/newsfirstlive-kannada/media/post_attachments/wp-content/uploads/2024/11/Hasanambe.jpg)
ಹಾಸನ: ಇತಿಹಾಸ ಪ್ರಸಿದ್ಧ ಶ್ರೀ ಹಾಸನಾಂಬೆ ತಾಯಿ ಮಹಿಮೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ತಾಯಿಯ ಪವಾಡ ಮತ್ತು ಭಕ್ತರ ನಂಬಿಕೆ ಹೆಚ್ಚಾಗಿರೋ ಪರಿಣಾಮ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಕೂಡ ದ್ವಿಗುಣವಾಗುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಾಸನಾಂಬೆ ದೇಗುಲ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಲು ಮುಂದಾಗಿದೆ.
ಈ ಬಾರಿ ಹಾಸನಾಂಬೆಯ ಹನ್ನೊಂದು ದಿನದ ದರ್ಶನೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಅ.24ರಿಂದ ನ.3ರವರೆಗೆ ದೇಗುಲ ಬಾಗಿಲು ತೆರೆದಿದ್ರೂ ಮೊದಲ ದಿನ ಹಾಗೂ ಕೊನೆಯ ದಿನದಂದು ಸಾರ್ವಜನಿಕ ದರ್ಶನಕ್ಕೆ ಅವಕಾಶವಿರಲಿಲ್ಲ. ಇನ್ನುಳಿದ 9 ದಿನ ಲಕ್ಷಾಂತರ ಭಕ್ತರು ದೇಶ ಮತ್ತು ವಿದೇಶದಿಂದ ಆಗಮಿಸಿ ದೇವಿ ದರ್ಶನ ಪಡೆದರು.
ಇನ್ನು, ಈ ಸಲ ಕೇವಲ ಲಡ್ಡು ಮಾರಾಟ ಹಾಗೂ ವಿಶೇಷ ದರ್ಶನದಿಂದಲೇ ಬರೋಬ್ಬರಿ 9.67 ಕೋಟಿ ರೂ. ಸಂಗ್ರಹವಾಗಿದೆ. 9 ದಿನದಲ್ಲಿ ಬರೋಬ್ಬರಿ 20 ಲಕ್ಷ ಭಕ್ತರು ಹಾಸನಾಂಬೆ ದೇಗುಲಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದಿದ್ದಾರೆ. ಎಷ್ಟೋ ಮಂದಿ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಸಾಧ್ಯವಾಗದೆ ವಾಪಸ್ ಆಗಿದ್ದಾರೆ.
ಒಟ್ಟು ಆದಾಯ ಎಷ್ಟು?
ತಲಾ 1 ಸಾವಿರದಂತೆ 71,575 ಭಕ್ತರು ಒಟ್ಟು 7.15 ಕೋಟಿ ರೂ. ನೀಡಿ ದರ್ಶನ ಪಡೆದಿದ್ದರು. ಇನ್ನೊಂದೆಡೆ ತಲಾ 300 ರೂಪಾಯಿಯಂತೆ ಒಟ್ಟು 58,331 ಭಕ್ತರು 1,74,99,300 ರೂ ನೀಡಿ ದರ್ಶನ ಪಡೆದ್ರು. ಲಡ್ಡು ಪ್ರಸಾದದಿಂದ 76,52,880 ಲಕ್ಷ ಆದಾಯ ಬಂದಿದೆ. ಒಟ್ಟಾರೆ ಈ ಬಾರಿ 9,67,27,180 ಕೋಟಿ ದಾಖಲೆ ಆದಾಯ ಬಂದಿದೆ.
ಎಣಿಕೆ ಕಾರ್ಯ ಶುರು
ಹಾಸನಾಂಬೆ ಹಾಗೂ ಚನ್ನಕೇಶವ ದೇವಾಲಯದಲ್ಲಿ ಇರಿಸಲಾದ ಹುಂಡಿಗಳ ಹಣ ಎಣಿಕೆ ಕಾರ್ಯ ಬೆಳಗ್ಗೆಯಿಂದಲೇ ಶುರುವಾಗಿದೆ. ಇದಕ್ಕಾಗಿ ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. 2023ರಲ್ಲಿ 8.72 ಕೋಟಿ ರೂ. ಹಾಗೂ 62 ಗ್ರಾಂ ಚಿನ್ನ ಸಂಗ್ರಹವಾಗಿತ್ತು. 2022ರಲ್ಲಿ 5.50 ಕೋಟಿ ರೂ. ಸಂಗ್ರಹವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ