಬ್ಯಾಂಕ್ ಜನಾರ್ಧನ್ ಪುತ್ರ ಗುರುಪ್ರಸಾದ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:10, 20 ಅಲ್ಲವೇ ಅಲ್ಲ ‘ಕ್ರಿಶ್ 4’ ಸಿನಿಮಾಗೆ ಪ್ರಿಯಾಂಕಾ ಚೋಪ್ರಾ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?
ನಟ ಬ್ಯಾಂಕ್ ಜನಾರ್ಧನ್ ಅವರು 1948ರಲ್ಲಿ ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಜನಿಸಿದರು.
ಬ್ಯಾಂಕ್ ಜನಾರ್ದನ್ ಅವರು ಹೊಳಲ್ಕೆರೆಯಲ್ಲೇ ತಮ್ಮ ಬಾಲ್ಯ ಕಳೆದಿದ್ದರು. ಬಳಿಕ ಅಲ್ಲಿಯೇ ಬ್ಯಾಂಕ್ನಲ್ಲಿ ಕೆಲಸ ಮಾಡಿಕೊಂಡಿದ್ದರು. ಶಾಲೆ ಹಾಗೂ ಕಾಲೇಜು ದಿನಗಳಲ್ಲೇ ನಾಟಕದ ಗೀಳು ಅಂಟಿಸಿಕೊಂಡಿದ್ದರು. ನಾಟಕಗಳಲ್ಲಿ ಅಭಿನಯ ಮಾಡುತ್ತಾ 1991ರಿಂದ ಸಿನಿಮಾರಂಗದ ಕಡೆ ಮುಖ ಮಾಡಿದ್ದರು. ಬ್ಯಾಂಕ್ ಜನಾರ್ದನ್ ಕನ್ನಡದ ಪ್ರಖ್ಯಾತ ಹಾಸ್ಯನಟರಲ್ಲಿ ಒಬ್ಬರಾಗಿದ್ದಾರೆ.
ಶಂಕರ್ನಾಗ್, ಅನಂತ್ನಾಗ್, ರವಿಚಂದ್ರನ್, ಜಗ್ಗೇಶ್, ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್ ಹೀಗೆ ಘಟಾನುಘಟಿಗಳ ಜೊತೆಗೆ ನಟಿಸಿ ಪ್ರಖ್ಯಾತಿ ಹೊಂದಿದ್ದರು. ನಟ ಬ್ಯಾಂಕ್ ಜನಾರ್ದನ್ ಅಭಿನಯದ ಶ್! ತರ್ಲೆ ನನ್ಮಗ, ಸೂಪರ್ ನನ್ ಮಗ, ಭಂಡ ನನ್ ಗಂಡ ಬಾಕ್ಸ್ ಆಫೀಸ್ನಲ್ಲಿ ಧೂಳ್ ಎಬ್ಬಿಸಿತ್ತು.
ಈವೆರೆಗೂ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಸಿನಿಮಾ ಮಾತ್ರವಲ್ಲದೇ ಕಿರುತೆರೆ ಮತ್ತು ರಂಗಭೂಮಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಹಾಸ್ಯ ನಟರಾಗಿ ತಮ್ಮದೇಯಾದ ಛಾಪು ಮೂಡಿಸಿದ್ದರು. ಇಷ್ಟೇ ಅಲ್ಲದೇ ಪಾಪಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಧಾರಾವಾಹಿಗಳಲ್ಲೂ ನಟಿಸಿದ್ದರು.
ಆದ್ರೆ, ಚಿಕಿತ್ಸೆ ಫಲಸದೇ ಮಣಿಪಾಲ್ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ಇಹಲೋಕ ತ್ಯಜಿಸಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ, ಸಹ ನಟರು ಹಾಗೂ ಸಂಬಂಧಿಕರು ಬ್ಯಾಂಕ್ ಜನಾರ್ಧನ್ ಅವರ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ.
ಈ ಹಿಂದೆ ಹಾಸ್ಯ ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿತ್ತು.
ಹೀಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ನಟ ಬ್ಯಾಂಕ್ ಜನಾರ್ಧನ್ ಆಸ್ಪತ್ರೆಗೆ ದಾಖಲಾದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಹಾಗೂ ರಂಗಭೂಮಿ ಕಲಾವಿದರು ಯೋಗಕ್ಷೇಮ ವಿಚಾರಿಸಿದ್ದರು. ಇನ್ನು, ಹಾಸ್ಯನಟ ಬ್ಯಾಂಕ್ ಜನಾರ್ಧನ್ ಅವರಿಗೆ ಮೂರನೇ ಬಾರಿ ಹೃದಯಾಘಾತ ಆಗಿತ್ತಂತೆ. ಬ್ಯಾಂಕ್ ಜನಾರ್ಧನ್ ಆರೋಗ್ಯದ ಬಗ್ಗೆ ನಟಿ ರೇಣು ಶಿಕಾರಿ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ