/newsfirstlive-kannada/media/post_attachments/wp-content/uploads/2025/02/END-OF-MAHAKUMBA.jpg)
ಪ್ರಯಾಗ್ರಾಜ್ ಮಹಾಕುಂಭಮೇಳ ಶತಮಾನಕ್ಕೊಮ್ಮೆ ಬರುವ ಮಹಾಸುದಿನ.. 144 ವರ್ಷಗಳಿಗೊಮ್ಮೆ ಜರುಗುವ ಧಾರ್ಮಿಕ, ಸಾಂಸ್ಕೃತಿಕ ವೈಭವೋತ್ಸವ.. ಇವತ್ತು ಮಹಾಶಿವರಾತ್ರಿಯಂದು ಮಹಾಕುಂಭಮೇಳದ 6ನೇ ಹಾಗೂ ಕೊನೆಯ ಶಾಹಿಸ್ನಾನ ನೆರವೇರಲಿದೆ. ಅಮೃತಸ್ನಾನದೊಂದಿಗೆ ಮಹಾಕುಂಭಮೇಳಕ್ಕೆ ಅಧಿಕೃತವಾಗಿ ತೆರೆ ಬೀಳಲಿದೆ. ಇವತ್ತು ಕೋಟಿಗಟ್ಟಲೆ ಭಕ್ತರು ಪುಣ್ಯಸ್ನಾನ ಮಾಡುವ ನಿರೀಕ್ಷೆ ಇದೆ.
ಶಿವನ ಊರು, ಶಕ್ತಿ ಸ್ಥಳ ಪ್ರಯಾಗ್ರಾಜ್ನಲ್ಲಿ ಹರಹರ ಮಹಾದೇವ ಮಂತ್ರ ಮೇಳೈಸ್ತಿದೆ.. ವಿಶ್ವದ ಮೂಲೆ ಮೂಲೆಯಿಂದ ಬರುವ ಕೋಟ್ಯನುಕೋಟಿ ಭಕ್ತರ ಜಾತ್ರೆಯಾಗಿದೆ.. ಅಸಂಖ್ಯ ಭಕ್ತಗಣ ತ್ರಿವೇಣಿ ಸಂಗಮದಲ್ಲಿ ಮಿಂದು ಜಗದೀಶನ ಸ್ಮರಣೆಯಲ್ಲಿದೆ. ಇಂದು ಮಹಾಶಿವರಾತ್ರಿ. ಮಹಾಮಜ್ಜನಕ್ಕೆ ಸಿದ್ಧವಾಗಿದೆ ಅಸಂಖ್ಯ ಭಕ್ತಗಣ.
ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪವಿತ್ರಸ್ನಾನ ಎನಿಸಿದ್ದು ಕೋಟ್ಯಂತರ ಭಕ್ತರ ಸಮಾಗಮಕ್ಕೆ ಸಾಕ್ಷಿಯಾಗಿದೆ. ಮಹಾಕುಂಭಮೇಳಕ್ಕೆ ಇದುವರೆಗೂ 63.5 ಕೋಟಿಗೂ ಹೆಚ್ಚು ಭಕ್ತರು ಭೇಟಿ ನೀಡಿದ್ದಾರೆ. ಈಗಾಗಲೇ 44 ದಿನಗಳು ಪುಣ್ಯಸ್ನಾನಗಳು ನೆರವೇರಿದ್ದು, ಇವತ್ತು ಮಹಾಶಿವರಾತ್ರಿಯಂದು 6ನೇ ಅಮೃತಸ್ನಾನದೊಂದಿಗೆ ಮಹಾಕುಂಭಮೇಳ ಸಂಪನ್ನಗೊಳ್ಳಲಿದೆ. ಇಂದು ಭಕ್ತಸಾಗರವೇ ಬಂದು ಸೇರುವ ನಿರೀಕ್ಷೆ ಇದ್ದು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮಹಾಕುಂಭಮೇಳಕ್ಕೆ ಆಗಮಿಸುವ ಯಾತ್ರಿಗಳಿಗೆ ಘಾಟ್ ವ್ಯವಸ್ಥೆ ಮಾಡಲಾಗಿದೆ. ಇನ್ನು ನಿನ್ನೆ ಸಂಜೆ 4 ಗಂಟೆಯಿಂದಲೇ ತ್ರಿವೇಣಿ ಸಂಗಮಕ್ಕೆ ವಾಹನ ಸಂಚಾರ ನಿಷೇಧ ಮಾಡಲಾಗಿದ್ದು ಪಾಸ್ ಹೊಂದಿದ ವಾಹನಗಳಿಗೆ ಮಾತ್ರ ಪಾರ್ಕಿಂಗ್ಗೆ ಅವಕಾಶ ನೀಡಲಾಗಿದೆ. ಹೆದ್ದಾರಿ, ಮಾರ್ಗಗಳಲ್ಲಿ 40 ಪೊಲೀಸರ ತಂಡಗಳ ನಿಯೋಜನೆ ಮಾಡಲಾಗಿದೆ. ಕಾನೂನು ಸುವ್ಯವಸ್ಥೆಗೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಕೂಡ ನಿಯೋಜಿಸಲಾಗಿದೆ. ಇನ್ನು ಇಂದು ಪ್ರಯಾಗ್ರಾಜ್ನ ಎಲ್ಲಾ ಶಿವ ಮಂದಿರಗಳಿಗೆ ಭಕ್ತರು ಭೇಟಿ ನೀಡಲು ಅವಕಾಶ ನೀಡಲಾಗಿದೆ.
ಈ ಮಧ್ಯೆ ಉದ್ಯಮಿ ಮುಖೇಶ್ ಅಂಬಾನಿಯ ಏಕೈಕ ಪುತ್ರಿ ಇಶಾ ಅಂಬಾನಿ ಪತಿ ಆನಂದ್ ಪಿರಮಲ್ ಜೊತೆ ಮಹಾಕುಂಭಮೇಳದಲ್ಲಿ ಭಾಗಿಯಾಗಿ ತೀರ್ಥಸ್ನಾನ ಮಾಡಿದ್ದಾರೆ. ಇನ್ನು ಇದೇ ವೇಳೆ ಹಿಮಾಚಲಪ್ರದೇಶ ಸಿಎಂ ಸುಖ್ವಿಂದರ್ ಸಿಂಗ್ ಸುಖು ಕುಟುಂಬಸ್ಥರ ಜೊತೆ ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ.
ಕಳೆದ ಜನವರಿ 13ರಿಂದ ಆರಂಭವಾಗಿದ್ದ ಮಹಾಕುಂಭಮೇಳ ಇವತ್ತಿಗೆ 45 ದಿನಗಳನ್ನು ಪೂರೈಸಲಿದೆ. ಶತಮಾನದ ಸಂಭ್ರಮದಲ್ಲಿ ಸಾಧು-ಸಂತರು, ನಟ-ನಟಿಯರು, ರಾಜಕಾರಣಿಗಳು ಸೇರಿ ಸಾಮಾನ್ಯ ಜನರು ಭಾಗಿಯಾಗಿದ್ದಾರೆ. ವಿಶೇಷ ಅಂದ್ರೆ ಇವತ್ತು ಮಹಾಶಿವರಾತ್ರಿ ಪ್ರಯುಕ್ತ ನಡೆಯೋ ಕೊನೆಯ ಪುಣ್ಯಸ್ನಾನ ಅತ್ಯಂತ ವಿಶೇಷವಾಗಿದ್ದು ಪವಿತ್ರಸ್ನಾನ ಎನಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ