/newsfirstlive-kannada/media/post_attachments/wp-content/uploads/2025/07/RSS.jpg)
‘ನಾಯಕರು 75 ವರ್ಷ ತುಂಬಿದ ನಂತರ ಇತರರಿಗೂ ಅವಕಾಶ ನೀಡಬೇಕು’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ ಮತ್ತೊಮ್ಮೆ ಹೇಳಿದ್ದಾರೆ.
ನಾಗ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು.. ಯಾರಾದರೂ ನಿಮಗೆ 75 ವರ್ಷ ತುಂಬಿದ್ದಕ್ಕೆ ಅಭಿನಂದನೆ ಸಲ್ಲಿಸಿದರೆ, ನೀವು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದರ್ಥ. ಇತರರಿಗೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ಒತ್ತಿ ಹೇಳಿದ್ದಾರೆ. ಭಾಗವತ್ ತಮ್ಮ ಹೇಳಿಕೆಯಲ್ಲಿ ಪ್ರಧಾನಿ ಮೋದಿ ಹೆಸರನ್ನು ಉಲ್ಲೇಖಿಸದಿದ್ದರೂ, ವಿರೋಧ ಪಕ್ಷಗಳು ಅದನ್ನು ಪ್ರಧಾನಿಗೆ ಲಿಂಕ್ ಮಾಡುತ್ತಿವೆ. ಈ ವರ್ಷದ ಸೆಪ್ಟೆಂಬರ್ನಲ್ಲಿ ಮೋದಿಗೆ 75 ವರ್ಷ ತುಂಬಲಿದೆ.
ಶಿವಸೇನಾ ನಾಯಕ ಸಂಜಯ್ ರಾವತ್, ಪ್ರತಿಕ್ರಿಯಿಸಿ.. ಪ್ರಧಾನಿ ಮೋದಿ ಅವರು ಅಡ್ವಾಣಿ, ಮುರಳಿ ಮನೋಹರ್, ಜಸ್ವಂತ್ ಸಿಂಗ್ ಅವರಂತಹ ದೊಡ್ಡ ನಾಯಕರನ್ನು ನಿವೃತ್ತಿ ಹೊಂದುವಂತೆ ಒತ್ತಾಯಿಸಿದ್ದರು. ಮೋದಿ ಈಗ ಇದನ್ನು ಅನುಸರಿಸುತ್ತಾರೋ ಇಲ್ಲವೋ ಎಂದು ನೋಡೋಣ ಎಂದಿದ್ದಾರೆ.
ನಿಯಮ ಇದೆಯಾ..?
ಬಿಜೆಪಿಯಲ್ಲಿ ರಾಜ್ಯ ಮತ್ತು ವಿಭಾಗೀಯ ಮಟ್ಟದಲ್ಲಿ ವಯಸ್ಸಿನ ಮಿತಿಗಳು ಅನ್ವಯವಾಗುತ್ತವೆ. ಆದರೆ ನಿರ್ದಿಷ್ಟ ವಯಸ್ಸಿನವರೆಗೆ ಹುದ್ದೆಯನ್ನು ಅಲಂಕರಿಸುವ ಬಗ್ಗೆ ಬಿಜೆಪಿಯಲ್ಲಿ ಯಾವುದೇ ಅಧಿಕೃತ ನಿಯಮವಿಲ್ಲ. ಕೆಲವು ಹಂತಗಳಲ್ಲಿ ವಯಸ್ಸಿನ ಮಿತಿಗಳನ್ನು ವಿಧಿಸಲಾಗಿದೆ. ಉದಾಹರಣೆಗೆ ಛತ್ತೀಸ್ಗಢ ಬಿಜೆಪಿ ಮಂಡಲ ಅಧ್ಯಕ್ಷ ಹುದ್ದೆಗೆ 35 ರಿಂದ 45 ವರ್ಷಗಳು ಮತ್ತು ಜಿಲ್ಲಾ ಅಧ್ಯಕ್ಷ ಹುದ್ದೆಗೆ 45 ರಿಂದ 60 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 75 ವರ್ಷಕ್ಕಿಂತ ಮೇಲ್ಪಟ್ಟ ಅನೇಕ ಹಿರಿಯ ನಾಯಕರಿಗೆ ಟಿಕೆಟ್ ನೀಡಲಿಲ್ಲ. ಇದರಲ್ಲಿ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಸುಮಿತ್ರಾ ಮಹಾಜನ್, ಕಲ್ರಾಜ್ ಮಿಶ್ರಾ ಮುಂತಾದ ಅನೇಕ ನಾಯಕರು ಸೇರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ