/newsfirstlive-kannada/media/post_attachments/wp-content/uploads/2025/02/Prayagraj-Mahakumbhmela-2.jpg)
50 ಕೋಟಿಗೂ ಅಧಿಕ ಭಕ್ತರು ಪುಣ್ಯ ಸ್ನಾನ ಮಾಡಿರುವ ಪ್ರಯಾಗ್ರಾಜ್ ಮಹಾಕುಂಭಮೇಳದ ಅಖಾಡದಲ್ಲಿ ಆಂತರಿಕ ಘರ್ಷಣೆ ಭುಗಿಲೆದ್ದಿದೆ. ದಾಳಿಗೆ ಪ್ರತಿದಾಳಿ ನಡೆಯುತ್ತಾ ಇದ್ದು, ಕಿನ್ನರ ಅಖಾಡದ ಮಹಾಮಂಡಲೇಶ್ವರ ಕಲ್ಯಾಣಿ ನಂದಗಿರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕಿನ್ನರ ಅಖಾಡದ ಮಹಾಮಂಡಲೇಶ್ವರ ಕಲ್ಯಾಣಿ ನಂದಗಿರಿ ಅವರು ಕಾರಿನಿಂದ ಇಳಿಯುವಾಗ ಕೆಲವರು ಆಶೀರ್ವಾದ ಪಡೆಯಲು ಆಗಿದ್ದಾರೆ. ಆಶೀರ್ವಾದ ಪಡೆಯುವ ನೆಪದಲ್ಲಿ ಚಾಕುವಿನಿಂದ ಮಾರಣಾಂತಿಕ ದಾಳಿ ಮಾಡಲಾಗಿದೆ.
ಕಲ್ಯಾಣಿ ನಂದಗಿರಿ ಅವರ ರಕ್ಷಣೆಗೆ ಬಂದ ಮೂವರು ಕಲ್ಯಾಣಿ ನಂದಗಿರಿ ಶಿಷ್ಯರ ಮೇಲೂ ಹಲ್ಲೆ ಮಾಡಲಾಗಿದ್ದು, ಗಾಯಾಳುಗಳನ್ನು ಕುಂಭಮೇಳದ ಸೆಂಟ್ರಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ಮಾಡಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಐಜಿ ವೈಭವ್ ಕೃಷ್ಣ ಭರವಸೆ ನೀಡಿದ್ದಾರೆ.
‘ಕಿನ್ನರ’ ಘರ್ಷಣೆಗೆ ಕಾರಣವೇನು?
ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಬಾಲಿವುಡ್ನ ಮಾಜಿ ನಟಿ ಮಮತಾ ಕುಲಕರ್ಣಿ ಅವರನ್ನು ನೇಮಿಸಲಾಗಿತ್ತು. ಇದನ್ನು ಹೇಮಾಂಗಿ ಸಖಿ ಮಾ ವಿರೋಧಿಸಿದ್ದರು. ಹಣ ಪಡೆದು ಮಮತಾ ಕುಲಕರ್ಣಿಯನ್ನು ಮಹಾಮಂಡಲೇಶ್ವರ ಆಗಿ ನೇಮಿಸಲಾಗಿದೆ ಎಂದು ಹೇಮಾಂಗಿ ಸಖಿ ಮಾ ಹೇಳಿದ್ದರು.
ಇದನ್ನೂ ಓದಿ: ಬಾಲಿವುಡ್ ಸ್ಟಾರ್ ನಟನ ‘ಒನ್ ನೈಟ್’ ಸೀಕ್ರೆಟ್ ಬಿಚ್ಚಿಟ್ಟ ಮಮತಾ ಕುಲಕರ್ಣಿ; ಸನ್ಯಾಸಿ ತಂದ ಸಂಕಷ್ಟ!
ಪ್ರಯಾಗ್ರಾಜ್ ಸೆಕ್ಟರ್ 16ರಲ್ಲಿ ಕಿನ್ನರ ಅಖಾಡದ ಶಿಬಿರ ಇದೆ. ಆದರೆ ಹೇಮಾಂಗಿ ಸಖಿ ಮಾ, ಪ್ರಯಾಗರಾಜ್ನ ಸೆಕ್ಟರ್ 8 ರಲ್ಲಿ ತಮ್ಮ ಶಿಬಿರ ತೆರೆದಿದ್ದಾರೆ. ಕಿನ್ನರ ಅಖಾಡ ಆಚಾರ್ಯ ಮಹಾಮಂಡಲೇಶ್ವರ ಲಕ್ಷ್ಮಿ ನಾರಾಯಣ್ ತ್ರಿಪಾಠಿ ತಂಡದಿಂದ ಈ ದಾಳಿ ನಡೆದಿದೆ. ಲಕ್ಷ್ಮಿನಾರಾಯಣ್ ತ್ರಿಪಾಠಿ ತಮ್ಮ ಜೊತೆ 50-60 ಜನರನ್ನು ಕರೆತಂದು ದಾಳಿ ನಡೆಸಿದ್ದರು ಎಂದು ಹೇಮಾಂಗಿ ಸಖಿ ಮಾ ಆರೋಪಿಸಿದ್ದಾರೆ.
ಕಳೆದ ಫೆಬ್ರವರಿ 8ರಂದು ಹೇಮಾಂಗಿ ಸಖಿ ಮಾ ಮೇಲೆ ಲಕ್ಷ್ಮಿ ನಾರಾಯಣ್ ತ್ರಿಪಾಠಿ ತಂಡ ಸಿಟ್ಟಿಗೆದ್ದು ದಾಳಿ ಮಾಡಿತ್ತು. ಈಗ ಪ್ರತಿದಾಳಿಯಾಗಿ ಕಲ್ಯಾಣಿ ನಂದಗಿರಿ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದಾರೆ ಎನ್ನಲಾಗಿದೆ. ಮಹಾಕುಂಭಮೇಳದ ಅಖಾಡದಲ್ಲಿ ದಾಳಿ- ಪ್ರತಿ ದಾಳಿಯ ಘಟನೆಗಳು ವರದಿಯಾಗುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ