/newsfirstlive-kannada/media/post_attachments/wp-content/uploads/2024/12/KULDEEP_SEN_1.jpg)
ಐಪಿಎಲ್ನಿಂದ ಹಲವು ಆಟಗಾರರ ಜೀವನವೇ ಬದಲಾಗಿದೆ. ಪಾಂಡ್ಯ ಬ್ರದರ್ಸ್ನಿಂದ ಹಿಡಿದು ಮುಂಬೈನ ರಸ್ತೆ ಬದಿಯಲ್ಲಿ ಪಾನಿಪೂರಿ ಮಾರಿದ್ದ ಜೈಸ್ವಾಲ್, ರಿಂಕು ಸಿಂಗ್ವರೆಗೆ ಸಾಲು ಸಾಲು ಆಟಗಾರರ ಬದುಕು ಬದಲಾಗಿದೆ. ಒಂದೊತ್ತಿನ ಊಟಕ್ಕೂ ಪರಿತಪಿಸಿದವರು, ತಮ್ಮ ಸಾಮರ್ಥ್ಯದಿಂದ ಕೋಟ್ಯಧಿಪತಿಗಳು ಆಗಿದ್ದಾರೆ. ಇಂಥವರಲ್ಲಿ ಕುಲ್ದೀಪ್ ಸೇನ್ ಕೂಡ ಒಬ್ಬರು. ಹಾಗಾದ್ರೆ, ಕುಲ್ದೀಪ್ ಸೇನ್ ಸಾಧನೆಯ ಆಫ್ ದ ಫೀಲ್ಡ್ ಕಥೆ ಏನು?
ಕ್ರೀಡಾಲೋಕದಲ್ಲಿ ರಾತ್ರೋರಾತ್ರಿ ಸ್ಟಾರ್ಗಳಾದ ಸಾಕಷ್ಟು ಸಾಧಕರಿದ್ದಾರೆ. ಒಂದೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದವರು ಊಹಿಸಲಾರದಷ್ಟು ಎತ್ತರಕ್ಕೇರಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದವರಿದ್ದಾರೆ. ಭಾರತೀಯ ಕ್ರಿಕೆಟ್ನಲ್ಲಿ ಇಂತಹ ಹಲವು ಸ್ಪೂರ್ತಿದಾಯಕ ಕಥೆ ಸಿಗುತ್ತವೆ. ಆ ಪಟ್ಟಿಗೆ ಹೊಸ ಸೇರ್ಪಡೆ ಈ ಕುಲ್ದೀಪ್ ಸೇನ್.
ಇದನ್ನೂ ಓದಿ:IPL Mega Auction; ಅದೃಷ್ಟ ಲಕ್ಷ್ಮಿ.. ರೋಹಿತ್ ಟೀಮ್ ಸೇರಿದ ಧೋನಿಯ ನೆಚ್ಚಿನ ಬೌಲರ್!
ಕಳೆದ ಆವೃತ್ತಿಯಲ್ಲೇ ವೇಗಿ ಕುಲ್ದೀಪ್ ಸೇನ್ ಹೆಸರು ಕ್ರೀಡಾಭಿಮಾನಿಗಳು ಕೇಳಿದ್ದಾರೆ. ಈತನ ಆಟವನ್ನು ನೋಡಿ ಕೊಂಡಾಡಿದ್ದಾರೆ. ನೋಡ ನೋಡುತ್ತಿದ್ದಂತೆ ಈ ಕುಲ್ದೀಪ್ ಟೀಮ್ ಇಂಡಿಯಾ ಪರವೂ ಡೆಬ್ಯು ಮಾಡಿದ್ದರು. ಆದ್ರೆ, ಈತನ ಕಡು ಕಷ್ಟ ಮಾತ್ರ ತೀರಿರಲಿಲ್ಲ. ಆದ್ರೀಗ ಮೆಗಾ ಹರಾಜಿನಲ್ಲಿ ಸೇಲಾದ ಬಳಿಕ ಕುಲ್ದೀಪ್ ಜೀವನ ಬದಲಾಗಿದೆ.
ಕ್ಷೌರಿಕನ ಕುಲ್ದೀಪ್ ಸೇನ್ ಕ್ರಿಕೆಟರ್ ಆಗಿದ್ದೇ ರೋಚಕ..!
ಕುಲದೀಪ್ ಸೇನ್.. ಕಡು ಬಡತನದಿಂದ ಬೆಳೆದ ಪ್ರತಿಭೆ. ಚಿಕ್ಕಂದಿನಿಂದ ಕ್ರಿಕೆಟರ್ ಆಗೋ ಕನಸು ಕಂಡಿದ್ದ ಮಧ್ಯಪ್ರದೇಶದ ರೇವಾ ಜಿಲ್ಲೆಯ ಹರಿಹಾಪುರದ ಕುಲ್ದೀಪ್ ಸೇನ್ಗೆ ಬಡತನ ದೊಡ್ಡ ತಡೆಗೋಡೆ ಆಗಿತ್ತು. ಕ್ಷೌರಿಕ ವೃತ್ತಿಯನ್ನ ಮಾಡುತ್ತಿದ್ದ ತಂದೆಯ ಆದಾಯ ಜೀವನ ನಡೆಸೋಕೆ ಆಗುತ್ತಿರಲಿಲ್ಲ. ಇಂತಹ ಕಡು ಬಡತನದ ನಡುವೆ ಕುಲ್ದೀಪ್ ಸೆನ್ ಕ್ರಿಕೆಟರ್ ಆಗಿದ್ದೇ ರೋಚಕ.
ಅಂದು ಕುಲ್ದೀಪ್ಗೆ 500 ರೂ.ಗೆ ನೋ ಎಂದಿದ್ದ ಅಪ್ಪ..!
ಚಿಕ್ಕಂದಿನಿಂದ ಕ್ರಿಕೆಟ್ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದ ಕುಲ್ದೀಪ್, 8ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಆರಂಭಿಸಿದರು. ಒಂದು ಬಾರಿ ಕ್ಷೌರಿಕ ವೃತ್ತಿ ಮಾಡ್ತಿದ್ದ ತಂದೆಯ ಕ್ರಿಕೆಟ್ ಆಡಲು 500 ರೂಪಾಯಿ ಕೇಳಿ ಹಿಗ್ಗಾಮುಗ್ಗ ಬೈಸಿಕೊಂಡಿದ್ರು. ಅಂದು ಕ್ರಿಕೆಟ್ನಿಂದ ಮಗನ ಜೀವನ ಹಾಳಾಗುತ್ತೆ. ಹಣವೂ ವ್ಯರ್ಥವಾಗುತ್ತೆ ಎಂದು ಅವರ ತಂದೆ ಯೋಚಿಸಿದ್ದರು. ಆದ್ರೀಗ ಅದೇ ಮಗ ಕ್ರಿಕೆಟ್ನಿಂದ ಲಕ್ಷಾಧೀಶನಾಗಿದ್ದಾನೆ. ತಂದೆಯನ್ನ ಹೆಮ್ಮೆ ಪಡುವಂತೆ ಮಾಡಿದ್ದಾನೆ.
ಬ್ಯಾಟ್ಸ್ಮನ್ ಆಗಲು ಬಯಸಿದ್ದವ ಆಗಿದ್ದು ಬೌಲರ್.!
ಕ್ರಿಕೆಟರ್ ಆಗೋ ಕನಸು ಕಂಡಿದ್ದ ಸೇನ್ಗೆ ಬ್ಯಾಟ್ಸ್ಮನ್ ಆಗಲು ಬಯಸಿದ್ದರು. ಆದ್ರೆ, ಬಾಲ್ಯದ ಕೋಚ್ ಅರಿಲ್ ಆ್ಯಂಟೋನಿ, ಬೌಲಿಂಗ್ ಮಾಡಲು ಸೂಚಿಸಿದ್ದರು. ಕೋಚ್ ಮಾತು ಕೇಳಿದ ಕುಲ್ದೀಪ್, ಬೌಲಿಂಗ್ನಲ್ಲಿ ಮಿಂಚಿದರು. ಬಡವ ಎಂಬ ಕಾರಣಕ್ಕೆ ಕೋಚ್, ಕುಲ್ದೀಪ್ ಸೇನ್ಗೆ ಉಚಿತ ಟ್ರೈನಿಂಗ್ ನೀಡಿದ್ದರು. ಕ್ಲಬ್ ಕ್ರಿಕೆಟ್ ಟು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದ ಕುಲ್ದೀಪ್ಗೆ ಅವತ್ತು ಉತ್ತಮ ಶೂ ಇರಲಿಲ್ಲ. ಆಗ ಕುಲ್ದೀಪ್ ಕಷ್ಟ ನೋಡಿದ್ದ ಟೀಮ್ ಇಂಡಿಯಾ ಮಾಜಿ ವೇಗಿ ಈಶ್ವರ್ ಪಾಂಡೆ ತಮ್ಮ ಶೂ ನೀಡಿದ್ದರು. ಇಲ್ಲಿಂದ ಆರಂಭವಾದ ಜರ್ನಿ ಬಳಿಕ ಐಪಿಎಲ್ಗೆ ಕಾಲಿಡುವಂತೆ ಮಾಡಿತ್ತು.
3 ವರ್ಷ 20 ಲಕ್ಷ.. ಈಗ 80 ಲಕ್ಷಕ್ಕೆ ಪಂಜಾಬ್ ಪಾಲು..!
2018-19ರಲ್ಲಿ ರಣಜಿ ಟ್ರೋಫಿಗೆ ಪಾದಾರ್ಪಣೆ ಮಾಡಿದ್ದ ಕುಲ್ದೀಪ್ ಸೇನ್ ಐಪಿಎಲ್ ಬಾಗಿಲು ತೆರೆಯಲು ಕಾದಿದ್ದು 3 ವರ್ಷ. 2022ರ ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ಗೆ 20 ಲಕ್ಷಕ್ಕೆ ಸೇಲಾಗಿದ್ದ ಕುಲ್ದೀಪ್, ಅದೇ ವರ್ಷ ಸಿಕ್ಕ ಅವಕಾಶದಲ್ಲಿ ಮ್ಯಾಚ್ ವಿನ್ನರ್ ಅನ್ನೋದನ್ನ ನಿರೂಪಿಸಿವರು. ಅಷ್ಟೇ ಅಲ್ಲ, ಈ ಪರ್ಫಾಮೆನ್ಸ್ ಆಧಾರದಲ್ಲಿ ಟೀಮ್ ಇಂಡಿಯಾಗೂ ಎಂಟ್ರಿ ಕೊಟ್ಟಿದ್ದರು. ಬಾಂಗ್ಲಾ ಎದುರು ಏಕದಿನಕ್ಕೆ ಡೆಬ್ಯೂ ಮಾಡಿದ್ದರು. ಆದರೆ, ಜೀವನ ಮಾತ್ರ ಬದಲಾಗಲಿಲ್ಲ. ಇದೀಗ ಐಪಿಎಲ್ನಲ್ಲಿ 80 ಲಕ್ಷಕ್ಕೆ ಪಂಜಾಬ್ ಕಿಂಗ್ಸ್ ಪಾಲಾದ ಬಳಿಕ ಕಷ್ಟಗಳು ದೂರಾಗಿ ಜೀವನ ಬದಲಾಗುವ ಭರವಸೆ ಹುಟ್ಟಿದೆ.
ಮಗ ಮೆಗಾ ಹರಾಜಿನಲ್ಲಿ 80 ಲಕ್ಷಕ್ಕೆ ಸೇಲಾದ್ರೂ, ಅಪ್ಪ ಮಾತ್ರ ಜೀವನಕ್ಕೆ ದಾರಿ ದೀಪವಾದ ಕ್ಷೌರಿಕನ ಕೆಲಸ ಬಿಟ್ಟಿಲ್ಲ. ಇಂದಿಗೂ ತಂದೆ ಅದೇ ವೃತ್ತಿಯನ್ನ ಮುಂದುವರೆಸಿದ್ದಾರೆ. ಮುಂದೆ ಅದನ್ನ ಬಿಡಲ್ಲ ಅನ್ನೋ ಮಾತನ್ನೂ ಆಡುತ್ತಿದ್ದಾರೆ.
ಕಡು ಬಡತನದಲ್ಲಿ ಬೆಳೆದು ರೋಚಕ ರೀತಿಯಲ್ಲಿ ಕ್ರಿಕೆಟರ್ ಆಗಿ ರೂಪುಗೊಂಡಿರುವ ಕುಲ್ದೀಪ್ ಸೇನ್, ಜೀವನದ ಸಂಕಷ್ಟಗಳೆಲ್ಲಾ ದೂರಾಗಲಿ. ಈ ಬಾರಿಯ ಐಪಿಎಲ್ನಲ್ಲಿ ಮಿಂಚು ಹರಿಸಿ ಮತ್ತಷ್ಟು ಎತ್ತರಕ್ಕೆ ಬೆಳಯಲಿ. ಯುವ ಪೀಳಿಗೆಗೆ ಮಾದರಿ ಆಗುವಂತಾಗಲಿ ಅನ್ನೋದೇ ಎಲ್ಲರ ಆಶಯ
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ