ಮುದ್ದು ಮಗಳ ಅಗಲಿಕೆಗೆ ಹೆತ್ತ ಕರುಳು ನರಳಾಟ.. ನಾವೇ 50 ಲಕ್ಷ ಹಣ ಕೊಡ್ತೀವಿ ಮಗು ವಾಪಸ್ ಕೊಡ್ತಾರಾ?

author-image
Bheemappa
Updated On
ಮುದ್ದು ಮಗಳ ಅಗಲಿಕೆಗೆ ಹೆತ್ತ ಕರುಳು ನರಳಾಟ.. ನಾವೇ 50 ಲಕ್ಷ ಹಣ ಕೊಡ್ತೀವಿ ಮಗು ವಾಪಸ್ ಕೊಡ್ತಾರಾ?
Advertisment
  • ದುಡ್ಡು ಕೊಡಲು ಬಂದ ಸಚಿವರ ಮುಂದೆ ತಂದೆ ಅಶೋಕ್ ಅಳಲು
  • ನನ್ನ ಮಗಳು ಹೇಗಿದ್ದಳು ನೋಡಿ ಸರ್‌.. ನನಗೆ ಅನ್ನ ತಿನ್ನಿಸುತ್ತಿದ್ದಳು
  • ಮಗಳ ಹಳೆಯ ವಿಡಿಯೋಗಳನ್ನು ನೋಡಿ ಕಣ್ಣೀರು ಹಾಕ್ತಿರುವ ತಂದೆ

ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಯಡವಟ್ಟಿಗೆ ಬಲಿಯಾದ ಮಗುವಿನ ಮನೆಯಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಮುದ್ದಾಗಿ ಸಾಕಿದ್ದ ಮಗಳನ್ನು ಕಳೆದುಕೊಂಡ ಹೆತ್ತವರು ಕಣ್ಣೀರಾಕುತ್ತಿದ್ದಾರೆ. ಇವತ್ತು ಸಚಿವ ಎನ್ ಚೆಲುವರಾಯಸ್ವಾಮಿ, ಹೃತಿಕ್ಷಾ ಮನೆಗೆ ತೆರಳಿ ಹೆತ್ತವರಿಗೆ ಸಾಂತ್ವನ ಹೇಳಿದರು. ಈ ವೇಳೆ ತಂದೆ ಅಶೋಕ್​, ಮಗಳ ಫೋಟೋ ತೋರಿಸಿ ಸಚಿವರ ಮುಂದೆ ಅಳಲು ತೋಡಿಕೊಂಡ ದೃಶ್ಯ ಮನಕಲಕುವಂತಿತ್ತು.

ಕೃಷ್ಣನ ವೇಷದಲ್ಲಿ ಪುಟ್ಟ ಹೆಜ್ಜೆ ಇಟ್ಟು ತುಂಟಾಟ.. ಅಪ್ಪನ ಎದೆ ಮೇಲೆ ಮಲಗಿ ಪ್ರಪಂಚವೇ ಮರೀತಿದ್ದ ಮಗು. ಹೆತ್ತವರಿಗೆ ಮಾತ್ರವಲ್ಲ ಇಡೀ ಕುಟುಂಬಕ್ಕೆ ಈ ಪುಟ್ಟ ಮಗು ಪ್ರಪಂಚವಾಗಿದ್ದಳು. ಆದ್ರೆ ಮಂಡ್ಯ ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ ಬಲಿಯಾದ ಪುಟ್ಟ ಕಂದಮ್ಮನ ಒಂದೊಂದು ವಿಡಿಯೋಗಳು ಹೃದಯ ಹಿಂಡುವಂತಿವೆ.

publive-image

ಹೃದಯ ಹಿಂಡ್ತಿದೆ ಮುದ್ದಾದ ಕಂದಮ್ಮನ ವಿಡಿಯೋಗಳು

ನಿನ್ನೆ ಮಂಡ್ಯದಲ್ಲಿ ಟ್ರಾಫಿಕ್​ ಪೊಲೀಸರ ಯಡವಟ್ಟಿಗೆ ಬಲಿಯಾಗ 3 ವರ್ಷದ ಮುದ್ದು ಕಂದಮ್ಮ ಹೃತಿಕ್ಷಾ ಮನೆಯಲ್ಲಿ ನೀರವ ಮೌನ ಆವರಿಸಿದೆ. ಯಾಕಂದ್ರೆ ಇಡೀ ಕುಟುಂಬವೇ ಹೃತಿಕ್ಷಾಳನ್ನು ಮುದ್ದಾಗಿ ಬೆಳೆಸಿತ್ತು. ನಿನ್ನೆಯವರೆಗೂ ಎದೆಯ ಮೇಲೆ ಮಲಗಿಸಿ ಮುದ್ದಿಸುತ್ತಾ ಮಗಳು ಇಲ್ಲದಿರುವುದನ್ನು ಅಪ್ಪನ ಹೃದಯಕ್ಕೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮಗುವಿನ ತಂದೆ ಅಶೋಕ್​, ತಮ್ಮ ಮೊಬೈಲ್​ನಲ್ಲಿರುವ ಮಗಳ ಹಳೆಯ ವಿಡಿಯೋಗಳನ್ನು ನೋಡುತ್ತಾ ಕಣ್ಣೀರಾಕುತ್ತ ಕುಳಿತಿದ್ದು, ಕರುಳು ಕಿತ್ತು ಬರುವಂತಿದೆ.

ನಾವೇ 50 ಲಕ್ಷ ಕೊಡ್ತೀವಿ ಮಗು ವಾಪಸ್ ಕೊಡ್ತಾರಾ?

ಮೃತ ಹೃತಿಕ್ಷಾ ಮನೆಗೆ ಇವತ್ತು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿ ಭೇಟಿ ನೀಡಿ, ಮಗುವಿನ ತಂದೆಗೆ ಸಾಂತ್ವನ ಹೇಳಿದರು. ಈ ವೇಳೆ ಸಚಿವರ ಮುಂದೆ ಹೃತಿಕ್ಷಾ ತಂದೆ ಅಳಲು ತೋಡಿಕೊಂಡರು. ನನ್ನ ಮಗಳು ಹೇಗಿದ್ದಳು ನೋಡಿ ಸರ್‌, ನನಗೆ ಅನ್ನ ತಿನ್ನಿಸ್ತಿದ್ದಳು. ಮದ್ದೂರಲ್ಲಿ ಇಂಜೆಕ್ಷನ್ ಕೊಟ್ಟಿದ್ರೆ ಮಂಡ್ಯಕ್ಕೆ ಹೋಗ್ತಾನೇ ಇರ್ಲಿಲ್ಲ. ಌಂಬುಲೆನ್ಸ್ ಕೇಳಿದ್ರೆ ಕೊಡಲಿಲ್ಲ ಎಂದು ಮೊಬೈಲ್‌ನಲ್ಲಿದ್ದ ಮಗಳ ಫೋಟೋ ತೋರಿಸಿ ತಂದೆ ಅಶೋಕ್​ ಕಣ್ಣೀರು ಹಾಕಿದರು.

ಸಚಿವ ಚೆಲುವರಾಯಸ್ವಾಮಿ ಸ್ಥಳದಲ್ಲೇ ಒಂದೂವರೆ ಲಕ್ಷ ವೈಯಕ್ತಿಕ ಪರಿಹಾರ ನೀಡಿದರು. ಆಗ ನಾವೇ 50 ಲಕ್ಷ ಕೊಡ್ತೀವಿ ಮಗುವನ್ನ ವಾಪಸ್ಸು ಕೊಡ್ತಾರಾ ಎಂದು ದುಡ್ಡು ಕೊಡಲು ಬಂದ ಸಚಿವರ ಮುಂದೆ ಮನದೊಳಗಿನ ನೋವು ವ್ಯಕ್ತಪಡಿಸಿದರು. ಸ್ವಾಂತನದ ಬಳಿಕ ಮಾಧ್ಯಮಗಳ ಬಳಿ ಮಾತನಾಡಿ ಚೆಲುವರಾಯಸ್ವಾಮಿ, ಮಗು, ಅಪ್ಪನಿಗೆ ಊಟ ಮಾಡಿಸ್ತಿದ್ದಿದ್ದನ್ನ ನೋಡಿದ್ರೆ ನೋವಾಗುತ್ತೆ. ಹೆತ್ತವರಿಗೆ ಆಗಿರೋ ನೋವನ್ನ ಭರಿಸೋದಕ್ಕೆ ಸಾಧ್ಯವೇ ಇಲ್ಲ. ಹೃತಿಕ್ಷಾ ಸಾವಿನ ಕೇಸ್​​ನಲ್ಲಿ ಸಾಕಷ್ಟು ಲೋಪ ಇದ್ದು, ವರದಿ ಬಂದ್ಮೇಲೆ ಮುಂದಿನ ಕ್ರಮ ಆಗುತ್ತೆ ಎಂದು ಸಚಿವರು ಭರವಸೆ ನೀಡಿದರು.

ಇದನ್ನೂ ಓದಿ: ಹಿರಿಯ ನಟ ಅನಂತ್​ ನಾಗ್​ ಅವರಿಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ.. ರಾಷ್ಟ್ರಪತಿಗಳಿಂದ ಗೌರವ

publive-image

ಇನ್ನು ಮಂಡ್ಯದ ಹೃತಿಕ್ಷಾ ಸಾವಿನ ಪ್ರಕರಣದ ಬೆನ್ನಲ್ಲೇ ಗೃಹಸಚಿವರು ಎಚ್ಚೆತ್ತುಕೊಂಡಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮುಂದೆ ರಾಜ್ಯದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸೂಚನೆ ಕೊಟ್ಟಿದ್ದಾರೆ.

ಮುದ್ದಾಗಿ ಸಾಕಿದ್ದ ಮಗಳನ್ನು ಕಳೆದುಕೊಂಡಿರುವ ಹೆತ್ತವರ ನೋವು ಹೇಳತೀರದ್ದು. ಇನ್ಮೇಲಾದ್ರೂ ಟ್ರಾಫಿಕ್​ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಸಂಬಂಧ ತಪಾಸಣೆ ಮಾಡುವ ವೇಳೆ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಸಾರ್ಜನಿಕರೂ ಕೂಡ ತಮ್ಮ ಸುರಕ್ಷತೆ ಬಗ್ಗೆ ಗಮನ ಹರಿಸಬೇಕು.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment