/newsfirstlive-kannada/media/post_attachments/wp-content/uploads/2025/04/MODI-1.jpg)
ಭೂಮಿ ಮೇಲಿನ ಸ್ವರ್ಗದಂತಿದ್ದ ಕಾಶ್ಮೀರ, ಇದೀಗ ರಕ್ತ ಕಾಶ್ಮೀರವಾಗಿ ಬದಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26ಕ್ಕೂ ಹೆಚ್ಚು ಪ್ರವಾಸಿಗರು ಜೀವ ಕಳೆದುಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ ಸೌದಿ ಪ್ರವಾಸವನ್ನ ಮೊಟಕುಗೊಳಿಸಿ ಭಾರತಕ್ಕೆ ವಾಪಸ್ ಆಗಲಿದ್ದು, ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ.
ಉಗ್ರರ ದಾಳಿ ಬೆನ್ನಲ್ಲೇ ಪ್ರಧಾನಿ, ಸೌದಿ ಪ್ರವಾಸ ಮೊಟಕು
ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ವಿಶೇಷ ಆಹ್ವಾನದ ಮೇರೆಗೆ ನಿನ್ನೆ ಬೆಳಗ್ಗೆ ಸೌದಿ ಪ್ರವಾಸಕ್ಕೆ ತೆರಳಿದ್ದ ಮೋದಿ, ಉಗ್ರರ ಅಟ್ಟಹಾಸದ ವಿಷಯ ತಿಳಿತಿದ್ದಂತೆ ಭಾರತಕ್ಕೆ ವಾಪಸ್ ಆಗ್ಲಿದ್ದಾರೆ. ಸೌದಿಯಿಂದ ದೆಹಲಿಗೆ ಆಗಮಿಸುವ ಮೋದಿ, ಅಲ್ಲಿಂದ ಕಾಶ್ಮೀರಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.. ಇದಕ್ಕೂ ಮೊದಲು ಕಣಿವೆ ನಾಡಿನ ಸುರಕ್ಷತೆ ಬಗ್ಗೆ ರಾಜಧಾನಿ ದೆಹಲಿಯಲ್ಲಿ ಮೋದಿ ಸಭೆ ನಡೆಸಲಿದ್ದಾರೆ.
ಭಾರತಕ್ಕೆ ವಿಶ್ವ ಸಮುದಾಯದ ಬೆಂಬಲ
ಕಾಶ್ಮೀರದಲ್ಲಿ ನಡೆದ ಪೈಶಾಚಿಕ ಕೃತ್ಯವನ್ನ ಕೇವಲ ಭಾರತ ಮಾತ್ರವಲ್ಲದೇ ಇಡೀ ವಿಶ್ವವೇ ಖಂಡಿಸಿದೆ. ಭಾರತಕ್ಕೆ ವಿಶ್ವದ ಸಮುದಾಯದ ಬೆಂಬಲ ಸಿಕ್ಕಿದೆ. ಉಗ್ರರ ನೀಚ ಕೃತ್ಯವನ್ನ ವಿಶ್ವದ ಪ್ರಮುಖ ನಾಯಕರು ಖಂಡಿಸಿದ್ರೆ, ಇತ್ತ ದಾಳಿ ನಡೆದ ಕೆಲವೆ ಗಂಟೆಗಳಲ್ಲಿ ಪ್ರಧಾನಿ ಮೋದಿಗೆ ಅಮೆರಿಕಾ ಅಧ್ಯಕ್ಷ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಇಂಥ ಘಟನೆ ಖಂಡನೀಯ, ಭಾರತದ ಜೊತೆ ನಾವಿದ್ದೇವೆ ಅಂತ ಟ್ರಂಪ್ ಹೇಳಿದ್ದಾರೆ. ಈ ಬೆಂಬಲಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ.
ಅಮೆರಿಕಾದ ಉಪಾಧ್ಯಕ್ಷ ಜೆ.ಡಿ ವಾನ್ಸ್ ಹಾಗೂ ಪತ್ನಿ ಉಷಾ ವ್ಯಾನ್ಸ್ ಮೊನ್ನೆಯಷ್ಟೇ ಭಾರತಕ್ಕೆ ಭೇಟಿ ಕೊಟ್ಟಿದ್ದರು. ಅಮೆರಿಕಾ ಉಪಾಧ್ಯಕ್ಷರ ಭೇಟಿ ವೇಳೆ ಕಾಶ್ಮೀರದಲ್ಲಿ ಭೀಕರ ದಾಳಿಯಾಗಿದ್ದು ಘಟನೆ ಬಗ್ಗೆ ಜೆ.ಡಿ ವಾನ್ಸ್ ಸಂತಾಪ ಸೂಚಿಸಿದ್ರು. ಕಾಶ್ಮೀರವು ಭಾರತಕ್ಕೆ ಸೇರಿದ್ದು ಅಂತ ಪರೋಕ್ಷವಾಗಿ ಪ್ರಸ್ತಾಪಿಸಿ, ಪಾಕ್ಗೆ ಟಾಂಗ್ ಕೊಟ್ಟಿದ್ದಾರೆ.
ಪುಟಿನ್ ಕೆಂಡ
ರಷ್ಯಾ ಅಧ್ಯಕ್ಷ ವ್ಲಾಡಿಮೀರ್ ಪುಟಿನ್ ಸಹ ಈ ನೀಚ ಕೃತ್ಯವನ್ನ ಖಂಡಿಸಿದ್ದಾರೆ. ಇಂಥ ಕ್ರೂರ ಅಪರಾಧಕ್ಕೆ ಯಾವುದೇ ಸಮರ್ಥನೆ ಇಲ್ಲ ಅಂತ ಕೆಂಡ ಕಾರಿದ್ದು, ಉಗ್ರರನ್ನ ಸದೆಬಡೆಯಲು ಭಾರತಕ್ಕೆ ಸದಾ ಸಹಾಯ ನೀಡಲಿದೆ ಅಂತ ಅಭಯ ನೀಡಿದ್ದಾರೆ. ಒಟ್ಟಾರೆ, ಈ ದಾಳಿಗೆ ಪ್ರತಿ ಭಾರತೀಯನಲ್ಲೂ ಪ್ರತೀಕಾರದ ಜ್ವಾಲೆ ಹೊತ್ತಿಸಿದೆ. ಈಗಾಗ್ಲೇ ಸೇನಾ ಪಡೆ ಉಗ್ರರ ಹುಟ್ಟಡಗಿಸುವ ಕಾರ್ಯಚರಣೆ ಶುರು ಮಾಡಿದ್ದು, ಉಗ್ರರ ಸಂಹಾರಕ್ಕೆ ಪಣ ತೊಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ