/newsfirstlive-kannada/media/post_attachments/wp-content/uploads/2025/07/mangaluru.jpg)
ಮಂಗಳೂರು: ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವ ನೆಪದಲ್ಲಿ ವಂಚನೆ ಮಾಡುತ್ತಿದ್ದ ಕಿಂಗ್ ಪಿನ್ನನ್ನು ಮಹತ್ವದ ಕಾರ್ಯಾಚರಣೆ ಮೂಲಕ ಪೊಲೀಸರು ಬಂಧಿಸಿದ್ದಾರೆ. ರೋಹನ್ ಸಲ್ದಾನಾ ಬಂಧಿತ ಆರೋಪಿ. ಬಂಧಿತ ಆರೋಪಿ ದುಬಾಯ್ಸ್ ರೋಹನ್ ಸಲ್ದಾನಾ ಎಂದೇ ಗುರುತಿಸಿಕೊಂಡಿದ್ದ ವಂಚನೆ ಜಾಲದ ಕಿಂಗ್ ಪಿನ್. ಈತ ಶ್ರೀಮಂತರು ಮತ್ತು ಬೇರೆ ಬೇರೆ ನಗರಗಳ ಉದ್ಯಮಿಗಳಿಗೆ ನೂರಾರು ಕೋಟಿ ಸಾಲ ಕೊಡಿಸುವ ನೆಪದಲ್ಲಿ ವಂಚನೆ ಮಾಡುತ್ತಿದ್ದನಂತೆ. ರೋಹನ್ ಸಲ್ದಾನಾ ವಂಚನೆಗೆ ದೇಶಾದ್ಯಂತ ಏಜೆಂಟ್ಗಳ ನೆಟ್ವರ್ಕ್ ಜಾಲ ಇಟ್ಟುಕೊಂಡಿದ್ದನಂತೆ.
ಇದನ್ನೂ ಓದಿ:ಮಕ್ಕಳಿಗಾಗಿ ಗಿಫ್ಟ್ ಬಾಕ್ಸ್ ಹಿಡಿದು ಕೈಬೀಸಿದ ಇಸ್ರೇಲ್ ಡ್ಯಾಡಿ.. ಕಂದಮ್ಮರ ಮುಖ ನೋಡಲಾಗದೇ ಅಪ್ಪ ವಾಪಸ್
ಯಾರು ಈ ರೋಹನ್..?
ಮೊದ ಮೊದಲು ರೋಹನ್ ಕಷ್ಟದ ಜೀವನ ನಡೆಸುತ್ತಿದ್ದ. ದಿನ ಕಳೆದಂತೆ ವಂಚನೆ ಮಾಡೋದಕ್ಕೆ ಶುರು ಮಾಡಿಕೊಂಡಿದ್ದ. ಇನ್ನೂ ವಂಚನೆ ಜಾಲಕ್ಕೂ ಮುನ್ನ ರೋಹನ್ ಮುಂಬೈಯಲ್ಲಿ ಕೆಲಸ ಮಾಡಿಕೊಂಡಿದ್ದನಂತೆ. ಸ್ಟೋನ್, ಹಣದ ವ್ಯವಹಾರವನ್ನೂ ಮಾಡುತ್ತಿದ್ದ. ಸಾಕಷ್ಟು ಜನಕ್ಕೆ ತನಗೆ ಪ್ರಸಿದ್ಧ ಉದ್ಯಮಿಗಳ ಪರಿಚಯ ಇದೆ ಅಂತಾ ಹೇಳಿಕೊಳ್ಳುತ್ತಿದ್ದನಂತೆ. 2016ರ ಬಳಿಕ ವಂಚನೆಯ ಜಾಲಕ್ಕೆ ಕೈ ಹಾಕಿದ್ದ. ಹಣದಾಸೆಯಿಂದ ವಂಚನೆಯ ಜಾಲವನ್ನು ವಿಸ್ತಾರ ಮಾಡಿಕೊಂಡಿದ್ದ. ಇದೇ ವರ್ಷದ ಜನವರಿಯಲ್ಲಿ ಮತ್ತೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಆ ಬಳಿಕ ಕೋಟಿ ರೂಪಾಯಿ ವಂಚನೆಗೆ ಕೈ ಕಳೆದ ಮೂರು ತಿಂಗಳ ಅವಧಿಯಲ್ಲಿ 40 ಕೋಟಿ ರೂಪಾಯಿ ವ್ಯವಹಾರ ಮಾಡಿದ್ದ. ರೋಹನ್ ಬ್ಯಾಂಕ್ ಅಕೌಂಟ್ನಲ್ಲಿ 40 ಕೋಟಿ ರೂಪಾಯಿ ಇರುವುದು ಪತ್ತೆಯಾಗಿದೆ. ಹೀಗೆ ಕಳೆದ ತಿಂಗಳು 10 ಕೋಟಿ ರೂಪಾಯಿ ಮೌಲ್ಯದ ಫಿಶಿಂಗ್ ಬೋಟ್ ತಯಾರು ಮಾಡಲು ಹೂಡಿಕೆ ಮಾಡಿದ್ದ. ತನ್ನ ಐಷಾರಾಮಿ ಬಂಗಲೆಗೆ ಕರೆಸಿ ರಾಜಾತಿಥ್ಯ ನೀಡಿ ಡೀಲ್ ಕುದುರಿಸುತ್ತಿದ್ದ. ಉದ್ಯಮಿಗಳಿಗೆ ತಾನು ಆಗರ್ಭ ಶ್ರೀಮಂತ ಎಂಬಂತೆ ಪೋಸ್ ಕೊಡುತ್ತಿದ್ದ. ನೂರು ಕೋಟಿ ಸಾಲವನ್ನು ಕೇವಲ 3ರಿಂದ ನಾಲ್ಕು ಪರ್ಸೆಂಟ್ ಬಡ್ಡಿಗೆ ಕೊಡುವುದಾಗಿ ಹೇಳಿ ಡೀಲ್ ಕುದುರಿಸುತ್ತಿದ್ದ. ಅಲ್ಲದೇ ಅಗ್ರಿಮೆಂಟ್ ಮಾಡೋದಕ್ಕೆ ಸ್ಟಾಂಪ್ ಪೇಪರ್ ಮೊತ್ತ ಕೇಳುತಿದ್ದ. ನೂರು ಕೋಟಿಗೆ ಸ್ಟಾಂಪ್ ಪೇಪರ್ ಮೊತ್ತ ಎಂದು 4 ಕೋಟಿ ರೂಪಾಯಿ ಕ್ಯಾಶ್ ಪಡೆದುಕೊಳ್ಳುತ್ತಿದ್ದ. ಇದಾದ ಬಳಿಕ ಫೋನ್ ಆಫ್ ಮಾಡಿ ತಲೆ ಮರೆಸಿಕೊಳ್ಳುತ್ತಿದ್ದನಂತೆ. ಅಷ್ಟೇ ಅಲ್ಲದೇ ಮನೆಯಲ್ಲೇ ಅವಿತುಕೊಳ್ಳಲು ಸೀಕ್ರೆಟ್ ಚೇಂಬರ್ ಮಾಡಿಕೊಂಡಿದ್ದನಂತೆ. ಹೀಗಾಗಿಯೇ ಬೆಡ್ ರೂಮ್ನ ವಾರ್ಡ್ರೋಪ್ ಹಿಂದೆ ರಹಸ್ಯ ಕೋಣೆ ಮಾಡಿಕೊಂಡಿದ್ದನಂತೆ. ಪೊಲೀಸರು ರೈಡ್ ಮಾಡಿದರೂ ಯಾರಿಗೂ ತಿಳಿಯದ ರೀತಿ ಒಳಗಡೆಯೇ ಅಡಗುತಾಣಗಳನ್ನು ಮಾಡಿಕೊಂಡಿದ್ದನಂತೆ.
ರೋಹನ್ ನಿವಾಸದ ಮೇಲೆ ಪೊಲೀಸ್ ದಾಳಿ
ಮಂಗಳೂರು ಹೊರವಲಯದ ಜಪ್ಪಿನಮೊಗರು ಎಂಬಲ್ಲಿನ ಐಷಾರಾಮಿ ಬಂಗಲೆಯ ಮೇಲೆ ಪೊಲೀಸರ ಏಕಾಏಕಿ ದಾಳಿ ನಡೆಸಿದ್ದರು. ದಾಳಿ ಮಾಡಿದ ಪೊಲೀಸರು ಬಂಗಲೆ ಒಳಗಿನ ಐಷಾರಾಮಿ ವ್ಯವಸ್ಥೆ ಕಂಡು ದಂಗಾಗಿದ್ದಾರೆ. ಅಲ್ಲದೇ ಪೊಲೀಸರು ಪ್ರಾಥಮಿಕ ತಪಾಸಣೆ ನಡೆಸಿದ ವೇಳೆ ನಲ್ವತ್ತು ಕೋಟಿಯಷ್ಟು ಮೊತ್ತ ಆತನ ವಿವಿಧ ಬ್ಯಾಂಕ್ ಖಾತೆಗಳಲ್ಲಿರೋದು ಪತ್ತೆಯಾಗಿದೆ. ಸುಮಾರು 10 ವರ್ಷದಲ್ಲಿ 200 ಕೋಟಿ ರೂಪಾಯಿ ವಂಚಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಸಿಇಎನ್ ಠಾಣೆಯಲ್ಲಿ ಈತನ ವಿರುದ್ಧ ಎರಡು ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಸಿಇಎನ್ ಪೊಲೀಸರು ತನಿಖೆ ಆರಂಭಿಸಿದ್ದರು. ಖುದ್ದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ನಿನ್ನೆ ರಾತ್ರಿ ದಾಳಿ ನಡೆಸಿ ವಂಚಕನನ್ನು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ