/newsfirstlive-kannada/media/post_attachments/wp-content/uploads/2025/02/UDP_DAM.jpg)
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ಮತ್ತು ಚಾರ ಗ್ರಾಮದ ರೈತರು ಕಿಂಡಿ ಅಣೆಕಟ್ಟು ಸೇತುವೆ ಯೋಜನೆಯಿಂದ ಬಳಲುತ್ತಿದ್ದಾರೆ. ಅವೈಜ್ಞಾನಿಕ ಸೇತುವೆ ನಿರ್ಮಾಣದಿಂದ ಅಡಿಕೆ ತೋಟಗಳು ಆರೇಳು ಅಡಿ ನೀರಿನಲ್ಲಿ ಮುಳುಗಿಹೋಗಿವೆ. ರೈತರ ಪರಿಶ್ರಮದ ಬೆಳೆಗಳು ನಾಶವಾಗುತ್ತಿದೆ. ರೈತರ ಅನುಕೂಲಕ್ಕಾಗಿ ಮಾಡಿದ ಈ ಅಣೆಕಟ್ಟು ರೈತರ ಜೀವನಾಧಾರವನ್ನೇ ಕೊಚ್ಚಿ ಹೋಗುವಂತೆ ಮಾಡಿದೆ.
ಕೃತಕ ನೆರೆಯಿಂದ 6 ರಿಂದ 7 ಅಡಿ ನೀರು ಕೃಷಿ ಜಮೀನುಗಳಲ್ಲಿ ನುಗ್ಗಿದೆ. ಕೃಷಿಕರು ನೀರಿನಲ್ಲಿ ಈಜಾಡಿಕೊಂಡು ಹೊಲದ ಕೆಲಸ ಮಾಡುತ್ತಾರೆ. ಮಳೆಗಾಲ ಅಲ್ಲದಿದ್ದರೂ ಬದಲಾಗಿ ಒಂದು ಅವೈಜ್ಞಾನಿಕ ಯೋಜನೆಯಿಂದ ಈ ದುರಂತ ನಡೆದಿದೆ. ರೈತರ ಅನುಕೂಲಕ್ಕಾಗಿ ಮಾಡಿದ ಯೋಜನೆ ಇದೀಗ ರೈತರ ಬದುಕನ್ನೆ ಕಸಿದಿದೆ.
ಇದು ಕಿಂಡಿ ಅಣೆಕಟ್ಟು ಸೇತುವೆ ಯೋಜನೆ. ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕುಚ್ಚೂರು ಮತ್ತು ಚಾರ ಗ್ರಾಮದ ಗಡಿಭಾಗದಲ್ಲಿ ನಿರ್ಮಾಣವಾಗ್ತಿದೆ. ಸುಮಾರು 88 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಆಗ್ತಿರುವ ಈ ಡ್ಯಾಂನಿಂದ ಹತ್ತಾರು ಸಮಸ್ಯೆ ತಲೆದೋರಿವೆ. ಯೋಜನೆ ಪೂರ್ಣಗೊಂಡು ವರ್ಷ ಕಳೆಯುವ ಮುನ್ನವೇ ರೈತಾಪಿ ವರ್ಗಕ್ಕೆ ಕಂಟಕ ಸೃಷ್ಟಿಸಿದೆ.
ಸಣ್ಣ ನೀರಾವರಿ ಮತ್ತು ಅಂತರ್ಜಲ ನಿರ್ವಹಣಾ ಇಲಾಖೆ ನಡೆಸಿದ ಈ ಯೋಜನೆ.. ಒಂದು ವರ್ಷ ಕಳೆಯೋದ್ರೊಳಗಾಗಿ ರೈತರಿಗೆ ಕಂಟಕವಾಗಿ ಮಾರ್ಪಟ್ಟಿದೆ.. ಅಣೆಕಟ್ಟಿನಲ್ಲಿ 5 ಮೀಟರ್ ನೀರು ನಿಂತಾಗಲೇ ಸಮೀಪದ 4.70 ಎಕರೆ ಅಡಿಕೆ ತೋಟಗಳಿಗೆ ನೀರು ಉಕ್ಕಿ ಹರಿಯುತ್ತಿದೆ. ಕೃಷಿಕರಾದ ಸಚಿನ್ರವರ 4 ಎಕರೆ ಹಾಗೂ ಚಂದ್ರಣ್ಣ ಎಂಬುವವರ 70 ಸೆನ್ಸ್ ಅಡಿಕೆ ತೋಟ ಜಲಾವೃತವಾಗಿವೆ.
ಆರೋಪಗಳ ‘ಕಿಂಡಿ’!
- ಹೊಳೆಯ ಆಳ, ಅಗಲ, ಹರಿವಿನ ಅಧ್ಯಯನ ಮಾಡಿಲ್ಲ
- ನೀರು ತಡೆಹಿಡಿಯಲು ಸೂಕ್ತ ತಡೆಗೋಡೆಯ ನಿರ್ಮಿಸಿಲ್ಲ
- ಸ್ಥಳೀಯ ರೈತರ ಜತೆ ಸಮಾಲೋಚನೆ ನಡೆಸದೆ ಕೆಲಸ
- ಹಾನಿಗೊಳಗಾದ ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ
ಇದನ್ನೂ ಓದಿ: ಚಿಗಳ್ಳಿ ದೀಪ ಆರುವ 14 ದಿನಗಳ ಹಿಂದಷ್ಟೇ ನಡೆದಿತ್ತು ನೋವಿನ ಘಟನೆ.. ಈ ನಂದಾದೀಪದ ಇತಿಹಾಸವೇನು?
ವರ್ಷಗಳ ಕಷ್ಟದ ಕೃಷಿ, ಜಲಸ್ವಾಹ ಆಗ್ತಿದೆ. ಮಳೆ ಬಂದಾಗಲೂ ಇಷ್ಟು ಹೊತ್ತು ನೆರೆ ನೀರು ನಿಲ್ಲೋದಿಲ್ಲ. ಅಣೆಕಟ್ಟಿನಿಂದಾಗಿ ಸಮಸ್ಯೆಗೊಳಗಾದ ಜಮೀನನ್ನ ಸರ್ಕಾರವೇ ಸ್ವಾಧೀನಪಡಿಸಿ ಪರಿಹಾರ ನೀಡಲಿ ಅನ್ನೋ ಬೇಡಿಕೆ ಕೃಷಿಕರು ಬೇಡಿಕೆ ಇಡ್ತಿದ್ದಾರೆ.
88 ಕೋಟಿ ರೂಪಾಯಿ ಯೋಜನೆ ರೈತರಿಗೆ ವರವಾಗುವ ಬದಲು ಶಾಪವಾಗ್ತಿದೆ. ಅಧಿಕಾರಿಗಳ ಅಸಡ್ಡೆ, ವೈಜ್ಞಾನಿಕ ಅಧ್ಯಯನದ ಕೊರತೆ, ಸ್ಥಳೀಯರ ಅಭಿಪ್ರಾಯಕ್ಕೆ ಸ್ಪಂದಿಸದಿರುವುದು ಗ್ರಾಮೀಣ ಅಭಿವೃದ್ಧಿಯ ಯೋಜನೆಯೊಂದಕ್ಕೆ ಕಪ್ಪು ಚುಕ್ಕೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ