/newsfirstlive-kannada/media/media_files/2025/08/22/congress-mla-veerendra-papi-2025-08-22-12-40-13.jpg)
ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಜೈಲು ಪಾಲು
ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅನ್ನು ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ ಆತನ ಪತ್ನಿ ಚೈತ್ರಾ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಇಂದು ಬುಧವಾರಕ್ಕೆ ಮುಂದೂಡಿಕೆ ಮಾಡಿದೆ.
ಮತ್ತೊಂದೆಡೆ ಇ.ಡಿ. ಕಸ್ಟಡಿ ಅವಧಿ ಅಂತ್ಯವಾದ ಹಿನ್ನಲೆಯಲ್ಲಿ ಇಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಇಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಗೆ ಹಾಜರುಪಡಿಸಿದ್ದರು. ರಿಮ್ಯಾಂಡ್ ಅರ್ಜಿಯಲ್ಲಿ ಶಾಸಕ ಹಾಗೂ ಆರೋಪಿ ವೀರೇಂದ್ರ ಪಪ್ಪಿಯನ್ನು ಇ.ಡಿ. ಅಧಿಕಾರಿಗಳು ತಮ್ಮ ಕಸ್ಟಡಿಗೆ ನೀಡಬೇಕೆಂದು ಕೋರ್ಟ್ ಗೆ ಮನವಿ ಸಲ್ಲಿಸಲಿಲ್ಲ.
ಆರೋಪಿ ವೀರೇಂದ್ರ ನಮ್ಮ ಕಸ್ಟಡಿಗೆ ಬೇಡ ಎಂದು ಇ.ಡಿ. ಅಧಿಕಾರಿಗಳು ಕೋರ್ಟ್ ಗೆ ತಿಳಿಸಿದ್ದರು.
ಇದರಿಂದಾಗಿ ಕೋರ್ಟ್ ವೀರೇಂದ್ರ ಪಪ್ಪಿ ಗೆ ನ್ಯಾಯಾಂಗ ಬಂಧನ ವಿಧಿಸಿದೆ. ಸೆಪ್ಟೆಂಬರ್ 22ರವರೆಗೆ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ನೀಡಿದೆ. ಇದರಿಂದಾಗಿ ವೀರೇಂದ್ರ ಪಪ್ಪಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು
ರಾಜ್ಯದಲ್ಲಿ ಕ್ರಿಮಿನಲ್ ಕೇಸ್ ನಲ್ಲಿ ಮತ್ತೊಬ್ಬ ಕಾಂಗ್ರೆಸ್ ಶಾಸಕ ಜೈಲು ಪಾಲಾದಂತೆ ಆಗಿದೆ. ಈಗಾಗಲೇ ಧಾರವಾಡ ಗ್ರಾಮೀಣಾ ಶಾಸಕ ವಿನಯ ಕುಲಕರ್ಣಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿಗೆ ನೀಡಿದ್ದ ಜಾಮೀನು ಅನ್ನು ರದ್ದುಪಡಿಸಿತ್ತು. ಹೀಗಾಗಿ ವಿನಯ ಕುಲಕರ್ಣಿ ಕೋರ್ಟ್ ಗೆ ಶರಣಾಗಿ ಜೈಲು ಪಾಲಾಗಿದ್ದಾರೆ. ಈಗ ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಕೂಡ ಇ.ಡಿ. ದಾಖಲಿಸಿರುವ ಆನ್ ಲೈನ್ ಬೆಟ್ಟಿಂಗ್, ಆಫ್ ಲೈನ್ ಬೆಟ್ಟಿಂಗ್ ನಲ್ಲಿ ಆಕ್ರಮ ಹಣ ವರ್ಗಾವಣೆ ಮಾಡಿದ ಆರೋಪದ ಕೇಸ್ ನಲ್ಲಿ ಜೈಲು ಪಾಲಾಗಿದ್ದಾರೆ. ಇಷ್ಟು ದಿನಗಳ ಕಾಲ ವೀರೇಂದ್ರ ಪಪ್ಪಿ ಇ.ಡಿ. ಅಧಿಕಾರಿಗಳ ವಶದಲ್ಲೇ ಇದ್ದರು. ಈಗ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದ್ದರಿಂದ ಜೈಲು ಸೇರಿದ್ದಾರೆ.
ವೀರೇಂದ್ರ ಪಪ್ಪಿ ಗೆ ಸೇರಿದ ಬ್ಯಾಂಕ್ ಲಾಕರ್ ಗಳಲ್ಲಿ ಬರೋಬ್ಬರಿ 24 ಕೆಜಿ ಚಿನ್ನ ಕೂಡ ಪತ್ತೆಯಾಗಿದೆ. ಚೀಲಗಟ್ಟಲೇ ಚಿನ್ನವನ್ನು ಇ.ಡಿ. ಅಧಿಕಾರಿಗಳ ವಶಪಡಿಸಿಕೊಂಡಿದ್ದಾರೆ. ಜೊತೆಗೆ ವೀರೇಂದ್ರ ಪಪ್ಪಿಗೆ ಸೇರಿದ ಐದು ಐಷಾರಾಮಿ ಕಾರ್ ಗಳನ್ನು ಜಫ್ತಿ ಮಾಡಿದ್ದಾರೆ.
ಜೊತೆಗೆ ದಾಳಿ ನಡೆಸಿದ ಮೊದಲ ದಿನವೇ 12 ಕೋಟಿ ರೂಪಾಯಿ ನಗದು ಅನ್ನು ಜಫ್ತಿ ಮಾಡಿದ್ದರು. ಜೊತೆಗೆ 1 ಕೋಟಿ ರೂಪಾಯಿ ವಿದೇಶಿ ಕರೆನ್ಸಿಯೂ ಪತ್ತೆಯಾಗಿತ್ತು. ಅದನ್ನು ಇ.ಡಿ. ಜಫ್ತಿ ಮಾಡಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.