/newsfirstlive-kannada/media/post_attachments/wp-content/uploads/2025/02/Vatal-Nagaraj-on-Karnataka-bundh.jpg)
ಬೆಂಗಳೂರು: ಬೆಳಗಾವಿಯಲ್ಲಿ ಮತ್ತೊಮ್ಮೆ ಎಂಇಎಸ್ ಪುಂಡರ ಹಾವಳಿ ಮಿತಿ ಮೀರಿದೆ. ಕರ್ನಾಟಕದ ಸಾರಿಗೆ ಬಸ್ ಡ್ರೈವರ್, ಕಂಡಕ್ಟರ್ಗಳ ಮೇಲೆ ನಡೆದ ದಾಳಿಗಳು ಕನ್ನಡಿಗರನ್ನು ಕೆರಳುವಂತೆ ಮಾಡಿದೆ. ಮರಾಠಿ ಪುಂಡರ ವಿರುದ್ಧ ಸಮರ ಸಾರಿರುವ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ಗೆ ಕರೆ ನೀಡಿದ್ದು, ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧಾರ ಮಾಡಿವೆ.
ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಇಂದು ಹೈವೋಲ್ಟೇಜ್ ಮೀಟಿಂಗ್ ನಡೆದಿದೆ. ಬೆಂಗಳೂರಿನ ವುಡ್ ಲ್ಯಾಂಡ್ಸ್ ಹೋಟೆಲ್ನಲ್ಲಿ ಸಭೆ ನಡೆಸಲಾಗಿದ್ದು, ಬೆಳಗಾವಿಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಮೇಲೆ ನಡೆದ ಹಲ್ಲೆಯನ್ನು ಖಂಡಿಸಲಾಗಿದೆ. ಇದೇ ಸಭೆಯಲ್ಲಿ 'ಕರ್ನಾಟಕ ಬಂದ್' ದಿನಾಂಕ ಘೋಷಣೆ ಮಾಡುವ ಬಗ್ಗೆ ಚರ್ಚಿಸಲಾಗಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಮಿತಿ ಮೀರಿದ ಕಿತಾಪತಿ; ಕನ್ನಡ ಭಾಷೆ, ಕರ್ನಾಟಕದ ಸಾರಿಗೆ ಬಸ್ಗಳ ಮೇಲೆ MES ಪುಂಡಾಟ
ಈಗಾಗಲೇ ಒಂದು ಸುತ್ತಿನ ಸಭೆ ನಡೆಸಿರುವ ವಾಟಾಳ್ ನಾಗರಾಜ್ ಅವರು ರಾಜ್ಯ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. ಪದೇ ಪದೇ ಕನ್ನಡಿಗರ ಮೇಲೆ ಎಂಇಎಸ್ ಪುಂಡರಿಂದ ಹಲ್ಲೆಯಾಗುತ್ತಿದೆ. ಬಂದು ಹೋಗುವ ಸರ್ಕಾರಗಳು ಮಾತ್ರ ಜಾಣ ಕುರುಡುತನ ತೋರುತ್ತಿವೆ. ಹೀಗಾಗಿ ಬೆಳಗಾವಿಯಲ್ಲಿ ಆಗ್ತಿರೋ ಅನ್ಯಾಯಕ್ಕೆ ಕೊನೆ ಆಗಬೇಕು. ಶಿವಸೇನೆ, ಎಂಇಎಸ್ ಪುಂಡರ ಕಡಿವಾಣ ಆಗುವಂತೆ ಒತ್ತಾಯಿಸಲಾಗುತ್ತಿದೆ.
ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಳ್ಳದೆ ಇದ್ರೆ ಮರಾಠಿಗರು ಬುದ್ಧಿ ಕಲಿಯಲ್ಲ. ಹೀಗಾಗಿ ಮಾರ್ಚ್ 03ರಂದು ರಾಜಭವನ ಮುತ್ತಿಗೆ. ಮಾರ್ಚ್ 7ರಿಂದ ಬೆಳಗಾವಿ ಚಲೋ ಮಾಡಲು ನಿರ್ಧಾರ ಮಾಡಲಾಗಿದೆ. ಇದೇ ವೇಳೆ ಕರ್ನಾಟಕ ಬಂದ್ ನಡೆಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಕರ್ನಾಟಕ ಬಂದ್ ಸೇರಿದಂತೆ ಕನ್ನಡ ಸಂಘಟನೆಗಳ ಹೋರಾಟ ಯಾವಾಗ ಅನ್ನೋ ಮಾಹಿತಿ ಇಲ್ಲಿದೆ
ಕರ್ನಾಟಕ ಬಂದ್ ಯಾವಾಗ?
ಮಾರ್ಚ್ 03 ರ ಬೆಳಗ್ಗೆ 11ಕ್ಕೆ ರಾಜಭವನ ಮುತ್ತಿಗೆ
ಮಾರ್ಚ್ 07 ಕ್ಕೆ ಬೆಳಗಾವಿ ಚಲೋ
ಮಾರ್ಚ್ 11 ರಂದು ಮೇಕೆದಾಟಿಗಾಗಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್
ಮಾರ್ಚ್ 14 ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಭಟನೆ
ಮಾರ್ಚ್ 17 ಹೊಸಕೋಟೆ - ಚೆನ್ನೈ ಹೆದ್ದಾರಿ ತಡೆ
ಮಾರ್ಚ್ 18 ಕನ್ನಡಪರ ಸಂಘಟನೆಗಳ ಸಭೆ
ಮಾರ್ಚ್ 22 ರಂದು ಬೆಳಗ್ಗೆ 6ರಿಂದ ಸಂಜೆ 6 ರವರೆಗೆ ಕರ್ನಾಟಕ ಬಂದ್ ನಡೆಸಲು ನಿರ್ಧಾರ
ಸಭೆಯಲ್ಲಿ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕರವೇ ಪ್ರವೀಣ್ ಶೆಟ್ಟಿ, ಕನ್ನಡ ಕುಮಾರ್, ಜಯಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಗಿರೀಶ್ ಗೌಡ, ರೂಪೇಶ್ ರಾಜಣ್ಣ ಸೇರಿ ಹಲವು ಕನ್ನಡಪರ ಹೋರಾಟಗಾರರು ಭಾಗಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ