/newsfirstlive-kannada/media/post_attachments/wp-content/uploads/2025/06/MYS-MICRO-1.jpg)
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಅಮಾನವೀಯ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೇವಲ 1280 ರೂಪಾಯಿ ಸಾಲ ಕಟ್ಟಿಲ್ಲ ಅಂತಾ 7 ವರ್ಷದ ಹೆಣ್ಣು ಮಗುವನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊತ್ತೊಯ್ದಿರುವ ಆರೋಪ ಕೇಳಿಬಂದಿದೆ.
ಏನಿದು ಆರೋಪ ಪ್ರಕರಣ..?
ಟಿ.ನರಸಿಪುರ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಜಾಲಹಳ್ಳಿ ಗ್ರಾಮದ ನವೀನ್ ಹಾಗೂ ಪ್ರಮೀಳಾ ಜೀವನ ನಡೆಸಲು ಬಜಾಜ್ ಮೈಕ್ರೋ ಫೈನಾನ್ಸ್ನಿಂದ 30 ಸಾವಿರ ರೂಪಾಯಿ ಸಾಲ ಮಾಡಿದ್ದರು.
ಇದನ್ನೂ ಓದಿ: Israel-Iran War: ಯುದ್ಧಭೂಮಿಗೆ ಟ್ರಂಪ್ ಎಂಟ್ರಿ ಗೊಂದಲ.. ಅಮೆರಿಕಗೆ ರಷ್ಯಾ, ಕೋರಿಯಾ ಎಚ್ಚರಿಕೆ..
30 ಸಾವಿರ ಸಾಲ ಪಡೆದಿದ್ದ ದಂಪತಿ, 13 ತಿಂಗಳು ಲೋನ್ ಕಟ್ಟಿದ್ದರು. ಈ ತಿಂಗಳು 4 ದಿನ ತಡವಾಗಿದ್ದಕ್ಕೆ ಚಿತ್ರಹಿಂಸೆ ನೀಡಿರುವ ಆರೋಪ ಕೇಳಿಬಂದಿದೆ. ಮೊದಲಿಗೆ ಮನೆಗೆ ಬಂದಿದ್ದ ಫೈನಾನ್ಸ್ ಸಿಬ್ಬಂದಿ ನವೀನ್ ತಾಯಿಗೆ ಬಾಯಿಗೆ ಬಂದು ಬೈದು ಹೋಗಿದ್ದಾರೆ ಎನ್ನಲಾಗಿದೆ.
ಬಳಿಕ ಪಕ್ಕದ ಊರಿನಲ್ಲಿದ್ದ ಮಗುವಿನ ಬಳಿ ತೆರಳಿ ನಿಮ್ಮ ಅಮ್ಮ ಎಲ್ಲಿ ತೋರಿಸು ಬಾ ಎಂದು ಕರೆದೊಯ್ದಿದ್ದಾರೆ. ಹೆಣ್ಣು ಮಗುವನ್ನು ಕಿಡ್ನಾಪ್ ಮಾಡಿದ ರೀತಿಯಲ್ಲಿ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮಗಳ ಕರೆದುಕೊಂಡು ಹೋದ ವಿಷಯ ತಿಳಿದು, ದಂಪತಿ ಫೈನಾನ್ಸ್ ಸಿಬ್ಬಂದಿಗೆ ಕಚೇರಿಗೆ ಆಘಾತದಲ್ಲಿ ಓಡಿ ಬಂದಿದ್ದಾರೆ. ಆಗ, ‘ತಾಳಿ ಅಡವಿಟ್ಟು ದುಡ್ಡು ಕೊಡ್ತೀವಿ, ಸಂಜೆ ಬನ್ನಿ’ ಎಂದು ಬೇಡಿಕೊಂಡಿದ್ದಾರೆ. ಅದಕ್ಕೆ ಒಪ್ಪದ ಸಿಬ್ಬಂದಿ ‘ಈಗಲೇ ದುಡ್ಡು ನೀಡಿ’ ಅಂತಾ ಚಿತ್ರ ಹಿಂಸೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಂತರ ಹಣವನ್ನು ನೀಡಿ, ಹೆಣ್ಣು ಮಗುವನ್ನು ಬಿಡಿಸಿಕೊಂಡು ಬಂದಿದ್ದಾರೆ. ಈ ಪ್ರಕರಣವು ಮೈಸೂರು ಮಕ್ಕಳ ಸಮಿತಿ ಕಾರ್ಯಾಚರಣೆ ವೇಳೆ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಕೊಂಬೆ ಬಿದ್ದು ಮೆದುಳು ನಿಷ್ಕ್ರಿಯಗೊಂಡಿದ್ದ ಅಕ್ಷಯ್ ನಿಧನ.. ಬೆನ್ನಲ್ಲೇ BBMP ಹೊಸ ಆದೇಶ
ಸಿಎಂ ಆದೇಶಕ್ಕೆ ಡೋಂಟ್ ಕೇರ್
ನಾಗರೀಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ನಡೆದುಕೊಂಡಿರೋದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಟಾರ್ಚರ್ಗೆ ಕಡಿವಾಣ ಹಾಕಲು ಕಠಿಣ ನಿಯಮ ಜಾರಿಗೆ ತಂದಿದೆ. ಅಲ್ಲದೇ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹಣ ವಸೂಲಿ ವಿಚಾರದಲ್ಲಿ ಯಾರಿಗೂ ತೊಂದರೆ ನೀಡಬಾರದು. ಒಂದು ವೇಳೆ ಅಂತಹ ಪ್ರಕರಣ ಬೆಳಕಿಗೆ ಬಂದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದರು. ಅವರ ಆದೇಶಕ್ಕೂ ಕ್ಯಾರೇ ಎನ್ನದ ಸಿಬ್ಬಂದಿ ಹಣ ವಸೂಲಿಗಾಗಿ ಯಾವ ಲೆವೆಲ್ಗಾದರೂ ಇಳಿಯುತ್ತಿದ್ದಾರೆ ಅನ್ನೋದಕ್ಕೆ ಮೈಸೂರು ಜಿಲ್ಲೆ ಮತ್ತೆ ಸಾಕ್ಷಿ ಆಗಿದೆ.
ಮಗುವಿನ ತಂದೆ ಏನು ಹೇಳಿದರು..?
ಹಣ ಕಟ್ಟಿಲ್ಲ ಎಂದು ನಮಗೆ ಕೊಡಬಾರದ ಶಿಕ್ಷೆಯನ್ನು ನೀಡಿದ್ದಾರೆ. ಮಗಳನ್ನು ಅಪಹರಿಸಿಕೊಂಡು ಆಕೆಗೆ ಹೊಡೆದಿದ್ದಾರೆ. ವಿಷಯ ಗೊತ್ತಾಗಿ ನಾವು ಮತ್ತೆ ಸಾಲ ಮಾಡಿ ಹಣವನ್ನು ನೀಡಿ ಮಗಳನ್ನು ಬಿಡಿಸಿಕೊಂಡು ಬಂದಿದ್ದೇವೆ. ನಾವು ಇನ್ನೂ ಒಂದು ವರ್ಷ ಹಣವನ್ನು ಕಟ್ಟಬೇಕಿದೆ. ಇವರು ಮತ್ತೆ ಆ ರೀತಿ ಮಾಡಲ್ಲ ಅನ್ನೋ ನಂಬಿಕೆ ಇಲ್ಲ. ಹೀಗಾಗಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯಿಂದ ನಮಗೆ ರಕ್ಷಣೆ ಬೇಕು ಅಂತಾ ನವೀನ್ ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಕಬಿನಿ ಡ್ಯಾಂ ಭರ್ತಿಗೆ 3 ಅಡಿ ಭಾಕಿ.. ಕೆಳಸೇತುವೆ ಮುಳುಗಡೆ, 20 ಗ್ರಾಮಗಳ ಸಂಪರ್ಕ ಕಡಿತ..! Photos
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ