/newsfirstlive-kannada/media/post_attachments/wp-content/uploads/2025/06/Karun-Nair-2.jpg)
ಕರುಣ್ ನಾಯರ್.. 8 ವರ್ಷಗಳ ಬಳಿಕ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ್ದಾರೆ. ಇಂಗ್ಲೆಂಡ್ ಎದುರು ಟೆಸ್ಟ್ ಆಡೋಕೆ ತುದಿಗಾಲಿನಲ್ಲಿ ನಿಂತಿದ್ದಾರೆ. ಸಿಕ್ಕ ಪುನರ್ಜನ್ಮ ಸದ್ಭಳಕೆ ಮಾಡಿಕೊಳ್ಳಲು ಹಪಹಪಿಸ್ತಿದ್ದಾರೆ. ಕರುಣ್ ನಾಯರ್ ರೋಚಕ ಕಮ್ಬ್ಯಾಕ್ ಹಿಂದೆ ಹೋರಾಟದ ಕಥೆ ಮಾತ್ರವಲ್ಲ. ಕರುಣಾಜನಕ ಕಥೆಯೂ ಇದೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಇದೆ ಈತನ ಭಯ.. ತವರಲ್ಲಿ 21 ಶತಕ, 32 ಅರ್ಧಶತಕ ಸಿಡಿಸಿರುವ ಬ್ಯಾಟರ್!
ಕರುಣ್ ನಾಯರ್.. ಟ್ರೂ ಫೈಟರ್.. ದಿ ವಾರಿಯರ್.. ವೃತ್ತಿ ಜೀವನವೇ ಅಂತ್ಯ ಎಂದವರಿಗೆ ತನ್ನ ಕಮ್ಬ್ಯಾಕ್ನಿಂದಲೇ ಆನ್ಸರ್ ಕೊಟ್ಟ ಛಲದಂಕ ಮಲ್ಲ. ಒಂದಲ್ಲ, ಎರಡಲ್ಲ.. ಬರೋಬ್ಬರಿ 8 ವರ್ಷ.. 8 ವರ್ಷಗಳ ಕಾಲ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ಕರುಣ್ ನಾಯರ್ ಮತ್ತೆ ಟೀಮ್ ಇಂಡಿಯಾಗೆ ಆಡ್ತಾರೆ ಅನ್ನೋ 1 ಪರ್ಸೆಟ್ ನಂಬಿಕೆಯೂ ಯಾರಿಗೂ ಇರಲಿಲ್ಲ. ಛಲಬಿಡದ ಕರುಣ್ ನಾಯರ್ ಹೋರಾಡಿ ರೋಚಕ ರೀತಿಯಲ್ಲಿ ಕಮ್ಬ್ಯಾಕ್ ಮಾಡಿದ್ದಾರೆ. ಈ ಕಮ್ಬ್ಯಾಕ್ ಹಿಂದೆ ಹೋರಾಟದ ಕಥೆಯಷ್ಟೇ ಇಲ್ಲ. ಕರುಣಾಜನಕ ಕಥೆಯೂ ಇದೆ. ಕಣ್ಣೀರಿನ ದಿನಗಳಿವೆ. ಕರಿಯರ್ ಅಂತ್ಯವಾಯ್ತು ಎಂದು ನಿರ್ಧಾರಕ್ಕೆ ಬಂದು ಕುಗ್ಗಿದ್ದ ದಿನಗಳಿವೆ.
ಕಾಂಟ್ರಾಕ್ಟ್ಗಾಗಿ ಅಲೆದಾಟ
ಟೀಮ್ ಇಂಡಿಯಾದಿಂದ ಡ್ರಾಪ್ ಆದ ಕರುಣ್ ನಾಯರ್ಗೆ 2017ರಿಂದ ಕಠಿಣ ದಿನಗಳು ಶುರುವಾದ್ವು. 2018ರಲ್ಲಿ ಕರ್ನಾಟಕ ತಂಡದಿಂದಲೂ ಹೊರಬಿದ್ದಿದ್ರು. ಐಪಿಎಲ್ನಲ್ಲೂ ಅನ್ ಸೋಲ್ಡ್ ಆಗಿದ್ದ ಕರುಣ್, ಕಾಂಟ್ರಾಕ್ಟ್ಗಾಗಿ ಇನ್ನಿಲ್ಲದ ಸರ್ಕಸ್ ಮಾಡಿದ್ರು. ಅವತ್ತು ಯಾವೊಬ್ಬರೂ ಕರುಣ್ ಮೇಲೆ ಕೃಪೆ ತೋರಿಲಿಲ್ಲ. ಇಂಥ ಟೈಮ್ನಲ್ಲಿ ಕರುಣ್ ನಾಯರ್ ಆಡಿದ್ದು, ಲೀಗ್ ಮಟ್ಟವೂ ಅಲ್ಲದ ಮ್ಯಾಚ್ಗಳನ್ನಾಗಿತ್ತು. ಇಂಗ್ಲೆಂಡ್ನ ವಿಲೇಜ್ ಕ್ಲಬ್ ಕ್ರಿಕೆಟ್ನಲ್ಲಿ ಶನಿವಾರ ಮಾತ್ರವೇ ಆಡುವ ಪಂದ್ಯಗಳು ಇದಾಗಿತ್ತು.
ಇದನ್ನೂ ಓದಿ: ಜಸ್ಪ್ರಿತ್ ಬೂಮ್ರಾ ಮೊದಲ ಪಂದ್ಯದಲ್ಲಿ ಆಡಲೇಬಾರದು.. ಕ್ರಿಕೆಟರ್ ಹೀಗೆ ಹೇಳಿದ್ದು ಯಾಕೆ?
ಇಲ್ಲಿ ಏಕೆ ಆಡ್ತೀಯಾ..?
ನಾನು ಕಾಂಟ್ರಾಕ್ಟ್ ಪಡೆಯಲು ಪ್ರಯತ್ನಿಸುತ್ತಿದ್ದೆ. ಆದ್ರೆ ಯಾರೊಬ್ಬರೂ ನನಗೆ ಆಫರ್ ಮಾಡಲಿಲ್ಲ. 2018ರ ನಂತರ ನಾನು ಇಂಗ್ಲೆಂಡ್ನಲ್ಲಿ ಆಡಲು ಬಯಸುತ್ತಿದ್ದೆ. ಆ ಸಮಯದಲ್ಲಿ ಮಾನಸಿಕವಾಗಿಯೂ ಕುಂದಿದ್ದೆ. ಹೀಗಾಗಿ ನಾನು ಮತ್ತೆ ಆಡಬೇಕಾಯಿತು, ಇದಕ್ಕಾಗಿ ಅಭ್ಯಾಸ ಮಾಡಬೇಕಾಯಿತು. ಕೆಲವು ವರ್ಷಗಳ ಅಂತರದಲ್ಲಿ ಚಾಂಪಿಯನ್ಸ್ ಲೀಗ್ನಿಂದ ಲೀಗ್ ಅಲ್ಲದ ಮಟ್ಟಕ್ಕೆ ಹೋದಂತೆ. ಇತರ ಆಟಗಾರರು ನಾನು ಕೌಂಟಿ ಕ್ರಿಕೆಟ್ ಆಡಬೇಕೆಂದು ಹೇಳುತ್ತಿದ್ದರು. ಕೆಲವರು ಇಲ್ಲಿ ಏಕೆ ಆಡುತ್ತಿದ್ದೀಯಾ ಎಂದು ಕೇಳುತ್ತಿದ್ದರು-ಕರುಣ್ ನಾಯರ್, ಕ್ರಿಕೆಟರ್
ಪತ್ನಿಯ ಹುಟ್ಟುಹಬ್ಬದಂದು ಕಣ್ಣೀರು ಹಾಕಿದ್ದ ಕರುಣ್
2017ರಲ್ಲಿ ಟೀಮ್ ಇಂಡಿಯಾದಿಂದ ಡ್ರಾಪ್ ಆಗಿದ್ದ ಕರುಣ್ ನಾಯರ್, ದೇಶಿ ಕ್ರಿಕೆಟ್ನಲ್ಲೂ ಸತತ ವೈಫಲ್ಯ ಅನುಭವಿಸಿದರು. ಈ ಇದೇ ಕಾರಣಕ್ಕೆ 2022ರಲ್ಲಿ ಕರ್ನಾಟಕ ತಂಡದಿಂದ ಕರುಣ್ ನಾಯರ್ಗೆ ಗೇಟ್ ಪಾಸ್ ನೀಡಲಾಯ್ತು. ಈ ವೇಳೆ ಕರುಣ್, ಮತ್ತೊಂದು ಟೀಮ್ ತನಗೆ ಚಾನ್ಸ್ ನೀಡಲ್ಲ ಎಂದು ಅಕ್ಷರಶಃ ಕಣ್ಣೀರಾಕಿದ್ರು. ಪತ್ನಿ ಸನಾಯ ಹುಟ್ಟುಹಬ್ಬದ ಸಂಭ್ರಮದ ನಡುವೆಯೇ ಭಾವುಕರಾಗಿದ್ದ ಕರುಣ್, ಅಂದೇ ಡಿಯರ್ ಕ್ರಿಕೆಟ್ ಮತ್ತೊಂದು ಚಾನ್ಸ್ ನೀಡುವಂತೆ ಅಂಗಲಾಚುತ್ತ ಪೋಸ್ಟ್ ಮಾಡಿದ್ರು..
ಆ ಕ್ಷಣ ನಾನು ಸೋತಿದ್ದೆ..
ನನ್ನ ಜೀವನದ ಕಠಿಣ ಕ್ಷಣಗಳಾಗಿದ್ವು. ಆ ಕ್ಷಣ ನನ್ನ ಜೀವನ ಮುಗೀತು ಎಂದು ಅನಿಸಿತ್ತು. ನನಗೆ ನಿಜಕ್ಕೂ ಮುಂದೆ ಏನ್ ಮಾಡಬೇಕು ಅನ್ನೋದು ಗೊತ್ತಿರಲಿಲ್ಲ. ನನ್ನನ್ನ ನಾನು ಕೇಳಿಕೊಂಡಿದ್ದೆ. ನನ್ನ ಕುಟುಂಬ ಇದೆ. ಇತ್ತಿಚೆಗಷ್ಟೇ ಮಗ ಹುಟ್ಟಿದ್ದಾನೆ. ಆದ್ರೆ ನಾನು ಸೋತು ಬಿಟ್ಟಿದ್ದೆ. ಮಾನಸಿಕವಾಗಿಯೂ ಸೋತಿದ್ದೆ-ಕರುಣ್ ನಾಯರ್, ಕ್ರಿಕೆಟರ್
ಕರುಣ್ ನಾಯರ್ ಆ ಕ್ಷಣಕ್ಕೆ ಸೋತರು. ಗೆಲ್ಲಬೇಕೆಂಬ ಛಲ ಬಿಡಲಿಲ್ಲ. ಜಸ್ಟ್ ಒಂದು ಫೋಸ್ಟ್ ಮಾಡಿ ಮುಗಿದೋಯ್ತು ಎಂದು ಸುಮ್ಮನೆ ಕೂರಲಿಲ್ಲ. ಅದಕ್ಕಾಗಿ ಆನ್ಫೀಲ್ಡ್ನಲ್ಲಿ ಹೋರಾಟ ನಡೆಸಿದರು.
ಇದನ್ನೂ ಓದಿ:11 ದಿನಗಳ ಅಂತರದಲ್ಲಿ ಮತ್ತೊಂದು ಟ್ರೋಫಿ ಗೆದ್ದ ನಾಯಕ ಜಿತೇಶ್ ಶರ್ಮಾ..
ನಿವೃತ್ತಿಯ ಸಲಹೆ ನೀಡಿದ್ದ ಇಂಡಿಯನ್ ಕ್ರಿಕೆಟರ್
ಬಹುತೇಕ ಕ್ರಿಕೆಟಿಗರು ಹಣಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಹೇಳಿದ್ದಿದೆ. ಇಂಡಿಯನ್ ಕ್ರಿಕೆಟ್ಗೆ ಗುಡ್ ಬೈ ಹೇಳಿ ಫ್ರಾಂಚೈಸಿ ಲೀಗ್ಗಳತ್ತ ಮುಖ ಮಾಡ್ತಾರೆ. ಕರುಣ್ ನಿಜಕ್ಕೂ ಭಿನ್ನ. ಚಾನ್ಸ್ ಇಲ್ಲದೆ ಕಡು ಕಷ್ಟದಲ್ಲಿದ್ದ ಕರುಣ್ ನಾಯರ್ಗೆ, ಟೀಮ್ ಇಂಡಿಯಾದ ಕ್ರಿಕೆಟ್ ಒಬ್ಬರು ಫ್ರಾಂಚೈಸಿ ಲೀಗ್ ಆಡುವಂತೆ ಸಲಹೆ ನೀಡಿದ್ರಂತೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿ ಹಣ ಗಳಿಸುವ ಅಡ್ವೈಸ್ ಮಾಡಿದ್ರಂತೆ. ಅವತ್ತು ಕರುಣ್ ನಾಯರ್, ಆ ಹಾದಿ ತುಳಿಯಲಿಲ್ಲ.
ಗುಡ್ ಬೈ ಹೇಳಿ ಹಣ ಮಾಡು
ನನಗೆ ಈಗಲೂ ನೆನಪಿದೆ. ಟೀಮ್ ಇಂಡಿಯಾ ಕ್ರಿಕೆಟರ್ ಒಬ್ಬರು ನನಗೆ ಕರೆ ಮಾಡಿದ್ದರು. ಈ ಲೀಗ್ ಆಡುವುದರಿಂದ ಹಣ ಬರುತ್ತೆ. ಹೀಗಾಗಿ ನನಗೆ ನಿವೃತ್ತಿಯಾಗುವಂತೆ ಸಲಹೆ ನೀಡಿದರು. ಲೀಗ್ ಆಡುವುದರಿಂದ ಆರ್ಥಿಕವಾಗಿ ಸುರಕ್ಷಿತವಾಗಿಸುತ್ತದೆ ಎಂದು ತಿಳಿಸಿದರು. ಅದನ್ನ ಮಾಡುವುದು ಸುಲಭವಾಗಿತ್ತು. ಹಣ ಏನೇ ಇರಲಿ, ಅಷ್ಟು ಸುಲಭವಾಗಿ ಬಿಟ್ಟುಕೊಡುವುದಕ್ಕೆ ನನಗೆ ಮನಸ್ಸಿರಲಿಲ್ಲ-ಕರುಣ್ ನಾಯರ್, ಕ್ರಿಕೆಟರ್
ಅವತ್ತು ಕರುಣ್ ನಾಯರ್ ಆತನ ಸಲಹೆ ಸ್ವೀಕರಿಸಿದ್ರೆ ಸುಲಭಕ್ಕೆ ಹಣ ಸಿಗುತ್ತಿತ್ತು. ಕರುಣ್ ಆ ಬಗ್ಗೆ ಮನಸ್ಸು ಮಾಡಲಿಲ್ಲ. ಟೀಮ್ ಇಂಡಿಯಾಗೆ ಮತ್ತೆ ಆಡಬೇಕೆಂಬ ಅಚಲ ಪ್ರಯತ್ನ ಮಾಡಿದ್ರು. ದೇಶಿ ಕ್ರಿಕೆಟ್ನಲ್ಲಿ ರನ್ ಹೊಳೆಯನ್ನೇ ಹರಿಸಿದರು. ಸಿಕ್ಕ ಪ್ರತಿ ಅವಕಾಶದಲ್ಲೂ ತಾನೇನು ಮಾಡಬಲ್ಲೇ ಅನ್ನೋದನ್ನ ತೋರಿಸಿಕೊಟ್ಟರು..
ಇದನ್ನೂ ಓದಿ: ಕ್ರಿಕೆಟ್ ಆಟದ ವೇಳೆ ವಿರಾಟ್ ಕೊಹ್ಲಿ ತಿನ್ನುವ ಚಾಕೊಲೇಟ್ ಬೆಲೆ ಎಷ್ಟು?
ಕರುಣ್ ಯಾರು ಅನ್ನೋದನ್ನೇ ಮರೆತಿದ್ದ ಮಾಜಿ ಕ್ರಿಕೆಟರ್ಸ್, ಸೆಲೆಕ್ಟರ್ಗಳ ಬಾಯಲ್ಲಿ ಈಗ ಕನ್ನಡಿಗನ ಹೆಸರು ರಾರಾಜಿಸುತ್ತಿದೆ. ದಿಗ್ಗಜ ಆಟಗಾರರು ಕರುಣ್ ನಾಯರ್ ಪರ ಬ್ಯಾಟ್ ಬೀಸ್ತಿದ್ದಾರೆ. ಸಂಕಷ್ಟದ ಸಮಯದಲ್ಲಿ ಪಟ್ಟ ಪರಿಶ್ರಮಕ್ಕೆ ಇವತ್ತು ಟೀಮ್ ಇಂಡಿಯಾಗೆ ಮರಳಿದ್ದಾರೆ.
ಇದನ್ನೂ ಓದಿ: ಮಡಿಕೇರಿ ತ್ರಿವೇಣಿ ಸಂಗಮ ಮುಳುಗಡೆ.. ಅಲ್ಲಲ್ಲಿ ಸಂಪರ್ಕ ಕಟ್ ಆಗುವ ಆತಂಕ..
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ