/newsfirstlive-kannada/media/post_attachments/wp-content/uploads/2023/11/DKS-6.jpg)
ಕಾಂಗ್ರೆಸ್ ಕಾರ್ಯಕರ್ತರಿಗೆ ಕ್ಷಮೆ ಕೇಳಿದ ಡಿಸಿಎಂ ಡಿ.ಕೆ.ಶಿವಕುಮಾರ್
ಕರ್ನಾಟಕ ವಿಧಾನಸಭೆಯಲ್ಲಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರ್ಎಸ್ಎಸ್ ಗೀತೆಯಾದ ನಮಸ್ತೆ ಸದಾ ವತ್ಸಲೇ ಮಾತೃಭೂಮಿ ಎಂದು ಹಾಡು ಹಾಡಿದ್ದು, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಕಾಂಗ್ರೆಸ್ ಪಕ್ಷದೊಳಗೆ ಡಿ.ಕೆ.ಶಿವಕುಮಾರ್ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕೆಂಬ ಆಗ್ರಹ ವ್ಯಕ್ತವಾಗಿತ್ತು. ಡಿ.ಕೆ.ಶಿವಕುಮಾರ್ ವಿರುದ್ಧ ಹೈಕಮ್ಯಾಂಡ್ ವರೆಗೂ ಮಾಹಿತಿ ತಲುಪಿ ಚರ್ಚೆಯಾಗಿತ್ತು. ನಿನ್ನೆಯಷ್ಟೇ ಬಿಹಾರಕ್ಕೆ ಹೋಗಿ ರಾಹುಲ್ ಗಾಂಧಿ ಭೇಟಿಯಾಗಿ ಬಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್ ಇಂದು ಬೆಳಿಗ್ಗೆಯೇ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ತಮ್ಮ ಆರ್ಎಸ್ಎಸ್ ಗೀತೆ ಗಾಯನಕ್ಕೆ ಕ್ಷಮೆ ಕೇಳಿದ್ದಾರೆ.
ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಿಮ್ಮ ಭಾವನೆಗೆ ನಾನು ನೋವು ಮಾಡಿಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ನಾನು ಕ್ಷಮೆ ಕೇಳುತ್ತೇನೆ. ಇಂಡಿಯಾ ಮೈತ್ರಿಕೂಟಕ್ಕೂ ನಾನು ಕ್ಷಮೆ ಕೇಳುತ್ತೇನೆ. ಕ್ಷಮೆ ಕೇಳುವುದರಲ್ಲಿ ತಪ್ಪೇನಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಾನು ಗಾಂಧಿ ಕುಟುಂಬದಿಂದ ರಾಜಕಾರಣ ಮಾಡಿದವನು.
ರಾಜ್ಯದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಜೊತೆ ನಾನು ಮಾತನಾಡಿದೆ. ಆಗ ನಾನು ಭೂಮಿಗೆ ಹೇಗೆ ವಂದನೆ ಅನ್ನೋದನ್ನ ಹೇಳಿದೆ. ನಾನು ನಿನ್ನೆ ಬಿಹಾರಕ್ಕೆ ಹೋಗಿದ್ದೆ. ಅಲ್ಲಿದ್ದವರು ನನ್ನನ್ನ ಕೇಳಿದ್ರು . ನನ್ನ ನಾಯಕರೊಬ್ಬರು ಮಾತನಾಡಿದ್ರು. ಅವರಿಗೆ ಸಂದರ್ಭ ಬಂದಾಗ ಉತ್ತರ ಕೊಡ್ತೇನೆ. ಕೆಲವರು ಸಲಹೆ ಕೊಟ್ಟಿದ್ದಾರೆ. ಬನ್ನಿ, ಮಾಧ್ಯಮಗಳ ಮುಂದೆ ಮಾತನಾಡೋದಲ್ಲ. ಪಾರ್ಟಿ ಆಫೀಸಿಗೆ ಬನ್ನಿ ಮಾತನಾಡೋಣ ಎಂದು ಅವರಿಗೆ ಹೇಳಿದ್ದೇನೆ. ನಾನು ನಿಷ್ಠಾವಂತ ಕಾಂಗ್ರೆಸ್ ನಾಯಕ. ಖರ್ಗೆಯವರ ಮಾರ್ಗದರ್ಶನದಲ್ಲಿ ಬೆಳೆದವನು . ನಾನು ಎಂತೆಂತವರಿಗೂ ಹೆದರಿದವನಲ್ಲ . ಕುಮಾರಸ್ವಾಮಿ ಸಿಎಂ ಆದಾಗ ಇರಬಹುದು . ಅಸೆಂಬ್ಲಿಯಲ್ಲಿ ಇರಬಹುದು . ನಾನು ಎಲ್ಲವನ್ನೂ ಎದುರಿಸಿದ್ದೇನೆ.
ಸದನದಲ್ಲಿ ನಾನು ಪಾಸಿಂಗ್ ಕಮೆಂಟ್ ಕೊಟ್ಟವನು. ನಾನು ಹುಟ್ಟು ಕಾಂಗ್ರೆಸ್ಸಿಗ. ನಾನು ಸಾಯುವುದು ಕಾಂಗ್ರೆಸ್ಸಿಗನಾಗಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದನ್ನ ಪ್ರಶ್ನಿಸಿದವರು ಮೂರ್ಖರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ನಿನ್ನೆ ಕೂಡ ಡಿಸಿಎಂ ಡಿಕೆಶಿ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆ ಕೇಳಬೇಕೆಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆಗ್ರಹಿಸಿದ್ದರು. ಕೆಪಿಸಿಸಿ ಅಧ್ಯಕ್ಷರಾಗಿ ಆರ್.ಎಸ್.ಎಸ್. ಗೀತೆ ಹಾಡಿದ್ದರೇ, ಅದು ತಪ್ಪು ಎಂದು ನೇರವಾಗಿ ಬಿ.ಕೆ.ಹರಿಪ್ರಸಾದ್ ಹೇಳಿದ್ದರು. ಡಿ.ಕೆ.ಶಿವಕುಮಾರ್ ಏನು ಬೇಕಾದರೂ ಮಾಡಬಹುದು. ನಾನು ಮಾತನಾಡುವಂತಿಲ್ಲ. ಸಭೆ ಮಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಕೂಡ ಹೇಳಿದ್ದರು. ಡಿ.ಕೆ.ಶಿವಕುಮಾರ್ ಹೇಳಿಕೆ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್ ಗಮನಿಸಬೇಕು ಎಂದು ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.
ಈಗ ವಿಧಾನ ಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳುವ ಮೂಲಕ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೂ ಆರ್ಎಸ್ಎಸ್ ಗೀತೆ ಹಾಡಿದ್ದು ತಪ್ಪು ಅಂತ ಅನ್ನಿಸಿದರೇ, ಸ್ವಾಗತ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಇಂದು ಬೆಂಗಳೂರಿನ ಶಾಸಕರ ಭವನದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನ ಯಾರೂ ಕಟ್ಟಿಲ್ಲ . ಪಕ್ಷದ ಅಧ್ಯಕ್ಷರಾಗಿ ಅವರು ಆರ್ ಎಸ್ ಎಸ್ ಗೀತೆ ಹೇಳಬೇಕಾಗಿರಲಿಲ್ಲ. ಅವರಿಗೆ ತಪ್ಪು ಅಂತ ಅನ್ನಿಸಿದ್ರೆ ಸ್ವಾಗತ ಮಾಡುತ್ತೇನೆ. ಕಾಂಗ್ರೆಸ್ ಪಕ್ಷದ ಸಿದ್ಧಾಂತದಲ್ಲಿ ರಾಜಿ ಇಲ್ಲ . ನನಗೂ ಪಕ್ಷದಲ್ಲಿ 50 ವರ್ಷ ಆಯ್ತು , ಜನರಲ್ ಸೆಕ್ರೆಟರಿ ಹೇಳಿರುತ್ತಾರೆ. ಆಳವಾಗಿ ಕಾಂಗ್ರೆಸ್ ಪಕ್ಷದ ಇತಿಹಾಸ ತಿಳಿದುಕೊಳ್ಳುವುದು ಸುಲಭವಲ್ಲ . 54 ಕೇಸ್ ರಾಹುಲ್ ಗಾಂಧಿಯವರ ಮೇಲಿದೆ . ಕೆ.ಎನ್. ರಾಜಣ್ಣ ಅವರು ರಾಹುಲ್ ಗಾಂಧಿಯವರ ವಿರುದ್ಧ ಮಾತನಾಡಿಲ್ಲ . ಯಾರಾರ ನಿಲುವು ಏನು ಎಂದು ನಮಗೆ ಗೊತ್ತಿದೆ . ಕೆ.ಎನ್. ರಾಜಣ್ಣ, ಶಿವಕುಮಾರ್ ಇಬ್ಬರೂ ಕಾಂಗ್ರೆಸ್ ನವರು. ನಿಷ್ಠೆ ಬಗ್ಗೆ ಚರ್ಚೆ ಬೇಡ . ಕ್ಷಮೆ ಕೇಳಿದ ಮೇಲೆ ಮುಗಿಯಿತು ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ. ಉಪಮುಖ್ಯ ಮಂತ್ರಿಗಳಾಗಿ ಹೇಳಿದ್ರೆ ತಪ್ಪಿಲ್ಲ, ಪಕ್ಷದ ಅಧ್ಯಕ್ಷರಾಗಿ ಹೇಳಿದ್ರೆ ತಪ್ಪು. ನಮ್ಮ ಸಿದ್ದಾಂತ ತಿಳಿದ ಲಕ್ಷಾಂತರ ಮಂದಿ ಕಾರ್ಯಕರ್ತರು ಇದ್ದಾರೆ. ಸಾಫ್ಟ್ ಹಿಂದುತ್ವ ಹಾಗೂ ಹಾರ್ಡ್ ಹಿಂದುತ್ವದ ಬಗ್ಗೆ ಗೊತ್ತಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.