/newsfirstlive-kannada/media/media_files/2025/08/26/telagana-cm-revanth-reddy022-2025-08-26-14-42-42.jpg)
ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ತೆಲಂಗಾಣ ಸಿಎಂ ಹೇಳಿದ್ದೇನು?
ಕರ್ನಾಟಕದ ರೀತಿ ಗ್ಯಾರಂಟಿಗಳನ್ನು ನೀಡಿ ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್, ಇದೀಗ ಬೊಕ್ಕಸ ಬರಿದು ಮಾಡಿಕೊಂಡು ಪರದಾಡುತ್ತಿರುವುದನ್ನು ಸ್ವತಃ ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ‘ಸರ್ಕಾರದ ಬೊಕ್ಕಸ ಪೂರ್ತಿ ಬತ್ತಿಹೋಗಿದ್ದು, ಮಾರಾಟ ಮಾಡಿ ದೇಣಿಗೆ ಎತ್ತಲು ಸಹ ಸರ್ಕಾರದ ಬಳಿ ಭೂಮಿಯಿಲ್ಲ’ ಎಂದು ವಿಷಾದಿಸಿದ್ದಾರೆ.
ಉಸ್ಮಾನಿಯಾ ವಿವಿಯ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ಭೂಮಿ ಪೂಜೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ‘ತೆಲಂಗಾಣ ಸರ್ಕಾರದ ಬೊಕ್ಕಸ ಪೂರ್ತಿ ಒಣಗಿಹೋಗಿದೆ. ಸರ್ಕಾರದಲ್ಲಿ ಮಾರಾಟ ಮಾಡಲು ಮತ್ತು ಹಣವನ್ನು ಸಂಗ್ರಹಿಸಲು ಯಾವುದೇ ಭೂಮಿಯೂ ಲಭ್ಯವಿಲ್ಲ’ ಎಂದರು. ‘ಇಷ್ಟಾದರೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, ಶೇ.1.5ರಷ್ಟು ಹಣದುಬ್ಬರ ದರದೊಂದಿಗೆ ದೇಶದಲ್ಲಿಯೇ ಅತ್ಯಂತ ಕಡಿಮೆ ಹಣದುಬ್ಬರ ಹೊಂದಿರುವ ಮೊದಲ ರಾಜ್ಯ ತೆಲಂಗಾಣ’ ಎಂದರು.
ಅಧಿಕಾರ ವಹಿಸಿಕೊಂಡ ಮೇಲೆ ಅರ್ಥವಾಯ್ತು!
ಈ ಹಿಂದೆಯೂ ಸರ್ಕಾರ ಆರ್ಥಿಕವಾಗಿ ಸೋತುಹೋಗಿರುವ ಬಗ್ಗೆ ತಿಳಿಸಿದ್ದ ರೇವಂತ್ ರೆಡ್ಡಿ, ‘ಚುನಾವಣೆಯಲ್ಲಿ ಗೆದ್ದು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಬಗ್ಗೆ ನಿಜವಾದ ತಿಳಿವಳಿಕೆ ಬಂತು. ನಾವೇ ಘೋಷಿಸಿದ ಗ್ಯಾರಂಟಿಗೆ ಮೀಸಲಾಗಿರಿಸಲು ಸರ್ಕಾರದ ಬಳಿ ದುಡ್ಡಿಲ್ಲ. ಗ್ಯಾರಂಟಿ ಬಗ್ಗೆ ದೇಶಾದ್ಯಂತ ಚರ್ಚೆಯಾಗಬೇಕು’ ಎಂದಿದ್ದರು. ಅಲ್ಲದೆ, ‘ಕೇಂದ್ರ ಸರ್ಕಾರದ ಬಳಿ ಹಣ ಕೇಳಲು ಹೋದರೆ ಅಲ್ಲಿ ಯಾರೂ ನಾವು ಬಂದಾಗ ಬಾಗಿಲು ತೆರೆಯುತ್ತಿಲ್ಲ’ ಎಂದು ಹೇಳಿ ಸುದ್ದಿಯಾಗಿದ್ದರು.
ಬರೋಬ್ಬರಿ 7.5 ಲಕ್ಷ ಕೋಟಿ ರೂ. ಸಾಲ!
ತೆಲಂಗಾಣ ರಾಜ್ಯ ಸರ್ಕಾರದ ಮೊತ್ತ ಬರೋಬ್ಬರಿ 7.5 ಲಕ್ಷ ಕೋಟಿ ರೂಪಾಯಿ ಆಗಿದೆ. ಈ ಹಿಂದಿನ ಬಿಆರ್ಎಸ್ ಸರ್ಕಾರವು ವಿವಿಧ ಯೋಜನೆಗಳ ಜಾರಿಗಾಗಿ ಭಾರಿ ಪ್ರಮಾಣದ ಸಾಲ ಮಾಡಿದೆ. ಈಗಿನ ಕಾಂಗ್ರೆಸ್ ಸರ್ಕಾರವು ಸಾಲ ಮಾಡಿದೆ. ಇದರಿಂದಾಗಿ ತೆಲಂಗಾಣ ರಾಜ್ಯ ಸರ್ಕಾರದ ಸಾಲದ ಮೊತ್ತ 7.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ತೆಲಂಗಾಣ ಕಾಂಗ್ರೆಸ್ ನೀಡಿದ್ದ 6 ಗ್ಯಾರಂಟಿ!
ಗ್ಯಾರಂಟಿ ನಂಬರ್ 01) ಮಹಿಳೆಯರಿಗೆ ತಿಂಗಳಿಗೆ 2,500 ರೂಪಾಯಿ ನೀಡಿಕೆ. 500 ರೂಪಾಯಿಗೆ ಸಿಲಿಂಡರ್, ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ
ಗ್ಯಾರಂಟಿ ನಂಬರ್ 02) ರೈತರು, ಹಿಡುವಳಿದಾರರಿಗೆ ಎಕರೆಗೆ 15 ಸಾವಿರ ರು.ನೆರವು. ಕೃಷಿ ಕಾರ್ಮಿಕರಿಗೆ 12000 ರೂಪಾಯಿ. ನೆರವು
ಗ್ಯಾರಂಟಿ ನಂಬರ್ 03) ವಸತಿರಹಿತರಿಗೆ ನಿವೇಶನ. ಮನೆ ನಿರ್ಮಾಣಕ್ಕೆ 5 ಲಕ್ಷ ರೂಪಾಯಿ. ತೆಲಂಗಾಣ ಹೋರಾಟಗಾರರಿಗೆ 250 ಚದರ ಅಡಿ ನಿವೇಶನ
ಗ್ಯಾರಂಟಿ ನಂಬರ್ 04) ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್. ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿಗಳ ಶಿಕ್ಷಣ ಭರವಸೆ ಕಾರ್ಡ್
ಗ್ಯಾರಂಟಿ ನಂಬರ್ 05) ವೃದ್ಧರು, ವಿಧವೆಯರು, ಅಂಗವಿಕಲರು, ಬೀಡಿ ಕಾರ್ಮಿಕರು, ಒಂಟಿ ಮಹಿಳೆಯರು, ಕಲ್ಲು ಕ್ವಾರಿಗಳು ಮತ್ತು ಕೈಮಗ್ಗ ಕಾರ್ಮಿಕರು, ಹೆಚ್ಐವಿ ಪೀಡಿತರು, ಡಯಾಲಿಸಿಸ್ ರೋಗಿಗಳಿಗೆ 4 ಸಾವಿರ ರೂ. ಮಾಸಿಕ ಪಿಂಚಣಿ ನೀಡಿಕೆ.
ಗ್ಯಾರಂಟಿ ನಂಬರ್06) ರಾಜೀವ್ ಆರೋಗ್ಯ ವಿಮೆಗೆ 10 ಲಕ್ಷ ರೂಪಾಯಿ ನೀಡಿಕೆ.
ದೇಶದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳೆರಡೂ ಗ್ಯಾರಂಟಿ ಸ್ಕೀಮ್ ಗಳನ್ನು ಬೇರೆ ಬೇರೆ ರೂಪದಲ್ಲಿ ಜಾರಿಗೆ ತಂದಿವೆ. ಗ್ಯಾರಂಟಿ ಸ್ಕೀಮ್ ಕೊಟ್ಟ ಹಿಮಾಚಲ ಪ್ರದೇಶ ಆರ್ಥಿಕವಾಗಿ ದಿವಾಳಿಯಾಗಿದೆ. ತೆಲಂಗಾಣದ ಕಾಂಗ್ರೆಸ್ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ. ಬಿಜೆಪಿ ಆಳ್ವಿಕೆಯ ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯ ಸರ್ಕಾರಗಳು ಗ್ಯಾರಂಟಿ ಸ್ಕೀಮ್ ಗಳಿಗೆ ಹಣ ಹೊಂದಿಸಲು ಪರದಾಡುತ್ತಿವೆ. ಒಂದೆರೆಡು ಗ್ಯಾರಂಟಿ ಸ್ಕೀಮ್ ಜಾರಿಗೆ ತರುವುದಕ್ಕೂ ಟಿಡಿಪಿ-ಬಿಜೆಪಿ ಮೈತ್ರಿಯ ಆಂಧ್ರ ಸರ್ಕಾರ ಪರದಾಡುತ್ತಿದೆ.
ಆದರೇ, ಪಂಚ ಗ್ಯಾರಂಟಿ ಸ್ಕೀಮ್ ಗಳಿಗೆ ವರ್ಷಕ್ಕೆ 58 ರಿಂದ 60 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಮಾಡಿ ಆರ್ಥಿಕವಾಗಿ ಸುಭದ್ರವಾಗಿರೋದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ. ಆದರೇ, ಕರ್ನಾಟಕ ರಾಜ್ಯ ಸರ್ಕಾರ, ಗ್ಯಾರಂಟಿ ಸ್ಕೀಮ್ ಗಳಿಗಾಗಿ ಮಾಡುತ್ತಿರುವ ಸಾಲದ ಪ್ರಮಾಣ ಏರುತ್ತಿದೆ. ಆದರೇ, ಕರ್ನಾಟಕ ರಾಜ್ಯ ಸರ್ಕಾರ ಬೇರೆ ರಾಜ್ಯ ಸರ್ಕಾರಗಳಂತೆ ಆರ್ಥಿಕವಾಗಿ ದಿವಾಳಿಯಾಗಿಲ್ಲ ಅನ್ನೋದು ಕರ್ನಾಟಕ ಜನರ ಪಾಲಿಗೆ ಸಮಾಧಾನಕರ ವಿಷಯ. ಗ್ಯಾರಂಟಿ ಸ್ಕೀಮ್ ಜಾರಿ ಮಾಡಿದ್ದ ಪಂಜಾಬ್ನ ಅಪ್ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ. ಮಹಾರಾಷ್ಟ್ರದಲ್ಲಿ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂಪಾಯಿ ಹಣ ನೀಡಲು ಕಷ್ಟವಾಗುತ್ತಿದೆ ಎಂದು ಅಲ್ಲಿನ ಸರ್ಕಾರವೇ ಹೇಳಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.