/newsfirstlive-kannada/media/post_attachments/wp-content/uploads/2024/08/BJP-JDS-PADAYATRE.jpg)
ಸ್ಥಳೀಯ ಸಂಸ್ಥೆಗಳಾದ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಪಾಲಿಕೆ ಚುನಾವಣೆಗಳಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ. ಬಿಜೆಪಿ ಜೊತೆ ಮೈತ್ರಿ ಇರಲ್ಲ. ಜೆಡಿಎಸ್ -ಬಿಜೆಪಿ ನಡುವಿನ ಮೈತ್ರಿಯೂ ಅಸೆಂಬ್ಲಿ ಮತ್ತು ಲೋಕಸಭಾ ಚುನಾವಣೆಗೆ ಮಾತ್ರ ಅನ್ವಯ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ. ಇನ್ನೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕೂಡ ಇದರ ಬಗ್ಗೆ ಗೊಂದಲ ಸೃಷ್ಟಿಸಲ್ಲ ಎಂದಿದ್ದಾರೆ.
ಆದರೇ, ಬಿಜೆಪಿ ಪಕ್ಷ ಮಾತ್ರ ಸ್ಥಳೀಯ ಸಂಸ್ಥೆಗಳಲ್ಲೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡೇ ಚುನಾವಣೆ ಎದುರಿಸೋದು ಉತ್ತಮ ಎಂಬ ಅಭಿಪ್ರಾಯದಲ್ಲಿದೆ. ಬಿಜೆಪಿಯ ಮಾಜಿ ಸಿಎಂ ಯಡಿಯೂರಪ್ಪ ಅವರು, ತಮ್ಮ ಪುತ್ರ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರಗೆ ಲೋಕಲ್ ಎಲೆಕ್ಷನ್ ಗಳಲ್ಲೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದರಿಂದ ಬಿಜೆಪಿಗೆ ಆಗುವ ಲಾಭಗಳೇನು ಎನ್ನುವ ಬಗ್ಗೆ ಸಲಹೆ ನೀಡಿದ್ದಾರೆ. ಜೊತೆಗೆ ಸ್ಥಳೀಯ ಸಂಸ್ಥೆಗಳಾದ ಜಿಲ್ಲಾಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆ ಬಿಜೆಪಿ ಪಕ್ಷದ ಪಾಲಿಗೂ ಎಷ್ಟು ಮಹತ್ವದ್ದು ಎಂದು ತಿಳಿ ಹೇಳಿ ಕೆಲ ಸಲಹೆ ಸೂಚನೆ ನೀಡಿದ್ದಾರೆ.
ಆದರೆ, ಬಿಜೆಪಿ ಮತ್ತು ಜೆಡಿಎಸ್ ನಡುವೆ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಮೈತ್ರಿ ಇರುತ್ತೋ ಇರಲ್ಲವೋ ಎಂಬ ಗೊಂದಲ, ಬಿಕ್ಕಟ್ಟು ಶುರುವಾಗಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ನಡುವೆ ಮೈತ್ರಿ ಇರಲ್ಲ ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದ್ದಾರೆ.
ಹೀಗಾಗಿ ಮಂಡ್ಯ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನು ಸ್ವತಂತ್ರವಾಗಿ ಎದುರಿಸಲು ಮಂಡ್ಯ ಜಿಲ್ಲಾ ಬಿಜೆಪಿ ನಾಯಕರು ಸಜ್ಜಾಗಿದ್ದಾರೆ. ಸ್ವತಂತ್ರವಾಗಿ ಚುನಾವಣೆ ಎದುರಿಸಲು ಬಿಜೆಪಿ ನಾಯಕರು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಬೇಡ ಎನ್ನುವುದಾದರೇ, ಅಸೆಂಬ್ಲಿ , ಲೋಕಸಭೆಗೆ ಮಾತ್ರ ಮೈತ್ರಿ ಏಕೆ ಬೇಕು ಎಂದು ಮಂಡ್ಯ ಜಿಲ್ಲಾ ಬಿಜೆಪಿ ನಾಯಕರು ರಾಜ್ಯ ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಬೇಡ ಎನ್ನುವುದು ಸರಿಯೇ ಎಂದು ಮಂಡ್ಯ ಜಿಲ್ಲಾ ಬಿಜೆಪಿ ಅಧ್ಯಕ್ಷ ಇಂದ್ರೇಶ್ , ರಾಜ್ಯ ಘಟಕದ ನಾಯಕರಿಗೆ ಪ್ರಶ್ನಿಸಿದ್ದಾರೆ.
ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಸ್ಥಳೀಯ ಸಂಸ್ಥೆ ಮೈತ್ರಿಯ ಬಗ್ಗೆ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲಗಳನ್ನು ನಿವಾರಿಸಿ, ಮೈತ್ರಿಯ ಉಸ್ತುವಾರಿ ವಹಿಸಿಕೊಂಡು ಬಿಜೆಪಿ-ಜೆಡಿಎಸ್ ನಾಯಕರನ್ನು ಒಗ್ಗೂಡಿಸಿ ಎಲ್ಲರನ್ನೂ ಕರೆದುಕೊಂಡು ಹೋಗುವ ಹೊಣೆಯನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗೆ ವಹಿಸಲಾಗಿದೆ. ಬಿಜೆಪಿ ಹೈಕಮ್ಯಾಂಡ್ ಈಗ ಎರಡು ಪಕ್ಷಗಳ ನಡುವೆ ಸ್ಥಳೀಯ ಸಂಸ್ಥೆ ಚುನಾವಣಾ ಮೈತ್ರಿ ಗೊಂದಲ ಬಗೆಹರಿಸುವ ಹೊಣೆಯನ್ನು ಕುಮಾರಸ್ವಾಮಿ ಅವರಿಗೆ ವಹಿಸಿದೆ. ಹೀಗಾಗಿ ಈ ಗೊಂದಲದ ಬಗ್ಗೆ ತಮ್ಮ ಪಕ್ಷದ ನಾಯಕರ ಜೊತೆಗೆ ಚರ್ಚಿಸಿ ಎಚ್.ಡಿ.ಕುಮಾರಸ್ವಾಮಿ ಅವರು ಗೊಂದಲ ಬಗೆಹರಿಸಿ ಎರಡೂ ಪಕ್ಷಗಳ ಕಾರ್ಯಕರ್ತರಿಗೂ ಒಂದು ಸ್ಪಷ್ಟತೆಯನ್ನು ನೀಡಬೇಕಾಗಿದೆ. ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿ- ಜೆಡಿಎಸ್ ಮೈತ್ರಿ ಮುಂದುವರಿಸುವುದಾದರೇ, ಸೀಟು ಹಂಚಿಕೆಯ ಬಗ್ಗೆಯೂ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಬೇಕಾಗಿದೆ.
ಇನ್ನೂ ಸ್ಥಳೀಯ ಸಂಸ್ಥೆಯಲ್ಲಿ ಕೆಲವೆಡೆ ಬಿಜೆಪಿ ಸ್ಟ್ರಾಂಗ್ ಆಗಿದ್ದರೇ, ಇನ್ನೂ ಕೆಲವೆಡೆ ಜೆಡಿಎಸ್ ಸ್ಟ್ರಾಂಗ್ ಆಗಿದೆ. ಹೀಗಾಗಿ ಎಲ್ಲೆಲ್ಲಿ ಮೈತ್ರಿ ಮಾಡಿಕೊಳ್ಳಬೇಕು, ಎಲ್ಲಿ ಮೈತ್ರಿ ಬೇಡ ಎನ್ನುವ ಬಗ್ಗೆಯಾದರೂ ತೀರ್ಮಾನ ಕೈಗೊಳ್ಳಬೇಕಾಗಿದೆ.
ಲೋಕಲ್​ ಮೈತ್ರಿ ಪ್ಲಸ್ ಏನು?
ಹಳೆ ಮೈಸೂರು, ಉತ್ತರ-ಮಧ್ಯ ಕರ್ನಾಟಕದಲ್ಲಿ ಜಂಟಿ ಉತ್ತಮ
ಜಂಟಿ ಹೋದಾಗಲೇ ಸ್ಥಳೀಯ ಚುನಾವಣೆಯನ್ನು ಗೆಲ್ಲಬಹುದು
ಒಂಟಿ ಸ್ಪರ್ಧೆಗೆ ಹೋದಾಗ ಕಾಂಗ್ರೆಸ್​​ಗೆ ಆಗಲಿದೆ ಹೆಚ್ಚಿನ ಲಾಭ
JDSಗೆ ಇದೆ ಸ್ಥಳೀಯ ಮಟ್ಟದಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲುವ ಸಾಮರ್ಥ್ಯ
ಹಳೆ ಮೈಸೂರು ಭಾಗದಲ್ಲಿ ಈಗಲೂ ಇದೆ ಜೆಡಿಎಸ್​ಗೆ ಪ್ರಾಬಲ್ಯ
ಅದರ ಲಾಭ ಪಡೆಯಲು ಜಂಟಿ ಹೋರಾಟಕ್ಕೆ ಬಿಜೆಪಿ ಇಂಗಿತ
ಲೋಕಲ್ ಎಲೆಕ್ಷನ್​​ನಿಂದ ವಿಧಾನಸಭಾ ಚುನಾವಣೆಗೂ ಲಾಭ
/filters:format(webp)/newsfirstlive-kannada/media/media_files/2025/08/11/hdk_byv-2025-08-11-07-35-37.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us