/newsfirstlive-kannada/media/post_attachments/wp-content/uploads/2024/07/Muda-1.jpg)
ನ್ಯೂಸ್ ಫಸ್ಟ್ ವರದಿ ಫಲವಾಗಿ ಮುಡಾ 50:50 ಅನುಪಾತದ ಹಗರಣದ ತನಿಖೆ ಶುರುವಾಗಿದೆ. ವರದಿ ಪ್ರಸಾರವಾದ ಬೆನ್ನಲ್ಲೆ ಖುದ್ದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮೈಸೂರಿಗೆ ದೌಡಾಯಿಸಿದ್ದಾರೆ. ತಪ್ಪಿತಸ್ಥರ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ಬಿಸಿಮುಟ್ಟಿಸಲಾಗಿದೆ.
ಮುಡಾ ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ಎತ್ತಂಗಡಿ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕರ್ಮಕಾಂಡವನ್ನು ಕಳೆದ ಮೂರು ದಿನಗಳಿಂದ ನ್ಯೂಸ್​ಫಸ್ಟ್​ ನಿಮ್ಮ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. 20-30 ವರ್ಷಗಳ ಹಳೆ ಸೈಟ್​ ಅನ್ನು ಕಾನೂನು ಬಾಹಿರವಾಗಿ ಹಂಚಿ 2 ಸಾವಿರ ಕೋಟಿ ಗೋಲ್ಮಾಲ್​ ಬಗ್ಗೆ ನ್ಯೂಸ್​ಫಸ್ಟ್​ ದಿಟ್ಟ ವರದಿ ಮಾಡಿತ್ತು. ಇದೀಗ ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಮುಡಾ ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ಅನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿ, ತನಿಖೆಗೆ ಆದೇಶಿಸಿದೆ.
ಇದನ್ನೂ ಓದಿ: ತುಂಬಿದ ಕೃಷ್ಣ ನದಿ, 40 ಅಡಿ ಆಳದ ಕಂದಕಕ್ಕೆ ಉರುಳಿ ಬಿದ್ದ ಬಸ್​.. ರಾಜ್ಯದಲ್ಲಿ ಮಳೆಯಿಂದ ಸಾಲು ಸಾಲು ಅವಾಂತರ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ 50:50 ಅನುಪಾತದ ನೆಪದಲ್ಲಿ ಬಹುಕೋಟಿ ಹಗರಣ ನಡೆದಿದೆ. ಇದರಲ್ಲಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಕೆ.ಮರಿಗೌಡ ಕೂಡ ಭಾಗಿ ಆಗಿರುವ ಆರೋಪ ಕೇಳಿ ಬಂದಿತ್ತು. ಅಧ್ಯಕ್ಷ ಸ್ಥಾನದಲ್ಲಿ ಕುಳಿತು ಸರ್ಕಾರದ ನಿಯಮ ಉಲ್ಲಂಘಿಸಲು ಆಯುಕ್ತರ ಮೇಲೆ ಒತ್ತಡ ತಂದಿದ್ದಾರೆ. ಸರ್ವೇ ನಂಬರ್ 86ರ ಪ್ರಕರಣದಲ್ಲಿ ಪರಿಹಾರ ನೀಡುವಂತೆ ಬರೆದಿರುವ ಆಂತರಿಕ ಟಿಪ್ಪಣಿ ನ್ಯೂಸ್ ಫಸ್ಟ್​ಗೆ ಲಭ್ಯವಾಗಿದೆ.
ಮೂಡಾ ಅಕ್ರಮದ ಬಗ್ಗೆ ದಿನಕ್ಕೊಂದು ದಾಖಲೆಗಳು ಹೊರಬರುತ್ತಿದ್ದಂತೆ, ಇದರಿಂದ ಇಡೀ ಸರ್ಕಾರವೇ ಮುಜುಗರಕ್ಕೆ ಸಿಲುಕಿದೆ. ಇನ್ನು ಬಿಜೆಪಿ ನಾಯಕರು ಸಚಿವ ಭೈರತಿ ಸುರೇಶ್​ ರಾಜೀನಾಮೆಗೆ ಪಟ್ಟು ಹಿಡಿದು ಬೀದಿಗೆ ಇಳಿದಿದ್ರು. ಇದರ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಮೈಸೂರಿಗೆ ದಾಡಾಯಿಸಿ ಮೂಡಾ ಅಧಿಕಾರಿಗಳು ಜೊತೆ ಸಭೆ ನಡೆಸಿದ್ರು. ಬಳಿಕ ಇದು ನಮ್ಮ ಸರ್ಕಾರದಲ್ಲಿ ಆಗಿರೋದಲ್ಲ, ಬಿಜೆಪಿ ಅವಧಿಯಲ್ಲೇ ಈ 50:50 ನಿರ್ಣಯ ಆಗಿದೆ. ಇದೀಗ ಅಕ್ರಮ ಕೇಳಿ ಬಂದಿದ್ದು, ಮೂವರು ಅಧಿಕಾರಿಗಳನ್ನು ಎತ್ತಂಗಡಿ ಮಾಡಿದ್ದೇವೆ ಎಂದ್ರು.
ನ್ಯೂಸ್​ಫಸ್ಟ್​ ವರದಿ ಇಂಪ್ಯಾಕ್ಟ್​
ಮೂಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಕಾರ್ಯದರ್ಶಿ ಶೇಖರ್ ಸೇರಿದಂತೆ ಮೂವರನ್ನು ಎತ್ತಂಗಡಿ ಮಾಡಿದ್ದಾರೆ. ಹಾಗೂ 50:50 ಅನುಪಾತದಡಿ ಹಂಚಿಕೆ ಆಗಿರುವ ಎಲ್ಲಾ ನಿವೇಶನಗಳನ್ನು ರದ್ದು ಮಾಡಿದ್ದಾರೆ. ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ತಿಂಗಳ ಒಳಗೆ ವರದಿ ನೀಡಲು ಸೂಚನೆ ನೀಡಿದ್ದಾರೆ. ಹಾಗೂ ತನಿಖಾ ವರದಿ ಬರುವವರೆಗೂ ಮೂಡಾ ಸಭೆ ನಡೆಸದಂತೆ ಮುಡಾ ಅಧ್ಯಕ್ಷ ಕೆ.ಮರಿಗೌಡಗೂ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ ತನಿಖಾ ತಂಡ ರಚಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಆದೇಶ ಹೊರಡಿಸಿದ್ದಾರೆ. ತನಿಖಾ ತಂಡದ ಅಧ್ಯಕ್ಷರಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತ ವೆಂಕಟಾಚಲಪತಿ ನೇಮಿಸಿದ್ದು, ಹೆಚ್ಚುವರಿ ನಿರ್ದೇಶಕ ಎಂ.ಸಿ.ದಿನೇಶ್, ಶಶಿಕುಮಾರ್, ಜಂಟಿ ನಿರ್ದೇಶಕಿ ಶಾಂತಲಾ, ಉಪ ನಿರ್ದೇಶಕ ಪ್ರಕಾಶ್ ತನಿಖಾ ತಂಡದ ಇತರೆ ಸದಸ್ಯರಾಗಿದ್ದಾರೆ. 15 ದಿನಗಳ ಒಳಗೆ ಸಮಗ್ರ ವರದಿ ನೀಡಲು ತನಿಖಾ ತಂಡಕ್ಕೆ ಗಡುವು ನೀಡಿದ್ದು, ತನಿಖೆಗೆ ಸಹಕರಿಸುವಂತೆ ಮೂಡಾ ಆಯುಕ್ತರಿಗೆ ಕಟ್ಟಪ್ಪಣೆ ನೀಡಲಾಗಿದೆ.
ಮುಡಾದಲ್ಲಿ ಮತ್ತೆ ನಾಲ್ವರು ಅಧಿಕಾರಿಗಳ ವರ್ಗಾವಣೆ
ಕರ್ತವ್ಯದಲ್ಲಿ ಲೋಪ ಆರೋಪದಡಿ ಮತ್ತೆ ನಾಲ್ವರು ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ.ಲತಾ ಆದೇಶಿಸಿದ್ದಾರೆ. ಸಹಾಯಕ ಇಂಜಿನಿಯರ್ ನಾಗರಾಜು, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸಮೀರಾ ಕೌಸರ್, ಕಾರ್ಯಪಾಲಕ ಇಂಜಿನಿಯರ್ಸ್ ಯಾದವಗಿರಿ, ನಾಗೇಶ್ ವರ್ಗಾವಣೆ ಮಾಡಿ ಬಿಸಿ ಮುಟ್ಟಿಸಲಾಗಿದೆ.
ಅದೇನೆ ಇರಲಿ ನ್ಯೂಸ್​ಫಸ್ಟ್​ ವರದಿ ಬೆನ್ನಲ್ಲೇ ಮೂಡಾ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ, ತನಿಖೆಗೆ ಆದೇಶಿಸಿದೆ. ತನಿಖಾ ವರದಿ ಬಂದ ಬಳಿಕ ಮೂಡಾದಲ್ಲಿ ಮೈದಿರುವವರು ಯಾರು ಅನ್ನೋದು ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ