/newsfirstlive-kannada/media/post_attachments/wp-content/uploads/2024/09/DARSHAN-11.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದ ಡೆವಿಲ್ ಗ್ಯಾಂಗ್ಗೆ ಇವತ್ತು ಶುಭ ಶುಕ್ರವಾರ. ನರಹತ್ಯೆ ಎಂಬ ಮಹಾಪಾಪ ಹೊತ್ತು ಸೆರೆವಾಸಕ್ಕೆ ಗುರಿಯಾಗಿದ್ದ ಡಿ ಗ್ಯಾಂಗ್ಗೆ ಜೈಲಿನಿಂದ ಮುಕ್ತಿ ದೊರಕಿದೆ. ಸತತ 6 ತಿಂಗಳಿನಿಂದ ಕಂಬಿಹಿಂದೆ ಸೇರಿದ್ದ ಪವಿತ್ರಾಗೌಡ ಸೇರಿ 7 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ಬೆನ್ನುನೋವಿನಿಂದ ಆಸ್ಪತ್ರೆ ಸೇರಿದ್ದ ದರ್ಶನ್ಗೂ ಮತ್ತೆ ಕಾರಾಗೃಹ ಸೇರುವ ಆತಂಕ ದೂರವಾಗಿದೆ. ಕೊಲೆ ಆರೋಪ ಹೊತ್ತು ಜೈಲು ಸೇರಿದ್ದ ಡೆವಿಲ್ ಗ್ಯಾಂಗ್ನ 7 ಮಂದಿಗೆ ಜೈಲುವಾಸದಿಂದ ಮುಕ್ತಿ ಸಿಕ್ಕಿದೆ.
ದರ್ಶನ್, ಪವಿತ್ರಾಗೌಡ ಸೇರಿ ಏಳು ಮಂದಿಗೆ ಜಾಮೀನು!
ಡೆವಿಲ್ ಗ್ಯಾಂಗಿನ ಜಾಮೀನು ಅರ್ಜಿ ವಿಚಾರಣೆ ಕಳೆದ ಎರಡ್ಮೂರು ತಿಂಗಳಿಂದ ನಡೆಯುತ್ತಲೇ ಇತ್ತು. ಆಗ ಬೇಲ್ ಸಿಗುತ್ತೆ. ಈಗ ಬೇಲ್ ಸಿಗುತ್ತೆ ಅಂತ ದರ್ಶನ್ ಅಂಡ್ ಟೀಂ ಚಾತಕಪಕ್ಷಿಯಂತೆ ಕಾದು ಕೂತಿತ್ತು. ಈಗ ರೇಣುಕಾಸ್ವಾಮಿಯನ್ನ ಬರ್ಬರವಾಗಿ ಹತ್ಯೆಗೈದ ಆರೋಪಿಗಳಿಗೆ ಬಿಗ್ ರಿಲೀಫ್ ಸಿಕ್ಕಿದೆ. ಎಲ್ಲಾ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು ನೀಡಿದೆ. ಮಧ್ಯಂತರ ಜಾಮೀನು ಪಡೆದು ಚಿಕಿತ್ಸೆ ಪಡೆಯುತ್ತಿದ್ದ ದರ್ಶನ್ಗೂ ಪೂರ್ಣಾವಧಿ ಜಾಮೀನು ಸಿಕ್ಕಿದೆ. ಪವಿತ್ರಾಗೌಡಗೂ ಕತ್ತಲಕೋಣೆಯಿಂದ ಮುಕ್ತಿ ದೊರೆಕಿದೆ.
ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಬೇಲ್ ಅರ್ಜಿ ವಿಚಾರಣೆ
ರಾಜ್ಯ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಕೊಲೆ ಆರೋಪಿಗಳ ಬೇಲ್ ಅರ್ಜಿಯ ವಿಚಾರಣೆ ನಡೆದಿತ್ತು. ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳ ಅರ್ಜಿ ವಿಚಾರಣೆ ಮುಗಿದಿತ್ತು. ಸೋಮವಾರ ಎರಡೂ ಕಡೆ ವಾದ-ಪ್ರತಿವಾದ ಆಲಿಸಿದ್ದ ನ್ಯಾ. ವಿಶ್ವಜಿತ್ ಶೆಟ್ಟಿ ಇವತ್ತಿಗೆ ತೀರ್ಪು ಕಾಯ್ದಿರಿಸಿದ್ದರು. ಇವತ್ತು ಜಾಮೀನು ಆದೇಶವನ್ನ ರಾಜ್ಯ ಹೈಕೋರ್ಟ್ ಪ್ರಕಟಿಸಿದೆ. ಪ್ರಮುಖ ಆರೋಪಿ ಪವಿತ್ರಾಗೌಡ, 2ನೇ ಆರೋಪಿ ದರ್ಶನ್ 11ನೇ ಆರೋಪಿ ನಾಗರಾಜ್, 12ನೇ ಆರೋಪಿ ಲಕ್ಷ್ಮಣ್, 6ನೇ ಆರೋಪಿ ಜಗದೀಶ್, 7ನೇ ಆರೋಪಿ ಅನುಕುಮಾರ್, 14ನೇ ಆರೋಪಿ ಪ್ರದೋಶ್ಗೆ ಜಾಮೀನು ನೀಡಿದೆ. ಡೆವಿಲ್ ಗ್ಯಾಂಗ್ನ 7 ಮಂದಿಗೆ ಇವತ್ತು ಜಾಮೀನು ಮಂಜೂರಾಗಿದೆ.
ದರ್ಶನ್ಗೆ ಬೇಲ್ ಸಿಕ್ತಿದ್ದಂತೆ ಫ್ಯಾನ್ಸ್ ಸಂಭ್ರಮ
ಕೊಲೆ ಆರೋಪಿ ದರ್ಶನ್ಗೆ ಜಾಮೀನು ಸಿಕ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮಟ್ಟಿದೆ. ದರ್ಶನ್ ಚಿಕಿತ್ಸೆ ಪಡೆಯುತ್ತಿರೋ ಬಿಜಿಎಸ್ ಆಸ್ಪತ್ರೆಯ ಮುಂದೆ ಡೆವಿಲ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ದರ್ಶನ್ ಫೋಟೋಗೆ ಹಾಲಿನ ಅಭಿಷೇಕ ಮಾಡಿ ಜೈ ಡಿ ಬಾಸ್ ಎಂದು ಘೋಷಣೆ ಕೂಗಿದ್ದಾರೆ.
ದರ್ಶನ್ಗಾಗಿ ಶಕ್ತಿದೇವತೆಗಳ ಮೊರೆಹೋಗಿದ್ದ ಪತ್ನಿ ವಿಜಯಲಕ್ಷ್ಮೀ ಪೂಜೆ ಫಲಿಸಿದೆ. ಕನಕ ದುರ್ಗಮ್ಮ ಸೇರಿದಂತೆ ದೇವಾನುದೇವತೆಗಳು ವಿಜಯಲಕ್ಷ್ಮೀ ಪ್ರಾರ್ಥನೆಗೆ ಓಗೊಟ್ಟಿದ್ದಾರೆ. ಇದೆಲ್ಲದರ ಮಧ್ಯೆ ಪೊಲೀಸರ ಮುಂದಿನ ನಡೆಯೇನು? ಜಾಮೀನು ರದ್ದುಕೋರಿ ಸುಪ್ರೀಂಕೋರ್ಟ್ ಮೊರೆ ಹೋಗ್ತಾರಾ? ಅನ್ನೋದೆ ಮುಂದಿರೋ ಪ್ರಶ್ನೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ನಿರ್ಣಾಯಕ ಪಂದ್ಯ; ಟೀಮ್ ಇಂಡಿಯಾಗೆ ಸ್ಟಾರ್ ಪ್ಲೇಯರ್ ಎಂಟ್ರಿ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ