/newsfirstlive-kannada/media/post_attachments/wp-content/uploads/2025/01/Mahakumbhamela.jpg)
ಪ್ರಯಾಗ್ರಾಜ್: ಸದ್ಯ ನಡೆಯುತ್ತಿರೋ ಪ್ರಯಾಗ್ರಾಜ್ ಮಹಾ ಕುಂಭಮೇಳದಲ್ಲಿ ಅನೇಕರು ಕಲ್ಪವಾಸ ವ್ರತದಲ್ಲಿ ನಿರತರಾಗಿದ್ದಾರೆ. ಹುಣ್ಣಿಮೆಯಿಂದ ಹುಣ್ಣಿಮೆವರೆಗೂ ಒಂದು ಹೊತ್ತಿನ ಉಪವಾಸದ ಜೊತೆಗೆ ತ್ರಿವೇಣಿ ಸಂಗಮದಲ್ಲಿ ಸ್ನಾನಗೈದ್ರೆ ಹೆಚ್ಚಿನ ಪುಣ್ಯ ಮತ್ತು ಮೋಕ್ಷ ಪ್ರಾಪ್ತಿ ಅನ್ನೋ ನಂಬಿಕೆ ಇದೆ. ಇನ್ನು, ಇದೇ 29ಕ್ಕೆ ಮೌನಿ ಅಮಾವಾಸ್ಯೆಯಂದು ಪುಣ್ಯಸ್ನಾನಕ್ಕೆ 8-10 ಕೋಟಿ ಜನ ಆಗಮಿಸುವ ನಿರೀಕ್ಷೆ ಇದೆ.
ಎಲ್ಲೆಲ್ಲೂ ಮಹಾದೇವನ ಭಜನೆ ನಡೆಯುತ್ತಿದೆ. ಕೋಟಿ-ಕೋಟಿ ಭಕ್ತರ ಮಹಾ ಜಾತ್ರೆಯಾಗಿ ಮಾರ್ಪಟ್ಟ ಶತಮಾನದ ಮಹಾಕುಂಭ ಮೇಳದಲ್ಲಿ ಭಾಗಿಯಾಗಿ ಭಕ್ತ ಸಾಗರ ಜಗನ್ನಾಥನ ಸ್ಮರಣೆಯಲ್ಲಿ ಮಿಂದೇಳುತ್ತಿದೆ. ಪ್ರಯಾಗ್ ರಾಜ್ನಲ್ಲಿ 5ನೇ ದಿನ ಕುಂಭಮೇಳದಲ್ಲಿ ಅಸಂಖ್ಯ ಭಕ್ತಗಣ ಪವಿತ್ರ ಸ್ನಾನ ಮಾಡಿ, ಮುಕ್ಕೋಟಿ ದೇವತೆಗಳ ಒಡೆಯನಿಗೆ ಪೂಜಾ-ಕೈಂಕರ್ಯದಲ್ಲಿ ತೊಡಗಿದೆ.
ತ್ರಿವೇಣಿ ಸಂಗಮದಲ್ಲಿ ಸ್ನಾನ; ಪುಣ್ಯ-ಮೋಕ್ಷ ಪ್ರಾಪ್ತಿ ನಂಬಿಕೆ
ದಟ್ಟ ಮಂಜು, ಮಾಘಿ ಚಳಿ, ಬ್ರಾಹ್ಮಿ ಮುಹೂರ್ತ, ಗಂಗಾ-ಯಮುನಾ ಮತ್ತು ಸರಸ್ವತಿ ನದಿಗಳ ತ್ರಿವೇಣಿ ಸಂಗಮ. ಪರಮ ಪವಿತ್ರವಾದ ಪುಣ್ಯಸ್ಥಳದಲ್ಲಿ ಪವಿತ್ರ ಸ್ನಾನ ಮಾಡಲಾಗ್ತಿದೆ. ಇನ್ನೂ ಮೌನಿ ಅಮಾವಾಸ್ಯೆ ಶಾಹಿಸ್ನಾನಕ್ಕೆ ಯುಪಿಯಲ್ಲಿ ಭಾರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ. ಜೊತೆಗೆ ಪವಿತ್ರ ಸಂಗಮದಲ್ಲಿ ಕಲ್ಪವಾಸ ವ್ರತವನ್ನು ಆಚರಿಸುವ ಭಕ್ತರಿಗಾಗಿ ಕುಂಭ ಕ್ಷೇತ್ರ ಸಿದ್ಧವಾಗಿದೆ.
ಕುಂಭಮೇಳದಲ್ಲಿ ಏನಿದು ಕಲ್ಪವಾಸ?
ಒಂದು ತಿಂಗಳ ಅವಧಿಯ ಕುಂಭಮೇಳದಲ್ಲಿ ವಾಸಿಸಿ ತೀರ್ಥಸ್ಥಾನ ಮಾಡುವ, ನಾಮಜಪ ಪಠಣ, ಇತ್ಯಾದಿಗಳನ್ನ ಮಾಡುವ ಭಕ್ತ ಸಮೂಹದ ಆಚರಣೆ ಕಲ್ಪವಾಸ. ಮಾಘ ಪೂರ್ಣಿಮೆ ಅಂದ್ರೆ ಜನವರಿ 12 ರಿಂದ ಪೌಷ ಪೂರ್ಣಿಮೆ ಅಂದ್ರೆ ಫೆಬ್ರವರಿ 13ರ ವರೆಗೆ ಒಂದು ತಿಂಗಳ ಕಾಲಾವಧಿಗಳ ಕಾಲ ವ್ರತ ಆಚರಿಸಲಾಗ್ತಿದೆ. ಕೆಲ ಕಲ್ಪವಾಸಿಗಳು ಕೆಲವು ದಿನಗಳ ಕಾಲ ಹಾಗೂ ಇನ್ನು ಕೆಲವರು 12 ವರ್ಷಗಳ ವರೆಗೂ ಸಹ ಕಲ್ಪವಾಸ ಮಾಡುತ್ತಾರೆ. ಈ ವರ್ಷದ ಮಹಾಕುಂಭ ಪರ್ವಕ್ಕೆ 20-25 ಲಕ್ಷ ಕಲ್ಪವಾಸಿಗಳು ಆಗಮಿಸಲಿದ್ದಾರೆ ಅನ್ನೋ ಅಂದಾಜಿದೆ.
ಇದನ್ನೂ ಓದಿ:ಭಾನುವಾರ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ.. ಬೆಂಗಳೂರು ಪ್ರಯಾಣಿಕರಿಗೆ ಮಹತ್ವದ ಸುದ್ದಿ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ