ಕರ್ನಾಟಕದಲ್ಲಿ ಬಿರು ಬಿಸಿಲಿನ ತಾಪ ಇನ್ನಷ್ಟು ಏರಿಕೆ.. ಹವಾಮಾನ ಇಲಾಖೆ ಎಚ್ಚರಿಕೆ ಏನು?

author-image
Bheemappa
Updated On
ಬಿಸಿಲಿನ ತಾಪಮಾನ; ರಾಯಚೂರನ್ನೇ ಸೈಡ್ ಮಾಡಿದ ಮಂಡ್ಯ.. ಎಷ್ಟು ಡಿಗ್ರಿ ಸೆಲ್ಸಿಯಸ್​ ದಾಖಲಾಯ್ತು?
Advertisment
  • ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಒಣಹವೆ ಮುಂದುವರೆಯಲಿದೆ
  • ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಬಿಸಿ ಇರಲಿದೆ ಅನ್ನೋ ವಿವರ ಇಲ್ಲಿದೆ
  • ಬೋರ್ವೆಲ್​ ನೀರನ್ನು ಟ್ಯಾಂಕರ್ ಮುಖಾಂತರ ಸರಬರಾಜು

ಇಷ್ಟು ದಿನ ಮನೆಯಿಂದ ಹೊರಗೆ ಬಂದರೆ ಚುಮುಚುಮು ಚಳಿಗೆ ನಡುಗುತ್ತಿದ್ದ ಜನ, ಬೇಸಿಗೆ ಆರಂಭವಾಗೋದಕ್ಕೂ ಮುಂಚೆ ಒಗ್ಗರೆಣ್ಣೆಯಲ್ಲಿ ಬಿದ್ದ ಸಾಸಿವೆಯಂತೆ ಚಟಪಟ ಚಟಪಟ ಅಂತಾ ಪೂರ್ವ ಬೇಸಿಗೆಯಲ್ಲಿ ಬೆಂದು ಬೆವರಳಿದ್ದಾರೆ.

ವಾಡಿಕೆಗಿಂತ ಹೆಚ್ಚು ಬಿಸಿಲು, ಪೂರ್ವ ಮುಂಗಾರಲ್ಲಿ ಮಳೆ

ರಾಜ್ಯದಲ್ಲಿ ಪೂರ್ವ ಬೇಸಿಗೆ ಅಬ್ಬರ ಜೋರಾಗಿದೆ. ಈ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಉಷ್ಣಾಂಶದಲ್ಲಿ ಭಾರೀ ಏರಿಕೆಯಾಗಿದ್ದು, ಮುಂದಿನ ವಾರ ಉಷ್ಣಾಂಶ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ಹವಾಮಾನ ಇಲಾಖೆ ನೀಡಿರೋ ಮುನ್ಸೂಚನೆ ಜನರಲ್ಲಿ ಆತಂಕ ಎಚ್ಚಿಸಿದೆ.

publive-image

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ರಿಂದ 3 ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಮೂಲಕ ಜನರನ್ನ ಕಂಗಾಲಾಗಿಸಿದೆ. ಬೇಸಿಗೆಗೂ ಮುನ್ನವೇ ಪರಿಸ್ಥಿತಿ ಹೀಗಾಗಿದ್ದು, ಮುಂಬರುವ ಬೇಸಿಗೆ ದಿನಗಳನ್ನ ಎದುರಿಸೋದು ಹೇಗೆ ಎನ್ನುವ ಆತಂಕ ಶುರುವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಮುಂದಿನ ವಾರ ಸದ್ಯಕ್ಕಿಂತಲೂ 2-3 ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇದೆ ಅನ್ನೋದು ಹವಾಮಾನ ತಜ್ಞರ ಲೆಕ್ಕಾಚಾರ.

ರಾಜ್ಯದಲ್ಲಿ ಮುಂದಿನ 7 ದಿನ ಒಣಹವೆ ಮುಂದುವರಿಕೆಯಾಗಲಿದ್ದು, 20 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ 35.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ಇಲ್ಲಿಯವರೆಗೆ ಬೆಂಗಳೂರಿನಲ್ಲಿ 34 ಡಿಗ್ರಿ ಸೆಲ್ಸಿಯಸ್ ಮಾತ್ರವೇ ಭಾರೀ ಪ್ರಮಾಣದ ಉಷ್ಣಾಂಶವಾಗಿದೆ. ಇನ್ನೂ ಯಾವ ಯಾವ ಜಿಲ್ಲೆಯಲ್ಲಿ ಎಷ್ಟೆಷ್ಟು ಅನ್ನೋ ವಿವರ ಇಲ್ಲಿದೆ.

ಬಿಸಿ ಬಿಸಿ ಬೇಸಿಗೆ

  • ಬೆಂಗಳೂರು- ಗರಿಷ್ಠ ಉಷ್ಣಾಂಶ : 33.8 ಸೆಲ್ಸಿಯಸ್
  • ಕಲಬುರಗಿ ಹಾಗೂ ಕೊಪ್ಪಳ- ಗರಿಷ್ಠ ಉಷ್ಣಾಂಶ : 33°ಸೆಲ್ಸಿಯಸ್
  • ಬಿಜಾಪುರ, ಬೆಳಗಾವಿ, ಗದಗ, ಶಿವಮೊಗ್ಗ- ಗರಿಷ್ಠ ಉಷ್ಣಾಂಶ : 35°ಸೆಲ್ಸಿಯಸ್

ಮುಂದಿನ 7 ದಿನಗಳ ವರದಿ

  • ಬೆಂಗಳೂರು & ಒಳನಾಡಿನಲ್ಲಿ- ಗರಿಷ್ಠ ಉಷ್ಣಾಂಶ: 32-34 ಸೆಲ್ಸಿಯಸ್
  • ಉತ್ತರ ಒಳನಾಡಿನಲ್ಲಿ- ಗರಿಷ್ಠ ಉಷ್ಣಾಂಶ: 35 ರಿಂದ 37°ಸೆಲ್ಸಿಯಸ್
  • ಕರಾವಳಿ ಜಿಲ್ಲೆಗಳಲ್ಲಿ- ಗರಿಷ್ಠ ಉಷ್ಣಾಂಶ: 33 ರಿಂದ 35 ಸೆಲ್ಸಿಯಸ್
  • ದಕ್ಷಿಣ ಒಳನಾಡು- ಗರಿಷ್ಠ ಉಷ್ಣಾಂಶ: ಎಲ್ಲೆಡೆ ಒಣಹವೆ

ಕುಡಿಯುವ ನೀರಿಗಾಗಿ ರಾಜ್ಯ ಸರ್ಕಾರದಿಂದ ಮುಂಜಾಗೃತಾ ಕ್ರಮ

ನಿನ್ನೆ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ಪ್ರಸ್ತುತ 2025 ನೇ ಸಾಲಿನ ಹಿಂಗಾರು-ಮುಂಗಾರು ಮಳೆ ಸ್ಥಿತಿ.. ಕೃಷಿ.. ಕುಡಿಯುವ ನೀರು, ಹವಾಮಾನ ಹಾಗೂ ಅಣೆಕಟ್ಟೆಗಳಲ್ಲಿನ ನೀರಿನ ಮಟ್ಟದ ಕುರಿತು ಚರ್ಚಿಸಲಾಯಿತು. ರಾಜ್ಯದಲ್ಲಿನ ಪ್ರಮುಖ 14 ಜಲಾಶಯಗಳಲ್ಲಿ ಪ್ರಸ್ತುತ ಒಟ್ಟು 535.21 ಟಿ.ಎಂ.ಸಿ. ನೀರಿನ ಸಂಗ್ರಹಣೆಯಿದ್ದು, ಸರಾಸರಿ ನೀರಿನ ಸಂಗ್ರಹಣೆಯ ಶೇಕಡ 60 ರಷ್ಟು ಇದೆ ಎಂದು ಸಚಿವರು ಹೇಳಿದ್ದಾರೆ.

ಸಚಿವರು ಕೊಟ್ಟ ಸೂಚನೆಗಳು

  • ಟ್ಯಾಂಕರ್ ಮತ್ತು ಬೋರ್ವೆಲ್​ಗಳ ಮುಖಾಂತರ ನೀರು ಸರಬರಾಜು
  • ಗ್ರಾಮಗಳ ಪಟ್ಟಿಯನ್ನು ಗುರುತಿಸಲು ಸಭೆಯಲ್ಲಿ ಸೂಚಿಸಿದ ಸಚಿವರು
  • ಹೆಚ್ಚುವರಿ ಕ್ರಮಗಳ ಕುರಿತು ಸಂಪೂರ್ಣ ಪೂರ್ವ ಸಿದ್ಧತೆಗೆ ಚಿಂತನೆ
  • ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರುಗಳ ಖಾತೆಯಲ್ಲಿ ಹಣ ಇದೆ

ಇದನ್ನೂ ಓದಿ:ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಗಳಿಗೆ ಆಹ್ವಾನ.. 2,691 ಹುದ್ದೆಗಳು

publive-image

ನಗರ ವ್ಯಾಪ್ತಿಗೆ ಸಂಬಂಧಿಸಿದಂತೆ 2 ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳ 5 ನಗರ ಸ್ಥಳೀಯ ಸಂಸ್ಥೆಗಳ 56 ವಾರ್ಡ್​ಗಳಿಗೆ ಟ್ಯಾಂಕರ್ ಮತ್ತು ಬೋರ್ವೆಲ್​ಗಳ ಮುಖಾಂತರ ಕುಡಿಯುವ ನೀರು ಸರಬರಾಜು ಮಾಡಲಾಗ್ತಿದೆ. ಸಮಸ್ಯೆ ಉಂಟಾಗಬಹುದಾದ ಗ್ರಾಮಗಳ ಪಟ್ಟಿಯನ್ನು ಗುರಿತಿಸಲು ಸಭೆಯಲ್ಲಿ ಸೂಚನೆ ನೀಡಲಾಯಿತು. ಹಿಂದಿನ ವರ್ಷಗಳಲ್ಲಿ ಕೈಗೊಂಡ ಕ್ರಮಗಳ ಜೊತೆಗೆ ಸಂಪೂರ್ಣ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾಗೆ ಸಚಿವ ಕೃಷ್ಣ ಬೈರೇಗೌಡ ಸೂಚಿಸಿದ್ರು. ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರರುಗಳ ಪಿ.ಡಿ ಖಾತೆಯಲ್ಲಿ ವಿಪತ್ತು ನಿಧಿ ಪ್ರಸ್ತುತ ಒಟ್ಟು 488.30 ಕೋಟಿ ರೂಪಾಯಿ ಅನುದಾನ ಲಭ್ಯವಿದ್ದು, ಪರಿಹಾರ ಕ್ರಮಕ್ಕೆ ಯಾವುದೇ ಹಣಕಾಸು ಸಮಸ್ಯೆ ಇಲ್ಲ ಅಂತಾ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಖುಷಿ ವಿಚಾರ ಏನು ಅಂದ್ರೆ ಪ್ರಸ್ತುತ ವರ್ಷ ಪೂರ್ವ ಮುಂಗಾರಿನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಅಂತಾ ಅಧಿಕಾರಿಗಳು ಸಚಿವರಿಗೆ ತಿಳಿಸಿದ್ದಾರೆ. ಫೆಬ್ರವರಿ-ಮಾರ್ಚ್ ತಿಂಗಳ ಕೊನೆಯ ವಾರದಲ್ಲೂ ಹೆಚ್ಚು ಮಳೆ ಸಾಧ್ಯತೆ ಇದ್ದು, ಏಪ್ರಿಲ್-ಮೇ ತಿಂಗಳುಗಳಲ್ಲಿ ಉತ್ತಮ ಮಳೆಯಾಗಲಿದೆ. ಆದರೆ, ಹಿಂಗಾರಿನಲ್ಲಿ ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಲ್ಲಿ ಪ್ರಸ್ತುತ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment