/newsfirstlive-kannada/media/post_attachments/wp-content/uploads/2025/02/Ekta_Kapoor_1.jpg)
ಭಾರತದಲ್ಲಿ ಅತಿ ಹೆಚ್ಚು ಗೌರವಿಸಲ್ಪಡುವ ವೃತ್ತಿಗಳೆಂದರೆ ರೈತ ವೃತ್ತಿ ಮತ್ತು ಸೈನಿಕ ವೃತ್ತಿ. ಇದೀಗ ಸಿನಿಮಾ ನಿರ್ಮಾಪಕಿಯೊಬ್ಬರು, ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪ ಹೊತ್ತಿದ್ದು, ನಿರ್ಮಾಪಕಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಏಕ್ತಾ ಕಪೂರ್. ಬಾಲಿವುಡ್ ನಿರ್ಮಾಪಕಿ. ಕಿರುತೆರೆಯ ಕಿಂಗ್ ಮೇಕರ್. ಆಲ್ಟ್ ಬಾಲಾಜಿ ಹೆಸರಿನ ಒಟಿಟಿ ಮುಖ್ಯಸ್ಥೆ. ಹಲವಾರು ಟಿವಿ ಧಾರಾವಾಹಿಗಳ ಪ್ರೊಡ್ಯೂಸರ್. ಹೀಗೆ ನಾನಾ ಹೆಸರು ಬಿರುದು ಪಡೆದಿರೋ ಏಕ್ತಾ ಕಪೂರ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಫ್ಟ್ ಪಾರ್ನ್ ಕಂಟೆಂಟ್ನ ವೆಬ್ ಸೀರಿಸ್ನಲ್ಲಿ ಭಾರತೀಯ ಸೇನೆಯನ್ನ ಅವಮಾನಿಸಿರುವ ಆರೋಪ ಕೇಳಿ ಬಂದಿದ್ದು, ಬಾರೀ ವಿರೋಧ ವ್ಯಕ್ತವಾಗಿದೆ.
ಏಕ್ತಾ ಕಪೂರ್ ವೆಬ್ ಸೀರಿಸ್ ವಿರುದ್ಧ ತನಿಖೆಗೆ ಆದೇಶ
ಸಾಫ್ಟ್ ಪಾರ್ನ್ ಸಿನಿಮಾದಲ್ಲಿ ಭಾರತೀಯ ಸೈನಿಕನ ಪಾತ್ರ ಬಳಸಿದ್ದಕ್ಕಾಗಿ ನಿರ್ಮಾಪಕಿ ಏಕ್ತಾ ಕಪೂರ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಭಾರತೀಯ ಸೈನಿಕರಿಗೆ ಅಪಮಾನ ಎಸಗಿದ್ದಾರೆ ಎಂಬ ಆರೋಪದ ಮೇಲೆ ಏಕ್ತಾ ಕಪೂರ್ ವಿರುದ್ಧ ಪ್ರಕರಣ ದಾಖಲಾಗಿದೆ. ಅವರ ಮಾಲೀಕತ್ವದ ಆಲ್ಟ್ ಬಾಲಾಜಿ ಒಟಿಟಿಯಲ್ಲಿ ಸಾಫ್ಟ್ ಪಾರ್ನ್ ರೀತಿಯ ವೆಬ್ ಸೀರೀಸ್, ಸಿನಿಮಾಗಳನ್ನ ಪ್ರಸಾರ ಮಾಡಲಾಗುತ್ತೆ. ಈ ರೀತಿ ವೆಬ್ಸೀರೀಸ್ನಲ್ಲಿ ಸೈನಿಕನ ಪಾತ್ರವನ್ನ ಬಳಸಿಕೊಂಡು ಸಮವಸ್ತ್ರದಲ್ಲಿದ್ದಾಗಲೇ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ಇದೇ ವಿಚಾರಕ್ಕೆ ಈಗ ಎಫ್ಐಆರ್ ದಾಖಲಾಗಿದೆ.
ರುಕೋ ಸರ ಸಬರ್ ಕರೋ ಖ್ಯಾತಿಯ ಯೂಟ್ಯೂಬರ್ ವಿಕಾಸ್ ಪಾಠಕ್, ಸೈನಿಕನಿಗೆ ಅವಮಾನ ಮಾಡಲಾಗಿದೆ ಎಂದು ಪೊಲೀಸ್ ಠಾಣೆಗೆ ಏಕ್ತಾ ಕಪೂರ್ ವಿರುದ್ಧ ದೂರು ನೀಡಿದ್ದರು. ಹಿಂದೂಸ್ತಾನಿ ಬಾವ್ ದೂರಿನ ಮೇರೆಗೆ ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ಎಫ್ಐಆರ್ ನಮೂದು ಮಾಡಿಕೊಂಡಿದ್ದರು. ಆದರೆ ವಿಚಾರಣೆ ನಡೆಸಿರಲಿಲ್ಲ. ಇದೀಗ ನ್ಯಾಯಾಲಯ ಮಧ್ಯಪ್ರವೇಶ ಮಾಡಿದ್ದು, ಪೊಲೀಸರಿಗೆ ಸೂಚನೆ ನೀಡಿದೆ, ಏಕ್ತಾ ಕಪೂರ್ ವಿಚಾರಣೆ ನಡೆಸಿ, ಮೇ 9ರ ಒಳಗಾಗಿ ವರದಿ ನೀಡುವಂತೆ ಸೂಚಿಸಿದೆ.
ಇದನ್ನೂ ಓದಿ:ಹೊಸ ಅವತಾರದಲ್ಲಿ ರಾಮಾಚಾರಿ ಮಡದಿ; ಚಾರು ಖದರ್ಗೆ ವೀಕ್ಷಕರು ಕ್ಲೀನ್ ಬೋಲ್ಡ್!
100 ಕೋಟಿ ಮಾನನಷ್ಟ ಮೊಕದ್ದಮೆ ಹಾಕ್ತೀನಿ ಎಂದ ಏಕ್ತಾ
ತಮ್ಮ ವಿರುದ್ಧ ಆರೋಪ ಕೇಳಿ ಬಂದ ಬೆನ್ನಲ್ಲೇ ಏಕ್ತಾ ಕಪೂರ್ ಸಿಡಿದೆದ್ದಿದ್ದಾರೆ. 100 ಕೋಟಿ ಮಾನನಷ್ಟ ಮೊಕದ್ದಮೆ ಹಾಕೋದಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಏಕ್ತಾ ಕಪೂರ್ ಅವರ ವಕೀಲ ರಿಜ್ವಾನ್ ಸಿದ್ದಿಕಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಇದು 2020ರಲ್ಲಿ ಕೇಳಿ ಬಂದ ದೂರಾಗಿದ್ದು, ಈಗಾಗಲೇ ಪೊಲೀಸರು ಇದನ್ನ ಮುಕ್ತಾಯಗೊಳಿಸಿದ್ದಾರೆ. ಹೀಗಿದ್ರೂ ಕೆಲವರು ಏಕ್ತಾ ಕಪೂರ್ ಹೆಸರು ಹಾಳು ಮಾಡಲು ಹಾಗೂ ಬ್ರ್ಯಾಂಡ್ ವ್ಯಾಲ್ಯೂ ಹಾಳು ಮಾಡೋದಕ್ಕೆ ಯತ್ನಿಸ್ತಿದ್ದಾರೆ ಅಂತಾ ಹೇಳಿಕೆಯಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹೀಗೆ ಸುಳ್ಳು ಆರೋಪ ಮಾಡ್ತಿರೋರ ವಿರುದ್ಧ 100 ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಲು ಏಕ್ತಾ ಕಪೂರ್ ನಿರ್ಧರಿಸಿದ್ದಾರಂತೆ
ನಿರ್ಮಾಪಕಿ ಏಕ್ತಾ ಕಪೂರ್ ಕಾನೂನು ತೊಂದರೆ ಎದುರಿಸುತ್ತಿರುವುದು ಇದೇ ಮೊದಲಲ್ಲ. 2024 ರಲ್ಲಿ, ಜಬಲ್ಪುರ ಬಿಜೆಪಿ ಶಾಸಕ ಅಭಿಲಾಷ್ ಪಾಂಡೆ ಗಂಧಿ ಬಾತ್ ವೆಬ್ ಸರಣಿಯಲ್ಲಿ ಮಕ್ಕಳನ್ನ ಒಳಗೊಂಡ ದಿಟ್ಟ ವಿಷಯವನ್ನ ಚಿತ್ರಿಸಿದ್ದಾರೆ ಎಂದು ಎಫ್ಐಆರ್ ದಾಖಲಿಸಿದ್ರು. ಇದೀಗ ಮತ್ತೊಂದು ಆರೋಪ ಕೇಳಿ ಬಂದಿದೆ. ಒಂದೆಡೆ ಎಫ್ಐಆರ್ ದಾಖಲಾಗಿದ್ರೆ, ಇನ್ನೊಂದೆಡೆ ಏಕ್ತಾ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ಇದು ಇನ್ನೆಲ್ಲಿಗೆ ಹೋಗಿ ಮುಟ್ಟುತ್ತೋ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ