/newsfirstlive-kannada/media/post_attachments/wp-content/uploads/2025/07/Nitish_Kumar_Reddy.jpg)
ಇಂಜುರಿಗೆ ತುತ್ತಾಗಿ ಇಂಗ್ಲೆಂಡ್ ಪ್ರವಾಸದಿಂದ ಅರ್ಧಕ್ಕೆ ಪ್ಯಾಕ್ಅಪ್ ಮಾಡಿಕೊಂಡು ಭಾರತಕ್ಕೆ ವಾಪಾಸ್ಸಾಗ್ತಿರುವ ನಿತೀಶ್ ರೆಡ್ಡಿಯ ಗಾಯದ ಮೇಲೆ ಬರೆ ಬಿದ್ದಿದೆ. ಯುವ ಆಲ್ರೌಂಡರ್ ಮೇಲೆ ಬಹುದೊಡ್ಡ ಆರೋಪ ಕೇಳಿ ಬಂದಿದ್ದು, ನ್ಯಾಯ ಕೇಳಿ ಕಂಪನಿಯೊಂದು ಡೆಲ್ಲಿ ಹೈಕೋರ್ಟ್ ಮೆಟ್ಟಿಲೇರಿದೆ. ಇಂದು ಈ 5 ಕೋಟಿ ವಂಚನೆ ಪ್ರಕರಣದ ವಿಚಾರಣೆಯೂ ನಡೆಯಲಿದೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿ ಮಿಂಚು ಹರಿಸಿದ್ದ ನಿತೀಶ್ ರೆಡ್ಡಿ, ಆಂಗ್ಲರ ನಾಡು ಇಂಗ್ಲೆಂಡ್ನಲ್ಲೂ ಘರ್ಜಿಸೋ ಲೆಕ್ಕಾಚಾರದಲ್ಲಿ ಫ್ಲೈಟ್ ಹತ್ತಿದ್ರು. ಆದ್ರೆ, ಅದೃಷ್ಟ ಕೈ ಹಿಡಿಯಲಿಲ್ಲ. ಫಾರ್ಮ್ ಒಂದು ಕಡೆ ಕೈ ಕೊಡ್ತು. ಇನ್ನೊಂದು ಕಡೆ ಇಂಜುರಿ ಸರಣಿಯಿಂದಲೇ ಹೊರ ಬೀಳುವಂತೆ ಮಾಡಿದೆ. ಆ್ಯಂಕಲ್ ಇಂಜುರಿ ತುತ್ತಾದ ರೆಡ್ಡಿ, ಪ್ರವಾಸದ ಮದ್ಯೆಯೇ ಪ್ಯಾಕ್ ಅಪ್ ಮಾಡಿ ತವರಿಗೆ ವಾಪಾಸ್ಸಾಗ್ತಿದ್ದಾರೆ.
ವಿವಾದದ ಸುಳಿಯಲ್ಲಿ ಸಿಲುಕಿದ ಆಲ್ರೌಂಡರ್.!
ಟೀಮ್ ಇಂಡಿಯಾ ಆಲ್ರೌಂಡರ್ ನಿತೀಶ್ ರೆಡ್ಡಿ ಟೈಮೇ ಸರಿ ಇಲ್ಲ ಅನ್ಸುತ್ತೆ. ಇಂಜುರಿ ನೋವಲ್ಲಿ ನರಳಾಡ್ತಿರೋ ನಿತೀಶ್ ರೆಡ್ಡಿಯ ಗಾಯದ ಮೇಲೆ ಇದೀಗ ಮತ್ತೊಂದು ಬರೆ ಬಿದ್ದಿದೆ. ಹೊಸ ವಿವಾದದಲ್ಲಿ ನಿತೀಶ್ ರೆಡ್ಡಿ ಸಿಲುಕಿದ್ದಾರೆ. ಆಂಧ್ರ ಪ್ರದೇಶ ಆಲ್ರೌಂಡರ್ ಮೇಲೆ ವಂಚನೆಯ ಬಹುದೊಡ್ಡ ಆರೋಪ ಕೇಳಿ ಬಂದಿದೆ.
ನಿತೀಶ್ ರೆಡ್ಡಿ ಮೇಲೆ 5 ಕೋಟಿ ದೋಖಾ ಆರೋಪ.!
ಟೀಮ್ ಇಂಡಿಯಾದ ಯುವ ಆಲ್ರೌಂಡರ್ ಮೇಲೆ ಬರೋಬ್ಬರಿ 5 ಕೋಟಿ ವಂಚನೆಯ ಆರೋಪ ಕೇಳಿ ಬಂದಿದೆ. ನಿತೀಶ್ ರೆಡ್ಡಿಯನ್ನ ಮ್ಯಾನೇಜ್ ಮಾಡ್ತಾ ಇದ್ದ ಮಾಜಿ ಕಂಪನಿ ಈ ಬಹುದೊಡ್ಡ ಆರೋಪವನ್ನ ಮಾಡಿದೆ. ಇಷ್ಟೇ ಅಲ್ಲ, ನ್ಯಾಯವನ್ನ ಕೇಳಿಕೊಂಡು ಹೈಕೋರ್ಟ್ ಮೆಟ್ಟಿಲೇರಿದೆ.
ರೆಡ್ಡಿ ಮೇಲಿರೋ ಆರೋಪ ಏನು.? ಏನಿದು ಪ್ರಕರಣ.?
2021ರಿಂದ ನಿತೀಶ್ ರೆಡ್ಡಿ ಸ್ಕೈರ್ ದ ಒನ್ ಅನ್ನೋ ಮ್ಯಾನೇಜ್ಮೆಂಟ್ ಕಂಪನಿಯಯೊಂದಿಗೆ ಟೈ ಅಪ್ ಆಗಿದ್ರು, ಕಳೆದ 4 ವರ್ಷಗಳಿಂದ ಈ ಕಂಪನಿ ನಿತೀಶ್ ರೆಡ್ಡಿಯನ್ನ ಮ್ಯಾನೇಜ್ ಮಾಡ್ತಾ ಇತ್ತು. ಕರ್ಮಷಿಯಲ್ಗಳು, ಬ್ರ್ಯಾಂಡ್ ಎಂಡ್ರೋಸ್ಮೆಂಟ್ಗಳನ್ನ ಇದೇ ಕಂಪನಿ ನೋಡಿಕೊಳ್ತಾ ಇತ್ತು. ಆದ್ರೆ, ಕಳೆದ ವರ್ಷಾಂತ್ಯದಲ್ಲಿ ಭಿನ್ನ ನಿಲುವು ತಳೆದ ನಿತೀಶ್ ರೆಡ್ಡಿ, ಇದಕ್ಕಿದ್ದಂತೆ ಒಪ್ಪಂದ ರದ್ದು ಮಾಡಿ ಬೇರೋಬ್ಬ ಮ್ಯಾನೇಜರ್ ನೇಮಕ ಮಾಡಿಕೊಂಡಿದ್ದಾರೆ. ಇದೇ ನೋಡಿ ವಿವಾದಕ್ಕೆ ಕಾರಣವಾಗಿರೋದು.
ಕಳೆದ ಡಿಸೆಂಬರ್-ಜನವರಿಯಲ್ಲಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಮೊದಲ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದ ನಿತೀಶ್ ರೆಡ್ಡಿ, ಮೆಲ್ಬರ್ನ್ನಲ್ಲಿ ಶತಕ ಸಿಡಿಸಿ ಸೆನ್ಸೇಷನ್ ಸೃಷ್ಟಿಸಿದ್ರು. ಅಮೋಘ ಶತಕ ಸಿಡಿಸಿದ ಬೆನ್ನಲ್ಲೇ ನಿತೀಶ್ ರೆಡ್ಡಿಯ ಖ್ಯಾತಿಯೂ ಹೆಚ್ಚಾಯ್ತು. ಆ ಬಳಿಕ ಏಕಾಏಕಿ ಸ್ಕೈರ್ ದ ಒನ್ ಕಂಪನಿ ಬಿಟ್ಟು, ಟೀಮ್ ಇಂಡಿಯಾ ಮತ್ತೊಬ್ಬ ಆಟಗಾರರನ ಮ್ಯಾನೇಜರ್ ಜೊತೆ ನಿತೀಶ್ ರೆಡ್ಡಿ ಒಪ್ಪಂದ ಮಾಡಿಕೊಂಡರು. ಈ ಏಕಪಕ್ಷೀಯ ನಿರ್ಧಾರ ಹಾಗೂ ಒಪ್ಪಂದವನ್ನ ಉಲ್ಲಂಘಿಸಿದ್ದನ್ನ ಸ್ಕೈರ್ ದ ಒನ್ ಕಂಪನಿ ಪ್ರಶ್ನಿಸಿದೆ.
ಇದನ್ನೂ ಓದಿ:ಮಹಿಳೆಯರಿಗಾಗಿ ಸರ್ಕಾರದ ಯೋಜನೆ.. ಆದ್ರೆ ಕೋಟಿ ಕೋಟಿ ಹಣ ನುಂಗಿದ ರಾಜ್ಯದ ಪುರುಷರು!
ಇಂದು ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ ಸಾಧ್ಯತೆ.!
ಏಕಪಕ್ಷೀಯವಾಗಿ ಪಾಲುದಾರಿಕೆಯನ್ನು ಕ್ಲೋಸ್ ಮಾಡಿರೋದು ಒಂದು ಆರೋಪವಾದ್ರೆ, ಹಳೆಯ ಅಮೌಂಟ್ ಸೆಟಲ್ ಆಗಿಲ್ಲ ಅನ್ನೋದು ಮತ್ತೊಂದು ಆರೋಪವಾಗಿದೆ. ನಿತೀಶ್ ರೆಡ್ಡಿ ಕಂಪನಿಯಿಂದ ಪಡೆದಿದ್ದಾರೆ ಎನ್ನಲಾಗಿರುವ 5 ಕೋಟಿ ರೂಪಾಯಿ ಪಾವತಿಸಲು ರಾಕರಿಸಿದ್ದಾರೆ. ಕಂಪನಿಗೆ ನಿತೀಶ್ ರೆಡ್ಡಿ 5 ಕೋಟಿ ಹಣವನ್ನ ಪಾವತಿಸಬೇಕಿದೆ ಎಂದು ಆರೋಪಿಸಿ ಕಂಪನಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದೆ. ಇಂದು ಈ ಪ್ರಕರಣ ವಿಚಾರಣೆಗೆ ಬರುವ ಸಾಧ್ಯತೆಯಿದೆ.
ಸ್ಕೈರ್ ದ ಒನ್ ಕಂಪನಿಯ ಆರೋಪ ನಿಜಾನೋ.? ಸುಳ್ಳೋ.? ಅನ್ನೋದು ನ್ಯಾಯಾಲಯ ತೀರ್ಮಾನಿಸಲಿದೆ. ಆದ್ರೆ, ಈ ಆರೋಪ ನಿತೀಶ್ ರೆಡ್ಡಿಯ ಗಾಯದ ಮೇಲೆ ಉಪ್ಪು ಸವರಿದಂತಾಗಿರೋದಂತೂ ಸುಳ್ಳಲ್ಲ. ಇಂಗ್ಲೆಂಡ್ನಿಂದ ವಾಪಾಸ್ಸಾದ ಬಳಿಕ ಇಂಜುರಿ ಚೇತರಿಸಿಕೊಂಡು ಫಿಟ್ ಆಗೋದ್ರ ಜೊತೆಗೆ ಕೋರ್ಟ್ಗೆ ಅಲೆದಾಡಿ ಕೇಸ್ ಕ್ಲೀಯರ್ ಮಾಡಿಕೊಳ್ಳೋ ಸವಾಲೂ ಇದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ