/newsfirstlive-kannada/media/post_attachments/wp-content/uploads/2024/02/Current-Bill-Siddaramaiah.jpg)
ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಗೃಹ ಬಳಕೆಯ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಒಂದೆಡೆ 200 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರಿಗೆ ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಮತ್ತೊಂದೆಡೆ ವಿದ್ಯುತ್ ದರವನ್ನು ಕರ್ನಾಟಕ ರಾಜ್ಯ ಸರ್ಕಾರ, ಕೆಇಆರ್ಸಿ ಏರಿಕೆ ಮಾಡಿತ್ತು.
ಈಗ ಪಕ್ಕದ ಮಹಾರಾಷ್ಟ್ರ ರಾಜ್ಯದಲ್ಲಿ ಅಲ್ಲಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಕಡಿತ ಘೋಷಿಸಿದೆ. ಮುಂದಿನ 5 ವರ್ಷಗಳಲ್ಲಿ ಶೇ.26 ರಷ್ಟು ವಿದ್ಯುತ್ ದರ ಕಡಿತ ಮಾಡುವುದಾಗಿ ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಈ ವರ್ಷ ಶೇ.10 ರಷ್ಟು ವಿದ್ಯುತ್ ದರ ಕಡಿತ ಮಾಡುತ್ತೇವೆ. ಹಂತ ಹಂತವಾಗಿ ಮುಂದಿನ 5 ವರ್ಷಗಳಲ್ಲಿ ಒಟ್ಟಾರೆ ಶೇ.26 ರಷ್ಟು ವಿದ್ಯುತ್ ದರ ಕಡಿತ ಮಾಡುತ್ತೇವೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.
ಏನಂದ್ರು ಸಿಎಂ..?
ಮಹಾರಾಷ್ಟ್ರದಲ್ಲಿ ತಿಂಗಳಿಗೆ 100 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವವರ ಪ್ರಮಾಣ ಶೇ.70 ರಷ್ಟಿದೆ. ಮುಖ್ಯಮಂತ್ರಿ ಸೌರ ಕೃಷಿ ವಾಹಿನಿ ಯೋಜನೆ ಯುದ್ಧೋಪಾದಿಯಲ್ಲಿ ನಡೆಯುತ್ತಿದೆ ಎಂದು ಸಿಎಂ ಕಚೇರಿ ಹೇಳಿದೆ.
ವಿದ್ಯುತ್ ದರದ ವಿಷಯದಲ್ಲಿ ಗುಡ್ ನ್ಯೂಸ್. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ವಿದ್ಯುತ್ ದರ ಕಡಿತ ಮಾಡುತ್ತಿದ್ದೇವೆ.
ಮೊದಲ ವರ್ಷ ಶೇ.10 ರಷ್ಟು ವಿದ್ಯುತ್ ದರ ಕಡಿತ ಮಾಡುತ್ತೇವೆ. ಹಂತ ಹಂತವಾಗಿ 5 ವರ್ಷಗಳಲ್ಲಿ ಶೇ.26 ರಷ್ಟು ವಿದ್ಯುತ್ ದರ ಕಡಿತ ಮಾಡುತ್ತೇವೆ. ಮಹಾರಾಷ್ಟ್ರದ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮೀಷನ್ಗೆ ಮಹಾರಾಷ್ಟ್ರ ಎಲೆಕ್ಟ್ರಿಸಿಟಿ ಡೆವಲಪ್ ಮೆಂಟ್ ಕಾರ್ಪೋರೇಷನ್ ಲಿಮಿಟೆಡ್ನ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದಕ್ಕೆ ಧನ್ಯವಾದಗಳು. ಈ ಪ್ರಯತ್ನವನ್ನು ಹಿಂದೆಂದೂ ಮಾಡಿರಲಿಲ್ಲ. ಈ ಮೊದಲು ಶೇ.10 ರಷ್ಟು ವಿದ್ಯುತ್ ದರ ಏರಿಕೆಗೆ ಅರ್ಜಿ ಸಲ್ಲಿಸಲಾಗುತ್ತಿತ್ತು. ಈ ಬಾರಿ ವಿದ್ಯುತ್ ದರ ಇಳಿಕೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದರಿಂದ ಗೃಹ ಬಳಕೆ, ಕೈಗಾರಿಕೆ, ವಾಣಿಜ್ಯ ಉದ್ದೇಶಕ್ಕೆ ವಿದ್ಯುತ್ ಬಳಕೆ ಮಾಡುವವರಿಗೆ ಅನುಕೂಲವಾಗಲಿದೆ ಎಂದು ಸಿಎಂ ದೇವೇಂದ್ರ ಫಡ್ನವೀಸ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ.. ಭಾರೀ ಪ್ರವಾಹಕ್ಕೆ ಆರು ಬಲಿ, 20 ಜನ ನಾಪತ್ತೆ
ಮಹಾರಾಷ್ಟ್ರದಲ್ಲಿ ಸರ್ಕಾರಿ ಸ್ವಾಮ್ಯದ ಎಂಎಸ್ಇಡಿಸಿಎಲ್ ಕೂಡ ಜನರಿಗೆ ವಿದ್ಯುತ್ ಪೂರೈಸುತ್ತೆ. ಅದೇ ರೀತಿ ಖಾಸಗಿ ಕಂಪನಿಗಳಾದ ಬೆಸ್ಟ್, ಟಾಟಾ ಪವರ್, ಅದಾನಿ ಎಲೆಕ್ಟ್ರಿಸಿಟಿ ಕೂಡ ಜನರಿಗೆ ವಿದ್ಯುತ್ ಪೂರೈಸುತ್ತಾವೆ. ಈ ಖಾಸಗಿ ಕಂಪನಿಗಳಿಗೆ ಹೋಲಿಸಿದರೆ ಸರ್ಕಾರಿ ಸ್ವಾಮ್ಯದ ಎಂಎಸ್ಇಡಿಸಿಎಲ್ ಹೆಚ್ಚಿನ ದರ ವಿಧಿಸುತ್ತಿತ್ತು.
ಕೈಗಾರಿಕೆಗಳ ಸೆಳೆಯಲು ಪ್ಲಾನ್
ಮಹಾರಾಷ್ಟ್ರದ ಎಂಎಸ್ಇಡಿಸಿಎಲ್ ಸೋಲಾರ್, ಹೈಡ್ರೋ ಪವರ್ ಸೇರಿದಂತೆ ಗ್ರೀನ್ ಎನರ್ಜಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಿದೆ. ಇದರಿಂದ 66 ಸಾವಿರ ಕೋಟಿ ರೂಪಾಯಿ ಉಳಿತಾಯವಾಗುತ್ತಿದೆ. ಹೀಗಾಗಿ ಮುಂದಿನ 5 ವರ್ಷಗಳಲ್ಲಿ ಕೈಗಾರಿಕೆಯ ವಿದ್ಯುತ್ ದರದಲ್ಲಿ ಏರಿಕೆಯಾಗಲ್ಲ. ಈ ಮೂಲಕ ಮಹಾರಾಷ್ಟ್ರಕ್ಕೆ ಕೈಗಾರಿಕೆಗಳನ್ನು ಸೆಳೆಯಲು ಪ್ಲ್ಯಾನ್ ಮಾಡಲಾಗುತ್ತಿದೆ ಎಂದು ಎಂಎಸ್ಇಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಲೋಕೇಶ್ ಚಂದ್ರ ಹೇಳಿದ್ದಾರೆ.
ಇದನ್ನೂ ಓದಿ: ಸಿದ್ದು ಮುಂದೆ ಶಾಸಕರ ಸಿಟ್ಟು ಸ್ಫೋಟ.. BR ಪಾಟೀಲ್, ರಾಜು ಕಾಗೆಗೆ ಸಿಎಂ ಬುದ್ಧಿಮಾತು..!
ಕರ್ನಾಟಕ ಹೀಗಿಯೇ ಮಾಡಿದರೆ..
ಮಹಾರಾಷ್ಟ್ರ ಸರ್ಕಾರದ ಈ ವಿದ್ಯುತ್ ದರ ಕಡಿತದ ಹಾದಿಯನ್ನು ಕರ್ನಾಟಕದ ಕೆಪಿಟಿಸಿಎಲ್ ಹಾಗೂ ಎಲ್ಲ ಎಸ್ಕಾಂಗಳು ಹಿಡಿದರೆ ರಾಜ್ಯದ ಜನರಿಗೂ ಅನುಕೂಲವಾಗಲಿದೆ. ಕರ್ನಾಟಕದಲ್ಲಿ ಗೃಹ ಜ್ಯೋತಿಯಡಿ ಜನರಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಗೃಹ ಜ್ಯೋತಿ ಸೌಲಭ್ಯ ಪಡೆಯದವರ ವಿದ್ಯುತ್ ಬಿಲ್ ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಜೊತೆಗೆ ನೀರಾವರಿ ಪಂಪ್ ಸೆಟ್ಗಳಿಗೆ ಹಗಲು ವೇಳೆಯೇ 7 ಗಂಟೆ ವಿದ್ಯುತ್ ಕೊಡುವುದಾಗಿ ಹೇಳಿಕೆ ಕೊಡುತ್ತಿದೆಯೇ ಹೊರತು ವಾಸ್ತವ ರೂಪದಲ್ಲಿ ಜಾರಿಗೆ ತಂದಿಲ್ಲ. ಕೃಷಿ ಪಂಪ್ ಸೆಟ್ಗೆ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ರಾಜ್ಯ- ಕೇಂದ್ರ ಸರ್ಕಾರಗಳು ಸಬ್ಸಿಡಿ ಹಣದ ಮೂಲಕ ಬೆಂಬಲ ನೀಡಿದರೂ, ರೈತರು ಕೂಡ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವುದು ಸತ್ಯ. ಈ ಹಿಂದೆ ಕೃಷಿ ಪಂಪ್ ಸೆಟ್ ಗೆ ನೀಡುತ್ತಿದ್ದ ಟ್ರಾನ್ಸ್ ಫಾರ್ಮರ್ ನೀಡಿಕೆಯನ್ನೇ ಕರ್ನಾಟಕ ರಾಜ್ಯ ಸರ್ಕಾರ ನಿಲ್ಲಿಸಿಬಿಟ್ಟಿದೆ.
ವಿಶೇಷ ವರದಿ: ಚಂದ್ರಮೋಹನ್, ನ್ಯೂಸ್ ಫಸ್ಟ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ