/newsfirstlive-kannada/media/post_attachments/wp-content/uploads/2025/05/Pahalgam-2.jpg)
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಪಹಲ್ಗಾಮ್ ದಾಳಿಯ ಬಳಿಕ ಭಾರತಕ್ಕೆ ಬಿಸಿ ಮುಟ್ಟಿಸಲು ಹೋಗಿ ಪಾಕಿಸ್ತಾನ ಮತ್ತೆ ತನ್ನ ಕೈ ಸುಟ್ಟುಕೊಂಡಿದೆ. ಮುಖವಾಡ ಕಳಚಿ ಬೀಳ್ತಾ ಇದ್ರು ಮೇಕಪ್ ಮಾಡಿಕೊಳ್ಳೋದಕ್ಕೆ ಹೊರಟ ಪಾಕಿಸ್ತಾನ ಬಣ್ಣ ಮತ್ತೆ ಬಯಲಾಗಿದೆ.
ಐಎಸ್ಐ ಮತ್ತು ಎಲ್ಇಟಿ ಕೈವಾಡ
ಪಹಲ್ಗಾಮ್ ದಾಳಿ ಕುರಿತು ಭಯೋತ್ಪಾದನಾ ನಿಗ್ರಹ ದಳಕ್ಕೆ ಎನ್ಐಎ ಪ್ರಾಥಮಿಕ ವರದಿ ನೀಡಿದ್ದು ಅದರಲ್ಲಿ ದಾಳಿ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಅಂತ ಹೇಳಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ ಮತ್ತು ಭಯೋತ್ಪಾದಕ ಗುಂಪು ಎಲ್ಇಟಿ ಕೈವಾಡ ಇದೆ ಅಂತ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಯತ್ನಾಳ್ ಸವಾಲು ಸ್ವೀಕಾರ.. ಶಾಸಕ ಸ್ಥಾನಕ್ಕೆ ಶಿವಾನಂದ ಪಾಟೀಲ್ ದಿಢೀರ್ ರಾಜೀನಾಮೆ
NIA ವರದಿಯಲ್ಲೇನಿದೆ?
NIA ಮೂಲಗಳ ಪ್ರಕಾರ, 26 ಜನರನ್ನ, ಮುಖ್ಯವಾಗಿ ಪ್ರವಾಸಿಗರನ್ನ ಕೊಂದ ಭಯೋತ್ಪಾದಕ ದಾಳಿಯ ಹಿಂದಿನ ಪಿತೂರಿಯನ್ನ ಎಲ್ಇಟಿ ಒಳಗೆ ಅಭಿವೃದ್ಧಿಪಡಿಸಲಾಗಿದೆಯಂತೆ. ಇದು ಹಿರಿಯ ಐಎಸ್ಐ ಅಧಿಕಾರಿಯ ನಿರ್ದೇಶನದ ಮೇರೆಗೆ ನಡೆದಿದೆ ಎಂದು ಆರೋಪಿಸಲಾಗಿದೆ. ಪಾಕಿಸ್ತಾನದಲ್ಲಿರುವ ಲಷ್ಕರ್ ಪ್ರಧಾನ ಕಚೇರಿಯಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಲಾಗ್ತಿದೆ. ದಾಳಿಯ ಕೇಂದ್ರಬಿಂದುವಾಗಿದ್ದ ಇಬ್ಬರು ಭಯೋತ್ಪಾದಕರನ್ನ ಹಶ್ಮಿ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಎಂದು ಗುರುತಿಸಲಾಗಿದ್ದು, ಇವರಿಬ್ರು ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಟ್ಟಿದೆ. ವಿಚಾರಣೆಯಲ್ಲಿ ಇಬ್ಬರೂ ಪಾಕಿಸ್ತಾನ ಮೂಲದ ಹ್ಯಾಂಡ್ಲರ್ಗಳೊಂದಿಗೆ ಸಂಪರ್ಕದಲ್ಲಿದ್ದರಂತೆ. ಪಕ್ಕಾ ಟೈಮಿಂಗ್.. ಮಾಸ್ಟರ್ ಪ್ಲಾನ್ ಬಗ್ಗೆ ನಿರ್ದಿಷ್ಟ ಸೂಚನೆಗಳು ಅಲ್ಲಿಂದಲೇ ಸಿಕ್ಕಿದೆ ಅಂತ ವರದಿಯಲ್ಲಿ ಉಲ್ಲೇಖಿಸಲಾಗಿದೆ.
150ಕ್ಕೂ ಹೆಚ್ಚು ಜನರ ಬಂಧನ
ದಾಳಿ ನಡೆಸೋ ವಾರಕ್ಕೂ ಮೊದಲು ಭಯೋತ್ಪಾದಕರು ಪಹಲ್ಗಾಮ್ ಪ್ರದೇಶವನ್ನ ಪ್ರವೇಶಿಸಿದ್ರು. ಅವರಿಗೆ ಆಶ್ರಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸ್ಥಳೀಯರೇ ಮಾಡಿದ್ರು. ತನಿಖಾಧಿಕಾರಿಗಳು ದಾಳಿ ಸ್ಥಳದ 3D ಮ್ಯಾಪಿಂಗ್ ಸಹ ಮಾಡಿದ್ದು, ಕಣಿವೆಯ ಸುತ್ತಲಿನ ಮೊಬೈಲ್ ಟವರ್ಗಳಿಂದ ಡಂಪ್ ಡೇಟಾ ಹೊರತೆಗೆದ್ದಾರೆ. ಒಟ್ಟು 2,800ಕ್ಕೂ ಹೆಚ್ಚು ವ್ಯಕ್ತಿಗಳನ್ನು ವಿಚಾರಣೆಗೆ ಒಳಪಡಿಸಿದ್ದು 150ಕ್ಕೂ ಹೆಚ್ಚು ಮಂದಿಯನ್ನ ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಮೋದಿ ಸರ್ಕಾರದಿಂದ ಈ ಬಾರಿ ಡಿಜಿಟಲ್ ಜನಗಣತಿ; 15 ದಿನದಲ್ಲಿ ಮುಗಿಸೋ ಪ್ಲಾನ್ ಏನು ಗೊತ್ತಾ?
ಪಾಕಿಸ್ತಾನಿ ಪ್ರಜೆಗಳನ್ನ ಕೇಂದ್ರ ಸರ್ಕಾರ ಹೊರಹಾಕುತ್ತಿರುವುದನ್ನ ಬೆಂಗಳೂರಿನ ಆಕ್ಸೆಂಚರ್ ಉದ್ಯೋಗಿ ಅಹ್ಮದ್ ತಾರಿಕ್ ಬಟ್ ಎಂಬುವವರು ಪ್ರಶ್ನೆ ಮಾಡಿ ಕೋರ್ಟ್ ಮೆಟ್ಟಿಲೇರಿದ್ದ. ಭಾರತೀಯ ಪಾಸ್ಪೋರ್ಟ್ ಮತ್ತು ಆಧಾರ್ ಕಾರ್ಡ್ ಹೊಂದಿದ್ರೂ ದೇಶ ಬಿಟ್ಟು ಹೋಗುವಂತೆ ಆದೇಶಿಸಲಾಗಿದೆ ಎಂದು ಅರ್ಜಿ ಸಲ್ಲಿಸಿದ್ರು. ಇದಕ್ಕೆ ಸುಪ್ರೀಂಕೋರ್ಟ್ ಬಟ್ ಕುಟುಂಬದ ಗಡೀಪಾರು ಮಾಡುವುದನ್ನ ತಡೆಹಿಡಿದಿದೆ.
2 ತಿಂಗಳ ಆಹಾರ ಸಂಗ್ರಹಣೆಗೆ ಮುಂದಾದ ಪಾಕ್ ಆಕ್ರಮಿತ ಕಾಶ್ಮೀರ
ಎಲ್ಒಸಿ ಉದ್ದಕ್ಕೂ ಇರುವ 13 ಕ್ಷೇತ್ರಗಳಲ್ಲಿ ಎರಡು ತಿಂಗಳ ಕಾಲ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಾಗರಿಕರಿಗೆ ಸೂಚನೆ ನೀಡಲಾಗಿದೆ. ಭಾರತದ ಇಂದಿನ ಶಕ್ತಿ ಕೇವಲ ಶಸ್ತ್ರಾಸ್ತ್ರಗಳಲ್ಲಿ ಮಾತ್ರವಲ್ಲ, ಏಕತೆಯಲ್ಲೂ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪೆಹಲ್ಗಾಮ್ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯು ಇಂಡೋನೇಷ್ಯಾದಲ್ಲಿ ಆಚರಿಸಲಾಗುವ ಇಸ್ಲಾಂನ ಬೋಧನೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಇಂಡೋನೇಷ್ಯಾ ಪಾಕ್ ವಿರುದ್ಧ ಕಿಡಿಕಾರಿದೆ.
ಭಾರತದ ವಿಮಾನಯಾನ ಕಂಪನಿಗಳಿಗೆ ಪಾಕಿಸ್ತಾನ ತನ್ನ ವಾಯುಸೀಮೆಯನ್ನ ಬಳಸದಂತೆ ನಿರ್ಬಂಧ ಹೇರಿತ್ತು. ಆದರೆ ಈಗ ವಿದೇಶಿ ವಿಮಾನಯಾನ ಕಂಪನಿಗಳು ಪಾಕ್ ವಾಯುಸೀಮೆಯನ್ನ ಬಳಸದೇ ಇರಲು ಮುಂದಾಗಿದ್ದು, ಪಾಕಿಸ್ತಾನಕ್ಕೆ ಶಾಕ್ ಕೊಟ್ಟಂತಾಗಿದೆ. ಆದಾಯಕ್ಕೆ ಕೊಕ್ಕೆ ಬಿದ್ದಿದೆ. ಒಟ್ಟಾರೆ ಗುಳ್ಳೆ ನರಿ ಪಾಕ್ ಭಾರತಕ್ಕೆ ಬುದ್ಧಿ ಕಲಿಸುತ್ತೀನಿ ಅಂತಾ ಹೋಗಿ ತನ್ನ ಬುಡಕ್ಕೆ ತಾನೇ ಬೆಂಕಿ ಇಟ್ಕೊಂಡಿದೆ.
ಇದನ್ನೂ ಓದಿ: ಅಲ್ಲಾ ಮೇಲಾಣೆ.. ದೇಶಕ್ಕಾಗಿ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗ್ತೀನಿ- ಎದೆ ತಟ್ಟಿ ಎಕ್ಸೈಟ್ ಆದ ಜಮೀರ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ