/newsfirstlive-kannada/media/post_attachments/wp-content/uploads/2025/03/THAILAND-EARTHQUEK.jpg)
ಮಯನ್ಮಾರ್ ಹಾಗೂ ಥೈಲ್ಯಾಂಡ್ನಲ್ಲಿ ಶತಮಾನದ ಪ್ರಬಲ ಭೂಕಂಪ ಎರಡೂ ದೇಶಗಳನ್ನು ಜರ್ಝರಿತಗೊಳಿಸಿದೆ. ಭೂಕಂಪಕ್ಕೆ ಬಲಿಯಾದವರ ಸಂಖ್ಯೆ 1,600 ದಾಟಿದೆ. ಘಟನೆಯಲ್ಲಿ 3,400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇನ್ನೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ.
ಇದು ಅಕ್ಷರಶಃ ನರಕ.. ಭೂಕಂಪದ ರೂಪದಲ್ಲಿ ಬಂದ ಜವರಾಯ ಸಾವಿನ ಕೇಕೆ ಹಾಕ್ತಿರೋದು ನಿಜಕ್ಕೂ ಘನಘೋರ.. ಕಣ್ಣು ಹಾಯಿಸಿದಷ್ಟೂ ಸ್ಮಶಾನ ಸದೃಶ್ಯ.. ಮುನಿದ ಪ್ರಕೃತಿ ಮಾತೆ ಸೃಷ್ಟಿಸಿದ ಅಲ್ಲೋಲ ಕಲ್ಲೋಲ. ನಿಜಕ್ಕೂ ಹೇಳತೀರದ್ದಾಗಿದೆ.
ಭಾರತದ ಪೂರ್ವಾತ್ಯ ರಾಷ್ಟ್ರಗಳಾದ ಮಯನ್ಮಾರ್ ಹಾಗೂ ಥೈಲ್ಯಾಂಡ್ ದೇಶಗಳು ರಣಭೀಕರ ಭೂಕಂಪಕ್ಕೆ ತತ್ತರಿಸಿವೆ.. ಭೂಕಂಪದಿಂದ ಸಾವು ನೋವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗ್ತಿದೆ. ಧರಶಾಹಿಯಾದ ಗಗನ ಚುಂಬಿಕಟ್ಟಡಗಳ ಅವಶೇಷಗಡಿ ಸಿಲುಕಿ, ಉಸಿರು ಚೆಲ್ಲಿದ್ದಾರೆ. ಎಲ್ಲೆಲ್ಲೂ ಸಾವಿನ ದರ್ಶನ ಆಗ್ತಿದೆ. ಇದುವರೆರೂ 1650 ಜನರು ಬಲಿಯಾಗಿದ್ದು, 3,400ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮಹಿಳೆಯರು, ಪುಟ್ಟ ಪುಟ್ಟ ಮಕ್ಕಳ ಆಕ್ರಂದನ ಕೇಳತೀರದಾಗಿದೆ.
ಇದನ್ನೂ ಓದಿ:ಥೈಲ್ಯಾಂಡ್ ಕಟ್ಟಡದ ಮೇಲೆ ಏಕಾಂತಕ್ಕೆ ಭಂಗ; ಕಪಲ್ ರೊಮ್ಯಾನ್ಸ್ ಮಾಡುತ್ತಿದ್ದ ವಿಡಿಯೋ ವೈರಲ್!
ಭೂಕಂಪದಿಂದಾಗಿ ರಸ್ತೆಗಳು, ಹೆದ್ದಾರಿಗಳು ವ್ಯಾಪಕವಾಗಿ ಬಿರುಕು ಬಿಟ್ಟಿದ್ದು ಸಂಚಾರ ವ್ಯವಸ್ಥೆ ಬಂದ್ ಆಗಿದೆ.. 250ಕ್ಕೂ ಹೆಚ್ಚು ದೊಡ್ಡ ದೊಡ್ಡ ಕಟ್ಟಡಗಳು ನೆಲಕ್ಕುರುಳಿವೆ. ಇದರಿಂದಾಗಿ ಲಕ್ಷಾಂತರ ಜನರ ಬದುಕು ಮೂರಾಬಟ್ಟೆಯಾಗಿದೆ. ಮನೆ-ಮಠಗಳನ್ನು ಕಳೆದುಕೊಂಡು ಅದೆಷ್ಟೋ ಮಂದಿ ಬೀದಿಗೆ ಬಂದಿದ್ದಾರೆ. ಮನೆ ಮಠ ಕಳೆದುಕೊಂಡು ನಿರಾತ್ರಿತರಾಗಿರುವವರಿಗೆ ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳು ನೆರವಿನ ಹಸ್ತ ಚಾಚಿವೆ. ಬ್ಯಾಂಕಾಕ್ನಲ್ಲಿ ರಕ್ಷಣಾ ತಂಡಗಳಿಗೆ ಸಹಾಯ ಮಾಡಲು ಥೈಲ್ಯಾಂಡ್ ರೋಬೋಟಿಕ್ ಯಂತ್ರವನ್ನು ನಿಯೋಜನೆ ಮಾಡಿದೆ.
ಭಾರತದ ಆಪರೇಷನ್ ಬ್ರಹ್ಮ ಮುಂದುವರಿದ್ದು, ಮಹಿಳಾ ಮತ್ತು ಮಕ್ಕಳ ಆರೈಕೆ ಸೇವೆಗಳು ಮತ್ತು 60 ಟನ್ ಪರಿಹಾರ ಸಾಮಗ್ರಿಗಳನ್ನು ಒಳಗೊಂಡಂತೆ 118 ಸದಸ್ಯರ ಭಾರತೀಯ ಸೇನೆಯ ವೈದ್ಯಕೀಯ ತಂಡ ಎರಡು ಸಿ -17 ವಿಮಾನಗಳಲ್ಲಿ ಮಯನ್ಮಾರ್ ತಲುಪಿದೆ.
ಇನ್ನು ಭೂಕಂಪಪೀಡಿತ ಥೈಲ್ಯಾಂಡ್ನಿಂದ 250ಕ್ಕೂ ಹೆಚ್ಚು ಕನ್ನಡಿಗರು ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ್ದಾರೆ. ಎರಡು ಗಂಟೆಗಳ ಕಾಲ ಮನೆ, ಕಟ್ಟಡಗಳಿಂದ ಹೊರಗಿದ್ದ ಕನ್ನಡಿಗರು ಯಥಾಸ್ಥಿತಿ ಬಳಿಕ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದೇವನಹಳ್ಳಿಯ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿಳಿದ ಕನ್ನಡಿಗರು ನಾವು ಬದುಕುಳಿದು ಬಂದಿದ್ದೇ ಭಾಗ್ಯ ಅಂತ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:ಎದೆ ಝಲ್ಲೆನ್ನಿಸೋ ದೃಶ್ಯಗಳು.. ಮಯನ್ಮಾರ್ನಲ್ಲಿ ಪದೇ ಪದೇ ಭೂಕಂಪಕ್ಕೆ ಕಾರಣ ಏನು? VIDEO ಇಲ್ಲಿದೆ!
ಮ್ಯಾನ್ಮಾರ್, ಥೈಲ್ಯಾಂಡ್ನಲ್ಲಿ ಆಗಾಗ್ಗೆ ಭೂಮಿ ನಡುಗುತ್ತಲೇ ಇದೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಎರಡು ದಿನಗಳ ಹಿಂದೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದ್ದ ಪ್ರವಾಸಿಗರ ಸ್ವರ್ಗ ಈಗ ರುದ್ರಭೂಮಿಯಾಗಿ ಬದಲಾಗಿರೋದು ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ