/newsfirstlive-kannada/media/media_files/2025/08/20/rajaasthan-drum-murder-2025-08-20-16-34-02.jpg)
ಹನ್ಸರಾಜ್ ಮತ್ತು ಪತ್ನಿ ಸುನೀತಾ
ರಾಜಸ್ಥಾನದ (Rajasthan) ಅಲ್ವಾರ್ನಲ್ಲಿ ನೀಲಿ ಬಣ್ಣದ ಡ್ರಮ್ನಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಆಂಕಲ್ ಜೊತೆ ಅಮ್ಮ ಸೇರಿಕೊಂಡು ಅಪ್ಪನ ದೇಹವನ್ನು ಡ್ರಮ್ಗೆ ಹಾಕುತ್ತಿದ್ದುದನ್ನು ನಾನು ನೋಡಿದೆ ಎಂದು ಅವರ 8 ವರ್ಷದ ಪುತ್ರ ಸಾಕ್ಷಿ ನುಡಿದಿದ್ದಾನೆ. ಪ್ರಿಯಕರನೊಂದಿಗೆ ಸೇರಿಕೊಂಡು ಮಹಿಳೆ ತನ್ನ ಗಂಡನನ್ನು ಕೊಂದಿರುವ ಪ್ರಕರಣಕ್ಕೆ ಆಕೆಯ 8 ವರ್ಷದ ಪುತ್ರ ಸಾಕ್ಷಿಯಾಗಿದ್ದಾನೆ. ಡ್ರಮ್ನಲ್ಲಿ ನೀರು ಸಂಗ್ರಹಿಸಿ ಇಡುತ್ತಿದ್ದೆವು. ಅದರಲ್ಲಿ ಅಪ್ಪನ ಶವವನ್ನು ಅಮ್ಮ ಹಾಕುತ್ತಿದ್ದುದನ್ನು ನಾನು ನೋಡಿದೆ ಎಂದು ಪೊಲೀಸರಿಗೆ ಬಾಲಕ ತಿಳಿಸಿದ್ದಾನೆ. ಮನೆ ಮಾಲೀಕರ ಮಗನನ್ನು ಬಾಲಕ ಆಂಕಲ್ ಎಂದು ಕರೆಯುತ್ತಿದ್ದ. ಹೀಗೆ ಹೆಂಡತಿಯಿಂದಲೇ ಕೊಲೆಯಾದವನು ಹನ್ಸರಾಜ್. ಹನ್ಸರಾಜ್ ನ ಹಿರಿಯ ಮಗ ಹರ್ಷಲ್ ತನ್ನ ತಂದೆಯ ಹತ್ಯೆಯನ್ನು ಕಣ್ಣಾರೆ ಕಂಡಿದ್ದಾನೆ. ಅದನ್ನು ಈಗ ಪೊಲೀಸರಿಗೂ ತಿಳಿಸಿದ್ದಾನೆ. ತಂದೆಯ ಹತ್ಯೆ ಕೇಸ್ ನಲ್ಲಿ 8 ವರ್ಷದ ಮಗನೇ ಪ್ರತ್ಯಕ್ಷದರ್ಶಿ ಸಾಕ್ಷಿ.
ಮೀರತ್ ಮಾದರಿಯಲ್ಲಿ ಅಲ್ವಾರ್ ನಲ್ಲಿ ಹತ್ಯೆ
ನೀರು ಸಂಗ್ರಹಿಸುವ ಡ್ರಮ್ ನಲ್ಲೇ ಮಹಿಳೆ, ತನ್ನ ಗಂಡನ ಶವವನ್ನು ಹಾಕಿದ್ದಾಳೆ. ಈ ಹಿಂದೆ ಉತ್ತರ ಪ್ರದೇಶದ ಮೀರತ್ ನಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕೊಂದು ಬ್ಲೂ ಬಣ್ಣದ ಡ್ರಮ್ ನಲ್ಲಿ ಶವವನ್ನು ಹಾಕಿದ್ದಳು. ಈಗ ರಾಜಸ್ಥಾನದ ಅಲ್ವಾರ್ ನಲ್ಲೂ ಪತಿಯನ್ನು ಕೊಂದು ಶವ ಹಾಕಲು ಮತ್ತೆ ಬ್ಲೂ ಡ್ರಮ್ ಬಳಸಿದ್ದಾರೆ. ಈ ಹಿಂದೆ ಮೀರತ್ ನಲ್ಲಿ ಬ್ಲೂ ಬಣ್ಣದ ಡ್ರಮ್ ಗಳ ಮಾರಾಟವೇ ಕುಸಿದು ಹೋಗಿತ್ತು. ಈಗ ರಾಜಸ್ಥಾನದ ಅಲ್ವಾರ್ ನಲ್ಲಿ ಬ್ಲೂ ಡ್ರಮ್ ಕಂಡರೇ ಗಂಡಸರು ಬೆಚ್ಚಿ ಬೀಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಕ್ಷಿ ನುಡಿದ ಎಂಟು ವರ್ಷದ ಮಗ!
ನನ್ನ ತಂದೆ, ತಾಯಿ ಮತ್ತು ಆಂಕಲ್ (ಅವರ ಮನೆ ಮಾಲೀಕರ ಮಗ) ಒಟ್ಟಿಗೆ ಕುಡಿಯುತ್ತಿದ್ದರು. ನನ್ನ ತಾಯಿಯ ಬಳಿ ಕೇವಲ ಎರಡು ಪೆಗ್ಗಳು ಮಾತ್ರ ಇತ್ತು. ಆದರೆ ನನ್ನ ತಂದೆಯನ್ನು ಕೊಂದ ಆಂಕಲ್ ತುಂಬಾ ಕುಡಿದಿದ್ದರು. ಈ ವೇಳೆ ಅಪ್ಪ, ಅಮ್ಮನನ್ನು ಹೊಡೆಯುತ್ತಿದ್ದರು. ಆಂಕಲ್ ಜೀತೇಂದ್ರ ಶರ್ಮಾ ಮಧ್ಯಪ್ರವೇಶಿಸಲು ಮುಂದಾದರು. ಆದರೆ ನನ್ನ ತಂದೆ, ‘ನೀನು ಅವಳನ್ನು ಉಳಿಸಿದರೆ, ನಾನು ನಿನ್ನನ್ನೂ ಕೊಲ್ಲುತ್ತೇನೆ’ ಎಂದು ಕೂಗಾಡಿದರು. ಆಗ ತಂದೆಯ ಮೇಲೆ ಆಂಕಲ್ ಜೀತೇಂದ್ರ ಶರ್ಮಾ ಹಲ್ಲೆ ಮಾಡಲು ಮುಂದಾದರು ಎಂದು ಬಾಲಕ ಘಟನೆ ಬಗ್ಗೆ ವಿವರಿಸಿದ್ದಾನೆ. ನಾನು ಎಚ್ಚರವಾದಾಗ, ನನ್ನ ತಂದೆ ಹಾಸಿಗೆಯ ಮೇಲೆ ಇರುವುದನ್ನು ನೋಡಿದೆ. ನಂತರ ನಾನು ಮತ್ತೆ ಮಲಗಿದೆ. ಆದರೆ ಮತ್ತೆ ಎಚ್ಚರವಾದಾಗ, ನಾನು ಆಂಕಲ್ ಮತ್ತು ನನ್ನ ತಾಯಿಯನ್ನು ಮಾತ್ರ ನೋಡಿದೆ. ಮನೆ ಮಾಲೀಕರು ನನ್ನ ತಂದೆಯ ಬಗ್ಗೆ ಕೇಳಲು ಪ್ರಾರಂಭಿಸಿದರು. ಪೊಲೀಸರಿಗೆ ದೂರು ಕೊಡುವುದಾಗಿ ಬೆದರಿಕೆ ಹಾಕಿದರು. ಆಗ ಆಂಕಲ್ ನಮ್ಮನ್ನು ಇಟ್ಟಿಗೆ ಗೂಡುಗೆ ಕರೆದೊಯ್ದರು ಎಂದು ತಿಳಿಸಿದ್ದಾನೆ.
ಹನ್ಸರಾಜ್ ಶವ ಪತ್ತೆಯಾದ ಬ್ಲೂ ಬಣ್ಣದ ಡ್ರಮ್
ಪೊಲೀಸರ ತನಿಖೆಯ ಪ್ರಕಾರ, ಹನ್ಸರಾಜ್ ಅಂದು ಅತಿಯಾಗಿ ಮದ್ಯ ಸೇವಿಸಿದ್ದಾರೆ. ಆದಾದ ಬಳಿಕ ಆರೋಪಿಗಳು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಹನ್ಸರಾಜ್ ಹತ್ಯೆ ಮಾಡಿದ್ದಾರೆ. ಬಳಿಕ ಶವವನ್ನು ನೀರು ತುಂಬುವ ಡ್ರಮ್ ನಲ್ಲಿ ಹಾಕಿದ್ದಾರೆ. ಮೊದಲ ಮಹಡಿಯಲ್ಲಿ ಹನ್ಸರಾಜ್, ಪತ್ನಿ , ಮಕ್ಕಳು ವಾಸ ಇದ್ದರು. ಮನೆಯ ಮೊದಲ ಮಹಡಿಯ ಡ್ರಮ್ ನಲ್ಲೇ ಹನ್ಸರಾಜ್ ಶವ ಇತ್ತು.
ಆದರೇ, ಕೆಲ ದಿನಗಳ ಬಳಿಕ ಮನೆಯಿಂದ ಶವ ಕೊಳೆತು ಕೆಟ್ಟ ವಾಸನೆ ಬಂದಿದೆ. ಹೀಗಾಗಿ ಮನೆ ಮಾಲಕಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಸೀಲ್ ಮಾಡಿದ್ದ ಡ್ರಮ್ ಅನ್ನು ತೆರೆದು ನೋಡಿದ್ದಾರೆ. ಆಗ ಹನ್ಸರಾಜ್ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತ್ನಿ ಸುನೀತಾ ಹಾಗೂ ಆಕೆಯ ಬಾಯ್ ಫ್ರೆಂಡ್ , ಹನ್ಸರಾಜ್ ನನ್ನು ಕೊಂದು ಡ್ರಮ್ ಗೆ ಹಾಕಿ, ಉಪ್ಪು ಹಾಕಿದ್ದಾರೆ. ಶವ ಕೊಳೆತು ಹೋಗಲಿ ಎಂದು ಉಪ್ಪು ಹಾಕಿದ್ದರು.
ಹತ್ಯೆಯ ಬಳಿಕ ಪತ್ನಿ ಸುನೀತಾ ನಾಪತ್ತೆಯಾಗಿದ್ದರು. ಪೊಲೀಸರು 50 ಕಿಮೀ ದೂರದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಹನ್ಸರಾಜ್ ಮೂಲತಃ ಉತ್ತರ ಪ್ರದೇಶ ರಾಜ್ಯದವನು. ರಾಜಸ್ಥಾನದ ಇಟ್ಟಿಗೆ ಗೂಡುನಲ್ಲಿ ಕೂಲಿ ಕೆಲಸ ಮಾಡಲು ವಲಸೆ ಬಂದಿದ್ದ. ಹನ್ಸರಾಜ್ ಗೆ ಹರ್ಷಲ್ ಸೇರಿದಂತೆ ಮೂರು ಜನ ಮಕ್ಕಳು. ಈಗ ಮಕ್ಕಳನ್ನು ಅವರ ತಾತ, ಅಜ್ಜಿ ವಶಕ್ಕೆ ನೀಡಲು ಪೊಲೀಸರು ನಿರ್ಧರಿಸಿದ್ದಾರೆ. ತಾಯಿ ಸುನೀತಾ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ.
ಸುನೀತಾ ಹಾಗೂ ಜೀತೇಂದ್ರ ಶರ್ಮಾ ನಡುವೆ ಕೆಲ ತಿಂಗಳಿನಿಂದ ಅನೈತಿಕ ಸಂಬಂಧ ಬೆಳೆದಿತ್ತು. ಇದು ಪತಿ ಹನ್ಸರಾಜ್ ಗೆ ಗೊತ್ತಾದ ಬಳಿಕ ಆಗ್ಗಾಗ್ಗೆ ಜಗಳವಾಗಲು ಶುರುವಾಗಿದೆ. ಆ ಜಗಳವೇ ಈಗ ಕೊಲೆಯಲ್ಲಿ ಅಂತ್ಯವಾಗಿದೆ.
ಆರೋಪಿಗಳನ್ನು ಬಂಧಿಸಿರುವ ಅಲ್ವಾರ್ ಜಿಲ್ಲಾ ಪೊಲೀಸರು. ಸುನೀತಾ, ಜೀತೇಂದ್ರ ಶರ್ಮಾ ಬಂಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.