/newsfirstlive-kannada/media/post_attachments/wp-content/uploads/2025/02/Tejasvi_Surya_Sivasri.jpg)
ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಯುವ ಸಂಸದ ತೇಜಸ್ವಿ ಸೂರ್ಯ ಅವರು ಶಿವಶ್ರೀ ಸ್ಕಂದಪ್ರಸಾದ್ ಅವರನ್ನು ವರಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಆದ್ರೆ ಇದೀಗ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಪ್ರಸಾದ್ ಮದುವೆಯ ಪೂರ್ಣ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
ಯುವ ಸಂಸದ ತೇಜಸ್ವಿ ಸೂರ್ಯ ಹಾಗೂ ಶಿವಶ್ರೀ ಸ್ಕಂದಪ್ರಸಾದ್ ಅವರ ಮದುವೆ ಸಮಾರಂಭ ಇದೇ ಮಾರ್ಚ್ 5 ಹಾಗೂ 6 ರಂದು ನಡೆಯಲಿದೆ. ಈ ವಿವಾಹ ಸಮಾರಂಭಕ್ಕೆ ಕೇವಲ ಕುಟುಂಬಸ್ಥರಿಗೆ, ಅತ್ಯಾಪ್ತರಿಗೆ, ಕೆಲವೇ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಖಾಸಗಿ ರೆಸಾರ್ಟ್ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಮದುವೆಗೆ ಹಾಗೂ ಆರತಕ್ಷತೆ ಎರಡಕ್ಕೂ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಅವರನ್ನ ಆಹ್ವಾನಿಸಲಾಗಿದೆ.
ಸಂಸದ ತೇಜಸ್ವಿ ಸೂರ್ಯ ಕುಟುಂಬ ಮದುವೆಯನ್ನು ತಮ್ಮ ಸ್ವಂತ ಊರು ಚಿಕ್ಕಮಗಳೂರು ಜಿಲ್ಲೆಯ ಕಡೂರು ಸಮೀಪದ ಗ್ರಾಮದಲ್ಲಿ ನಡೆಸಬೇಕು ಎಂದು ಯೋಜಿಸಿದ್ದರು. ಆದರೆ ಕೆಲ ಸಂಬಂಧಿಕರ ಸಲಹೆ ಮೇರೆಗೆ ಬೆಂಗಳೂರಿನ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಮದುವೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಎರಡು ಕುಟುಂಬಗಳು ಒಪ್ಪಿಗೆ ಸೂಚಿಸಿವೆ.
ಇದನ್ನೂ ಓದಿ:Champions Trophy; ಭಾರತ ಗೆದ್ದರೇ ಎಷ್ಟು ಕೋಟಿ ರೂಪಾಯಿ ಬಹುಮಾನ ಸಿಗುತ್ತೆ?
ಮಾರ್ಚ್ 5 ಬುಧವಾರ ಸಂಜೆ ವರಪೂಜೆ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 6 ಗುರುವಾರ ಬೆಳಗ್ಗೆ ಕಾಶಿಯಾತ್ರೆ, ಜೀರಿಗೆ ಬೆಲ್ಲ, ಮುಹೂರ್ತ ಹಾಗೂ ಲಾಜಾ ಹೋಮ ನಡೆಸಲಾಗುತ್ತದೆ. ಬಳಿಕ ಅದೇ ದಿನ ಬೆಳಗ್ಗೆ 9:30 ರಿಂದ 10:15ರ ನಡುವಿನ ತುಲಾ ಲಗ್ನದಲ್ಲಿ ವಧು ಶಿವಾಶ್ರೀ ಸ್ಕಂದಪ್ರಸಾದ್ರನ್ನ ತೇಜಸ್ವಿ ಸೂರ್ಯ ವರಿಸಲಿದ್ದಾರೆ. ಇದಾದ ಮೇಲೆ ಅಂದೇ ತೇಜಸ್ವಿ ಸೂರ್ಯರ ಗಿರಿನಗರ ನಿವಾಸದಲ್ಲಿ, ವಧುವನ್ನು ಮನೆ ತುಂಬಿಸಿಕೊಳ್ಳುವ ಕಾರ್ಯಕ್ರಮ ಇರುತ್ತದೆ.
ಮದುವೆ ನಡೆದು ಎರಡು ದಿನಗಳ ಬಳಿಕ ಅಂದರೆ ಮಾರ್ಚ್ 9 ರಂದು ಭಾನುವಾರ ಆರತಕ್ಷತೆ ಸಮಾರಂಭ ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಬೆಳಗ್ಗೆ 10:30 ರಿಂದ 1:30 ರವರೆಗೆ ರಿಸೆಪ್ಷನ್ ಸಡಗರದಿಂದ ನಡೆಯಲಿದ್ದು ರಾಜಕಾರಣಿಗಳು, ಸಿನಿಮಾರಂಗದವರು, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡವರು ಹಾಜರಾಗಲಿದ್ದಾರೆ. ಇನ್ನು ತೇಜಸ್ವಿ ಸೂರ್ಯ ಸಂಸದರಾಗಿರುವ ಕಾರಣ, ದೆಹಲಿಯಲ್ಲಿ ಸದ್ಯಕ್ಕೆ ಏನು ಪ್ರತ್ಯೇಕವಾದ ಕಾರ್ಯಕ್ರಮ ನಿಗದಿ ಆಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ