/newsfirstlive-kannada/media/media_files/2025/09/12/upper-krishna-03-project-2025-09-12-13-40-32.jpg)
ಕೃಷ್ಣಾ ಮೇಲ್ದಂಡೆ-3 ಹಂತದ ಯೋಜನೆಗೆ ಭೂ ಸ್ವಾಧೀನಕ್ಕೆ ಪರಿಹಾರ ನಿಗದಿ
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ರಾಜ್ಯ ಕ್ಯಾಬಿನೆಟ್ ಸಭೆ ನಡೆದಿದೆ. ಸಭೆಯಲ್ಲಿದ್ದ ಒಂದೇ ಒಂದು ಅಜೆಂಡಾ ಅಂದರೇ, ಕೃಷ್ಣಾ ಮೇಲ್ದಂಡೆ ಮೂರನೇ ಹಂತದ ಯೋಜನೆಗೆ ಭೂಸ್ವಾಧೀನದ ಪರಿಹಾರ ಹಣ ನಿಗದಿ ಮಾಡುವ ಬಗ್ಗೆ ಚರ್ಚೆ ಮಾಡಿ ಒಪ್ಪಿಗೆ ಕೊಡುವುದಾಗಿತ್ತು. ಕೊನೆಗೆ ಈಗ ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆಗೆ ಅಗತ್ಯವಾದ ಭೂಮಿ ಸ್ವಾಧೀನಕ್ಕೆ ಪ್ರತಿ ಎಕರೆಗೆ ಪರಿಹಾರ ಮೊತ್ತವನ್ನು ರಾಜ್ಯ ಕ್ಯಾಬಿನೆಟ್ ನಿಗದಿ ಮಾಡಿದೆ. ನೀರಾವರಿ ಭೂಮಿಗೆ ಪ್ರತಿ ಎಕರೆಗೆ 40 ಲಕ್ಷ ರೂಪಾಯಿ ಹಾಗೂ ಒಣ ಭೂಮಿಗೆ 30 ಲಕ್ಷ ರೂಪಾಯಿ ಪರಿಹಾರವನ್ನು ನಿಗದಿ ಮಾಡಲಾಗಿದೆ.
ಮಹತ್ವದ ಕ್ಯಾಬಿನೆಟ್ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ , ಸಚಿವ ಸಹೋದ್ಯೋಗಿಗಳೊಂದಿಗೆ ಪತ್ರಿಕಾಗೋಷ್ಠಿ ನಡೆಸಿ, ಕ್ಯಾಬಿನೆಟ್ ಸಭೆಯ ತೀರ್ಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಇವತ್ತು ವಿಶೇಷ ಸಚಿವ ಸಂಪುಟ ಸಭೆ ಇತ್ತು. ಸಭೆಯಲ್ಲಿ ನಾವು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ರೈತರ ಜೊತೆ ಶಾಸಕರ ಜೊತೆ ಮಾತನ್ನಾಡಿದ್ದೇವೆ. ಎಂ.ಬಿ ಪಾಟೀಲ್, ತಿಮ್ಮಾಪೂರ್ ಜೊತೆಗೆ ಮಾತನಾಡಿದೇವು. ನೀರಾವರಿ ಎಕರೆ ಜಮೀನಿಗೆ 40 ಲಕ್ಷ, ಒಣ ಭೂಮಿಗೆ 30 ಲಕ್ಷ ಕೊಡಬೇಕು. ರೈತರು, ಹೋರಾಟಗಾರರು ಬೇಡಿಕೆ ಇಟ್ಟಿದ್ದರು. ನಾವು ಕೂಡ ನೀರಾವರಿಗೆ 40 ಲಕ್ಷ ಕೊಡಬೇಕು. ಒಣ ಭೂಮಿಗೆ 30 ಲಕ್ಷ ಕೊಡಬೇಕೆಂದು ಸಂಪುಟ ಸಭೆಯಲ್ಲಿ ತೀರ್ಮಾನ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕಾಲುವೆ ತೊಡಲಿಕ್ಕೆ 51 ಸಾವಿರ ಎಕರೆ ಜಮೀನು ಬೇಕು.
ನ್ಯಾಯಧೀಕರಣ ತೀರ್ಪಿನ ಪ್ರಕಾರ ಡ್ಯಾಂ 519.6 ಮೀಟರ್ ಇದೆ. ಅದನ್ನು 524.526 ಮೀಟರ್ ಗೆ ಎತ್ತರಿಸಲು ನ್ಯಾಯಾಧೀಕರಣ ತೀರ್ಪು ನೀಡಿದೆ. 75000 ಎಕರೆಗೂ ಅಧಿಕ ಭೂಮಿ ಮುಳುಗಡೆ ಆಗುತ್ತದೆ. ಹಿನ್ನೀರಿನಿಂದ ಮುಳುಗಡೆ ಆಗಲಿದೆ. ಸುಮಾರು 5 ಲಕ್ಷ ಹೆಕ್ಟೇರ್ ಗೂ ಹೆಚ್ಚು ಪ್ರದೇಶಗಳಿಗೆ ನೀರಾವರಿ ಆಗುತ್ತದೆ. 23,631 ಎಕರೆಗೆ ಕಾಲುವೆ ಆಗಿದೆ. ಇದಕ್ಕೆ ಪರಿಹಾರವಾಗಿ ಒಣ ಭೂಮಿಗೆ ಎಕರೆಗೆ ತಲಾ 25 ಲಕ್ಷ ಕೊಡಲು ತೀರ್ಮಾನ ಮಾಡಿದ್ದೇವೆ. ನೀರಾವರಿ ಭೂಮಿಗೆ ತಲಾ 30 ಲಕ್ಷ ಕೊಡಲು ತೀರ್ಮಾನ ಮಾಡಿದ್ದೇವೆ. ಮುಂದಿನ ಮೂರು ವರ್ಷಗಳಲ್ಲಿ ಪರಿಹಾರ ವಿತರಣೆ ಮಾಡಲಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಹಿಂದಿನ ಸರ್ಕಾರ ಇದಕ್ಕೆ ಪರಿಹಾರ ನೀಡಿದಾಗ ಯಾವೊಬ್ಬರು ಕೂಡ ಮುಂದೆ ಬರಲಿಲ್ಲ. ಇದೊಂದು ಐತಿಹಾಸಿಕ ತೀರ್ಮಾನವಾಗಿದೆ. ಕಳೆದ ಬೆಳಗಾವಿ ಅಧೀವೇಶನದಲ್ಲಿ ಇದು ಚರ್ಚೆ ಆಗಿತ್ತು. ಒಂದೇ ಬಾರಿಗೆ ನೀಡೋಣ ಅಂತಾ ಆಗಿತ್ತು. ಅಲ್ಲಿ ಎಲ್ಲ ಶಾಸಕರೂ ಕೂಡ ಬಂದಿದ್ದರು. ಆಗ ಬೆಲೆ ಕೊಡುವ ಬಗ್ಗೆ ನಿರ್ಧಾರ ಆಗಲಿಲ್ಲ. ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಪ್ಪೋದಿಲ್ಲ. ಕೇಂದ್ರ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೆ . ಗೆಜೆಟ್ ನೋಟಿಫಿಕೇಶನ್ ಮಾಡಿ ಅಂತಾ ಕೇಂದ್ರಕ್ಕೆ ಮನವಿ ಮಾಡಿದ್ದೆ. ಈ ಹಿಂದಿನ, ಈಗಿನ ಸಚಿವರನ್ನ ಭೇಟಿ ಮಾಡಿದ್ದೆ. ಹನ್ನೆರಡು ವರ್ಷಕ್ಕಿಂತ ಹೆಚ್ಚಾಗಿ ಸಮಯ ಆಗಿದೆ. ಇನ್ನೂ ಗೆಜೆಟ್ ನೋಟಿಫಿಕೇಶನ್ ಮಾಡಿಲ್ಲ. ಅದು ಕೇಂದ್ರ ಸರ್ಕಾರ ಮಾಡಬೇಕು ಅಷ್ಟೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು.
ಇನ್ನೂ ಯೋಜನೆಗೆ 1 ಲಕ್ಷ 33 ಸಾವಿರ ಎಕರೆ ಜಮೀನು ಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ಜಲಸಂಪನ್ಮೂಲ ಸಚಿವರೂ ಆದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 75 ಸಾವಿರ ಎಕರೆ ಮುಳುಗಡೆ ಆಗಲಿದೆ. 75 ಸಾವಿರ ಎಕರೆ ಚಾನಲ್ ಗೆ ಬೇಕು. ಪುನರ್ವಸತಿ ಕೇಂದ್ರಕ್ಕೆ 6 ಸಾವಿರ ಬೇಕು . ಜೊತೆಗೆ 20 ಗ್ರಾಮಗಳು ಮುಳುಗಡೆ ಆಗಲಿದೆ. ಪ್ರತಿವರ್ಷ 60 ಸಾವಿರ ಕೋಟಿ ಬೇಕು. ಮಹಾರಾಷ್ಟ್ರ ವಿಚಾರವನ್ನ ಮತ್ತೆ ಮಾತನಾಡುತ್ತೇನೆ. ಈಗ ಮಾತನಾಡೋದು ಬೇಡ, ರಾಜಕೀಯ ಬೇಡ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಐತಿಹಾಸಿಕವಾದ ವಿಶೇಷ ಸಚಿವ ಸಂಪುಟ ಸಭೆ ನಡೆದಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆ ವಿಶೇಷವಾದ ಸಚಿವ ಸಂಪುಟ ಸಭೆ. ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಒಂದೇ ವಿಷಯವಾಗಿ ವಿಶೇಷ ಸಂಪುಟ ಸಭೆ ನಡೆಸಿರುವುದು ಇತಿಹಾಸ. ರೈತರ ಪರವಾದ ಕಾಳಜಿಯಿಂದಾಗಿ ಸಿಎಂ ವಿಶೇಷ ಸಂಪುಟ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ. ಯೋಜನೆಯ ತ್ವರಿತಗತಿಯ ಅನುಷ್ಠಾನಕ್ಕೆ ಇಂದಿನ ಸಭೆ ಮಹತ್ವದ ತೀರ್ಮಾನ ಮಾಡಿದೆ ಎಂದು ರಾಜ್ಯದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.