/newsfirstlive-kannada/media/post_attachments/wp-content/uploads/2025/07/MAHAGANI_TREE_2.jpg)
ಕೇವಲ 200 ರೂಪಾಯಿಗಳಿಗೆ ಖರೀದಿಸಿ ನೆಟ್ಟ ಸಾಧಾರಣ ಮಹಾಗನಿ ಸಸಿ, ಕೆಲವೇ ವರ್ಷಗಳಲ್ಲಿ ಒಬ್ಬರನ್ನು ಕೋಟ್ಯಾಧಿಪತಿಯನ್ನಾಗಿ ಮಾಡುವ ಆಶ್ಚರ್ಯಕರ ಸಾಮರ್ಥ್ಯ ಹೊಂದಿದೆ. ಮಹಾಗನಿ ಮರಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬೇಡಿಕೆಯಿದೆ. ಅದರ ಬಾಳಿಕೆ, ಕೆಂಪು-ಕಂದು ಬಣ್ಣ ಮತ್ತು ಜಲ-ನಿರೋಧಕ ಗುಣಗಳಿಂದಾಗಿ ಇದು ಟಿಂಬರ್ ರಾಜ ಎಂಬ ನಿಕ್ ನೇಮ್ ಗಳಿಸಿಕೊಂಡಿದೆ.
ಇದು ವಿಶೇಷವಾಗಿ ಪ್ರೀಮಿಯಂ ಪೀಠೋಪಕರಣಗಳು, ಸಂಗೀತ ವಾದ್ಯಗಳು, ಹಡಗು ನಿರ್ಮಾಣ ಸಾಮಗ್ರಿಗಳು ಮತ್ತು ಅಲಂಕಾರಿಕ ಸಾಮಗ್ರಿಗಳಿಗೆ ಇದನ್ನು ಬಳಸಲಾಗುತ್ತೆ. ಮಹಾಗನಿ ಬೆಳೆಸಿದರೇ, ಸಾಕಷ್ಟು ಬೆಲೆ ಇದೆ. ಭಾರತ ಮಾತ್ರವಲ್ಲದೇ, ವಿದೇಶಗಳಲ್ಲೂ ಇದಕ್ಕೆ ಭಾರಿ ಬೇಡಿಕೆ ಇದೆ. ವಿದೇಶಗಳಲ್ಲಿ ಇದರ ಹೆಚ್ಚಿನ ಮಾರುಕಟ್ಟೆ ಬೆಲೆ ಹೆಚ್ಚು. ಇದನ್ನು 'ಹಣದ ಮರ' ಎಂದು ಕರೆಯಲು ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ ರೈತರು ಹೆಚ್ಚಾಗಿ ಮಹಾಗನಿಯನ್ನು ಬೆಳೆಯುತ್ತಿದ್ದಾರೆ. ಇದು ಸಾಂಪ್ರದಾಯಿಕ ಬೆಳೆಗಳಿಗಿಂತ ಹೆಚ್ಚು ಲಾಭದಾಯಕವೆಂದು ಕಂಡುಕೊಂಡಿದ್ದಾರೆ. ಬೇರೆ ಅರಣ್ಯ ಕೃಷಿ ಹಾಗೂ ವಾಣಿಜ್ಯ ಬೆಳೆಗಳಿಗಿಂತ ಇದಕ್ಕೆ ಕಡಿಮೆ ಶ್ರಮ ಬೇಕಾಗುತ್ತದೆ. ಕಡಿಮೆ ಶ್ರಮ, ದುಡಿಮೆ, ಕಡಿಮೆ ಬಂಡವಾಳದಲ್ಲಿ ಹೈ ರಿರ್ಟರ್ನ್ಸ್ ನೀಡುವ ಮರ ಅಂದರೇ, ಅದು ಮಹಾಗನಿ ಮರ. ಅರಣ್ಯ ಕೃಷಿಯಲ್ಲಿ ಮಹಾಗನಿಗೆ ಹೆಚ್ಚಿನ ಪ್ರಾಧಾನ್ಯತೆ ಇದೆ. ಮಹಾಗನಿ ಗಿಡವೊಂದನ್ನು ಖರೀದಿಸಿ, ತಂದು ನೆಡಲು ಬರೀ 200 ರೂಪಾಯಿ ಖರ್ಚಾಗುತ್ತದೆ.
ಅರಣ್ಯ ಇಲಾಖೆಯಿಂದ ಪೋತ್ಸಾಹ ಧನ
ಕರ್ನಾಟಕದ ಅರಣ್ಯ ಇಲಾಖೆಯ ನರ್ಸರಿಗಳಲ್ಲಿ 10 ರಿಂದ 15 ರೂಪಾಯಿಗೆ ಮಹಾಗನಿ ಗಿಡಗಳನ್ನ ರೈತರಿಗೆ ನೀಡಲಾಗುತ್ತಿದೆ. ಆದರೇ, ಮಹಾಗನಿ ಮರವಾಗಿ ಬೆಳೆದ ನಂತರ ಒಂದು ಮರವನ್ನು ಕನಿಷ್ಠ 50 ಸಾವಿರ ರೂಪಾಯಿಯಿಂದ 1 ಲಕ್ಷ ರೂಪಾಯಿವರೆಗೂ ಮಾರಾಟ ಮಾಡಬಹುದು. ಒಂದು ಎಕರೆ ಭೂಮಿಯಲ್ಲಿ 10 ಅಡಿ ಅಂತರದಂತೆ ಸಾಲುಗಳನ್ನು ಮಾಡಿ, ಕನಿಷ್ಠ 400 ಗಿಡಗಳನ್ನು ನೆಟ್ಟು ಬೆಳೆಸಬಹುದು. ಪ್ರಾರಂಭದ ಮೂರು ವರ್ಷಗಳ ಕಾಲ ಹನಿ ನೀರಾವರಿ ಮೂಲಕ ಗಿಡಗಳಿಗೆ ನೀರು ಉಣಿಸಬೇಕು. ಬಳಿಕ ಮಳೆ ನೀರಿನಲ್ಲಿ ಗಿಡಗಳು ಬೆಳೆಯುತ್ತವೆ. ಇದು ಅರಣ್ಯ ಕೃಷಿಯ ಮರ. ಅರಣ್ಯ ಕೃಷಿ ಪೋತ್ಸಾಹಧನ ಯೋಜನೆಯಡಿ ಮಹಾಗನಿ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆಯು ಪೋತ್ಸಾಹ ಧನವನ್ನು ರೈತರಿಗೆ ನೀಡುತ್ತೆ. ಮಹಾಗನಿಯಲ್ಲಿ ಚಿಕ್ಕ ಎಲೆ ಹಾಗೂ ದೊಡ್ಡ ಎಲೆಯ ಎರಡು ವಿಧದ ಗಿಡಗಳಿವೆ. ದೊಡ್ಡ ಎಲೆಯ ಗಿಡಗಳು ಹೆಚ್ಚು ಎತ್ತರಕ್ಕೆ ಬೆಳೆಯುತ್ತಾವೆ. ಹೀಗಾಗಿ ರೈತರು ತಮ್ಮ ಜಮೀನುಗಳಲ್ಲಿ ಹೆಚ್ಚು ಎತ್ತರಕ್ಕೆ ಬೆಳೆಯುವ ದೊಡ್ಡ ಎಲೆಯ ಗಿಡಗಳನ್ನು ನೆಟ್ಟು ಪೋಷಿಸಬೇಕು. ಮಹಾಗನಿ ಗಿಡ, ಮರದ ಬೀಜಗಳಿಗೆ ಬೇಡಿಕೆ ಇದೆ. ರೈತರ ಜಮೀನುಗಳಲ್ಲಿ ಶ್ರೀಗಂಧದ ಗಿಡಗಳನ್ನು ಬೆಳೆಸುವುದು ಕಷ್ಟ. ಏಕೆಂದರೇ, ಕಾವಲುಗಾರರು ಇದ್ದರೂ, ಕಳ್ಳರು ಬಂದು ರಾತ್ರೋರಾತ್ರಿ ಶ್ರೀಗಂಧದ ಮರಗಳನ್ನು ಕಡಿದುಕೊಂಡು ಹೋಗುತ್ತಾರೆ. ಶ್ರೀಗಂಧಕ್ಕೆ ಸಿಸಿಟಿವಿ ಹಾಕಿ, ಗನ್ ಮ್ಯಾನ್ ಇಟ್ಟರೂ ಕಳ್ಳರಿಂದ ಶ್ರೀಗಂಧದ ಮರಗಳನ್ನು ರಕ್ಷಿಸುವುದು ಕಷ್ಟ. ಜಮೀನು ಮಾಲೀಕನ ಜೀವಕ್ಕೆ ಕುತ್ತು ಬರಬಹುದು. ಆದರೇ, ಮಹಾಗನಿಗೆ ಶ್ರೀಗಂಧ ರೀತಿ ಕಳ್ಳರ ಭಯ ಇಲ್ಲ. ನಿರ್ಜನ ಪ್ರದೇಶದ ರೈತರ ಜಮೀನಿನಲ್ಲೂ ಮಹಾಗನಿಯನ್ನು ಧೈರ್ಯವಾಗಿ ಬೆಳೆಯಬಹುದು. ಕರ್ನಾಟಕದಲ್ಲಿ ಹೆಚ್ಚಿನ ಉಷ್ಣಾಂಶ ಇರುವ ಪ್ರದೇಶ, ಕಡಿಮೆ ಉಷ್ಣಾಂಶ ಇರುವ ಪ್ರದೇಶಗಳಲ್ಲೂ ಮಹಾಗನಿಯನ್ನು ಬೆಳೆಸಬಹುದು. ರೈತರಿಗೆ ಮಹಾಗನಿ ಗಿಡ ನೆಟ್ಟ 12-15 ವರ್ಷಗಳಲ್ಲಿ ಒಂದು ಎಕರೆಗೆ 400 ಗಿಡಗಳನ್ನು ನೆಟ್ಟರೇ ಕೋಟಿಗಟ್ಟಲೇ ಆದಾಯ ಬರುವುದು ಖಚಿತ.
ದೇವಾಲಯದ ಅರ್ಚಕ ವಾಸುದೇವ್ ಜೋಶಿ ಏನ್ ಹೇಳಿದರು?
ರಾಜಸ್ಥಾನದ ಗಡಿ ಪ್ರದೇಶದ ಬ್ಯಾಡ್ಮರ್ ಜಿಲ್ಲಾ ಕೇಂದ್ರದ ಬಳಿಯ ರತನಾಡದಲ್ಲಿರುವ ಮಾ ಸತಿ ದಾಕ್ಷಾಯಣಿ ದೇವಾಲಯದಲ್ಲಿ, 50 ಡಿಗ್ರಿ ಸೆಲ್ಸಿಯಸ್ವರೆಗಿನ ತೀವ್ರ ತಾಪಮಾನ ಇದೆ. ಆದರೂ, ಈ ಅಧಿಕ ಉಷ್ಣಾಂಶದ ಪ್ರದೇಶದಲ್ಲಿ ಮಹಾಗನಿ ಮರ ಬೆಳೆದಿದೆ. ದೇವಾಲಯದ ಅರ್ಚಕ ವಾಸುದೇವ್ ಜೋಶಿ ಕಳೆದ ಮೂರು ವರ್ಷಗಳಿಂದ ಕಾಳಜಿ ವಹಿಸಿ ಸಸಿಯನ್ನು ಪೋಷಿಸಿದ್ದಾರೆ. ಅವರು ಮರವನ್ನು ಭವಿಷ್ಯದ ಉಳಿತಾಯದ ಒಂದು ರೂಪವೆಂದು ನೋಡುತ್ತಾರೆ. ಮಹಾಗನಿಯನ್ನು ಬ್ಯಾಂಕ್​​ನ ಫಿಕ್ಸೆಡ್ ಡಿಫಾಸಿಟ್ ಎಂದೇ ವಾಸುದೇವ್ ಜೋಶಿ ಪರಿಗಣಿಸಿದ್ದಾರೆ. ಸರಿಸುಮಾರು 12 ವರ್ಷಗಳಲ್ಲಿ ಸಂಪೂರ್ಣವಾಗಿ ಮರ ಬೆಳೆದ ನಂತರ ನಂತರ ಹೆಚ್ಚಿನ ಲಾಭವನ್ನು ನಿರೀಕ್ಷಿಸುತ್ತಾರೆ.
ಮಹಾಗನಿಯನ್ನು ಅದರ ಶಕ್ತಿ, ಸೌಂದರ್ಯದ ಆಕರ್ಷಣೆ ಮತ್ತು ನೀರಿನ ಪ್ರತಿರೋಧಕ್ಕಾಗಿ ಪ್ರಶಂಸಿಸಲಾಗುತ್ತದೆ. ಇದು ಉನ್ನತ ದರ್ಜೆಯ ಪೀಠೋಪಕರಣಗಳು ಮತ್ತು ಗಿಟಾರ್ಗಳು, ತಬಲಾಗಳು ಮತ್ತು ಹಾರ್ಮೋನಿಯಂಗಳಂತ ಸಂಗೀತ ವಾದ್ಯಗಳಲ್ಲಿ ಹಾಗೂ ಹಡಗು ನಿರ್ಮಾಣ ಮತ್ತು ಅಲಂಕಾರಿಕ ಕರಕುಶಲ ವಸ್ತುಗಳಲ್ಲಿ ಬಳಸಲು ಸೂಕ್ತವಾಗಿದೆ ಎಂದು ಜೋಶಿ ವಿವರಿಸುತ್ತಾರೆ. ಸಂಪೂರ್ಣವಾಗಿ ಬೆಳೆದ ನಂತರ, ಮಹಾಗನಿ ಮರವು ಘನ ಅಡಿಗೆ ರೂ. 1,500 ರಿಂದ ರೂ. 2,500 ರವರೆಗೆ ಬೆಲೆ ಬಾಳಬಹುದು, ಇದು ಗಮನಾರ್ಹವಾಗಿ ಲಾಭದಾಯಕ ಹೂಡಿಕೆಯಾಗಿದೆ.
ಕೀಟನಾಶಕಗಳ ನಿವಾರಕಗಳ ಉತ್ಪಾದನೆಯಲ್ಲಿ ಬಳಕೆ
ಇದರ ಹೊರತಾಗಿ, ಮಹಾಗನಿ ಔಷಧೀಯ ಮೌಲ್ಯವನ್ನು ಹೊಂದಿದೆ. ಇದರ ಬೀಜಗಳು, ಎಲೆಗಳು ಮತ್ತು ತೊಗಟೆಯನ್ನು ಕ್ಯಾನ್ಸರ್, ಮಲೇರಿಯಾ, ಮಧುಮೇಹ ಮತ್ತು ಅತಿಸಾರ ಸೇರಿದಂತೆ ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಎಲೆಗಳನ್ನು ಕೀಟನಾಶಕಗಳು, ಸೋಪುಗಳು, ಬಣ್ಣಗಳು ಮತ್ತು ಸೊಳ್ಳೆ ನಿವಾರಕಗಳ ಉತ್ಪಾದನೆಯಲ್ಲಿಯೂ ಬಳಸಲಾಗುತ್ತದೆ, ಆದರೆ ಬೀಜಗಳು ಮತ್ತು ಎಲೆಗಳು ಎರಡೂ ಕೆಲವು ಶಕ್ತಿಯನ್ನು ಹೆಚ್ಚಿಸುವ ಔಷಧಿಗಳಲ್ಲಿ ಪ್ರಮುಖ ಪದಾರ್ಥಗಳಾಗಿವೆ. ಈ ವೈವಿಧ್ಯಮಯ ಬಳಕೆಯು ಮರದ ಒಟ್ಟಾರೆ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಈಗ 8 ರಿಂದ 12 ಅಡಿ ಎತ್ತರದ ಈ ಸಸಿಯನ್ನು ಜೋಶಿ ಅವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಾಗನಿ ಗಿಡವೊಂದನ್ನು ಆನ್ಲೈನ್ನಲ್ಲಿ ಕೇವಲ 200 ರೂ.ಗೆ ಆರ್ಡರ್ ಮಾಡಿದರು. ಮುಖ್ಯವಾಗಿ, ಈ ನಿತ್ಯಹರಿದ್ವರ್ಣ ಪ್ರಭೇದವು 50 ರಿಂದ 60 ಅಡಿ ಎತ್ತರಕ್ಕೆ ಬೆಳೆಯಬಹುದು, ಸುಮಾರು 12 ವರ್ಷಗಳ ನಂತರ ಸಂಪೂರ್ಣವಾಗಿ ಪಕ್ವವಾಗುತ್ತದೆ. ಆ ಸಮಯದಲ್ಲಿ ಅಮೂಲ್ಯವಾದ ಮರವನ್ನು ಕೊಯ್ಲು ಮಾಡಬಹುದು. ದೀರ್ಘಾವಧಿಯ, ಕಡಿಮೆ ನಿರ್ವಹಣೆ ಹೂಡಿಕೆಯನ್ನು ಬಯಸುವವರಿಗೆ, ಮಹೋಗಾನಿ ಅಥವಾ ಮಹಾಗನಿ ಅಸಾಧಾರಣ ಅವಕಾಶವನ್ನು ನೀಡುತ್ತದೆ.
ವಿಶೇಷ ವರದಿ:ಚಂದ್ರಮೋಹನ್,ನ್ಯೂಸ್ ಫಸ್ಟ್ (ನ್ಯಾಷನಲ್ ಬ್ಯೂರೋ)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ